ಮುಸ್ಲಿಮರೊಂದಿಗೆ ವ್ಯಾಪಾರ ಮಾಡಬಾರದು ಎಂದು ದ್ವೇಷ ಹಬ್ಬಿಸುತ್ತಿರುವವರ ವಿರುದ್ಧ ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿ (ದಸಂಸ) ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯ ಪ್ರತಾಪ್ ಸಿಂಹ ಸೇರಿದಂತೆ ಸಂಘಪರಿವಾರ ಹಾಗೂ ಬಿಜೆಪಿ ನಾಯಕರು, ಮುಸಲ್ಮಾನರ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಹೇಳಿಕೆ ನೀಡುತ್ತಿದ್ದಾರೆ. ಇದನ್ನು ವಿರೋಧಿಸಿದ ದಸಂಸ ಕಾರ್ಯಕರ್ತರು, ಸಂಸದ ಪ್ರತಾಪ್ ಸಿಂಹ ಗುಜರಿ ವಸ್ತುಗಳನ್ನು ಖರೀದಿಸಬೇಕು ಎಂದು ಆಗ್ರಹಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನಮ್ಮ ಹಳ್ಳಿಗಳಿಗೆ ಮುಸ್ಲಿಂ ಬಾಂಧವರು ವ್ಯಾಪಾರಕ್ಕೆ ಬರುತ್ತಿಲ್ಲ. ಹೀಗಾಗಿ ಪ್ರತಾಪ್ ಸಿಂಹ ಹಳೇ ಪೇಪರ್, ಖಾಲಿ ಬಾಟಲ್ ಹಾಗೂ ಇತರ ಹಳೆಯ ವಸ್ತುಗಳನ್ನು ಖರೀದಿಸಬೇಕು ಎಂದು ಸಂಸದರ ಮನೆಯ ಮುಂದೆ ಸಾಮಾನು ಸರಂಜಾಮಗಳೊಂದಿಗೆ ತೆರಳಿದ ದಸಂಸ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮುಂದಾಳತ್ವ ವಹಿಸಿದ್ದರು. ಹಲವಾರು ಕಾರ್ಯಕರ್ತರು, ಮಹಿಳೆಯರು ಚೀಲದಲ್ಲಿ ಹಳೆ ಸಾಮಾನು, ಖಾಲಿ ಬಾಟಲ್, ಹುಣಸೇ ಪಿಚ್ಚಿ, ಟಯರ್ ಟ್ಯೂಬ್, ಹಳೆ ಕಬ್ಬಿಣಗಳನ್ನು ಆಟೋದಲ್ಲಿ ತೆಗೆದುಕೊಂಡು ಬಂದಿದ್ದರು. ನಗರದ ವಿಜಯ ನಗರದ ನಾಲ್ಕನೆ ಹಂತದಲ್ಲಿರುವ ಸಂಸದ ಪ್ರತಾಪ್ ಸಿಂಹರ ಮನೆಗೆ ಆಗಮಿಸಿ ಅವರಿಗೆ ಮಾರಾಟ ಮಾಡಲು ಯತ್ನಿಸಿದರು.
