HomeಚಳವಳಿExplainer: ಏನಿದು ಪೆಗಾಸಸ್? ಹೇಗೆ ಫೋನ್ ಹ್ಯಾಕ್ ಮಾಡುತ್ತದೆ? ಅಪಾಯಗಳೇನು?

Explainer: ಏನಿದು ಪೆಗಾಸಸ್? ಹೇಗೆ ಫೋನ್ ಹ್ಯಾಕ್ ಮಾಡುತ್ತದೆ? ಅಪಾಯಗಳೇನು?

2019ರಲ್ಲಿ 1,400 ಜನರ ಮೇಲೆ ಬೇಹುಗಾರಿಕೆ ನಡೆಸಲು ಇಸ್ರೇಲ್ ಪೆಗಾಸಸ್ ಅನ್ನು ದುರುಪಯೋಗಪಡಿಸಿಕೊಂಡಿದೆ ಎಂದು ವಾಟ್ಸಾಪ್ ಕಂಪನಿ ದೂರು ನೀಡಿತ್ತು.

- Advertisement -
- Advertisement -

ನಾವು ಸಣ್ಣವರಿರುವಾಗ ಸಿನಿಮಾಗಳಲ್ಲಿ ಒಂದು ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಅದು, ಸಮಾಜದಲ್ಲಿ ಒಳ್ಳೆಯದನ್ನು ಮಾಡುತ್ತಿರುವ ಹೀರೋನನ್ನು ಹತ್ತಿಕ್ಕಲು ಪೊಲೀಸರು ರಾತ್ರೋರಾತ್ರಿ ಅವನ ಮನೆಗೆ ಬಂದು, ಏನನ್ನೋ ಹುಡುಕುವ ನೆಪದಲ್ಲಿ ನಿಷೇಧಿತ ಪದಾರ್ಥವಿದೆಯೆಂದೋ, ಸಂಚಿನ ಪತ್ರ ಇದೆಯೆಂದೋ ಅರೆಸ್ಟ್ ಮಾಡುತ್ತಿದ್ದ ದೃಶ್ಯ. ಆ ಸಿನಿಮಾಗಳಲ್ಲಿ ಬಂಧನಕ್ಕೂ ಮುನ್ನ ಬಹಿರಂಗವಾಗಿ ಪೊಲೀಸರೇ ಅಲ್ಲಿ ಆ ನಿಷೇಧಿತ ಪದಾರ್ಥ ಇಡುವುದು ಕೂಡ ಸಾಮಾನ್ಯ ದೃಶ್ಯವಾಗಿತ್ತು. ಕೆಲವೊಮ್ಮೆ ಸಿನೆಮ್ಯಾಟಿಕ್ ರೀತಿಯಲ್ಲಿ ಆ ಒಳಸಂಚನ್ನು ಅನಾವರಣಗೊಳಿಸುವ, ಹಿನ್ನೆಲೆ ಸೀನ್ ಒಂದನ್ನು ಸೃಷ್ಟಿಸಿ ಬಂಧನಗೊಳಗಾಗಿದ್ದ ಆ ವ್ಯಕ್ತಿಯನ್ನು ನಿರಪರಾಧಿ ಎಂದು ತೋರಿಸಲಾಗುತ್ತಿತ್ತು.

ಈ ರೀತಿಯ ಸಿನೆಮಾ ಕತೆಗಳ ದೃಶ್ಯಗಳು ಪ್ರಪಂಚದ ಎಲ್ಲಾ ಭಾಷೆಯ ಚಿತ್ರಗಳಲ್ಲೂ ಇವೆ. ಏಕೆಂದರೆ ಜೀವನದಲ್ಲೂ ಅದೇ ರೀತಿಯ ಕಥೆಗಳು ಬಹಳ ಧಾರಾಳಗಾಗಿ ನೆಡೆದಿರುವ ಸಾವಿರಾರು ನಿದರ್ಶನಗಳಿವೆ. ಈಗ ಆಧುನಿಕ ಡಿಜಿಟಲ್ ಯುಗದಲ್ಲೂ ಈ ಚಾಳಿ ಮುಂದುವರೆದಿದೆ. ಭೀಮ ಕೋರೆಗಾಂವ್ ಮತ್ತು ಪ್ರಧಾನಮಂತ್ರಿ ಮೋದಿಯವರ ಕೊಲೆ ಸಂಚಿನ ಪತ್ರದ ಆರೋಪ ಕೂಡ ಇದೇ ರೀತಿಯ ಸಿನಿಮೀಯ ಸಂಚು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಟಾಬಯಲಾಗಿ ಚರ್ಚೆಯಾಗುತ್ತಿದೆ. ವಿಪರ್ಯಾಸವೆಂದರೆ ಪ್ರಭುತ್ವದ ಸಂಚನ್ನು ಎದುರಿಸುತ್ತಿರುವ 20ಕ್ಕೂ ಹೆಚ್ಚು ಮಂದಿ ಈಗಲೂ ಸೆರೆಮನೆಯಲ್ಲಿ ಬಂಧಿಗಳಾಗಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಇಸ್ರೇಲಿನ ಬೇಹುಗಾರಿಕೆ ಸಾಫ್ಟ್ವೇರ್ ’ಪೆಗಾಸಸ್’ ಬಳಸಿ ಭಾರತದ 300ಕ್ಕೂ ಹೆಚ್ಚು ಮಾನವ ಹಕ್ಕು ಹೋರಾಟಗಾರರು, ಪತ್ರಕರ್ತರು, ನ್ಯಾಯಾಧೀಶರು, ವಿರೋಧ ಪಕ್ಷದ ಮುಖಂಡರು, ಸಚಿವರ ಫೋನ್ ಹ್ಯಾಕ್ ಮಾಡಲಾಗಿದೆ ಎಂಬ ಸುದ್ದಿ ಬಹಿರಂಗಗೊಂಡಿದೆ. ಹಾಗಾದರೆ ಈ ಪೆಗಾಸಸ್ ಎಂದರೆ ಏನು? ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯೋಣ.

