‘ಜಲ ಜೀವನ್ ಮಿಷನ್'(ಜೆಜೆಎಂ) ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ವಿಚಾರದಲ್ಲಿ ರಾಜಕೀಯ ಕಿತ್ತಾಟ ನಡೆಯುತ್ತಿದೆ. ಬಿಜೆಪಿ ಬೆಂಬಲಿಗರು ‘ಮೋದಿ ದುಡ್ಡು ಸಿದ್ದು ಹೆಸರು’ ಎಂಬ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ‘ಕೇಂದ್ರದ ಮೋದಿ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯ ನೀರನ್ನು ಸಿದ್ದರಾಮಯ್ಯ ಸರ್ಕಾರ ತನ್ನದೆಂದು ಬಿಂಬಿಸುತ್ತಿದೆ’ ಎಂಬರ್ಥದಲ್ಲಿ ಸುದ್ದಿ ಹಂಚುತ್ತಿದ್ದಾರೆ.
ಪ್ರಧಾನಿ ಶ್ರೀ @narendramodi ಅವರು ಜಲ್ ಜೀವನ್ ಯೋಜನೆ ಮೂಲಕ ಪ್ರತಿಯೊಂದು ಮನೆ ಬಾಗಿಲಿಗೂ ಕೊಳಾಯಿ ಸಂಪರ್ಕ ಕಲ್ಪಿಸಿ ಉಚಿತವಾಗಿ ಕುಡಿಯುವ ನೀರು ನೀಡುತ್ತಿದ್ದಾರೆ.
ಆದರೆ, ಮಜಾವಾದಿ @siddaramaiah ಸರ್ಕಾರ ಮಾತ್ರ ಕಾವೇರಿಯನ್ನು ಸ್ಟಾಲಿನ್ ನಾಡಿಗೆ ಹರಿಬಿಟ್ಟು, ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಸಿ ರಾಜಧಾನಿ ಬೆಂಗಳೂರಿನಲ್ಲಿ… pic.twitter.com/079a3CZKLx
— BJP Karnataka (@BJP4Karnataka) February 27, 2024
ಫ್ಯಾಕ್ಟ್ಚೆಕ್ : ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ಜಲ ಜೀವನ್ ಮಿಷನ್ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭಿಮಾನಿಗಳು ಪರಸ್ಪರ ಕಿತ್ತಾಟದಲ್ಲಿ ನಿರತರಾಗಿದ್ದಾರೆ. ಹಾಗಾಗಿ, ಯೋಜನೆಯ ಕುರಿತು ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ.
ಜಲ ಜೀವನ್ ಮಿಷನ್ ಯೋಜನೆ ಯಾರದ್ದು? ಇದರ ಉದ್ದೇಶವೇನು? ಈ ಯೋಜನೆಗೆ ಯಾರು ಹಣ ಒದಗಿಸುತ್ತಿದ್ದಾರೆ?, ಯೋಜನೆಯಲ್ಲಿ ಕೇಂದ್ರದ ಪಾಲೆಷ್ಟಿದೆ?, ರಾಜ್ಯದ ಪಾಲೆಷ್ಟಿದೆ? ಇತ್ಯಾದಿ ವಿಷಯಗಳ ಕುರಿತು ನೈಜ ಮಾಹಿತಿಯನ್ನು ನಾವು ಇಲ್ಲಿ ತೆರದಿಟ್ಟಿದ್ದೇವೆ.
ಜಲ ಜೀವನ್ ಮಿಷನ್ ಯೋಜನೆಯ ಕುರಿತು ಮಾಹಿತಿ ಹುಡುಕಿದಾಗ ಕೇಂದ್ರ ಸರ್ಕಾರದ ಅಧಿಕೃತ ಸಂಸ್ಥೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) 21 ಮಾರ್ಚ್ 2022ರಂದು ಜಲ ಜೀವನ್ ಮಿಷನ್ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು (Share of Union and State Government in JJM)ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ಮಾಹಿತಿಯೊಂದು ದೊರೆತಿದೆ.
