ಕೆಲ ಬುದ್ಧಿಜೀವಿಗಳು ಬೀದಿಗೆ ಬಂದು ಗೋಮಾಂಸ ಸೇವಿಸಿದರು. ಯಾರು ಗೋಮಾಂಸ ತಿಂದರೋ ಅವರು ನಾಯಿಯ ಮಾಂಸವನ್ನೂ ಬೇಕಾದರೂ ತಿನ್ನಲಿ. ಇದು ಅವರ ಆರೋಗ್ಯವನ್ನು ಸ್ಥಿರವಾಗಿರಿಸುತ್ತದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ನಾಯಕ ದಿಲೀಪ್ ಘೋಷ್ ಅವಹೇಳನ ಮಾಡಿದ್ದಾರೆ. ಸದಾ ವಿವಾದಗಳಿಂದಲೇ ಸುದ್ದಿಯಾಗುವ ದಿಲೀಪ್ ಘೋಷ್ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ.
ಕೋಲ್ಕತ್ತಾ ಸಮೀಪದ ಬರ್ದ್ವಾನ್ನ ಗೋಪ ಅಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ದಿಲೀಪ್ ಘೋಷ್, ಭಾರತ ಮೂಲದ ಗೋವುಗಳಲ್ಲಿ ಬಂಗಾರದ ಅಂಶವಿದೆ. ವಿದೇಶಿ ಹಸುಗಳು ನಮ್ಮ ತಾಯಂದಿರಲ್ಲ ಅವರು ಆಂಟಿಗಳಿದ್ದಂತೆ ಎಂದು ಹೀಯಾಳಿಸಿದ್ದಾರೆ. ನಮ್ಮ ದೇಸಿ ಗೋವುಗಳಲ್ಲಿ ವಿಶೇಷ ಗುಣವಿದ್ದು, ಬಂಗಾರ ಮಿಶ್ರಿತ ಹಾಲು ನೀಡುತ್ತದೆ. ದೇಸೀ ಗೋವುಗಳ ಕಣ ಕಣದಲ್ಲಿ ಬಂಗಾರದ ಹಾಲು ನೀಡುವ ಗುಣವಿದ್ದು, ಸೂರ್ಯನ ಶಾಖದಿಂದ ಉತ್ತಮ ಹಾಲು ಕೊಡುತ್ತವೆ. ಅಂತಹ ಗೋವುಗಳನ್ನು ಮಾತ್ರ ಇಟ್ಟುಕೊಳ್ಳಬೇಕು. ದೇಸಿ ಗೋವಿನ ಹಾಲು ಕುಡಿಯುವುದರಿಂದ ನಾವು ಆರೋಗ್ಯವಂತರಾಗಿರುತ್ತೇವೆ ಮತ್ತು ಕಾಯಿಲೆಗಳಿಂದ ದೂರವಿರಬಹುದು ಎಂದು ಹೇಳಿದರು.
ಅಲ್ಲದೇ ವಿದೇಶಿ ತಳಿಯ ಗೋವುಗಳು, ಗೋವುಗಳೇ ಅಲ್ಲ. ಅವು ಒಂದು ರೀತಿಯ ಪ್ರಾಣಿಗಳು. ವಿದೇಶಿ ತಳಿಯ ಗೋವುಗಳು, ಹಸುವಿನಂತೆ ಒದರುವುದಿಲ್ಲ. ಅವು ನಮ್ಮ ಗೋಮಾತಾ ಅಲ್ಲ ಆದರೆ ಅವು ನಮ್ಮ ಆಂಟಿಗಳು. ಇವು ದೇಶದ ಬೆಳವಣಿಗೆಗೆ ಉತ್ತಮವಲ್ಲ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ದೇಸೀ ಗೋವುಗಳು ನಮ್ಮ ತಾಯಿಯಿದ್ದಂತೆ. ಅವುಗಳೊಂದಿಗೆ ಯಾರಾದರೂ ಕೆಟ್ಟದಾಗಿ ವರ್ತಿಸಿದರೆ, ನಾವು ಹಾಗೆಯೇ ತಿರುಗೇಟು ಕೊಡಬೇಕು. ಭಾರತದಲ್ಲಿ ಗೋ ಹತ್ಯೆ ಮಾಡುವುದು ಮಹಾ ಅಪರಾಧ. ಬುದ್ಧಿಜೀವಿಗಳು ರಸ್ತೆಗಿಳಿದು ಗೋ ಮಾಂಸ ತಿನ್ನುವ ಬದಲು, ವಿದೇಶಿ ತಳಿಯ ನಾಯಿಗಳನ್ನು ತಿನ್ನಲಿ. ಯಾವುದೇ ಪ್ರಾಣಿಯ ಮಾಂಸ ತಿಂದರೂ ಬುದ್ಧಿಜೀವಿಗಳ ಆರೋಗ್ಯ ಸ್ಥಿರವಾಗಿರುತ್ತದೆ. ಹಾಗಾಗಿ ರಸ್ತೆಯಲ್ಲಿ ತಿನ್ನುವ ಬದಲು ಮನೆಯಲ್ಲೇ ತಿನ್ನಲಿ. ಹೊರಗೆ ಬಂದು ತಿನ್ನುವಂಥದ್ದು ಏನಿದೆ..? ಎಂದು ವ್ಯಂಗ್ಯವಾಡಿದ್ದಾರೆ.