ಏನಿದು ಪೆಗಾಸಸ್?

ಇನ್ನೊಬ್ಬರ ಮೊಬೈಲ್ ಅಥವಾ ಕಂಪ್ಯೂಟರ್‌ ಅನ್ನು ಹ್ಯಾಕ್ ಮಾಡಲು, ಅದರಲ್ಲಿ ಏನು ನಡೆಯುತ್ತದೆ ನೋಡಲು ಬಳಸುವ ಸಾಫ್ಟವೇರ್ ಅಥವಾ ಇ- ಉಪಕರಣದ ಹೆಸರು ಪೆಗಾಸಸ್. ಅದನ್ನು ತಯಾರಿಸಿದವರು ಇಸ್ರೇಲಿನ ಎನ್‍ಎಸ್‍ಓ ಅನ್ನೋ ಕಂಪನಿ. ಅದನ್ನು ನಿಮ್ಮ ಫೋನಿಗೆ ಕಳಿಸಿ, ನೀವು ಅದಕ್ಕ ಪ್ರತಿಕ್ರಿಯೆ ಕೊಟ್ಟರ ಮುಗೀತು. ನಿಮ್ಮ ಫೋನು ಹ್ಯಾಕ ಆಗಲು ತಯಾರು. ಪೆಗಾಸಸ್ ಗುರಿಯ ಫೋನ್‌ನ ಸಂಪೂರ್ಣ ನಿಯಂತ್ರಣವನ್ನು ಅನುಮತಿಸುತ್ತದೆ, ಫೈಲ್‌ಗಳು, ಸಂವಹನ ಮತ್ತು ಮೈಕ್ರೊಫೋನ್ ಮತ್ತು ಕ್ಯಾಮರಾಗಳಿಗೆ ಪ್ರವೇಶವನ್ನು ಅದು ಸಕ್ರಿಯಗೊಳಿಸುತ್ತದೆ ಎನ್ನಲಾಗುತ್ತಿದೆ. ಎನ್‍ಎಸ್‍ಓದವರು ಪೆಗಾಸಸ್ ಅನ್ನು ಬರೇ ಸರಕಾರಗಳಿಗೆ ಮಾತ್ರ ಮಾರಾಟ ಮಾಡುತ್ತಾರೆ. ಇಲ್ಲಿಯವರೆಗೆ ಅದನ್ನು ಭಾರತ ಸೇರಿದಂತೆ ವಿವಿಧ ಸರಕಾರಗಳು ಉಪಯೋಗಿಸುತ್ತಿವೆ.

ಒಬ್ಬ ವ್ಯಕ್ತಿಗೆ ಪೆಗಾಸಸ್ ಸಿಗೋದಕ್ಕೂ, ಸರಕಾರಕ್ಕ ಸಿಗೋದಕ್ಕೂ ವ್ಯತ್ಯಾಸವಿದೆ. ಸರಕಾರಕ್ಕೆ ಸಿಕ್ಕರೆ ಸಾವಿರಾರು ಜನರ ಮೇಲೆ ಒಂದೇ ಸಲ ಕಣ್ಣಿಡಬಹುದು, ಅವರ ಫೋನು, ಕಂಪ್ಯೂಟರ್ ಹ್ಯಾಕ್ ಮಾಡಬಹುದು. ಭಾರತದಲ್ಲಿ ಇಂದು ಆಗುತ್ತಿರುವುದು ಅದೆ.