ಪಿಐಬಿ ಪ್ರಕಟನೆಯಲ್ಲಿ ತಿಳಿಸಿದಂತೆ, 2024ರೊಳಗೆ ದೇಶದ ಗ್ರಾಮೀಣ ಪ್ರದೇಶದ ಪ್ರತೀ ಮನೆಗಳಿಗೆ ನಳ್ಳಿ ನೀರು ಒದಗಿಸುವ ಉದ್ದೇಶದಿಂದ ಆಗಸ್ಟ್ 2019ರಲ್ಲಿ ರಾಜ್ಯಗಳ ಸಹಯೋಗದಲ್ಲಿ ಭಾರತ ಸರ್ಕಾರ ಜಾರಿಗೆ ತಂದ ಯೋಜನೆಯಾಗಿದೆ ‘ಜಲ ಜೀವನ್ ಮಿಷನ್’ (ಜೆಜೆಎಂ) ಇದರ ಅಂದಾಜು ವೆಚ್ಚವು ರೂ. 3.60 ಲಕ್ಷ ಕೋಟಿಯಾಗಿದ್ದು, ಇದರಲ್ಲಿ ಕೇಂದ್ರ ಪಾಲು ರೂ. 2.08 ಲಕ್ಷ ಕೋಟಿ ಆಗಿದೆ.
ಜೆಜೆಎಂ ಯೋಜನೆಗೆ ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಶೇ. 100ರಷ್ಟು ಅನುದಾನ ಒದಗಿಸುತ್ತಿದೆ. ಅಂದರೆ, ಯೋಜನೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತಿದೆ. ಈಶಾನ್ಯ, ಹಿಮಾಲಯ ರಾಜ್ಯಗಳು ಮತ್ತು ಶಾಸಕಾಂಗ ಇರುವ ಕೇಂದ್ರಾಡಳಿತ ಪ್ರದೇಶಗಳಿಗೆ 90:10 ಅನುಪಾತದಲ್ಲಿ, ಅಂದರೆ ಯೋಜನೆಯ ಶೇ. 90ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಮತ್ತು ಶೇ.10 ಅನುದಾವನ್ನು ಆಯಾ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಭರಿಸುತ್ತಿದೆ. ಕರ್ನಾಟಕ, ಕೇರಳದಂತಹ ಸರ್ಕಾರಗಳು ಇರುವ ರಾಜ್ಯಗಳಲ್ಲಿ 50:50 ಅನುಪಾದಲ್ಲಿ ಅನುದಾನ ಹಂಚಿಕೆಯಾಗುತ್ತಿದೆ. ಅಂದರೆ ಯೋಜನೆಯ ಶೇ. 50ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿದ್ದು, ಉಳಿದ ಶೇ.50ರಷ್ಟು ವೆಚ್ಚವನ್ನು ಆಯಾ ರಾಜ್ಯ ಸರ್ಕಾರಗಳು ಭರಿಸುತ್ತಿವೆ.
ಇದಲ್ಲದೆ, ನೀರಿನ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯಡಿ (WQMS)ಕೇಂದ್ರಾಡಳಿತ ಪ್ರದೇಶಗಳಿಗೆ ಶೇ.100ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿದ್ದು, ಹಿಮಾಲಯ ಹಾಗೂ ಈಶಾನ್ಯ ರಾಜ್ಯಗಳಿಗೆ 90:10 ಅನುಪಾತ ಮತ್ತು ಇತರ ರಾಜ್ಯಗಳಿಗೆ 60:40 ಅನುಪಾತದಲ್ಲಿ ಅನುದಾನ ಹಂಚಿಕೆಯಾಗ್ತಿದೆ.
ಜಲ ಜೀವನ್ ಮಿಷನ್ ಅಡಿಯಲ್ಲಿ ದೇಶದ ಕೆಲ ವಿಶೇಷ ಪ್ರದೇಶಗಳಿಗೆ ಅಲ್ಲಿನ ಪ್ರಾಧಿಕಾರಗಳ ಮೂಲಕ ಪ್ರೋತ್ಸಾಹಧನ ನೀಡಲಾಗುತ್ತಿದೆ. ಉದಾ: ಮರುಭೂಮಿ ಅಭಿವೃದ್ಧಿ ಕಾರ್ಯಕ್ರಮ (ಡಿಡಿಪಿ) ಮತ್ತು ಬರಪೀಡಿತ ಪ್ರದೇಶ ಕಾರ್ಯಕ್ರಮ (ಡಿಪಿಎಪಿ) ಅಡಿಯಲ್ಲಿರುವ ಬರುವ ಭೂಪ್ರದೇಶಗಳಿಗೆ ಶೇ. 30ರಷ್ಟು ಅನುದಾನ, ಎಸ್ಸಿ, ಎಸ್ಟಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ವಾಸಿಸುವ ಜನಸಂಖ್ಯೆಗೆ ಶೇ. 10ರಷ್ಟು ಅನುದಾನ. ನಿಯಮಗಳ ಪ್ರಕಾರ ಅನುದಾನ ಹಂಚಿಕೆ ಮಾಡುವಾಗ ಈ ಪ್ರದೇಶಗಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕಾಗಿದೆ.
