Homeಕರ್ನಾಟಕ'ಬಿಜೆಪಿ ತೋಡಿರುವ ಖೆಡ್ಡಕ್ಕೆ ಬೀಳಬೇಡಿ’: ವರುಣಾದಲ್ಲಿ ಪ್ರಚಾರ ವೇಳೆ ದೇವನೂರ ಮಹಾದೇವ ಮನವಿ

‘ಬಿಜೆಪಿ ತೋಡಿರುವ ಖೆಡ್ಡಕ್ಕೆ ಬೀಳಬೇಡಿ’: ವರುಣಾದಲ್ಲಿ ಪ್ರಚಾರ ವೇಳೆ ದೇವನೂರ ಮಹಾದೇವ ಮನವಿ

ಯಡಿಯೂರಪ್ಪ ಎಂಬ ಬೃಹತ್‌ ವೃಕ್ಷಕ್ಕೆ ವಿಷದ ಇಂಜಕ್ಷನ್‌ ಚುಚ್ಚಿ ಅದು ತಾನೆ ಒಣಗುವಂತೆ ಮಾಡಲಾಗಿದೆ ಎಂದು ದೇಮ ಹೇಳಿದ್ದಾರೆ

- Advertisement -
- Advertisement -

“ನಾನು ಅವರು-ಇವರು ಎನ್ನದೆ ಎಲ್ಲರನ್ನು ನನ್ನ ಬಂಧುಗಳೆಂದು ಭಾವಿಸುವುದರಿಂದ ಒಂದು ಮನವಿ ಮಾಡುತ್ತೇನೆ. ದಯವಿಟ್ಟು ಬಿಜೆಪಿ ತೋಡಿರುವ ಖೆಡ್ಡಕ್ಕೆ ಬೀಳಬೇಡಿ, ಬಲೆಗೆ ಸಿಲುಕಬೇಡಿ. ಮುಖ ನೋಡಬೇಡಿ, ನಡೆ ನೋಡಿ. ಬಲೆಗೆ ಬಿದ್ದು ಮತ ನೀಡಿದರೆ ನಿಮ್ಮ ಬದುಕು ಇನ್ನಷ್ಟು ನರಕವಾಗುತ್ತದೆ’’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಮನವಿ ಮಾಡಿದ್ದಾರೆ.

ರಾಜ್ಯದ ಗಮನ ಸೆಳೆದಿರುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಮತಯಾಚಿಸಿ ಮಾತನಾಡಿರುವ ಅವರು, ‘’ಪೆಟ್ರೊಲ್‌, ಗ್ಯಾಸ್‌, ಕಾಳು, ಎಣ್ಣೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈಗಾಲೇ ಮಹಿಳೆಯರು ಬಲೆ ಏರಿಕೆ ಬವಣೆಯಿಂದ ಶಾಪ ಹಾಕುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

“ಕೋಲಾರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ರಾಜಕೀಯ ಪಕ್ಷಗಳ ಪ್ರಣಾಳಿಕೆ ಎಂದರೆ ಜನತಾ ಜನಾರ್ಧನನಿಗೆ ನೀಡುವ ವಾಗ್ದಾನ. ಅದನ್ನು ಪಕ್ಷ ಈಡೇರಿಸದೇ ಇದ್ದರೆ ಮಹಾಪಾಪ’ ಎಂದು ತುಂಬಾ ಖಚಿತವಾಗಿ ಆತ್ಮವಿಶ್ವಾಸದಿಂದ ನುಡಿದಿದ್ದರು. ಅಧಿಕಾರಕ್ಕೆ ಬರುವವರು ಹೇಗಿರಬೇಕು ಎನ್ನುವಂತೆ ಇವರ ಮಾತಗಳಿದ್ದವು. ಆದರೆ, ಅವರ ಅಧಿಕಾರದಲ್ಲಿ ನಡೆದದ್ದೆಲ್ಲವೂ ಜನ ವಿರೋಧಿ ಕೆಲಸಗಳೇ,” ಎಂದರು.