ಪೆಗಾಸಸ್ ಕಾರ್ಯವಿಧಾನ

ಗುಪ್ತಚರ್ಯೆಗೆ ಗುರಿಯಾಗುವವರ ಮೇಲೆ ಕಣ್ಗಾವಲು ಇಡಲು ಅವರು ಒಂದು ನಿರ್ದಿಷ್ಟ ಮತ್ತು ವಿಶಿಷ್ಟವಾಗಿ ನಿರ್ಮಿಸಲಾದ ‘ಎಕ್ಸ್‌ಪ್ಲಾಯ್ಟ್ ಲಿಂಕ್’ ಮೇಲೆ ಕ್ಲಿಕ್ ಮಾಡುವಂತೆ ಪೆಗಾಸಸ್ ಅಪರೇಟರ್ ಮನವೊಲಿಸಬೇಕಾಗುತ್ತದೆ ಇಲ್ಲವೇ ವಂಚಿಸಬೇಕಾಗುತ್ತದೆ. ಕಣ್ಗಾವಲಿಗೆ ಗುರಿಯಾದವರು ಒಮ್ಮೆ ಈ ಲಿಂಕ್ ಕ್ಲಿಕ್ ಮಾಡಿದರೆ, ಪೆಗಾಸಸ್ ಸ್ಪೈವೇರ್ ಅವರಿಗೆ ಗೊತ್ತಾಗದಂತೆ ಮೊಬೈಲ್ ಒಳಗೆ ಸೇರಿಕೊಳ್ಳುತ್ತದೆ. ಮೊಬೈಲ್‌ನ ಭದ್ರತಾ ವ್ಯವಸ್ಥೆಯನ್ನು ಭೇದಿಸುವ ಮೂಲಕ ಪೆಗಾಸಸ್ ಇನ್ಸ್ಟಾಲ್ ಆಗುತ್ತದೆ. ಇದು ಗ್ರಾಹಕರಿಗೆ ಗೊತ್ತಾಗುವುದು ಬಿಡಿ, ಅದು ಅವರ ಅನುಮತಿಯನ್ನೂ ಕೇಳುವುದಿಲ್ಲ.

ಒಮ್ಮೆ ಇದು ನಡೆದ ಬಳಿಕ ಪೆಗಾಸಸ್ ತನ್ನ ಅಪರೇಟರ್ ಕಮಾಂಡ್ ಮತ್ತು ಕಂಟ್ರೋಲ್ ಸರ್ವರ್‌ಗಳನ್ನು (ನಿಯಂತ್ರಣ ವ್ಯವಸ್ಥೆಗಳು) ಸಂಪರ್ಕಿಸಲು ಆರಂಭಿಸುತ್ತದೆ. ಅದು ನಿಯಂತ್ರಕರ ಆದೇಶ ಪಾಲಿಸುತ್ತಾ, ಗುಪ್ತಚರ್ಯೆಗೆ ಒಳಗಾದವರ ಪಾಸ್‌ವರ್ಡ್, ಕಾಂಟ್ಯಾಕ್ಟ್ ಲಿಸ್ಟ್,  ಖಾಸಗಿ ಮಾಹಿತಿ, ಕ್ಯಾಲೆಂಡರ್ ಟಿಪ್ಪಣಿಗಳು, ಟೈಕ್ಸ್ಟ್ ಮೇಸೇಜ್‌ಗಳು, ಜನಪ್ರಿಯ ಮೆಸೇಜ್ ಸಾಫ್ಟ್ವೇರ್‌ಗಳಿಂದ ಮಾಡುವ ಕರೆಗಳು ಇತ್ಯಾದಿಗಳನ್ನು ಕಳುಹಿಸಿಕೊಡುತ್ತದೆ.

ಅಷ್ಟು ಮಾತ್ರವಲ್ಲದೆ, ಪೆಗಾಸಸ್ ಅಪರೇಟರ್ ಫೋನಿನ ಕ್ಯಾಮೆರಾ ಮತ್ತು ಮೈಕ್ರೋಫೋನನ್ನು ಆನ್ ಮಾಡಿ ಸುತ್ತಮುತ್ತಲಿನ ಚಟುವಟಿಕೆಗಳನ್ನು ಗಮನಿಸಿ ರೆಕಾರ್ಡ್ ಮಾಡಬಹುದು. 2019ರ ಆರಂಭದಲ್ಲಿ ವಿಶ್ವದಾದ್ಯಂತ ಸುಮಾರು 1,400 ಜನರ ಮೇಲೆ ಬೇಹುಗಾರಿಕೆ ನಡೆಸಲು ಇಸ್ರೇಲಿ ಸಂಸ್ಥೆಯು ತನ್ನ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ವಾಟ್ಸಾಪ್ ಕಂಪನಿ ಆರೋಪಿಸಿತ್ತು. ಆಗ ವಾಟ್ಸ್ಆಪ್ ನ್ಯಾಯಾಲಯಕ್ಕೆ ಸಲ್ಲಿಸಿದ ಇನ್ನಷ್ಟು ಮಾಹಿತಿ ಆತಂಕ ಮೂಡಿಸಿತ್ತು. ಇತ್ತೀಚಿನ ತಂತ್ರಜ್ಞಾನದಲ್ಲಿ ಫೋನ್ ಮಾಲೀಕರು ‘ಎಕ್ಸ್‌ಪ್ಲಾಯ್ಟ್ ಲಿಂಕ್’ ಮೇಲೆ ಕ್ಲಿಕ್ ಕೂಡಾ ಮಾಡಬೇಕಾಗಿಲ್ಲ. ವಾಟ್ಸ್ಆಪ್ ಮೂಲಕ ಕಳಿಸಿದ ಒಂದು ಮಿಸ್ಡ್ ವಿಡಿಯೋ ಕಾಲ್ ಮೂಲಕ ಬಲಿಪಶು ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಕೂಡಾ ಈ ಸ್ಪೈವೇರನ್ನು ಫೋನಿನೊಳಗೆ ನುಗ್ಗಿಸಬಹುದಾಗಿದೆ.

