Homeಫ್ಯಾಕ್ಟ್‌ಚೆಕ್FACT CHECK : ರಾಹುಲ್ ಗಾಂಧಿ ವಿರುದ್ದ ಮಣಿಪುರದಲ್ಲಿ 'ಗೋ ಬ್ಯಾಕ್' ಘೋಷಣೆ ಕೂಗಲಾಗಿದೆ ಎಂಬುವುದು...

FACT CHECK : ರಾಹುಲ್ ಗಾಂಧಿ ವಿರುದ್ದ ಮಣಿಪುರದಲ್ಲಿ ‘ಗೋ ಬ್ಯಾಕ್’ ಘೋಷಣೆ ಕೂಗಲಾಗಿದೆ ಎಂಬುವುದು ಸುಳ್ಳು

- Advertisement -
- Advertisement -

ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇತ್ತೀಚೆಗೆ ಹಿಂಸಾಚಾರ ಪೀಡಿತ ಮಣಿಪುರದ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ್ದರು. ತಮ್ಮ ಭೇಟಿಯ ಸಂದರ್ಭದಲ್ಲಿ, ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರಿಗೆ ರಾಜ್ಯಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದ್ದು “ಮಣಿಪುರದ ಜನರ ಮಾತುಗಳನ್ನು ಆಲಿಸಿ ಮತ್ತು ಏನು ನಡೆಯುತ್ತಿದೆ ಎಂಬುವುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ” ಎಂದಿದ್ದಾರೆ.

ರಾಹುಲ್ ಗಾಂಧಿಯ ಮಣಿಪುರ ಭೇಟಿಯ ಬಳಿಕ ಅನೇಕ ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿಗಳು ಎಎನ್‌ಐ ಸುದ್ದಿ ಸಂಸ್ಥೆಯ ವಿಡಿಯೋವೊಂದನ್ನು ಹಂಚಿಕೊಂಡು “ರಾಹುಲ್ ಗಾಂಧಿ ವಿರುದ್ದ ಮಣಿಪುರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಸದಾ ಬಿಜೆಪಿ ಪರ ಮತ್ತು ಸುಳ್ಳು ಸುದ್ದಿ ಹರಡುವ ಬಲಪಂಥೀಯ ಎಕ್ಸ್ ಬಳಕೆದಾರ @MrSinha ಎಎನ್‌ಐಯ ವಿಡಿಯೋವನ್ನು ಹಂಚಿಕೊಂಡಿದ್ದು ” ರಾಹುಲ್ ಗಾಂಧಿ ಮಣಿಪುರಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಸ್ಥಳೀಯರು ಗೋ ಬ್ಯಾಕ್‌ ಘೋಷಣೆಗಳನ್ನು ಕೂಗಿದ್ದಾರೆ” ಎಂದು ಬರೆದುಕೊಂಡಿದ್ದರು. ಬಳಿಕ ಅವರು ತನ್ನ ಪೋಸ್ಟ್ ಅನ್ನು ಡಿಲಿಟ್ ಮಾಡಿದ್ದಾರೆ.

