ವೈವಾಹಿಕ ಅತ್ಯಾಚಾರದ ಅಪರಾಧೀಕರಣದ ಕುರಿತು ದೆಹಲಿ ಹೈಕೋರ್ಟ್ ದ್ವೀಸದಸ್ಯ ಪೀಠವೂ ಬುಧವಾರದಂದು ಭಿನ್ನ ತೀರ್ಪು ನೀಡಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ರ ಅಡಿಯಲ್ಲಿ ಅತ್ಯಾಚಾರ ಕಾನೂನಿನಲ್ಲಿರುವ 2 ನೇ ವಿನಾಯಿತಿ ಅಸಂವಿಧಾನಿಕ ಎಂದು ಪೀಠ ನ್ಯಾಯಮೂರ್ತಿ ರಾಜೀವ್ ಶೇಕ್ಧರ್ ಅಭಿಪ್ರಾಯಪಟ್ಟಿದ್ದಾರೆ. ಪತಿಯು ತನ್ನ ಹೆಂಡತಿಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಪತ್ನಿಯು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಲ್ಲದಿದ್ದರೆ ಅದು ಅತ್ಯಾಚಾರವಲ್ಲ ಎಂದು 2ನೇ ವಿನಾಯಿತಿ ಹೇಳುತ್ತದೆ.
“ಒಪ್ಪಿಗೆಯಿಲ್ಲದೆ ತನ್ನ ಹೆಂಡತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಪತಿಗೆ ಸಂಬಂಧಿಸಿದಂತೆ ಇದುವರೆಗೆ ವಿಧಿಸಲಾದ ನಿಬಂಧನೆಗಳು ಆರ್ಟಿಕಲ್ 14ರ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಅದನ್ನು ತಳ್ಳಿಹಾಕಲಾಗುತ್ತದೆ” ಎಂದು ನ್ಯಾಯಮೂರ್ತಿ ಶಕ್ಧರ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆದರೆ, ಪೀಠದ ಮತ್ತೊಬ್ಬ ನ್ಯಾಯಮೂರ್ತಿ ಹರಿ ಶಂಕರ್ ಅವರು ಭಿನ್ನವಾದ ತೀರ್ಪನ್ನು ನೀಡಿದ್ದು, ಲೈಂಗಿಕ ಅತ್ಯಾಚಾರದಲ್ಲಿ ಪತಿಗೆ ನೀಡಿರುವ ವಿನಾಯಿತಿಯನ್ನು ತಡೆಹಿಡಿಯುವ ನ್ಯಾಯಮೂರ್ತಿ ಶೇಕ್ಧರ್ ಅವರ ತೀರ್ಪನ್ನು ತಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಅವರು ಸೆಕ್ಷನ್ 376ಬಿ (ವಿಚ್ಛೇದನದ ಸಮಯದಲ್ಲಿ ಪತ್ನಿಯ ಮೇಲೆ ಲೈಂಗಿಕ ಕ್ರಿಯೆ ಶಿಕ್ಷಾರ್ಹ) ಮತ್ತು 198 ಬಿ (ಪತಿ-ಪತ್ನಿ ವೈವಾಹಿಕ ಸಂಬಂಧದಲ್ಲಿರುವಾಗ ಅತ್ಯಾಚಾರ ಅಪರಾಧದ ಬಗ್ಗೆ ನ್ಯಾಯಾಲಯ ಪ್ರಕರಣ ತೆಗೆದುಕೊಳ್ಳದಿರುವುದು) ಸಿಂಧುತ್ವವನ್ನು ಎತ್ತಿಹಿಡಿದಿದ್ದಾರೆ.