ಈ ರೀತಿಯ ವಂಚನೆಯು ಯುಎಸ್‌ಎ ಮತ್ತು ಕ್ಯಾಲಿಫೋರ್ನಿಯಾದ ಕಾನೂನುಗಳು, ವಾಟ್ಸ್ಆಪ್ ಸೇವಾ ಷರತ್ತುಗಳನ್ನು ಉಲ್ಲಂಘಿಸುತ್ತದೆ ಎಂದು ವಾಟ್ಸ್ಆಪ್, ಇಸ್ರೇಲಿನ ಎನ್‌ಎಸ್‌ಓ ಮತ್ತು ಕ್ಯೂ ಸೈಬರ್ ಟೆಕ್ನಾಲಜಿ ಸಂಸ್ಥೆಗಳ ಮೇಲೆ ಹೂಡಿರುವ ದಾವೆಯಲ್ಲಿ ಹೇಳಿದೆ.


ಇದನ್ನೂ ಓದಿ: ನ್ಯಾ. ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾಕೆಯ ಇಡೀ ಕುಟುಂಬದ ಮೇಲೆ ಪೆಗಾಸಸ್ ಕಣ್ಗಾವಲು!


ಇದನ್ನು ಅಲ್ಲಗೆಳೆದಿರುವ ಎನ್ಎಸ್ಓ, ಈ ಸ್ಪೈವೇರನ್ನು ಖಾಸಗಿ ವ್ಯಕ್ತಿಗಳ ಮೇಲೆ ಗುಪ್ತಚರ್ಯೆಗಾಗಿ ವಿನ್ಯಾಸಗೊಳಿಸಲಾಗಿಲ್ಲ ಮತ್ತು ಅದು ಮಾರಾಟದ ವೇಳೆ ಪತ್ರಕರ್ತರು, ಮಾನವಹಕ್ಕು ಕಾರ್ಯಕರ್ತರು ಮುಂತಾದವರ ವಿರುದ್ಧ ಗುಪ್ತಚರ್ಯೆಗೆ ಪರವಾನಿಗೆಯನ್ನೂ ನೀಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿದೆ. ಇದು ಹೌದಾದರೆ, ಭಾರತ ಸರಕಾರ ಸಹಿತ ಅದರ ಬಳಕೆದಾರರು ಪರವಾನಿಗೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದಾಗುತ್ತದೆ.

ಕೆನಡಾ ಮೂಲದ ಸೈಬರ್ ಭದ್ರತಾ ಗುಂಪಾದ ‘ಸಿಟಿಜನ್’ ಲ್ಯಾಬ್’ 2018ರ ಸೆಪ್ಟೆಂಬರ್‌ನಲ್ಲಿಯೇ ತನ್ನ ವರದಿಯ ಮೂಲಕ ಪೆಗಾಸಸ್ ಕುರಿತು ಎಚ್ಚರಿಕೆ ನೀಡಿತ್ತು. ಅರಬ್ ಮಾನವಹಕ್ಕು ಕಾರ್ಯಕರ್ತರ ದೂರಿನ ಬಳಿಕ ಈ ವರದಿ ಬಿಡುಗಡೆಯಾಗಿತ್ತು.