“ಇರಲಿ, ವರ್ಷಕ್ಕೆ ಒಂದು ಕೋಟಿ ಉದ್ಯೋಗ ನೀಡುತ್ತೇನೆ ಎಂಬ ಮೋದಿಯವರ ಮಾತನ್ನು ನಂಬಿ ಮತ ಕೊಟ್ಟು ಗೆಲ್ಲಿಸಿ ಇದ್ದಬದ್ದ ಉದ್ಯೋಗವನ್ನು ಕಳೆದುಕೊಂಡಿದ್ದೀವಿ. ಉದ್ಯೋಗ ಸೃಷ್ಠಿಸುತ್ತಿದ್ದ ಸಣ್ಣ ಕೈಗಾರಿಕೆ, ಅತೀಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಕೊಡದೆ ಅವು ಕೋಟಿ ಸಂಖ್ಯೆಯಲ್ಲಿ ಮುಚ್ಚಿ ಹೋಗಿವೆ. ಆದರೆ, ಇನ್ನೊಂದು ಕಡೆ ಮೋದಿ ಅವರ ಪರಮಾಪ್ತ ಅದಾನಿ, ಅಂಬಾನಿ ಮುಂತಾದ ಬಂಡವಾಳಶಾಹಿಗಳ ಸಂಪತ್ತು ದ್ವಿಗುಣ ಆಗಿದೆ. ಇದುವರೆಗೂ ಉಳ್ಳವರ ಸಂಪತ್ತು ಡಬಲ್‌ ಆಗುತ್ತಿದೆ ಬಡವರ ಸಂಖ್ಯೆ ಹೆಚ್ಚುತ್ತಿದೆಯಲ್ಲ? ಮಧ್ಯಮ ವರ್ಗ ಬಡತನ ರೇಖೆ ಕಡೆ ಚಲಿಸುತ್ತಿದೆಯಲ್ಲ” ಎಂದು ವಿಷಾದಿಸಿದರು.

“2013-14ನೇ ಸಾಲಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಾಗ ನೀಡಿದ್ದ ಪ್ರಣಾಳಿಕೆಯಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಶೇ.50 ರಷ್ಟು ಬೆಂಬಲ ಬೆಲೆ ನೀಡುತ್ತೇವೆ ಎಂದು ಹೇಳಿದ್ದರು. ಅದು ಏನಾಯ್ತು? ಕೃಷಿ ಉತ್ಪನ್ನಗಳಿಗೆ ಕಾಂಗ್ರೆಸ್ ಕಾಲದಲ್ಲಿ ಸಿಗುತ್ತಿದ್ದಕ್ಕಿಂತ ಕಡಿಮೆ ಬೆಲೆ ಸಿಗುತ್ತಿದೆ” ಎಂದು ಹೇಳಿದರು.

ದೇವನೂರ ಮಹಾದೇವ

“ಮೋದಿ ಆಡಿದ ಮಾತುಗಳನ್ನು ಮತದಾರರು ತುಂಬಾ ನಂಬಿದ್ದರು. ಬಹಳ ಬೆಲೆ ಕೊಟ್ಟಿದ್ದರು. ಈಗಲೂ ಒಂದಿಷ್ಟು ಜನ ನಂಬುತ್ತಿದ್ದಾರೆ. ನನ್ನ ಪ್ರಶ್ನೆ ಇಷ್ಟೆ, ಮೋದಿಯವರೇ ನಿಮ್ಮ ಮಾತಿಗೆ ನಮ್ಮ ಜನ ಇಷ್ಟೊಂದು ಬೆಲೆ ಕೊಟ್ಟಿದ್ದಾರೆ, ಇಷ್ಟೊಂದು ಗೌರವ ಕೊಟ್ಟಿದ್ದಾರೆ, ನಂಬಿದ್ದಾರೆ, ಹೀಗಿರುವಾಗ ನಿಮ್ಮ ಮಾತಿನ ಬಗ್ಗೆ ನಿಮಗೆ ಬೆಲೆ ಇಲ್ಲವೆ? ನಿಮ್ಮ ಮಾತನ್ನು ನೀವೇ ನಂಬೋದಿಲ್ಲವೇ” ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಎಂಬ ಬೃಹತ್‌ ವೃಕ್ಷಕ್ಕೆ ವಿಷದ ಇಂಜಕ್ಷನ್ ಚುಚ್ಚಲಾಗಿದೆ: ದೇಮ