ಮತ್ತೋರ್ವ ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿ ಅರುಣ್ ಪುದೂರ್ ಕೂಡ ಎಎನ್‌ಐಯ ವಿಡಿಯೋ ಹಂಚಿಕೊಂಡಿದ್ದು, “ಮಣಿಪುರದಲ್ಲಿ ಪಪ್ಪು ಹೋದಲೆಲ್ಲ ಗೋ ಬ್ಯಾಕ್ ಘೋಷಣೆ ಪ್ರತಿಧ್ವನಿಸಿದೆ. ಅವರು ತಮ್ಮ ಸಿಸಿಪಿ (ಚೈನೀಸ್ ಕಮ್ಯನಿಸ್ಟ್ ಪಾರ್ಟಿ) ಮಾಸ್ಟರ್‌ಗಳಿಗೆ ಸಹಾಯ ಮಾಡಲು ರಾಜ್ಯದಲ್ಲಿ ಮತ್ತೆ ಘರ್ಷಣೆ ಹುಟ್ಟು ಹಾಕುತ್ತಾರೆ ಎಂಬುವುದು ಜನರಿಗೆ ತಿಳಿದಿದೆ” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, “ಈಶಾನ್ಯ ಹಿಂದೂ ಬುಡಕಟ್ಟುಗಳ ವಿನಾಶಕ್ಕೆ ನೆಹರೂ-ಗಾಂಧಿ ವಂಶಸ್ಥರು ಕಾರಣ” ಎಂದು ಆರೋಪಿಸಿದ್ದಾರೆ. “ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಎಂದಾದರೂ ರಾಜ್ಯಕ್ಕೆ ಭೇಟಿ ನೀಡಿದ್ದಾರಾ?” ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಅನೇಕ ಎಕ್ಸ್‌ ಬಳಕೆದಾರರು ಎಎನ್‌ಐಯ ವಿಡಿಯೋ ಹಂಚಿಕೊಂಡು “ರಾಹುಲ್ ಗಾಂಧಿ ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಜನರು ಗೋ ಬ್ಯಾಕ್ ಘೋಷಣೆಗಳನ್ನು ಕೂಗಿದ್ದಾರೆ” ಎಂದು ಪ್ರತಿಪಾದಿಸಿದ್ದಾರೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣ ಬಳಕೆದಾರರು ಎಎನ್‌ಐಯ ವಿಡಿಯೋ ಹಂಚಿಕೊಂಡಿರುವ ಕಾರಣ ನಾವು ಆ ವಿಡಿಯೋವನ್ನು ಎಎನ್‌ಐ ಯಾವಾಗ ಪೋಸ್ಟ್ ಮಾಡಿದೆ ಎಂದು ಪರಿಶೀಲಿಸಿದ್ದೇವೆ. ಈ ವೇಳೆ ಜನವರಿ 21,2024ರಂದು ವಿಡಿಯೋ ಪೋಸ್ಟ್ ಆಗಿರುವುದು ಕಂಡು ಬಂದಿದೆ.

ವಿಡಿಯೋ ಜೊತೆಗೆ ಎಎನ್‌ಐ ಹೀಗೆ ಬರೆದಿತ್ತು “ಅಸ್ಸಾಂನ ನಾಗಾಂವ್‌ನ ಅಂಬಾಗಾನ್ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಜನರು ‘ರಾಹುಲ್ ಗಾಂಧಿ ಗೋ ಬ್ಯಾಕ್, ಅನ್ಯಾಯ ಯಾತ್ರೆ’ ಪೋಸ್ಟರ್‌ಗಳನ್ನು ಹಿಡಿದು ಪ್ರತಿಭಟಿಸಿದರು.” ಈ ಪೋಸ್ಟ್ ವಿಡಿಯೋ ಹಳೇದು ಮಾತ್ರವಲ್ಲ ಅಸ್ಸಾಂನದ್ದು ಎಂದು ನಮಗೆ ತಿಳಿಸುತ್ತದೆ.

ಎಎನ್‌ಐ ವಿಡಿಯೋ ಪೋಸ್ಟ್ ಮಾಡಿದ್ದ ಅದೇ ಘಟನೆಯ ಕುರಿತು 22 ಜನವರಿ 2024ರಂದು ಡೆಕ್ಕನ್ ಹೆರಾಲ್ಟ್ ಸುದ್ದಿ ಪ್ರಕಟಿಸಿತ್ತು. ವರದಿಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಅಸ್ಸಾಂನ ನಾಗಾಂವ್ ಜಿಲ್ಲೆ ತಲುಪಿದ ವೇಳೆ ಈ ಘಟನೆ ಸಂಭವಿಸಿದೆ ತಿಳಿಸಲಾಗಿದೆ. ವರದಿಯ ಪ್ರಕಾರ, ರಾಹುಲ್ ಗಾಂಧಿ ಮತ್ತು ಇತರ ಕೆಲವು ನಾಯಕರು ರೂಪೋಹಿಗೆ ಹೋಗುವಾಗ ಅಂಬಾಗನ್‌ನಲ್ಲಿರುವ ರಸ್ತೆ ಬದಿಯ ರೆಸ್ಟೋರೆಂಟ್‌ ಬಳಿ ವಾಹನ ನಿಲ್ಲಿಸಿ ಕೆಳಗಿಳಿದಿದ್ದರು. ಈ ವೇಳೆ ಗುಂಪು ಸೇರಿದ ಜನರು ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದಾರೆ.