ರಾಜಕೀಯ ದ್ವೇಷಕ್ಕೆ ಬಳಕೆ

ಇನ್ನೊಂದು ವಿಷಯವೆಂದರೆ, ಎನ್‌ಎಸ್ಓ ಸಂಸ್ಥೆಯು ಸರಕಾರಗಳು ಅಲ್ಲದೆ ಬೇರೆಯವರಿಗೆ ತನ್ನ ಉತ್ಪನ್ನ ಅಥವಾ ಸೇವೆಯನ್ನು ಮಾರುವುದಿಲ್ಲ. ಇತ್ತೀಚೆಗೆ ಸೌದಿ ಅರೇಬಿಯಾದ ಪತ್ರಕರ್ತ ಜಮಾಲ್ ಖಷೋಗ್ಗಿಯವರನ್ನು ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಉಪ ರಾಯಭಾರ ಕಚೇರಿಯಲ್ಲಿ ಕೊಲೆ ಮಾಡಲಾದ ಬಳಿಕ ಈ ಸಂಸ್ಥೆಯು ಸೌದಿಯೊಂದಿಗೆ ತನ್ನ ಒಪ್ಪಂದವನ್ನು ರದ್ದುಪಡಿಸಿತ್ತು. ಖಷೋಗ್ಗಿಯ ಕೊಲೆಗೆ ಮುನ್ನ ಅವರ ಇರುವನ್ನು (ಲೊಕೇಷನ್) ಪತ್ತೆಹಚ್ಚಲು ತನ್ನ ಸ್ಪೈವೇರನ್ನು ಸೌದಿ ಸರಕಾರ ಬಳಸಿತ್ತು ಎಂಬುದೇ ಇದಕ್ಕೆ ಕಾರಣ. ಸಂಸ್ಥೆಯು ಈ ಕುರಿತು ಇಷ್ಟು ಕಟ್ಟುನಿಟ್ಟಾಗಿರುವುದೇ ಹೌದಾದಲ್ಲಿ, ಮೋದಿ ಸರಕಾರವು ಸೌದಿಯಂತೆಯೇ ತನ್ನದೇ ಪ್ರಜೆಗಳ ಮೇಲೆ ಗುಪ್ತಚರ್ಯೆಗೆ ಈ ಸ್ಪೈವೇರನ್ನು ದುರುಪಯೋಗಪಡಿಸಿಕೊಂಡು ತನ್ನ ವಿರೋಧಿಗಳನ್ನು ಬಗ್ಗುಬಡಿಯುತ್ತಿದೆಯೇ ಎಂಬ ಸಂಶಯ ಏಳುತ್ತದೆ.

ಯಾರು ಯಾರು ಬಲಿಪಶುಗಳು?

ಜೆಫರಿ ಪ್ರೆಸ್ಟನ್ ಬೇಜೋಸ್ ಜೊರ್ಗೆನ್ಸನ್ ಅಮೇಜಾನ್ ಕಂಪನಿ ಮಾಲೀಕ ಮತ್ತು ಅತಿ ದೊಡ್ಡ ಶ್ರೀಮಂತ. ಅವರ ಫೋನನ್ನ ಸೌದಿಯ ರಾಜಕುಮಾರ ಮಹಮ್ಮದ ಬಿನ್ ಸಲ್ಮಾನ ಅಲ್ ಸೌದ್ ಅವರೇ ಹ್ಯಾಕ್ ಮಾಡಿದ್ದರು ಅಂತ ಖಾಸಗಿ ಪತ್ತೇದಾರರೊಬ್ಬರು ತಿಳಿಸಿದ್ದರು. ಅದೂ ಹೆಂಗೆಂದರೆ, ಜೆಫ್ ಅವರು ಸೌದಿ ಹೋದಾಗ ಅವರಿಬ್ಬರ ಭೇಟಿಯಾಗಿ ಪರಸ್ಪರ ಇಬ್ಬರ ಫೋನ್ ನಂಬರ್ ಹಂಚಿಕೆಯಾಯಿತು. ಅವರಿಬ್ಬರೂ ಮೆಸೇಜ್ ಕಳಿಸಿದ್ದರು ಅಷ್ಟೇ. ಅಷ್ಟರಲ್ಲಿಯೇ ಅವರ ಫೋನ್ ಹ್ಯಾಕ್ ಮಾಡಲಾಗಿತ್ತು. ಇಡೀ ಜಗತ್ತಿನ ಅತಿದೊಡ್ಡ ಸಾಹುಕಾರನ ಫೋನ್‌ಗೆ ಈ ಗತಿ ಆದರೆ ಉಳದವರದೇನು? ಯಾರನ್ನೂ ಯಾರೂ ಹ್ಯಾಕು ಮಾಡಬಹುದು. ಯಾರ ಫೋನಿನಲ್ಲಿಯೂ ಮಾಹಿತಿ ಸುರಕ್ಷಿತವಾಗಿಲ್ಲ!

ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ಶ್ರೀಮಂತ ಅಮೇಜಾನು ಕಂಪನಿ ಮಾಲೀಕನ ಫೋನು ಹ್ಯಾಕ್ ಆದ ಕತಿ…

