ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ (VHP) ಸಂಗ್ರಹಿಸಿದ 22 ಕೋಟಿ ರೂಪಾಯಿ ಮೊತ್ತದ ಸುಮಾರು 15,000 ಬ್ಯಾಂಕ್ ಚೆಕ್ಗಳು ಬೌನ್ಸ್ ಆಗಿವೆ.
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮತ್ತು ಇತರ ಅಂಗಸಂಸ್ಥೆಗಳು ದೇಶಾದ್ಯಂತ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದ್ದವು. ಅದರಲ್ಲಿ ಸುಮಾರು 22 ಕೋಟಿ ರೂ. ಮೊತ್ತದ ವಿವಿಧ ಬ್ಯಾಂಕ್ಗಳ 15 ಸಾವಿರ ಚೆಕ್ಗಳು ಬೌನ್ಸ್ ಆಗಿರುವುದು ತಿಳಿದು ಬಂದಿದೆ.
ದೇವಾಲಯದ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಸ್ಥಾಪಿಸಿರುವ ಟ್ರಸ್ಟ್ ’ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ’ದ ಲೆಕ್ಕಪರಿಶೋಧನಾ ವರದಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಬ್ಯಾಂಕ್ ಖಾತೆಗಳಲ್ಲಿ ಹಣದ ಕೊರತೆ ಅಥವಾ ಕೆಲವು ತಾಂತ್ರಿಕ ದೋಷದಿಂದಾಗಿ ಚೆಕ್ಗಳು ಬೌನ್ಸ್ ಆಗಿವೆ ಎಂದು ಟ್ರಸ್ಟ್ ಹೇಳಿದೆ.
ಇದನ್ನೂ ಓದಿ: ಸತತ ಅಂತ್ಯಕ್ರಿಯೆ ನಡೆಸುತ್ತಿರುವ ಸೂರತ್ನ ವಿದ್ಯುತ್ ಚಿತಾಗಾರದಲ್ಲಿ ಕರಗಿ ಹೋಗುತ್ತಿವೆ ಲೋಹದ ಯಂತ್ರಗಳು!
ತಾಂತ್ರಿಕ ದೋಷಗಳ ಸಮಸ್ಯೆಯನ್ನು ಪರಿಹರಿಸಲು ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ಮತ್ತೆ ದೇಣಿಗೆ ನೀಡುವಂತೆ ಜನರನ್ನು ಕೇಳುತ್ತಿದ್ದಾರೆ ಎಂದು ಟ್ರಸ್ಟ್ ಸದಸ್ಯ ಡಾ.ಅನಿಲ್ ಮಿಶ್ರಾ ಮಾಹಿತಿ ನೀಡಿದ್ದಾರೆ.
ಬೌನ್ಸ್ ಆಗಿರುವ ಚೆಕ್ಗಳಲ್ಲಿ ಸುಮಾರು 2,000 ಚೆಕ್ಗಳನ್ನು ಅಯೋಧ್ಯೆಯಿಂದ ಸಂಗ್ರಹಿಸಲಾಗಿದೆ ಎಂದು ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದದೇವ್ ಗಿರಿ ಹೇಳಿದ್ದಾರೆ. ಉಳಿದ 13,000 ಚೆಕ್ಗಳನ್ನು ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಲಾಗಿದೆ ಎಂದರು.
“ನಾವು ಬೌನ್ಸ್ ಆಗಿರುವ ಚೆಕ್ಗಳನ್ನು ಹಿಂದಕ್ಕೆ ಕಳುಹಿಸುತ್ತಿದ್ದೇವೆ ಮತ್ತು ಹೊಸ ಚೆಕ್ ನೀಡುವಂತೆ ದೇಣಿಗೆ ನೀಡಿದ್ದ ಜನರಿಗೆ ಮನವಿ ಮಾಡುತ್ತೇವೆ” ಎಂದು ಸ್ವಾಮಿ ಗೋವಿಂದದೇವ್ ಗಿರಿ ಹೇಳಿದ್ದಾರೆ.
ವಿಎಚ್ಪಿ ಮತ್ತು ಇತರ ಅಂಗಸಂಸ್ಥೆಗಳು ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕೆ ದೇಣಿಗೆ ಕೋರಿ ಅಭಿಯಾನ ನಡೆಸಿತ್ತು. ಈ ವರ್ಷದ ದೇಶಾದ್ಯಂತ ಜನವರಿ 15 ಮತ್ತು ಫೆಬ್ರವರಿ 17 ರ ನಡುವೆ ದೇಣಿಗೆ ಸಂಗ್ರಹಣೆ ನಡೆಸಿತ್ತು. ಈ ಅಭಿಯಾನದಲ್ಲಿ ಅಂತಿಮ ಅಂಕಿ-ಅಂಶಗಳನ್ನು ಟ್ರಸ್ಟ್ ಇನ್ನೂ ಘೋಷಿಸದಿದ್ದರೂ ಸುಮಾರು 5,000 ಕೋಟಿ ರೂಪಾಯಿ ಸಂಗ್ರಹವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಕೊರೊನಾ ರೋಗಿಗಳ ಅಂತ್ಯಸಂಸ್ಕಾರ ಕಾಣಿಸದಂತೆ ಸ್ಮಶಾನಕ್ಕೆ ಶೀಟ್ ಗೋಡೆ ಹಾಕಿಸಿದ ಉತ್ತರ ಪ್ರದೇಶ ಸರ್ಕಾರ!