ಇದನ್ನೂ ಓದಿ: ಮದುವೆಯಾದ ಮಾತ್ರಕ್ಕೆ ಪತ್ನಿಯ ಮೇಲೆ ಎಸಗಿದ ಅತ್ಯಾಚಾರಕ್ಕೆ ಗಂಡನಿಗೆ ವಿನಾಯಿತಿಯಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಪೀಠವೂ ಭಿನ್ನ ತೀರ್ಪು ನೀಡಿದ್ದರಿಂದ ಈ ವಿಚಾರದಲ್ಲಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅನುಮತಿಯನ್ನೂ ನೀಡಿದ್ದಾರೆ.
ಜನವರಿ 7 ರಿಂದ, ನ್ಯಾಯಮೂರ್ತಿಗಳಾದ ರಾಜೀವ್ ಶಕ್ಧೇರ್ ಮತ್ತು ಸಿ. ಹರಿ ಶಂಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಅತ್ಯಾಚಾರ ಕಾನೂನಿನಿಂದ 2ನೇ ವಿನಾಯಿತಿಯನ್ನು ತೆಗೆದುಹಾಕಲು ಕೋರಿ ಸಲ್ಲಿಸಲಾದ ಕೆಲವು ಅರ್ಜಿಗಳನ್ನು ದೈನಂದಿನ ವಿಚಾರಣೆಯನ್ನು ನಡೆಸುತ್ತಿದೆ.
ಫೆಬ್ರವರಿ 21 ರಂದು ಪೀಠವು ಈ ವಿಷಯದ ಬಗ್ಗೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಎರಡು ಸರ್ಕಾರೇತರ ಸಂಸ್ಥೆಗಳಾದ RIT ಫೌಂಡೇಶನ್ ಮತ್ತು ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ ಹಾಗೂ ಇಬ್ಬರು ವ್ಯಕ್ತಿಗಳು ವೈವಾಹಿಕ ಅತ್ಯಾಚಾರದ ಬಗ್ಗೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ವೈವಾಹಿಕ ಅತ್ಯಾಚಾರದಲ್ಲಿ ಪತಿಗೆ ನೀಡಿರುವ ವಿನಾಯಿತಿ ಅಸಂವಿಧಾನಿಕವಾಗಿದೆ ಮತ್ತು ಅದನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಇದು ವಿವಾಹಿತ ಮಹಿಳೆಯ ಸಮಾನತೆಯ ಹಕ್ಕು, ಘನತೆಯಿಂದ ಬದುಕುವ ಹಕ್ಕು ಮತ್ತು ಸ್ವಯಂ ಅಭಿವ್ಯಕ್ತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ. ಈ ಎಲ್ಲಾ ಹಕ್ಕುಗಳನ್ನು ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾಗಿದೆ.
ಇದನ್ನೂ ಓದಿ: ವೈವಾಹಿಕ ಅತ್ಯಾಚಾರ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಅತಿದೊಡ್ಡ ರೂಪ: ದೆಹಲಿ ಹೈಕೋರ್ಟ್ಗೆ ಅರ್ಜಿದಾರರು
ವಿಶೇಷವಾಗಿ, ಈ ನಿಬಂಧನೆಯು ಅಸಂಗತತೆಯನ್ನು ಸೃಷ್ಟಿಸುತ್ತದೆ ಎಂದು ಅರ್ಜಿವಾರರು ವಾದಿಸಿದ್ದಾರೆ. ಒಬ್ಬ ತನ್ನ ಪತ್ನಿಗೆ ಹಲ್ಲೆ ಮಾಡುವುದು ಅಥವಾ ಪತ್ನಿಯನ್ನು ಕೊಲ್ಲುವುದು ಅಪರಾಧವಾಗಿದೆ. ಆದರೆ ಆಕೆಯ ಮೇಲೆ ಅತ್ಯಾಚಾರ ನಡೆಸಿದರೆ ಅದು ಅಪರಾಧವಾಗಿ ಪರಿಗಣಿಸುತ್ತಿಲ್ಲ ಎಂಬುದು ಎಂದು ಅರ್ಜಿದಾರರು ಸೂಚಿಸಿದ್ದಾರೆ.
ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ: ಅರ್ಜಿದಾರರು
ದೆಹಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ಅರ್ಜಿದಾರರಿಗೆ ಅವಕಾಶ ಮಾಡಿಕೊಟ್ಟಿದೆ. ಪ್ರಕರಣದಲ್ಲಿ, “ಕಾನೂನಿನ ಗಣನೀಯ ಪ್ರಶ್ನೆಗಳು” ಒಳಗೊಂಡಿವೆ ಎಂದು ಹೈಕೋರ್ಟ್ ಹೇಳಿದೆ.
ಇಬ್ಬರು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಕರುಣಾ ನುಂಡಿ ಅವರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಮೊರೆ ಹೋಗುವುದಾಗಿ ಎನ್ಡಿಟಿವಿಗೆ ತಿಳಿಸಿದ್ದಾರೆ.
“ಈ ಕಾನೂನು ದೇಶದ ಮುಖದ ಮೇಲಿರುವ ಕಳಂಕವಾಗಿದೆ” ಎಂದು ಕರುಣಾ ನುಂಡಿ ತಿಳಿಸಿದ್ದಾರೆ. “ವಿವಾಹಿತ ಮಹಿಳೆಯರು ನಾನು ನನ್ನ ಧ್ವನಿಯನ್ನು, ನನ್ನ ದೇಹದ ಮೇಲಿನ ಹಕ್ಕನ್ನು, ಲೈಂಗಿಕ ಸ್ವಾಯತ್ತತೆಯ ಹಕ್ಕನ್ನು ಶಾಶ್ವತವಾಗಿ ಬಿಟ್ಟುಬಿಡುತ್ತೇನೆ ಎಂದು ಹೇಳಬೇಕಾಗಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವೈವಾಹಿಕ ಅತ್ಯಾಚಾರ ಅಪರಾಧವಲ್ಲ ತೀರ್ಪು; ಛತ್ತೀಸಗಡ ಹೈಕೋರ್ಟ್ ನ್ಯಾಯಾಂಗ ಸಮಾನತೆಯನ್ನು ಅರ್ಥಮಾಡಿಕೊಂಡಿದ್ದು ಇಷ್ಟೆಯೇ?
ತಾನು ಪ್ರತಿನಿಧಿಸುವ ಎನ್ಜಿಒಗಳು ವೈವಾಹಿಕ ಅತ್ಯಾಚಾರದ ಪ್ರಕರಣಗಳನ್ನು ಪ್ರತಿದಿನವೂ ನೋಡುತ್ತಾ ಇರುತ್ತೇನೆ ಎಂದು ಅವರು ಹೇಳಿದ್ದಾರೆ. ವಿವಾಹಿತ ಸಂಬಂಧದಲ್ಲಿ ಅತ್ಯಾಚಾರಕ್ಕೆ ಕಾನೂನಿನಲ್ಲಿ ಅವಕಾಶಗಳಿಲ್ಲದ ಕಾರಣ ಪ್ರಕರಣಗಳನ್ನು ಪರಿಹರಿಸುವ ವಿಧಾನಗಳು ಸೀಮಿತವಾಗಿವೆ. ಒಕ್ಕೂಟ ಸರ್ಕಾರ ಈ ವಿಷಯದ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಂಡಿದ್ದರೆ ತೀರ್ಪು ಸ್ಪಷ್ಟವಾಗಬಹುದಿತ್ತು ಎಂದು ವಕೀಲೆ ಹೇಳಿದ್ದಾರೆ.
ವೈವಾಹಿಕ ಅತ್ಯಾಚಾರದಲ್ಲಿ ಪತಿಗೆ ನೀಡಿದ ವಿನಾಯಿತಿ ಸಮರ್ಥಿಸಿಕೊಂಡ ಒಕ್ಕೂಟ ಸರ್ಕಾರ!
ಜನವರಿ 12 ರಂದು ಸಲ್ಲಿಸಿದ ಅಫಿಡವಿಟ್ನಲ್ಲಿ, ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸುವುದರಿಂದ, “ದುರುದ್ದೇಶದಿಂದ ಮಾಡಲಾಗಿರುವ ಸುಳ್ಳು ಪ್ರಕರಣಗಳ ಪ್ರವಾಹ ಹರಿದು ಬರಬಹುದು” ಎಂದು ಒಕ್ಕೂಟ ಸರ್ಕಾರ ಹೇಳಿದೆ. ಫೆಬ್ರವರಿ 3 ರಂದು ಸಲ್ಲಿಸಿದ ಮತ್ತೊಂದು ಅಫಿಡವಿಟ್ನಲ್ಲಿ, ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ಎಲ್ಲಾ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಲು ಸಮಯ ಬೇಕಾಗುತ್ತದೆ ಎಂದಿರುವ ಒಕ್ಕೂಟ ಸರ್ಕಾರ ವಿಚಾರಣೆಯನ್ನು ಮುಂದೂಡಲು ಕೋರಿದೆ.
ಪ್ರಕರಣದಲ್ಲಿ ಒಳಗೊಂಡಿರುವ ಪ್ರಶ್ನೆಗಳು ‘‘ದೂರಗಾಮಿ ಸಾಮಾಜಿಕ-ಕಾನೂನು ಪರಿಣಾಮಗಳನ್ನು’’ ಹೊಂದಿವೆ ಎಂದು ಸರ್ಕಾರ ವಾದಿಸಿತ್ತು ಮತ್ತು ಬಾಕಿ ಉಳಿದಿರುವ ಸಮಾಲೋಚನಾ ಪ್ರಕ್ರಿಯೆಯನ್ನು ಉಲ್ಲೇಖಿಸಿ ವಿಷಯವನ್ನು ಮುಂದೂಡಲು ಪ್ರಯತ್ನಿಸಿದೆ. ಈ ವಿಷಯವು ಕೇವಲ ಕಟ್ಟುನಿಟ್ಟಾದ ಕಾನೂನು ದೃಷ್ಟಿಕೋನಕ್ಕಿಂತ ಹೆಚ್ಚಾಗಿ ಸಮಗ್ರ ವಿಧಾನದ ಅಗತ್ಯವಿದೆ ಎಂದು ಅದು ಹೇಳಿತ್ತು.
ಇದನ್ನೂ ಓದಿ: ಒಡಿಶಾದಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ ಜೀವಾವಧಿ ಶಿಕ್ಷೆ, ಆತನ ಪತ್ನಿಗೆ 20 ವರ್ಷ ಜೈಲು
ಪ್ರಕರಣದ ಬಗ್ಗೆ 2017 ರಲ್ಲಿ ಸಲ್ಲಿಸಿದ ಅಫಿಡವಿಟ್ನಲ್ಲಿ, ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸುವುದನ್ನು ಸರ್ಕಾರ ವಿರೋಧಿಸಿತ್ತು, ಇದು ‘ಮದುವೆ’ ಎಂಬ ವ್ಯವಸ್ಥೆಯನ್ನು ಅಸ್ಥಿರಗೊಳಿಸುತ್ತದೆ ಎಂದು ಹೇಳಿತ್ತು.
ಒಕ್ಕೂಟ ಸರ್ಕಾರದ ಅಫಿಡವಿಟ್ಗಳಿಗೆ ಪ್ರತಿಕ್ರಿಯೆ ನೀಡಿರುವ ವಕೀಲೆ ಕರುಣಾ ನುಂಡಿ, ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ವಿನಾಯಿತಿಯು ಅಸಾಂವಿಧಾನಿಕವಾಗಿದೆ. ಏಕೆಂದರೆ ಇದು ಮದುವೆಯಲ್ಲಿ ವ್ಯಕ್ತಿಗಳಿಗಿಂತ ಮದುವೆ ಎಂಬ ವ್ಯವಸ್ಥೆಗೆ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.