ವಿರೋಧ ಪಕ್ಷದ ನಾಯಕರ ಮೇಲೆ ಕಣ್ಣಿಡಲಿಕ್ಕೆ ಇದನ್ನ ಬಳಸಲಾಗುತ್ತಿದೆ. ಇದರ ಹೆದರಿಕೆಯಿಂದಲೇ ಆಳುವ ಪಕ್ಷ ವಿರೋಧಿಗಳನ್ನು ಹದ್ದುಬಸ್ತಿನಲ್ಲಿ ಇಡುತ್ತಿದೆ ಅಂತ ಕೆಲವರು ಅಭಿಪ್ರಾಯ ಪಡಿಸ್ಯಾರ. ಅವರನ್ನು ಪಕ್ಷಾಂತರಕ್ಕ ಪುಸಲಾಯಿಸಬಹುದು ಎಂದಿದ್ದಾರೆ. ಈಗ ಪೆಗಾಸಸ್ ಅನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ವಿರೋಧ ಪಕ್ಷದವರ ಮೇಲೆ ಬಳಸಿದೆ. ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಮೇಲೂ ಬಳಸಲಾಗಿದೆ, ಭಾರತದ ಮುರ್ಖಯ ನ್ಯಾಯಮೂರ್ತಿಯನ್ನೇ ಬಿಟ್ಟಿಲ್ಲ ಎಂಬ ವರದಿಗಳು ಬಂದಿವೆ. ಕಳೆದೆರಡು ವರ್ಷದಲ್ಲಿ ಬಿಜೆಪಿಗೆ ಸೇರಿದ ನೂರಾರು ರಾಜಕಾರಣಿಗಳ ಮೇಲೂ ಇದನ್ನು ಬಳಸಲಾಗಿದೆಯೇ ಎಂಬ ಪ್ರಶ್ನೆ ಏಳುತ್ತದೆ.

ಭವಿಷ್ಯದ ಅಪಾಯಗಳು

ಮುಂದೆ ಯಾರನ್ನಾದರೂ ಫೋಲೀಸರು ಭಯೋತ್ಪಾದನೆ ಅಥವಾ ನಕ್ಸಲರ ಸಂಪರ್ಕದ ಆರೋಪದ ಮೇಲೆ ಹಿಡಿದರು ಅಂತ ತಿಳೀರಿ. ಅವರ ಫೋನಿನಿಂದ ಬಾಂಬು, ಪಿಸ್ತೂಲು, ಆರ್‌ಡಿಎಕ್ಸ್ ಅನ್ನೋ ಪದಗಳನ್ನು ಹೊಂದಿರೋ ಸಂದೇಶಗಳನ್ನ ಕಳಿಸಲಿಕ್ಕೆ ಉಪಯೋಗಿಸಬಹುದು. ಸಾಕ್ಷಿ ಸೃಷ್ಟಿ ಮಾಡಬಹುದು. ಇದರ ಸಾಧ್ಯತೆಗಳು ಅನೇಕ ಹಾಗೂ ಭಯಾನಕ.

ಭಾರತದಲ್ಲಿ ಮಾನವ ಹಕ್ಕು ಹೋರಾಟಗಾರರ ದಮನ

ಡಿಸೆಂಬರ್ 31, 2017ರಂದು ಭೀಮ ಕೋರೇಂಗಾವ್ ವಿಜಯೋತ್ಸವಕ್ಕೆಂದು ತೆರಳುತ್ತಿದ್ದ ದಲಿತರ ಮೇಲೆ ಆಡಳಿತ ಬೆಂಬಲಿತ ಸ್ಥಳೀಯ ಹಿಂದುತ್ವ ಮುಖಂಡರಾದ ಮಿಲಿಂದ್ ಎಕ್ಬೋಟೆ ಮತ್ತು ಸಂಭಾಜಿ ಭಿಡೆ ನೇತೃತ್ವದಲ್ಲಿ ದಾಳಿ ನಡೆಯುತ್ತದೆ. ಪುಣೆಯಲ್ಲಿ ಜರುಗಿದ ಎಲ್ಗಾರ್ ಪರಿಷದ್ ಕಾರ್ಯಕ್ರಮದ ವಿರುದ್ಧ ಪಿತೂರಿ ನಡೆದು, ಅರ್ಬನ್ ನಕ್ಸಲರು ಎಂಬ ಆಡಳಿತ ವ್ಯವಸ್ಥೆಯ ಸಂಚು ಅನಾವರಣಗೊಳ್ಳುತ್ತದೆ. ಅದೇ ವರ್ಷದಲ್ಲಿ, ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಹಲವಾರು ಕಾರ್ಯಕರ್ತರ ಕಂಪ್ಯೂಟರ್ ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ಜಪ್ತಿ ಮಾಡುತ್ತಾರೆ. ಅದರಲ್ಲಿ ಮುಖ್ಯವಾಗಿ ರೋಣ ವಿಲ್ಸನ್ ಎಂಬ ಮಾನವ ಹಕ್ಕುಗಳ ಹೋರಾಟಗಾರನ ಲ್ಯಾಪ್‌ಟಾಪ್ ಕೂಡ ದೆಹಲಿಯ ಮುನಿರ್ಕಾ ಜಾಗದಲ್ಲಿ ಜಪ್ತಿಯಾಗುತ್ತದೆ. ಅದರಲ್ಲಿ ಪ್ರಧಾನಿ ಮೋದಿಯವರನ್ನು ರಾಜೀವ್ ಗಾಂಧಿಯ ಹಾಗೆ ಕೊಲ್ಲುವ ಸಂಚಿನ ಪತ್ರಗಳು ದೊರೆಯುತ್ತವೆ. ಈ ಸಾಕ್ಷಿಯಿಂದಲೇ, ಶೋಮಾ ಸೆನ್, ಸುಧೀಂದ್ರ ಗಾಡ್ಲಿಂಗ್, ಸುಧಾ ಭಾರದ್ವಾಜ್, ಸುಧೀರ್ ಧವಳೆ, ಮಹೇಶ್ ರಾವುತ್, ಆನಂದ್ ತೇಲ್ತುಂಬ್ಡೆ, ಸ್ಟಾನ್ ಸ್ವಾಮಿ ಸೇರಿದಂತೆ ಒಬ್ಬೊಬ್ಬರನ್ನೇ 15 ಮಂದಿಯನ್ನು ಬಂಧಿಸಲಾಗುತ್ತದೆ.

