HomeUncategorizedಎಎಪಿ ದಿಗ್ವಿಜಯಕ್ಕೆ ಹೆದರಿ, ದೆಹಲಿ ಮುನ್ಸಿಪಾಲ್‌ ಚುನಾವಣೆ ಮುಂದೂಡಲು ಬಯಸುತ್ತಿದೆಯೇ ಬಿಜೆಪಿ?

ಎಎಪಿ ದಿಗ್ವಿಜಯಕ್ಕೆ ಹೆದರಿ, ದೆಹಲಿ ಮುನ್ಸಿಪಾಲ್‌ ಚುನಾವಣೆ ಮುಂದೂಡಲು ಬಯಸುತ್ತಿದೆಯೇ ಬಿಜೆಪಿ?

- Advertisement -
- Advertisement -

ಹೊಸದಿಲ್ಲಿ: ಮುಂಬರುವ ನಗರಪಾಲಿಕೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಲು ವಿಳಂಬ ಮಾಡುವಂತೆ ಭಾರತೀಯ ಜನತಾ ಪಾರ್ಟಿಯು ರಾಜ್ಯ ಚುನಾವಣಾ ಆಯೋಗವನ್ನು ಒತ್ತಾಯಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಕಳೆದ ಸೋಮವಾರ (ಮಾರ್ಚ್ 14) ಎಎಪಿ ನಾಯಕರು ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಘೇರಾವ್ ಹಾಕಿದ್ದರು.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ (ಎಂಸಿಡಿ)ಗಳಲ್ಲಿ  ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಸತತ ಚುನಾವಣೆಗಳಲ್ಲಿ ಜಯಗಳಿಸಿದೆ. ಆದರೆ ಪಂಜಾಬ್‌ನಲ್ಲಿ ಎಎಪಿ ಗೆಲುವು ಸಾಧಿಸಿದ ಬಳಿಕ, ತನ್ನ ದಿಗ್ವಿಜಯ ಯಾತ್ರೆಯನ್ನು ದೆಹಲಿಗೆ ವಿಸ್ತರಿಸಲು ಬಯಸಿದೆ.

272 ಮುನ್ಸಿಪಲ್ ವಾರ್ಡ್‌ಗಳಲ್ಲಿ ದೆಹಲಿಯ ಜನಸಂಖ್ಯೆಯ 97% ರಷ್ಟು ಜನರಿಗೆ ಸೇವೆಯನ್ನು ಸಲ್ಲಿಸುತ್ತಿರುವ ದೆಹಲಿ ಮುನ್ಸಿಪಲ್‌ ವಿಶ್ವದ ಎರಡನೇ ಅತಿದೊಡ್ಡ ನಾಗರಿಕ ಸಂಸ್ಥೆಯಾಗಿದೆ.

ಕಳೆದ ವಾರ ಪತ್ರಿಕಾಗೋಷ್ಠಿ ನಡೆಸಿದ್ದ ರಾಜ್ಯ ಚುನಾವಣಾ ಆಯೋಗವು, “ಏಪ್ರಿಲ್ 2022ರಲ್ಲಿ ಚುನಾವಣೆ ನಡೆಯಲಿದೆ” ಎಂದು ತಿಳಿಸಿತು. ಆದರೆ ದಿನಾಂಕಗಳ ಘೋಷಣೆಯನ್ನು ಮುಂದೂಡಿತು.

ಇದನ್ನೂ ಓದಿರಿ: ಪಂಜಾಬ್‌: ಹಾಲಿ, ಮಾಜಿ ಸಿಎಂಗಳಿಗೆಲ್ಲ ಸೋಲಿನ ರುಚಿ

ಚುನಾವಣಾ ಆಯೋಗ ತನ್ನ ಅಧಿಕೃತ ಹೇಳಿಕೆಯಲ್ಲಿ, “ಚುನಾವಣೆಗಳು ವಿಳಂಬವಾಗಿಲ್ಲ. ಆದರೆ ಮೂರು ಮುನ್ಸಿಪಲ್‌ಗಳನ್ನು ಮರುಸೇರಿಸುವ ಕೇಂದ್ರ ಸರ್ಕಾರದ ಯೋಜನೆಯ ಹಿನ್ನೆಲೆಯಲ್ಲಿ ಕಾನೂನು ಅಭಿಪ್ರಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದು ಹೇಳಿದೆ.

ಮೂರು ಮುನ್ಸಿಪಲ್‌ಗಳಿಗೆ ಸಂಬಂಧಿಸಿದಂತೆ (ದಕ್ಷಿಣ, ಉತ್ತರ ಮತ್ತು ಪೂರ್ವ) ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಡಿಎಂಸಿ) ಕಾಯ್ದೆಗೆ ತಿದ್ದುಪಡಿಯನ್ನು ತರಲಿಚ್ಛಿಸಿದ್ದು, ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ತಿದ್ದುಪಡಿ ಮಂಡನೆಯಾಗುವ ಸಾಧ್ಯತೆ ಇದೆ.

ಮೂರು ಮುನ್ಸಿಪಾಲ್‌ಗಳೂ ಮೊದಲು ಒಬ್ಬ ಮೇಯರ್ ಅಡಿಯಲ್ಲಿ ಅಧಿಕಾರ ನಡೆಸುತ್ತಿದ್ದವು. ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ಕಾರಣ, ಶೀಲಾ ದೀಕ್ಷಿತ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜನವರಿ 2012ರಲ್ಲಿ ಮೂರು ವಿಭಾಗಗಳಾಗಿ ವಿಭಜಿಸಲಾಯಿತು. ಉತ್ತಮ ಆಡಳಿತಕ್ಕಾಗಿ ಆಡಳಿತವನ್ನು ವಿಕೇಂದ್ರೀಕರಿಸುವ ದೃಷ್ಟಿಯಿಂದ ಈ ಕ್ರಮ ಜರುಗಿಸಲಾಗಿತ್ತು.

ಆದರೆ ಆದಾಯದ ಮೂಲಗಳ ಅಸಮ ವಿತರಣೆಯು ಉತ್ತರ ಮತ್ತು ಪೂರ್ವ ಮುನ್ಸಿಪಾಲ್‌ಗಳಲ್ಲಿ ಆರ್ಥಿಕ ಮುಗ್ಗಟ್ಟು ಉಂಟುಮಾಡಿತು. ತಮ್ಮ ಸಂಬಳವನ್ನು ಪಾವತಿಸಿದ ಕಾರಣ ಸ್ವಚ್ಛತಾ ಕಾರ್ಮಿಕರು, ಶಿಕ್ಷಕರು, ವೈದ್ಯರು ಮತ್ತು ಇತರ ಸಿಬ್ಬಂದಿ ಹತ್ತಾರು ಮುಷ್ಕರಗಳನ್ನು ನಡೆಸಿದ್ದಾರೆ.

ಎಂಸಿಡಿಯನ್ನು ಏಕೀಕರಿಸುವ ನಿರ್ಧಾರ ಬೇಗ ಬರಬೇಕಿತ್ತು. ಈಗಾಗಲೇ ತುಂಬಾ ಹಾನಿಯಾಗಿದೆ ಎಂದು ವೀಕ್ಷಕರು ಅಭಿಪ್ರಾಯಪಡುತ್ತಾರೆ.

ಬಿಜೆಪಿ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದೆ. ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ, ಮೂರು ವಿಭಜನೆಯು ಆಡಳಿತವನ್ನು ಸುಧಾರಿಸಲಿಲ್ಲ. ವಾಸ್ತವವಾಗಿ ನಾಗರಿಕ ಸಂಸ್ಥೆಗಳಲ್ಲಿ ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡಿದೆ ಎಂದಿದ್ದಾರೆ.

ಇದನ್ನೂ ಓದಿರಿ: ಚುನಾವಣೆಯಲ್ಲಿ ಸೋಲು: 5 ರಾಜ್ಯಗಳ ಕಾಂಗ್ರೆಸ್‌ ಅಧ್ಯಕ್ಷರನ್ನು ವಜಾಗೊಳಿಸಿದ ಸೋನಿಯಾ ಗಾಂಧಿ

ಕೇಜ್ರಿವಾಲ್ ಸರ್ಕಾರವು ಪುರಸಭೆಯ ಹಣವನ್ನು ತಡೆಹಿಡಿಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಆರೋಪವನ್ನು ನಿರಾಕರಿಸಿದ ದೆಹಲಿಯ ಎಎಪಿಯ ಎಂಸಿಡಿ ಉಸ್ತುವಾರಿ ದುರ್ಗೇಶ್ ಪಾಠಕ್, “ಹಣಕಾಸು ಆಯೋಗವು ಯಾವಾಗ ಹಣವನ್ನು ಬಿಡುಗಡೆ ಮಾಡಬೇಕೆಂದು ನಮಗೆ ನಿರ್ದೇಶಿಸುತ್ತದೆ. ಅದರಂತೆ ನಾವು ನಡೆಯುತ್ತಿದ್ದೇವೆ” ಎಂದಿದ್ದಾರೆ.

“ನಾವು ಹಣವನ್ನು ತಡೆಹಿಡಿದಿದ್ದೇವೆ ಎಂಬುದನ್ನು ಸಾಬೀತುಪಡಿಸಲು ಬಿಜೆಪಿ ಬಳಿ ಯಾವುದೇ ದಾಖಲೆಗಳಿವೆಯೇ” ಎಂದು ಅವರು ಪ್ರಶ್ನಿಸಿದ್ದಾರೆ.

ಮೂರು ಮುನ್ಸಿಪಲ್‌ಗಳನ್ನು ಒಂದುಗೂಡಿಸುವ ಯೋಜನೆ ಮತ್ತು ಎಂಸಿಡಿ ಚುನಾವಣೆಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಪಾಠಕ್ ‘ದಿ ವೈರ್‌’ಗೆ ತಿಳಿಸಿದ್ದಾರೆ.

“ದೆಹಲಿ ಅಷ್ಟು ದೊಡ್ಡ ರಾಜ್ಯವಲ್ಲ. ಇದು ಸಾಕಷ್ಟು ಚಿಕ್ಕದಾಗಿದ್ದು, 272 ವಾರ್ಡ್‌ಗಳಲ್ಲಿ ಆಡಳಿತ ನಡೆಸುವುದು ಅಷ್ಟು ಕಷ್ಟವಲ್ಲ. ಬಿಜೆಪಿಯು ಚುನಾವಣೆಯಿಂದ ತಪ್ಪಿಸಿಕೊಳ್ಳಲು ಬಯಸುತ್ತಿರುವ ಕಾರಣ, ಮುನ್ಸಿಪಲ್‌ಗಳನ್ನು ಒಗ್ಗೂಡಿಸುವ ನೆಪವನ್ನು ಮುಂದೊಡ್ಡಿದೆ” ಎಂದು ಆರೋಪಿಸಿದ್ದಾರೆ.

ಬಿಜೆಪಿಯ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ ಅವರು, “ದೆಹಲಿ ಸರ್ಕಾರವು ತನ್ನ ಬಜೆಟ್ ಅನ್ನು ಮೂರು ಪಟ್ಟು ಹೆಚ್ಚಿಸಬಹುದಾದರೆ, ಎಂಸಿಡಿ ಬಜೆಟ್ ಏಕೆ ಹೆಚ್ಚಾಗುತ್ತಿಲ್ಲ?” ಎಂದು ಪ್ರಶ್ನಿಸಿದ್ದಾರೆ.

ಕಸ ವಿಲೇವಾರಿ, ಬಿಡಾಡಿ ಜಾನುವಾರುಗಳು, ದುರ್ವಾಸನೆ ಮತ್ತು ಚರಂಡಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ನಾಗರಿಕರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂದು ಪಾಠಕ್ ಎಚ್ಚರಿಸಿದ್ದಾರೆ.

“ಸುತ್ತಲೂ ಕಸದ ಬೆಟ್ಟಗಳು, ತುಂಬಿ ಹರಿಯುವ ಚರಂಡಿಗಳು… ಇದು ದೆಹಲಿಯ ಜನರಿಗೆ ಮಾಡುತ್ತಿರುವ ಅವಮಾನ. ಒಬ್ಬರ ಮನೆ ಒಳಗೆ ಎಷ್ಟೇ ಸುಂದರವಾಗಿದ್ದರೂ, ಹೊರಗೆ ಒಂದು ಹೆಜ್ಜೆ ಇರಿಸಿದಾಗ ಮನಸ್ಥಿತಿ ಹಾಳಾಗುತ್ತಿದೆ” ಎಂದಿದ್ದಾರೆ.

ಭ್ರಷ್ಟ ಎಂಸಿಡಿಯಿಂದಾಗಿ ದೆಹಲಿಯಲ್ಲಿ ಭೂ ಮಾಫಿಯಾ ಇದೆ. ದೆಹಲಿಯ 80% ರಷ್ಟು ಅನಧಿಕೃತ ಕಾಲೋನಿಗಳಲ್ಲಿ ಜನರು ವಾಸುತ್ತಿದ್ದಾರೆ. ನೈರ್ಮಲ್ಯ ಕಾಪಾಡುತ್ತಿಲ್ಲ. ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸಿದೆ.

ಬಿಜೆಪಿಯನ್ನು ಮುನ್ಸಿಪಾಲ್‌ ಚುನಾವಣೆಯಲ್ಲಿ ಎಎಪಿ ಬಗ್ಗುಬಡಿಯಲಿದೆ ಎಂದು ಪಾಠಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏಕಾಏಕಿ ಚುನಾವಣೆ ಏಕೆ ವಿಳಂಬವಾಯಿತು ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದಿದ್ದಾರೆ. ಈ ಏಕೀಕರಣ ಯೋಜನೆಯು ಎಲ್ಲಿಂದ ಹುಟ್ಟಿಕೊಂಡಿತು? ಎಂದು ಪ್ರಶ್ನಿಸಿದ್ದಾರೆ.

ಪಂಜಾಬ್‌ನಲ್ಲಿ ಎಎಪಿ ಅಭೂತಪೂರ್ವ ಗೆಲುವು ಪಡೆದಿದ್ದು, ಹೀಗಾಗಿ ಚುನಾವಣೆಯನ್ನು ವಿಳಂಬ ಮಾಡುವಂತೆ ಬಿಜೆಪಿಯು ರಾಜ್ಯ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಎಎಪಿ ಮೂಲಗಳು ಆರೋಪಿಸಿವೆ.

ಹಿರಿಯ ಎಎಪಿ ನಾಯಕ ಗೋಪಾಲ್ ರೈ, “ಪಂಜಾಬ್‌ನಲ್ಲಿ ನಮ್ಮ ಪ್ರಚಂಡ ವಿಜಯದ ನಂತರ ದೆಹಲಿ ಮುನ್ಸಿಪಲ್‌ಗಳ ಚುನಾವಣೆಗಳನ್ನು ನಡೆಸುವುದಕ್ಕಾಗಿ ನಾವು ಹೋರಾಟ ನಡೆಸುವ ಅಗತ್ಯವಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ” ಎಂದು ಕುಟುಕಿದ್ದಾರೆ.

ಆದರೆ ಬಿಜೆಪಿಗೆ ಚುನಾವಣೆಯ ಭಯವಿಲ್ಲ ಎಂದು ದೆಹಲಿ ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ.

“ಅರವಿಂದ್ ಕೇಜ್ರಿವಾಲ್ ಅವರ ಭ್ರಷ್ಟ ಮದ್ಯ ನೀತಿಯಿಂದಾಗಿ ಜನರಲ್ಲಿ ವ್ಯಾಪಕ ಅಸಮಾಧಾನ ಇರುವುದರಿಂದ ಚುನಾವಣೆಯ ಭಯವಿದೆ” ಎಂದು ಆದೇಶ್ ಗುಪ್ತಾ ತಿಳಿಸಿದ್ದಾರೆ.

“ಚುನಾವಣಾ ಆಯೋಗವನ್ನು ಪ್ರಶ್ನಿಸುವುದು ಕೇಜ್ರಿವಾಲ್ ಅವರ ಅರಾಜಕವಾದಿ ದೃಷ್ಟಿಕೋನಗಳಿಗೆ ಸಾಕ್ಷಿಯಾಗಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವರದಿ: ದಿ ವೈರ್‌


ಇದನ್ನೂ ಓದಿರಿ: ಪಂಜಾಬ್‌ನಲ್ಲಿ ಅಭೂತಪೂರ್ವ ಜಯ ದಾಖಲಿಸಿದ ಆಪ್: ಕರ್ನಾಟಕದ ಮುಖಂಡರ ಪ್ರತಿಕ್ರಿಯೆ ಹೀಗಿದೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...