Homeಮುಖಪುಟಮುಸ್ಕಾನ್‌ ವಿರುದ್ಧ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ: ಕ್ರಮ ಜರುಗಿಸಲು ವಿಚಾರ ಮಾಡಲಾಗುವುದು- ಮಂಡ್ಯ ಎಸ್‌ಪಿ

ಮುಸ್ಕಾನ್‌ ವಿರುದ್ಧ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ: ಕ್ರಮ ಜರುಗಿಸಲು ವಿಚಾರ ಮಾಡಲಾಗುವುದು- ಮಂಡ್ಯ ಎಸ್‌ಪಿ

“ಮಾಧ್ಯಮಗಳಿಗೆ ಯಾವುದೇ ಸುದ್ದಿ ಇಲ್ಲದೆ ಇರುವುದಕ್ಕೆ ಏನೋ ಒಂದನ್ನು ಬರೆದಿದ್ದಾರೆ” ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

ರಾಜ್ಯದಾದ್ಯಂತ ಹಿಜಾಬ್‌ ವಿಚಾರವಾಗಿ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಎಬಿವಿಪಿ ಸಂಘಟನೆಯ ದುಷ್ಕರ್ಮಿಗಳಿಂದ ಸುತ್ತುವರೆಯಲ್ಪಟ್ಟಾಗ, ‘ಅಲ್ಲಾಹು ಅಕ್ಬರ್‌’ ಎಂದು ಘೋಷಣೆ ಕೂಗಿದ್ದ ಮಂಡ್ಯದ ಪಿಇಎಸ್‌‌‌ ವಿದ್ಯಾರ್ಥಿನಿ ಮುಸ್ಕಾನ್ ವಿಚಾರವಾಗಿ, ರಾಜ್ಯದ ಹಲವಾರು ಸುದ್ದಿ ಮಾಧ್ಯಮಗಳು ಕಪೋಲಕಲ್ಪಿತ ವರದಿಗಳನ್ನು ಪ್ರಕಟಿಸಿ ಓದುಗರನ್ನು ದಾರಿತಪ್ಪಿಸಿವೆ.

ಮುಖ್ಯವಾಗಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌‌, ವಿಜಯವಾಣಿ, ಪಬ್ಲಿಕ್ ಟಿವಿ, ಪವರ್‌ ಟಿವಿ, ಸಂಜೆವಾಣಿ ಸೇರಿದಂತೆ ಹಲವಾರು ಪತ್ರಿಕೆಗಳು ಮತ್ತು ಮಾಧ್ಯಮಗಳು ತಮ್ಮ ವೆಬ್‌ಸೈಟ್‌ನಲ್ಲಿ, “ವಿದ್ಯಾರ್ಥಿನಿ ಮುಸ್ಕಾನ್ ಮತ್ತು ಅವರ ಕುಟುಂಬ ಪೊಲೀಸರನ್ನು ಯಾಮಾರಿಸಿ ವಿದೇಶಕ್ಕೆ ತೆರಳಿದ್ದಾರೆ” ಎಂದು ವರದಿ ಮಾಡಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಕುರಿತು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿರುವ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಎನ್‌.ಯತೀಶ್‌, “ಮುಸ್ಕಾನ್‌ ಹಾಗೂ ಅವರ ಕುಟುಂಬದ ವಿರುದ್ಧ ಯಾವುದೇ ಪ್ರಕರಣವಿಲ್ಲ. ಅವರು ಹೋಗಿದ್ದಾರಷ್ಟೇ. ಇದರ ಬಗ್ಗೆ ಅಭಿಪ್ರಾಯ ಕೇಳುವ ಪ್ರಶ್ನೆಯೇ ಬರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಮೌಖಿಕ ಆದೇಶವನ್ನು ಪೊಲೀಸರು ನೀಡಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿರುವ ಕುರಿತು ತಿಳಿಸಿದ ಅವರು, “ಆ ರೀತಿ ಏನೂ ಇಲ್ಲ” ಎಂದರು.

“ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಮಾಧ್ಯಮಗಳ ವಿರುದ್ಧ ಯಾವುದಾದರೂ ಕ್ರಮ ಜರುಗಿಸುವಿರಾ?” ಎಂದು ಪ್ರಶ್ನಿಸಿದಾಗ, “ಈ ಕುರಿತು ವಿಚಾರ ಮಾಡಲಾಗುವುದು” ಎಂದು ಸೂಚನೆ ನೀಡಿದ್ದಾರೆ.

ಮಾಧ್ಯಮಗಳು ವರದಿ ಮಾಡಿದ್ದೇನು?

ಸುವರ್ಣ ನ್ಯೂಸ್‌ ತನ್ನ ವರದಿಯಲ್ಲಿ, “ಪೊಲೀಸರಿಗೆ ಮಾಹಿತಿ ನೀಡದೆ ವಿದೇಶಕ್ಕೆ ಹಾರಿದ ಹಿಜಾಬ್ ಹುಡುಗಿ ಮುಸ್ಕಾನ್” ಎಂದು ಸುಳ್ಳು ಸುದ್ದಿಯನ್ನು ವರದಿ ಮಾಡಿದೆ. ಅದು ತನ್ನ ವರದಿಯಲ್ಲಿ ಯಾವುದೇ ಪೊಲೀಸರ ಅಧಿಕೃತ ಹೇಳಿಕೆಯನ್ನು ಉಲ್ಲೇಖಿಸಿಲ್ಲ. ಕೇವಲ ಕಪೋಲ ಕಲ್ಪಿತವಾಗಿ ಸುದ್ದಿಯನ್ನು ವರದಿ ಮಾಡಿದೆ. ಸುವರ್ಣ ನ್ಯೂಸ್‌ನ ಈ ವರದಿಯನ್ನು ನಂದನ್ ರಾಮಕೃಷ್ಣ, ಮಂಡ್ಯ ಎಂಬವರು ಮಾಡಿದ್ದಾರೆ.

ಇದನ್ನೂ ಓದಿ: ಪಬ್ಲಿಕ್‌, ಸುವರ್ಣ, ಟಿವಿ9 ಮತ್ತು ಪಬ್ಲಿಕ್ ಟಿವಿ ಕಚೇರಿ ಮುಂದೆ ಬುಧವಾರ ‘ಆತ್ಮಾವಲೋಕನ ಸತ್ಯಾಗ್ರಹ’

ಪಬ್ಲಿಕ್‌ ಟಿವಿ ತನ್ನ ವೆಬ್‌ಸೈಟ್‌ನಲ್ಲಿ, “ಪೊಲೀಸರನ್ನು ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್‌ ಕೂಗಿದ ವಿದ್ಯಾರ್ಥಿನಿ” ಎಂಬ ಹೆಡ್‌ಲೈನ್‌ನೊಂದಿಗೆ ವರದಿ ಮಾಡಿದೆ. ಈ ವರದಿಯಲ್ಲಿ ಕೂಡಾ ಪತ್ರಿಕೆ ಯಾವುದೇ ಖಚಿತ ಮಾಹಿತಿಯನ್ನು ನೀಡದೆ ಸುಳ್ಳು ಮಾಹಿತಿಯನ್ನು ಬರೆಯಲಾಗಿದೆ.

ಪವರ್‌ ಟಿವಿಯ ವೆಬ್‌ಸೈಟ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ವಿದೇಶಕ್ಕೆ ಹಾರಿದ ವಿದ್ಯಾರ್ಥಿನಿ ಮುಷ್ಕಾನ್; ಉಗ್ರಗಾಮಿಗಳ ಭೇಟಿ ಸಂಚು ಇದೆಯಾ?” ಎಂದು ಸುಳ್ಳು ಸುದ್ದಿಯನ್ನು ಪ್ರಶ್ನಾರ್ಥಕವಾಗಿ ಬರೆದು ಓದುಗರನ್ನು ದಾರಿ ತಪ್ಪಿಸಿದೆ. ಜೊತೆಗೆ ವರದಿಯಲ್ಲಿ, ಮುಸ್ಕಾನ್ ಪೊಲೀಸರನ್ನು ಯಾಮಾರಿಸಿ ವಿದೇಶಕ್ಕೆ ತೆರಳಿದ್ದಾರೆ ಎಂದು ಪ್ರತಿಪಾದಿಸಿದೆ.

ವಿಜಯವಾಣಿ ಕೂಡಾ ತಮ್ಮ ವೆಬ್‌ಸೈಟ್‌ನಲ್ಲಿ ಪೊಲೀಸರನ್ನು ಯಾಮಾರಿಸಿ ಮುಸ್ಕಾನ್ ವಿದೇಶಕ್ಕೆ ತೆರಳಿದ್ದಾರೆ ಎಂದು ವರದಿ ಮಾಡಿದೆ. ಸಂಜೆವಾಣಿ ಪತ್ರಿಕೆಯ ವೆಬ್‌ಸೈಟ್‌ನಲ್ಲಿ, “ಖಾಕಿಗೆ ಮಾಹಿತಿ ನೀಡದೆ ಸೌದಿಗೆ ತೆರಳಿದ ಮುಸ್ಕಾನ್‌ ಕುಟುಂಬ” ಎಂಬ ಹೆಡ್‌ಲೈನ್ ನೀಡಿ ವರದಿ ಪ್ರಕಟಿಸಿದೆ.

ಇನ್ನೂ ಕೆಲವು ಮಾಧ್ಯಮಗಳು, ಯಾವುದೇ ಸುದ್ದಿ ಮೌಲ್ಯವಿಲ್ಲದ, ಕುಟುಂಬವೊಂದರ ವೈಯಕ್ತಿಕ ಪ್ರವಾಸವನ್ನು ವರದಿ ಮಾಡಿದ್ದು, ಜನರನ್ನು ದಾರಿ ತಪ್ಪಿಸಿವೆ.

ಇದನ್ನೂ ಓದಿ: ‘ಬಾಯಿಗೆ ಬಂದಿದ್ದು ಬರೀತೀರಾ?’: ಕೋಮುದ್ವೇಷದ ಸುದ್ದಿಗಾಗಿ ‘ಪಬ್ಲಿಕ್ ಟಿವಿ’ ಪತ್ರಕರ್ತನ ವಿರುದ್ದ ಡಿಸಿಪಿ ಕಿಡಿ

ಮುಸ್ಕಾನ್‌ ಮತ್ತು ಅವರ ಕುಟುಂಬ ಪೊಲೀಸರನ್ನು ಯಾಮಾರಿಸಿ ಹೋಗಿದ್ದರೆ? ಪೊಲೀಸರು ಹೇಳಿದ್ದೇನು?

ವಾಸ್ತವದಲ್ಲಿ ಮುಸ್ಕಾನ್ ಮತ್ತು ಅವರ ಕುಟುಂಬ ರಂಜಾನ್ ಸಮಯದಲ್ಲೇ ಮುಸ್ಲಿಮರ ಪವಿತ್ರ ಸ್ಥಳವಾದ ಸೌದಿ ಅರೇಬಿಯಾದ ಮಕ್ಕಾಗೆ ತೀರ್ಥ ಯಾತ್ರೆಗೆ ಹೋಗಿರುವುದು ವರದಿಯಾಗಿದೆ. ಆದರೆ ಅವರು ಪೊಲೀಸರನ್ನು ಯಾಮಾರಿಸಿ ಹೋಗಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಮಂಡ್ಯ ಪೂರ್ವ ಪೊಲೀಸ್‌ ಠಾಣೆಯ ಪೊಲೀಸ್‌ ಅಧಿಕಾರಿಯೊಬ್ಬರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ನಾನುಗೌರಿ.ಕಾಂ’ ಜೊತೆಗೆ ಮಾತನಾಡಿದ ಪೊಲೀಸ್ ಅಧಿಕಾರಿ, “ಹೊರ ದೇಶಕ್ಕೆ ಹೋಗುವ ನಿಯಮದಂತೆ, ಕಾನೂನು ಬದ್ದವಾಗಿಯೇ ಮುಸ್ಕಾನ್ ಅವರ ಕುಟುಂಬ ವಿದೇಶಕ್ಕೆ ಹೋಗಿದೆ. ಪೊಲೀಸರಿಗೆ ಯಾಮಾರಿಸಿ, ಹೇಳದೆ ಕೇಳದೆ, ಯಾರದೇ ಕಣ್ಣು ತಪ್ಪಿಸಿ ಹೋಗಿಲ್ಲ” ಎಂದು ಸ್ಪಷ್ಟ ಪಡಿಸಿದ್ದಾರೆ.

“ಎಲ್ಲಿಗಾದರೂ ತೆರಳಬೇಕಾದರೆ ಪೊಲೀಸರಿಗೆ ತಿಳಿಸಬೇಕು ಎಂದು ಪೊಲೀಸರು ಮೌಖಿಕವಾಗಿ ತಿಳಿಸಿದ್ದಾರೆ” ಎಂಬ ಸುವರ್ಣ ಟಿವಿ ವರದಿ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿ, “ಇವೆಲ್ಲಾ ಸುಳ್ಳು ಸುದ್ದಿ, ಅವರ ಮೇಲಾಗಲಿ ಅವರ ಕುಟುಂಬದ ಮೇಲಾಗಲಿ ಯಾವುದೇ ಪ್ರಕರಣ ಇಲ್ಲ. ಅವರಿಗೆ ಕ್ರಿಮಿನಲ್ ಹಿನ್ನಲೆಯೂ ಇಲ್ಲ. ಹೀಗಾಗಿ ಅವರನ್ನು ಮಾನಿಟರ್‌ ಮಾಡುವ ಅವಶ್ಯಕತೆಯೂ ಇಲ್ಲ. ಅವರನ್ನು ತನಿಖೆ ಮಾಡಬೇಕು ಎನ್ನುತ್ತಾರೆ, ಆದರೆ ಅವರು ಯಾವ ತಪ್ಪು ಮಾಡಿದ್ದಾರೆ ಎಂದು ತನಿಖೆ ಮಾಡಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ದೇಶದ್ರೋಹ ಕಾನೂನಿಗೆ ತಡೆ; ಬಂಧಿತರು ಜಾಮೀನು ಪಡೆಯಬಹುದು: ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

“ಮಾಧ್ಯಮಗಳಿಗೆ ಯಾವುದೇ ಸುದ್ದಿ ಇಲ್ಲದೆ ಇರುವುದಕ್ಕೆ ಏನೋ ಒಂದನ್ನು ಬರೆದಿದ್ದಾರೆ. ಇದನ್ನೆಲ್ಲಾ ನೋಡುತ್ತಾ ಇರಬೇಕಾದರೆ ನಮಗೆ ಬೇಜಾರಾಗುತ್ತದೆ. ಪೊಲೀಸರ ಹೆಸರು ಬಳಸಿಕೊಂಡು ಮಾಧ್ಯಮಗಳು ಸುಳ್ಳು ಹರಡುತ್ತಿರುವುದರ ಬಗ್ಗೆ ಇಲಾಖೆಯಲ್ಲಿ ಚರ್ಚೆ ನಡೆಯುತ್ತಿದೆ. ಅಂತಹ ಮಾಧ್ಯಮಗಳ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಬಿಜೆಪಿ ಸಿಎಂ ಬಿರೇನ್ ಸಿಂಗ್: ಅಸ್ಸಾಂ ರೈಫಲ್ಸ್ ವರದಿ

0
ಮಣಿಪುರದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ನಡೆಸಿದ ಮೌಲ್ಯಮಾಪನದಲ್ಲಿ ಸ್ಪೋಟಕ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಮಣಿಪುರದಲ್ಲಿನ ಸಂಘರ್ಷಕ್ಕೆ ಸಿಎಂ ಬಿರೇನ್ ಸಿಂಗ್ ಉತ್ತೇಜನ ಕಾರಣ ಎಂದು ಹೇಳಿದೆ. ಅಸ್ಸಾಂ ಸಿಎಂ ಬಿರೇನ್ ಸಿಂಗ್...