ಆದರೆ ಈ ಲ್ಯಾಪ್‌ಟಾಪ್‌ನೊಳಗಿನ ಮಾಹಿತಿಯ ಡಿಜಿಟಲ್ ಪ್ರತಿಯನ್ನು ರೋಣ ವಿಲ್ಸನ್‌ರನ್ನು ಪ್ರತಿನಿಧಿಸುತ್ತಿರುವ ವಕೀಲರಾದ ಮಿಹಿರ್ ದೇಸಾಯಿ ಕೇಳಿ ಪಡೆಯುತ್ತಾರೆ ಮತ್ತು ಅದನ್ನು ಅಮೆರಿಕಾದ ಮ್ಯಾಸಚೂಸೆಟ್ಸ್‌ನಲ್ಲಿರುವ ಪ್ರತಿಷ್ಠಿತ ಆರ್ಸೆನಲ್ ಕನ್ಸಲ್ಟಿಂಗ್ ಎಂಬ ಡಿಜಿಟಲ್ ಫೋರೆನ್ಸಿಕ್ ಸಂಸ್ಥೆಗೆ ಕಳುಹಿಸುತ್ತಾರೆ. ಇದೆ ಆರ್ಸೆನಲ್ ಕನ್ಸಲ್ಟಿಂಗ್ ಹಿಂದೆ ಹಲವಾರು ಪ್ರಕರಣಗಳಲ್ಲಿ ಕರಾರುವಾಕ್ಕಾಗಿ ಫಲಿತಾಂಶವನ್ನು ನೀಡಿರುವ ಸಂಸ್ಥೆಯಾಗಿದೆ. ಈ ಪ್ರತಿಯನ್ನು ಕೂಲಂಕಷವಾಗಿ ಭೇದಿಸಿರುವ ಈ ಸಂಸ್ಥೆ ಫೆಬ್ರವರಿ 2021ರಂದು ತನ್ನ ವರದಿಯನ್ನು ನೀಡುತ್ತದೆ. ಅದರ ಪ್ರಕಾರ, ರೋಣ ವಿಲ್ಸನ್ ಲ್ಯಾಪ್‌ಟಾಪ್‌ಅನ್ನು ಹ್ಯಾಕರ್ ಮೂಲಕ ದಾಳಿಗೆ ಈಡುಮಾಡಲಾಗಿದೆ. ಈ ಹ್ಯಾಕರ್ ವರವರ ರಾವ್ ಅವರ ಈಮೇಲ್ ಹ್ಯಾಕ್ ಮಾಡಿ, ಅದನ್ನು ಉಪಯೋಗಿಸಿಕೊಂಡು ವಿಲ್ಸನ್ ಅವರರಿಗೆ ಒಂದರ ಮೇಲೊಂದರಂತೆ ಈಮೇಲ್ ಕಳುಹಿಸಿರುತ್ತಾರೆ ಮತ್ತು ಅದರಲ್ಲಿರುವ ಒಂದು ಅಟ್ಯಾಚ್ಮೆಂಟ್‌ಅನ್ನು ತೆರೆಯಿರಿ ಎಂದು ಪದೇಪದೆ ಸೂಚಿಸಿರುತ್ತಾರೆ. ಆಗ ವಿಲ್ಸನ್ ಅಟ್ಯಾಚ್ಮೆಂಟ್ ತೆರೆದು ಅದರಲ್ಲಿ ಏನು ಇಲ್ಲ ಎಂದು ಮೇಲ್ ಕಳುಹಿಸಿರುತ್ತಾರೆ. ಅವರು ಅಟ್ಯಾಚ್ಮೆಂಟ್ ತೆರೆದಾಗ ಹ್ಯಾಕರ್ ಒಂದು ಕೊಳಕು ಸಾಫ್ಟ್ವೇರ್ (ಮಾಲ್ವೇರ್) ಮೂಲಕ ಅವರ ಲ್ಯಾಪ್‌ಟಾಪ್‌ಅನ್ನು ಅವರ ಅರಿವಿಗೆ ಬಾರದಂತೆ ನಿಯಂತ್ರಿಸತೊಡಗುತ್ತಾರೆ.