ಅದೇ ದಿನ, ಇತರ ದಾಳಿಯ ಘಟನೆಗಳು ವರದಿಯಾಗಿತ್ತು. ಯಾತ್ರೆಯಿಂದ ವಾಪಸಾಗುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ವಾಹನಗಳ ಮೇಲೆ ದಾಳಿ ನಡೆಸಿರುವ ಆರೋಪ ಕೇಳಿ ಬಂದಿತ್ತು. ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕದ ಮೂವರು ಸದಸ್ಯರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿತ್ತು. ಸೋನಿತ್‌ಪುರ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಜೈರಾಮ್ ರಮೇಶ್ ಅವರ ಕಾರಿನ ಮೇಲೂ ದಾಳಿ ನಡೆಸಿದ್ದ ಬಗ್ಗೆ ವರದಿಯಾಗಿತ್ತು. ಈ ನಡುವೆ ಯಾತ್ರೆ ನಾಗಾಂವ್ ತಲುಪಿತ್ತು.

ಈ ಆಪಾದಿತ ದಾಳಿಗಳನ್ನು ಖಂಡಿಸಿ ಕಾಂಗ್ರೆಸ್ ಜನವರಿ 22 ರಂದು ದೇಶದಾದ್ಯಂತ ಪ್ರತಿಭಟನೆ ಘೋಷಿಸಿತ್ತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಅಸ್ಸಾಂನಲ್ಲಿ ಯಾತ್ರೆ ಪ್ರವೇಶಿಸಿದಾಗಿನಿಂದ ನಮ್ಮ ಬೆಂಗಾವಲು ವಾಹನಗಳು, ಆಸ್ತಿಗಳು ಮತ್ತು ನಾಯಕರ ಮೇಲೆ ನಿರಂತರ ದಾಳಿಗಳು ನಡೆಯುತ್ತಿದೆ ಎಂದು ಹೇಳಿದ್ದರು.

ಒಟ್ಟಿನಲ್ಲಿ ಜನವರಿ 21, 2024ರಂದು ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿದ್ದ ರಾಹುಲ್ ಗಾಂಧಿ ಮತ್ತು ಇತರ ನಾಯಕರು ಅಸ್ಸಾಂನ ನಾಗಾಂವ್‌ ತಲುಪಿದ್ದಾಗ ಅವರ ವಿರುದ್ದ ಪೋಸ್ಟರ್ ಪ್ರದರ್ಶಿಸಿ ಘೋಷಣೆಗಳನ್ನು ಕೂಗಲಾಗಿತ್ತು. ಅದರ ವಿಡಿಯೋವನ್ನು, ಇತ್ತೀಚೆಗೆ ರಾಹುಲ್ ಗಾಂಧಿ ಮಣಿಪುರಕ್ಕೆ ಭೇಟಿ ನೀಡಿದಾಗ ಗೋ ಬ್ಯಾಕ್‌ ಘೋಷಣೆ ಕೂಗಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗ್ತಿದೆ.

ಇದನ್ನೂ ಓದಿ : FACT CHECK : ಪಪ್ಪಾಯಿ ಎಲೆಯ ರಸವು ಡೆಂಗ್ಯೂ ಖಾಯಿಲೆ ಗುಣಪಡಿಸುತ್ತದೆ ಎಂಬುವುದು ಸುಳ್ಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -