ಪ್ಯಾಲೆಸ್ತೀನ್ ಬಿಕ್ಕಟ್ಟಿನ ಕುರಿತು ಏಪ್ರಿಲ್ 15ರಂದು ನಡೆಯಬೇಕಿದ್ದ ಕವನ ವಾಚನ ಕಾರ್ಯಕ್ರಮವನ್ನು ದೆಹಲಿ ವಿಶ್ವವಿದ್ಯಾಲಯವು ಯಾವುದೇ ಕಾರಣವನ್ನು ನೀಡದೆ ರದ್ದುಗೊಳಿಸಿದೆ ಎಂದು ಕಾರ್ಯಕ್ರಮದ ಸಂಘಟಕರು ಆರೋಪಿಸಿದ್ದಾರೆ.
ಈ ಕುರಿತು ಕಾರ್ಯಕ್ರಮದ ಆಯೋಜಕರಾದ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಅಪೂರ್ವಾನಂದ್ ಮತ್ತು ಅರ್ಜುಮಂದ್ ಅರಾ ಮಾತನಾಡಿದ್ದು, ‘ನಾವು ಪ್ಯಾಲೆಸ್ತೀನರ ಪದವನ್ನು ಕೇಳೋಣ’ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಮಾರ್ಚ್ 22ರಂದು ನಡೆಸಬೇಕಾಗಿತ್ತು ಮತ್ತು ಅದಕ್ಕೆ ದೆಹಲಿ ವಿಶ್ವವಿದ್ಯಾಲಯವು ಮಾರ್ಚ್ 19ರಂದು ಅನುಮತಿ ನೀಡಿತ್ತು. ಆದರೆ ಹೋಳಿ ಹಬ್ಬದ ಕಾರಣ ಮಾರ್ಚ್ 22 ರಂದು ರಜೆ ಎಂದು ಘೋಷಿಸಿದ್ದರಿಂದ ಸಂಘಟಕರು ಅದನ್ನು ಏಪ್ರಿಲ್ 15ಕ್ಕೆ ಮುಂದೂಡಿದ್ದರು. ಕಾರ್ಯಕ್ರಮದ ಸ್ವರೂಪವನ್ನು ಬದಲಾಯಿಸಲಾಗಿಲ್ಲ, ಆದರೆ ವಿಶ್ವವಿದ್ಯಾನಿಲಯವು ಏಪ್ರಿಲ್ 13ರ ಶನಿವಾರದಂದು ನನಗೆ ಕಳುಹಿಸಿದ ಇ-ಮೇಲ್ನಲ್ಲಿ ಕಾರ್ಯಕ್ರಮ ರದ್ದು ಪಡಿಸುವ ಬಗ್ಗೆ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮ ನಡೆಸಲು ಮಾರ್ಚ್ನಲ್ಲಿ ಅನುಮತಿ ನೀಡಿದ್ದು, ಅದನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಆಘಾತವಾಯಿತು. ನಾವು ಅದನ್ನು ಪ್ರಚಾರ ಮಾಡಿದ್ದರಿಂದ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದರಿಂದ ನನಗೂ ಅವಮಾನವಾಗಿದೆ ಎಂದು ಅಪೂರ್ವಾನಂದ್ ಹೇಳಿದ್ದಾರೆ. ಈ ಕಾರ್ಯಕ್ರಮಕ್ಕೆ ಖ್ಯಾತ ಕವಿ ಅಶೋಕ್ ವಾಜಪೇಯಿ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು, ವಿವಿಯ ಕಲಾ ವಿಭಾಗದಲ್ಲಿ ಕಾರ್ಯಕ್ರಮ ನಡೆಸಲು ಸಿದ್ದತೆ ನಡೆಸಲಾಗಿತ್ತು ಎಂದು ಹೇಳಲಾಗಿದೆ.
ಕಾರ್ಯಕ್ರಮಕ್ಕೆ ಅನುಮತಿ ನೀಡದ ಆಡಳಿತದ ವಿರುದ್ಧ ಪ್ರತಿರೋಧದ ಭಾಗವಾಗಿ ಸಂಘಟಕರು ಮತ್ತು ವಿದ್ಯಾರ್ಥಿಗಳು ಕಾರಿಡಾರ್ನ ಕೊಠಡಿ ನಂ.22ರಲ್ಲಿ ಪ್ಯಾಲೆಸ್ತೀನ್ ಕುರಿತು ಚರ್ಚೆಗಳನ್ನು ನಡೆಸಲಾಗಿದೆ ಮತ್ತು ಕವನವನ್ನು ವಾಚಿಸಲಾಗಿದೆ. ನಾವು ಕೋಣೆಯ ಹೊರಗಿನ ಕಾರಿಡಾರ್ನಲ್ಲಿ ನಿಂತು ಕವಿತೆಗಳನ್ನು ಓದಿದೆವು. ನಾವು ಕಾಲೇಜಿನಲ್ಲಿ ತೊಂದರೆ ಅಥವಾ ಯಾವುದೇ ಸಮಸ್ಯೆಯನ್ನು ಸೃಷ್ಟಿಸಲು ಬಯಸುವುದಿಲ್ಲ, ಪ್ಯಾಲೆಸ್ತೀನ್ ಬಗ್ಗೆ ಕಾರ್ಯಕ್ರಮ ಆಯೋಜಿಸಲು ನಮಗೆ ಅನುಮತಿಸದ ಕಾರಣ ನಾವು ಸಂದೇಶವನ್ನು ಕಳುಹಿಸಲು ಬಯಸಿದ್ದೇವೆ ಎಂದು ಅರ್ಜುಮಂದ್ ಅರಾ ಅವರು ಹೇಳಿದ್ದಾರೆ.
ಇದನ್ನು ಓದಿ: ಆಮ್ ಆದ್ಮಿ ಪಕ್ಷದಿಂದ ‘ಎಎಪಿ ಕಾ ರಾಮ್ರಾಜ್ಯ’ ವೆಬ್ಸೈಟ್ ಬಿಡುಗಡೆ