ವಿಲ್ಸನ್ ಅವರನ್ನು ಬಂಧನ ಮಾಡುವ ಎರಡು ವರ್ಷಗಳ ಹಿಂದೆಯೇ, ಅವರಿಗೆ ಗೊತ್ತಿಲ್ಲದಂತೆಯೇ ಅವರ ಲ್ಯಾಪ್‌ಟಾಪ್‌ನಲ್ಲಿ ಹಿಡನ್ ಫೋಲ್ಡರ್ ಒಂದನ್ನು ಸೃಷ್ಟಿಸಿ ಅದರಲ್ಲಿ ’ಸಂಚಿನ ಪತ್ರಗಳನ್ನು ಅಡಗಿಸಲಾಗಿದೆ. ಈ ಸಂಚು ಎಷ್ಟು ಪೊಳ್ಳು ಎಂದರೆ ಅವರ ಲ್ಯಾಪ್‌ಟಾಪ್ ಜಪ್ತಿ ಮಾಡಿದ ದಿನ ಬೆಳಿಗ್ಗೆ 6 ಗಂಟೆಯಾದರೆ, ಸಂಚಿನ ಕೊನೆಯ ಪತ್ರವನ್ನು ಹಿಂದಿನ ದಿನ ಸಂಜೆ 4:30ಕ್ಕೆ ಅಲ್ಲಿ ಸೇರಿಸಿರುತ್ತಾರೆ. ಇದನ್ನು ತನಿಖೆ ಮಾಡಿರುವ ಸಂಸ್ಥೆಯ ಅಧ್ಯಕ್ಷ ಮಾರ್ಕ್ ಸ್ಪೆನ್ಸರ್ “ಈವರೆಗೂ ಎಷ್ಟೋ ಹ್ಯಾಕಿಂಗ್ ಪ್ರಕರಣಗಳನ್ನು ನಾವು ನೋಡಿದ್ದೇವೆ, ಆದರೆ ಇದರಲ್ಲಿನ ನೈಪುಣ್ಯತೆ ಮತ್ತು ಆತಂಕಕಾರಿ ಚಾಣಾಕ್ಷತೆ ನಾವು ಈವರೆಗೂ ಕಂಡಿಲ್ಲ ಎಂದು ವರದಿ ನೀಡಿದ್ದಾರೆ. ಈ ವರದಿಯಲ್ಲಿ ಇನ್ನೊಂದು ಮುಖ್ಯ ಸಾಕ್ಷಿಯೆಂದರೆ ಆ ಲ್ಯಾಪ್‌ಟಾಪ್‌ನಲ್ಲಿದ್ದ ಆ ಪತ್ರಗಳನ್ನು ವಿಲ್ಸನ್ ಎಂದೂ ತೆರೆದಿಲ್ಲ ಎಂಬುದು ಮತ್ತು ಆ ಪತ್ರಗಳು ಸೃಷ್ಟಿಯಾಗಿರುವುದೇ ವಿಂಡೋಸ್‌ನ ವರ್ಡ್ 2013 ಆವೃತ್ತಿಯಲ್ಲಿ, ಆದರೆ ವಿಲ್ಸನ್ ಉಪಯೋಗಿಸುತ್ತಿದ್ದು ವಿಂಡೋಸ್ 7 ಎಂದು ತಿಳಿದಿದೆ. ಆದ್ದರಿಂದ ವಿಲ್ಸನ್ ಉಪಯೋಗಿಸುತ್ತಿದ್ದ ಕಂಪ್ಯೂಟರ್‌ನಲ್ಲಿ ಆ ಪತ್ರಗಳು ಸೃಷ್ಟಿಯಾಗಿರುವುದಕ್ಕೆ ಸಾಧ್ಯವೇ ಇಲ್ಲ ಎಂಬುದು.

ಈ ರೀತಿಯ ಸಂಚಿನ ಕಥಾನಕವನ್ನು ಸಮಾಜದಲ್ಲಿ ಸೃಷ್ಟಿಸುವುದೇ ದಮನಿತ ಸಮುದಾಯಗಳನ್ನು ಹತ್ತಿಕ್ಕುವುದಕ್ಕೆ ಅಥವಾ ಪ್ರಜಾಪ್ರಭುತ್ವದ ಸಮ ಸಮಾಜದ ಕನಸು ಕಾಣುತ್ತಿರುವ ಜನರನ್ನು ಹತೋಟಿಯಲ್ಲಿಡುವುದಕ್ಕೆ. ಅದು ಈಗ ಡಿಜಿಟಲ್ ಯುಗದಲ್ಲೂ ಸಾಗಿದೆ ಎಂದು ಈ ವರದಿ ನಿರೂಪಿಸಿದೆ.

  • ಸಂಗ್ರಹ – ಮುತ್ತುರಾಜು

ಇದನ್ನೂ ಓದಿ: ’ಸಂಚು ಪತ್ರ’ವೇ ಸಂಚಿನಿಂದ ಲ್ಯಾಪ್‌ಟಾಪ್ ಒಳಗೆ ನುಸುಳಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...