ಬಿಜೆಪಿಯಲ್ಲಾಗಿರುವ ಬದಲಾವಣೆಗಳನ್ನು ಉಲ್ಲೇಖಿಸಿ ಮಾತನಾಡಿರುವ ದೇವನೂರ ಮಹಾದೇವ ಅವರು, “ಇಂದಿನ ರಾಜಕಾರಣದ ಒಳಹೊಕ್ಕು ನೋಡುವುದಾದರೆ ಯಡಿಯೂರಪ್ಪ ಎಂಬ ಬೃಹತ್‌ ವೃಕ್ಷಕ್ಕೆ ವಿಷದ ಇಂಜಕ್ಷನ್‌ ಚುಚ್ಚಿ ಅದು ತಾನೆ ಒಣಗುವಂತೆ ಮಾಡಲಾಗಿದೆ. ಇನ್ನೆರಡು ಬಲಿಷ್ಠ ವೃಕ್ಷಗಳಾದ ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ್‌ ಸವದಿಯನ್ನು ಬುಡಸಮೇತ ಕತ್ತರಿಸಿ ಎಸೆಯಲಾಗಿದೆ. ಇನ್ನೊಂದು ಸ್ವಲ್ಪ ಗಟ್ಟಿ ಮರ ಅನ್ನಬಹುದಾದ ಸೋಮಣ್ಣನವರಿಗೆ ಫನಿಷ್‌ಮೆಂಟ್‌ ಟ್ರಾನ್ಸ್‌ಫರ್‌ ಮಾಡಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಡಲಾಗಿದೆ. ಮುಂದೆ ತುಂಬಾ ಚೆನ್ನಾಗಿ ಬೆಳೆದುಬಿಡುತ್ತಾರೆ ಎಂಬ ಭರವಸೆ ಹಿಡಿಸಿ ಎಳೆಕರುವನ್ನು ಸೋಲಿಸಲು ಬಿಜೆಪಿ ಗರ್ಭಗುಡಿಯವರೇ ಸಂಚು ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ” ಎಂದು ಮಾರ್ಮಿಕವಾಗಿ ನುಡಿದರು.

“ಮೇಲೆ ಉಲ್ಲೇಖಿಸಿದ ವ್ಯಕ್ತಿಗಳ ಬಗ್ಗೆ ಆಕ್ಷೇಪಣೆಗಳು ಏನೇ ಇರಲಿ. ಏನಿದರ ಮರ್ಮ? ನನಗೆ ಅನಿಸುವುದು ಇಷ್ಟೆ, ಆರ್‌ಎಸ್‌ಎಸ್‌ ಮತ್ತು ಬಿಜೆಪಿಗೆ ಜನನಾಯಕರು, ಸಮುದಾಯದ ನಾಯಕರು ಬೇಕಾಗಿಲ್ಲ. ಅವರಿಗೆ ಛಲವಾದಿ ನಾರಾಯಣಸ್ವಾಮಿ ರೀತಿಯ ಕಾಲಾಳುಗಳು ಮಾತ್ರ ಬೇಕು” ಎಂದು ಟೀಕಿಸಿದ್ದಾರೆ.

“ಈಗ ಲಿಂಗಾಯತ ಆಯಿತು, ಮುಂದೆ ಒಕ್ಕಲಿಗ ನಾಯಕರಿಗೆ ಸರದಿ ಕಾದಿದೆ. ರಾಜ್ಯದಲ್ಲಿ ಪ್ರಲ್ಹಾದ್‌ ಜೋಶಿ, ಸಂತೋಷ್‌ ಮತ್ತೊಬ್ಬರಿಗಷ್ಟೇ ಅವಕಾಶ. ಇದು ಬಿಜೆಪಿಯ ಗರ್ಭಗುಡಿ ಆರ್‌ಎಸ್‌ಎಸ್‌ನ ಫರ್ಮಾನ್‌. ಇದು ಎಲ್ಲಿಗೆ ಕೆರೆದುಕೊಂಡು ಹೋಗುತ್ತದೆ ಎಂದರೆ, ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ ಮತ್ತು ಇಟಲಿಯ ಮುಸಲೋನಿಯ ಮಿಶ್ರ ಆಳ್ವಿಕೆ ಕಡೆಗೆ ಕೊಂಡೊಯ್ಯುತ್ತದೆ” ಎಂದು ಎಚ್ಚರಿಸಿದರು.

