Homeಮುಖಪುಟಉತ್ತರಾಖಂಡ: UCC ಕುರಿತ 750 ಪುಟಗಳ ಅಂತಿಮ ಕರಡು ವರದಿ ಸಲ್ಲಿಕೆ; ತ್ರಿವಳಿ ತಲಾಖ್‌ಗೆ ಕಠಿಣ...

ಉತ್ತರಾಖಂಡ: UCC ಕುರಿತ 750 ಪುಟಗಳ ಅಂತಿಮ ಕರಡು ವರದಿ ಸಲ್ಲಿಕೆ; ತ್ರಿವಳಿ ತಲಾಖ್‌ಗೆ ಕಠಿಣ ಶಿಕ್ಷೆ ಸೇರಿ ಹಲವು ಅಂಶಗಳು ಉಲ್ಲೇಖ

- Advertisement -
- Advertisement -

ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕರಡು ರಚನೆಗಾಗಿ ರಚಿಸಲಾಗಿದ್ದ ಐವರು ಸದಸ್ಯರ ಸಮಿತಿಯು ಶುಕ್ರವಾರ ತನ್ನ ಅಂತಿಮ ಕರಡು ವರದಿಯನ್ನು ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಸಲ್ಲಿಕೆ ಮಾಡಿದೆ.

UCC ಕರಡು ನಾಲ್ಕು ಸಂಪುಟಗಳಲ್ಲಿ ಸುಮಾರು 750 ಪುಟಗಳನ್ನು ಒಳಗೊಂಡಿದೆ. ಇದನ್ನು ‘ಪೂರ್ಣ’ ಹಿಂದಿಯಲ್ಲಿ ಬರೆಯಲಾಗಿದೆ ಮತ್ತು ‘ಉರ್ದು’ ಅಥವಾ ಯಾವುದೇ ಇತರ ಭಾಷೆಯ ಒಂದು ಪದವನ್ನು ಹೊಂದಿಲ್ಲ. ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಸಮಿತಿಯು ವರದಿಯನ್ನು ಸಿದ್ದಪಡಿಸಿದ್ದು, ಬಹುಪತ್ನಿತ್ವ ಸಂಪೂರ್ಣವಾಗಿ ನಿಷೇಧ, ಮುಸ್ಲಿಂ ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದ ತ್ರಿವಳಿ ತಲಾಖ್ ಮತ್ತು ನಿಕಾಹಲಾಲಾ ಆಚರಣೆಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಲಿವ್-ಇನ್ ಸಂಬಂಧದಲ್ಲಿರುವ ದಂಪತಿಗಳು ನೋಂದಾವಣೆ ಮಾಡಿಸಬೇಕು. ವಿವಾಹ ನೋಂದಣಿಗಳು ಕಡ್ಡಾಯವಾಗಿದೆ ಮತ್ತು ಬುಡಕಟ್ಟು ಸಮುದಾಯವನ್ನು ಯುಸಿಸಿ ವ್ಯಾಪ್ತಿಯಿಂದ ಹೊರಗಿಡಲು ಸಲಹೆ ನೀಡಿದೆ.

ಈ ಕುರಿತು ದೆಹಲಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಉತ್ತರಾಖಂಡ ಸರ್ಕಾರವು ಭರವಸೆಯಂತೆ ಯುಸಿಸಿ ಕಾನೂನನ್ನು ತರಲು ಸಿದ್ಧವಾಗಿದೆ. ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕರಡು ಪ್ರತಿ ತಯಾರಿಸಲು ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದಲ್ಲಿ ನಾವು ತಜ್ಞರ ಸಮಿತಿಯನ್ನು ರಚಿಸಿದ್ದೇವೆ. 2022ರಲ್ಲಿ ಸರ್ಕಾರ ರಚಿಸಿದ ನಂತರ ನಾವು ನಮ್ಮ ಜನರಿಗೆ ನೀಡಿದ್ದ ನಮ್ಮ ಭರವಸೆ ಇದಾಗಿದೆ. ನಮ್ಮ ಬದ್ಧತೆಯನ್ನು ಈಡೇರಿಸುವಲ್ಲಿ ಇದು ಒಂದು ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಯುಸಿಸಿ ವರದಿಯನ್ನು ಫೆಬ್ರವರಿ 5 ರಿಂದ ರಾಜ್ಯ ವಿಧಾನಸಭೆಯಲ್ಲಿ ಚರ್ಚೆಗಾಗಿ ಮಂಡಿಸಲಾಗುವುದು ಮತ್ತು ಅಂತಿಮವಾಗಿ ಅನುಷ್ಠಾನದ ಮೊದಲು ಅದನ್ನು ವಿವರವಾಗಿ ಪರಿಶೀಲಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಇಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವರದಿ ಕುರಿತು ಚರ್ಚೆ ನಡೆಯಲಿದೆ.

ಅಂತಿಮ ಯುಸಿಸಿ ಕರಡು ಲಿಂಗ ಸಮಾನತೆ ಅಥವಾ ತಾರತಮ್ಯದ ನಿರ್ಮೂಲನೆ, ಆಸ್ತಿ ಹಕ್ಕುಗಳ ಮೇಲಿನ ಏಕರೂಪದ ಕಾನೂನುಗಳಿಂದ ದತ್ತು ನಿಯಮಗಳವರೆಗೆ ಎಲ್ಲವನ್ನೂ ಒಳಗೊಂಡಿದೆ. ಉರ್ದುವಿನ ಒಂದೇ ಒಂದು ಪದವನ್ನು ಕರಡು ಪ್ರತಿಯಲ್ಲಿ ಬಳಕೆ ಮಾಡಲಾಗಿಲ್ಲ. ಪರಿಶಿಷ್ಟ ಪಂಗಡಗಳು (ಎಸ್‌ಟಿಗಳು), ತೃತೀಯಲಿಂಗಿಗಳ ಹಕ್ಕುಗಳು, ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿ ಯಾವುದೇ ತಿದ್ದುಪಡಿ ಮಾಡಬಾರದು ಎಂದು ಕರಡು ಶಿಫಾರಸು ಮಾಡಿದೆ ಎಂದು ಯುಸಿಸಿ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಉತ್ತರಾಖಂಡದಲ್ಲಿ ಬುಡಕಟ್ಟು ಜನಸಂಖ್ಯೆಯು ಒಟ್ಟು ಜನಸಂಖ್ಯೆಯ ಸುಮಾರು 2.9 ಪ್ರತಿಶತವನ್ನು ಹೊಂದಿದೆ, ಮೊದಲಿನಿಂದಲೂ UCCಯ ಬಗ್ಗೆ ಈ ಸಮುದಾಯ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ ಬಂದಿದೆ.  ಚಕ್ರತಾ ಮತ್ತು ನಾನಕಮಟ್ಟಾ ಮುಂತಾದ ಸ್ಥಳಗಳಲ್ಲಿ ಈ ಸಮುದಾಯ ವಾಸಿಸುತ್ತಿದೆ.

ಏನಿದು ಏಕರೂಪ ನಾಗರಿಕ ಸಂಹಿತೆ?

ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶದಲ್ಲಿ ಪ್ರತಿಯೊಂದು ಧರ್ಮ, ಜಾತಿ, ಪಂಗಡ, ವರ್ಗಕ್ಕೆ ಒಂದೇ ನಿಯಮ ಜಾರಿಗೆ ತರುವುದು. ಪ್ರಸ್ತುತ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ. ಏಕರೂಪ ನಾಗರಿಕ ಸಂಹಿತೆ ಅನುಷ್ಠಾನವಾದರೆ ಬೇರೆಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಅಂತ್ಯಗೊಳ್ಳುತ್ತವೆ.

ಏಕರೂಪ ಎನ್ನುವುದು ಭಾರತದ ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಏಕರೂಪ ನಾಗರಿಕ ಸಂಹಿತೆಯು ಪ್ರಜಾಸತ್ತಾತ್ಮಕ ಜಾತ್ಯತೀತ ಮತ್ತು ಸಮಾಜವಾದಿ ತತ್ವಗಳ ಆಧಾರದ ಮೇಲೆ ಭಾರತೀಯ ಗಣರಾಜ್ಯವನ್ನು ಬಲಪಡಿಸುವ ಸಾಂವಿಧಾನಿಕ ಬದ್ಧತೆಯನ್ನು ಸೋಲಿಸುತ್ತದೆ.

2019ರ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆಯಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವ ಆಶ್ವಾಸನೆ ನೀಡಿತ್ತು. ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದು ಬಿಜೆಪಿ ಹೇಳಿತ್ತು. ಒಂದು ವೇಳೆ ಈ ಕಾಯ್ದೆ ಜಾರಿಗೆ ಬಂದರೆ, ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಯಾವುದೇ ಧರ್ಮಾಧಾರಿತ ಕಾನೂನುಗಳಿಗೆ ಬೆಲೆ ಇರುವುದಿಲ್ಲ. ವೈಯಕ್ತಿಕ ಕಾನೂನು, ಸಿವಿಲ್ ಕಾನೂನುಗಳು ರದ್ದುಗೊಳ್ಳುತ್ತದೆ.  ಹಿಂದೂ ವಿವಾಹ ಕಾಯ್ದೆ, ಮುಸ್ಲಿಂ ವಿವಾಹ ಕಾನೂನು ಹೀಗೆ ಆಯಾ ಧರ್ಮಕ್ಕೆ ಅವರದ್ದೇ ಆದ ಕಾನೂನು ಇದೆ. ವಿವಾಹ, ವಿಚ್ಛೇದನ, ಆಸ್ತಿ ಹಂಚಿಕೆ ಸೇರಿದಂತೆ ಹಲವು ಕಾನೂನುಗಳು ಹಿಂದೂಗಳಿಗೆ ಒಂದು ರೀತಿ ಇದ್ದರೆ, ಮುಸ್ಲಿಮರಿಗೆ ಮತ್ತೊಂದು ರೀತಿ ಇದೆ. ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿಗೆ ಬಂದರೆ ಇದು ಬದಲಾಗುತ್ತದೆ.

ಸಂವಿಧಾನದ ಆರ್ಟಿಕಲ್ 25 ಹಾಗೂ 28ರ ಅಡಿ ದೇಶದ ಯಾವುದೇ ಪ್ರಜೆಗೆ ತನ್ನ ಧಾರ್ಮಿಕ ಆಚರಣೆಗಳನ್ನು ಪಾಲಿಸಲು ಸಂವಿಧಾನ ಅವಕಾಶ ನೀಡುತ್ತೆ. ಒಂದು ವೇಳೆ ಎಲ್ಲ ಧರ್ಮದವರಿಗೂ ಒಂದೇ ಕಾನೂನು ಜಾರಿ ಮಾಡಿದರೆ ವೈವಿಧ್ಯತೆಗೆ ಧಕ್ಕೆ ಬರಲಿದೆ.

ಇದನ್ನು ಓದಿ: ಕೇರಳದಲ್ಲಿ ‘ಪೌರತ್ವ ತಿದ್ದುಪಡಿ ಕಾಯ್ದೆ’ ಜಾರಿಗೊಳಿಸುವುದಿಲ್ಲ: ಪಿಣರಾಯ್‌ ವಿಜಯನ್‌

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...