ಇದಲ್ಲದೆ, ನೀರಿನ ಜೆಇ-ಎಇಎಸ್ (JE-AES-Japanese encephalitis)ಅಂದರೆ, ಡೆಂಗ್ಯೂ, ಹಳದಿ ಜ್ವರ, ವೆಸ್ಟ್ ನೈಲ್ ವೈರಸ್ಗಳು ಮತ್ತು ಸೊಳ್ಳೆಯಿಂದ ಬರುವ ರೋಗ ಪೀಡಿತ ಜಿಲ್ಲೆಗಳ ಗ್ರಾಮಗಳು ಮತ್ತು ಸಂಸದರ ಆದರ್ಶ ಗ್ರಾಮಗಳಿಗೆ (Sansad Adarsh GM Yojana (SAGY)ಅನುದಾನ ಒದಗಿಸಲು ಆದ್ಯತೆ ನೀಡಲಾಗುತ್ತಿದೆ. ನರೇಗಾ ಯೋಜನೆಯಡಿ ಪಾರಂಪರಿಕ ಜಲಮೂಲಗಳ ಪುನರುಜ್ಜೀವನಕ್ಕೂ ಜೆಜೆಎಂ ಯೋಜನೆಯಡಿ ಅನುದಾನ ನೀಡಲಾಗುತ್ತಿದೆ. ಉದಾ: ಕಲ್ಯಾಣಿಗಳು, ಬಾವಿಗಳು.
15 ನೇ ಹಣಕಾಸು ಆಯೋಗವು ಗ್ರಾಮೀಣ ಸ್ಥಳೀಯ ಸಂಸ್ಥೆ (RLBs)ಗಳ ಮೂಲಕ, ಸಂಯೋಜಿತ ಜಲಾನಯನ ನಿರ್ವಹಣಾ ಕಾರ್ಯಕ್ರಮ (IWMP),ರಾಜ್ಯ ಯೋಜನೆಗಳು, ಜಿಲ್ಲಾ ಖನಿಜ ಅಭಿವೃದ್ಧಿ ನಿಧಿ, ಸಿಎಸ್ಆರ್ ನಿಧಿಗಳು, ಸಮುದಾಯ ಕೊಡುಗೆ ಇತ್ಯಾದಿಗಳು ಕೂಡ ಜೆಜೆಎಂಗೆ ಅನುದಾನ ಒದಗಿಸುತ್ತಿದೆ.
ಕೇಂದ್ರ ಜಲಶಕ್ತಿ ಸಚಿವಾಲಯದ ಅಧೀನದಲ್ಲಿ ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಜಲ ಶಕ್ತಿ ಸಚಿವಾಲಯ ಅಥವಾ ಜಲ ಸಂಪನ್ಮೂಲ ಸಚಿವಾಲಯವನ್ನು ಎರಡನೇ ಮೋದಿ ಸರ್ಕಾರ ಅವಧಿಯಲ್ಲಿ ಮೇ 2019 ರಲ್ಲಿ ರಚಿಸಲಾಗಿದೆ. ಇದು ಜಲಸಂಪನ್ಮೂಲ ಸಚಿವಾಲಯ, ನದಿ ಅಭಿವೃದ್ಧಿ, ಗಂಗಾ ಪುನರುಜ್ಜೀವನ ಮತ್ತು ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯಗಳ ವಿಲೀನದಿಂದ ರೂಪುಗೊಂಡಿದೆ.
ನಮಗೆ ದೊರೆತ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮಾನ ಪಾಲಿದೆ. ಯೋಜನೆಗೆ ಕೇಂದ್ರ ಸರ್ಕಾರ ಶೇ.50ರಷ್ಟು ಹಣವನ್ನು ಒದಗಿಸಿದರೆ, ಇನ್ನುಳಿದ ಶೇ.50ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಹಾಗಾಗಿ, ಇದು ಕೇವಲ ಕೇಂದ್ರ ಸರ್ಕಾರ ಯೋಜನೆಯಲ್ಲ, ರಾಜ್ಯ ಸರ್ಕಾರದ ಯೋಜನೆಯೂ ಹೌದು.
ಇದನ್ನೂ ಓದಿ: Fact Check: ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿದೆ ಎಂಬುವುದು ಸುಳ್ಳು