“ಬಿಜೆಪಿ ಕಾಲಾಳು ಪಕ್ಷ ಮಾಡುತ್ತಿರುವುದು, ಯಾಕೆಂದರೆ ಅದು ಸಂವಿಧಾನವನ್ನು ಬದಲಾಯಿಸಬೇಕು. ಚಾತುರ್ವರ್ಣದ ಮನುಧರ್ಮಶಾಸ್ತ್ರವನ್ನು ಭಾರತದ ಸಂವಿಧಾನವನ್ನಾಗಿಸಬೇಕು. ಇದು ಅವರ ಹಿಂದೂ ರಾಷ್ಟ್ರ ಎನ್ನುವುದು ಆರ್‌ಎಸ್‌ಎಸ್‌ ಗರ್ಭಗುಡಿಯ ಕಟ್ಟಪ್ಪಣೆ” ಎಂದು ಭವಿಷ್ಯ ನುಡಿದರು.

“ಕೊನೆಯದಾಗಿ ಒಂದು ಮಾತು, ಇಡೀ ವರುಣಾ ಕ್ಷೇತ್ರ ತುಂಬಾ ಎಚ್ಚರಿಕೆಯಿಂದ ಇರಬೇಕು. ಒಳಗೆ ಕಲ್ಲಿಟ್ಟು ಅದರ ಸುತ್ತ ಹೂವು ಸುತ್ತಿ ಡಾ. ಜಿ ಪರಮೇಶ್ವರ್‌ ಅವರ ತಲೆಗೆ ಎಸೆದು ರಕ್ತ ಬರಿಸಿದ್ದಾರೆ. ಇಲ್ಲೂ ಆಗಬಹುದು. ಹೂವು ಸುತ್ತಿ ಕಲ್ಲು ಎಸೆಯುವುದು ಸಂಘ ಪರಿವಾರದ ರಾಜಕಾರಣದ ವೈಖರಿ” ಎಂದು ಆತಂಕ ವ್ಯಕ್ತಪಡಿಸಿದರು.

“ನೆನಪಿಡಿ ರಾಜ್ಯದ ಬಿಜೆಪಿಯ ನಾಯಕರೊಬ್ಬರು ಕ್ಷೇತ್ರದಲ್ಲಿ ಒಂದು ಹೆಣ ಬೀಳಿಸಿದರೆ ಎರಡು ಕ್ಷೇತ್ರ ಗೆದ್ದಂತೆ ಎಂದು ಹೇಳಿದ್ದು ಸುದ್ದಿಯಾಗಿತ್ತು. ಪ್ರಿಯಾಂಕ್‌ ಖರ್ಗೆ ವಿರುದ್ಧ ರೌಡಿಶೀಟರ್‌, ಗಡಿಪಾರು ಆಗಿದ್ದ ವ್ಯಕ್ತಿಯನ್ನು ಬಿಜೆಪಿ ನಿಲ್ಲಿಸಿದೆ. ಇಂತಹ ಭೂಗತ ರಾಜಕಾರಣ ಇಂದು ನಡೆಯುತ್ತಿದೆ. ದಯವಿಟ್ಟು ಎಚ್ಚರವಿರಿ. ಈ ರೀತಿ ಹೊಡಿಬಡಿ ರಕ್ತಪಾತದ ರಾಜಕಾರಣ ಆಗದಂತೆ ಎಚ್ಚರ ವಹಿಸುವುದು ನಮ್ಮ ಪೊಲೀಸ್‌ ಕರ್ತವ್ಯ” ಎಂದರು.

ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್, ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್, ಲೇಖಕಿ ಪ್ರೊ. ಸುಮಿತ್ರಾ ಬಾಯಿ, ದಸಂಸ ಸಂಚಾಲಕರಾದ ಆಲಗೂಡು ಶಿವಕುಮಾರ್ ಮತ್ತಿತರರು ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...