ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ ನಂತರ ನವದೆಹಲಿಯ ಜೋರ್ ಬಾಗ್ ತಲುಪಿದ ಕೂಡಲೇ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದೆ.
ದೆಹಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸುಮಾರು 30 ಸಿಬಿಐ ಅಧಿಕಾರಿಗಳ ತಂಡವು ಚಿದಂಬರಂ ಅವರ ಜೋರ್ ಬಾಗ್ ನಿವಾಸವನ್ನು ತಲುಪಿ, ಅವರನ್ನು ಬಂಧಿಸಿದ್ದಾರೆ. ಇಡಿ ಅಧಿಕಾರಿಗಳ ತಂಡವೂ ಅವರ ಜೊತೆಗಿದ್ದು ಅವರನ್ನು ಸಿಬಿಐ ಕಚೇರಿಗೆ ವಿಚಾರಣೆಗೆಂದು ಕರೆದೊಯ್ಯಲಾಗಿದೆ.
ಆಗಸ್ಟ್ 20ರ ಸಂಜೆಯಿಂದ ಚಿದಂಬರಂರವರನ್ನು ಪತ್ತೆಹಚ್ಚಲು ತನಿಖಾ ಸಂಸ್ಥೆಗಳಿಗೆ ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಅವರ ನಿರೀಕ್ಷಣಾ ಜಾಮೀನನ್ನು ದೆಹಲಿ ಹೈಕೋರ್ಟ್ ವಜಾ ಮಾಡಿತ್ತು. ಆನಂತರ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ ಸಹ ಕೋರ್ಟ್ ತುರ್ತು ವಿಚಾರಣೆಗೆ ಒಪ್ಪದೇ ಶುಕ್ರವಾರಕ್ಕೆ ಮೂಂದೂಡಿತು. ಇದಾದನಂತರ ಅನಿವಾರ್ಯವಾಗಿ ಚಿದಂಬರಂರವರು ಬಂಧನಕ್ಕೊಳಗಾಗಬೇಕಾಯಿತು.
ಬಂಧನಕ್ಕೂ ಮುನ್ನ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಮಾತನಾಡಿದ ಚಿದಂಬರಂ ನಾನು ತಪ್ಪಿಸಿಕೊಂಡು, ತಲೆಮರೆಸಿಕೊಂಡು ಓಡಾಡುತ್ತಿಲ್ಲ. ಕಾನೂನಿನ ನೆರವು ಪಡೆಯಲು ಪ್ರಯತ್ನಿಸುತ್ತಿದ್ದೆ ಅಷ್ಟೇ ಎಂದಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಆರೋಪಿಗಳೆಂದು ಯಾರನ್ನು ಸ್ಪಷ್ಟವಾಗಿ ಹೆಸರಿಸಲಾಗಿಲ್ಲ ಆದರೂ ತನಿಖಾ ಸಂಸ್ಥೆಗಳಿಂದ “ಅಸಮಾನವಾದ ಕೈಯಿಂದ ಅದನ್ನು ಅನ್ವಯಿಸಿದರೂ ಸಹ” ಕಾನೂನಿನ ಮೇಲೆ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ. ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತಾನು ನಿರಪರಾಧಿ ಎಂದಿದ್ದಾರೆ.
ಪತ್ರಿಕಾ ಗೋಷ್ಠಿ ಮುಗಿಸಿ ಕಾಂಗ್ರೆಸ್ ಸಹ ನಾಯಕರು ಮತ್ತು ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಗ್ವಿ ಅವರೊಂದಿಗೆ ಒಂದೇ ವಾಹನದಲ್ಲಿ ತಮ್ಮ ಜೋರ್ ಬಾಗ್ ನಿವಾಸವನ್ನು ತಲುಪಿದರು. ಗೇಟ್ ಹಾರಿ ಕಾದು ಕುಳಿತಿದ್ದ ತನಿಖಾ ಅಧಿಕಾರಿಗಳು ಮಾಧ್ಯಮಗಳ ಎದುರು ಚಿದಂಬರಂ ರವರನ್ನು ಬಂಧಿಸಿದ್ದಾರೆ.
ಚಿದಂಬರಂರವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ 2007 ರಲ್ಲಿ ಐಎನ್ಎಕ್ಸ್ ಮೀಡಿಯಾ ಕಂಪನಿಯಲ್ಲಿ ವಿದೇಶಿ ಹೂಡಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಅದಕ್ಕಾಗಿ ಅವರ ಮಗ ಕಾರ್ತಿ ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಸಹ ಆರೋಪಿಸಲಾಗಿದೆ.