ಸಂಸದ ಪ್ರತಾಪ್ ಸಿಂಹ ಅವರ ಮನೆಯ ಮುಂಭಾಗಕ್ಕೆ ತೆರಳದಂತೆ ರಿಂಗ್ ರಸ್ತೆಯ ಕನ್ನಡ ವೃತ್ತದಲ್ಲೇ ಕಾರ್ಯಕರ್ತರನ್ನು ತಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಆಕ್ರೋಶ ವ್ಯಕ್ತಪಡಿಸಿ, “ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸಂಘಪರಿವಾರ ಮತ್ತು ಬಿಜೆಪಿ ನಾಯಕರುಗಳು ಮುಸ್ಲಿಮ್ ವರ್ತಕರುಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ನಮ್ಮ ಹಳ್ಳಿಗಳು ಬಡಾವಣೆಗಳಿಗೆ ವ್ಯಾಪಾರಕ್ಕಾಗಿ ಬರುತ್ತಿದ್ದ ಮುಸ್ಲಿಮ್ ಬಂಧುಗಳ ಭಯದಿಂದ ಬರುತ್ತಿಲ್ಲ. ಇದರಿಂದ ನಮ್ಮ ಬಳಿ ಹಳೆ ಬಾಟಲ್, ಕಾಲಿ ಸೀಸ, ಹುಣಸೆ ಪಿಚ್ಚಿ, ಹಳೆ ಟಯರ್ ಟ್ಯೂಬ್ ಗಳು ಸಾಕಷ್ಟು ಉಳಿದುಕೊಂಡಿವೆ. ಅವುಗಳನ್ನು ಸಂಸದ ಪ್ರತಾಪ್ ಸಿಂಹ ಕೊಂಡುಕೊಂಡು ನಮಗೆ ಹಣ ನೀಡಬೇಕು. ನಾವು ಅವರ ವಿರುದ್ಧ ಯಾವುದೇ ಪ್ರತಿಭಟನೆ ಮಾಡಲು ಬಂದಿಲ್ಲ. ನಮ್ಮ ವಸ್ತುಗಳನ್ನು ಸಂಸದರು ಖರೀದಿಸಲು ಅವಕಾಶ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಮಾಧ್ಯಮದವರೊಂದಿಗೆ ಚೋರನಹಳ್ಳಿ ಶಿವಣ್ಣ ಮಾತನಾಡಿ, “ಸರ್ವಜನಾಂಗದ ಶಾಂತಿ ತೋಟದಲ್ಲಿ ವಿಷ ಬೀಜ ಬಿತ್ತಲಾಗುತ್ತಿದೆ. ಮುಸ್ಲಿಮರನ್ನು ಟಾರ್ಗೆಟ್ ಮಾಡಿಕೊಂಡು ತೊಂದರೆ ಕೊಡಲಾಗುತ್ತಿದೆ. ಹಿಜಾಬ್, ಹಲಾಲ್ ಮಾಂಸ, ಮುಸ್ಲಿಮರ ವ್ಯಾಪಾರ ಹೆಸರಿನಲ್ಲಿ ಅಡಚಣೆ ಉಂಟು ಮಾಡಲಾಗುತ್ತಿದೆ. ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಸದ ಪ್ರತಾಪ್ ಸಿಂಹ ಅವರನ್ನು ಕೂಡಲೇ ಬಂಧಿಸಿ, ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು” ಎಂದು ಆಗ್ರಹಿಸಿದರು.
ಎಸಿಪಿ ಶಿವಶಂಕರ್ ನೇತೃತ್ವದಲ್ಲಿ ಸ್ಥಳದಲ್ಲಿದ್ದ ಇನ್ ಸ್ಪೆಕ್ಟರ್ ವೆಂಕಟೇಶ್, ಜಯಕುಮಾರ್ ಸೇರಿದಂತೆ ಹಲವರು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಮಾತಿನ ಚಕಮಕಿ ನಡೆದಾಗ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಬಂಧಿಸಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು.
ಪ್ರತಿಭಟನಾ ಸ್ಥಳದಲ್ಲಿ ಎಸಿಪಿ ಶಿವಶಂಕರ್ ಹಾಜರಿದ್ದರು. ನೆಲೆಹಿನ್ನೆಲೆ ಕೆ.ಆರ್.ಗೋಪಾಲಕೃಷ್ಣ, ಹಿರಿಯ ರಂಗಕರ್ಮಿ ಕೃಷ್ಣಪ್ರಸಾದ್, ವರುಣಾ ಮಹೇಶ್, ಚೋರನಹಳ್ಳಿ ಮಹದೇವಸ್ವಾಮಿ, ಬುಗತಹಳ್ಳಿ ದೇವರಾಜು, ಪಡುವಾರಹಳ್ಳಿ ಭಾಗ್ಯಮ್ಮ, ವನಿತಾ, ಬೊಮ್ಮನಹಳ್ಳಿ ಶಂಕರ್ ನಂಜನಗೂಡು ಶಿವಮೂರ್ತಿ ಸೇರಿದಂತೆ ಹಲವಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿರಿ: ಚರಕದ ಮುಂದೆ ಕೂತ ತೇಜಸ್ವಿ ಸೂರ್ಯ: ಮಿತಿಮೀರಿದ ಬೂಟಾಟಿಕೆ ಎಂದ ಜನತೆ
ಸತ್ಯಕ್ಕೆ ಜಯವಿಲ್ಲಾ……