ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಾಗುತ್ತಿದ್ದು, ನಿರೀಕ್ಷೆಯಂತೆ ನಾಯಕರುಗಳ ಪಕ್ಷಾಂತರಗಳು ಪ್ರಾರಂಭವಾಗಿದೆ. ಈ ನಡುವೆ ಕಾಂಗ್ರೆಸ್ನ ಹಿರಿಯ ನಾಯಕ, ತುಮಕೂರಿನ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಗುರುವಾರ ಬಿಜೆಪಿಗೆ ಸೇರಿದ್ದಾರೆ.
ಮುದ್ದಹನುಮೇಗೌಡ ಅವರ ಜೊತಗೆ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್ಕುಮಾರ್, ನಟ ಶಶಿಕುಮಾರ್ ಸೇರಿದಂತೆ ಹಲವರು ಜನರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿಗೆ ಸೇರಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮುದ್ದಹನುಮೆಗೌಡ ಅವರು ಕಾಂಗ್ರೆಸ್ನ ಹಿರಿಯ ನಾಯಕರಾಗಿದ್ದು, ನ್ಯಾಯಧೀಶರಾಗಿ ಕೂಡಾ ಸೇವೆ ಸಲ್ಲಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿದ್ದ ಕಾರಣಕ್ಕೆ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಹೆಚ್.ಡಿ. ದೇವೇಗೌಡರಿಗೆ ಕಾಂಗ್ರೆಸ್ ಬಿಟ್ಟುಕೊಟ್ಟಿತ್ತು. ಹೀಗಾಗಿ ಮುದ್ಧಹನುಮೆಗೌಡ ಅವರು ಕಾಂಗ್ರೆಸ್ ಜೊತೆಗೆ ಮುನಿಸಿಕೊಂಡಿದ್ದರು.
ತಮ್ಮ ಪಕ್ಷದ ಹಿರಿಯ ನಾಯಕನ ನಿರ್ಗಮನದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಮುದ್ದಹನುಮೆಗೌಡ ಅವರು ಸ್ವಲ್ಪ ದುಡಿಕಿ ತೀಮಾನ ತೆಗೆದುಕೊಂಡಿದ್ದು, ಒಂದು ವೇಳೆ ಪಕ್ಷದಲ್ಲೆ ಇರುತ್ತಿದ್ದರೆ ಪಕ್ಷದಿಂದ ಅವರಿಗೆ ಈ ಬಾರಿ ಅವಕಾಶ ಸಿಗುತ್ತಿತ್ತು ಎಂದು ಹೇಳಿದೆ.
ಇದನ್ನೂಓದಿ: ಫ್ಯಾಕ್ಟ್ಚೆಕ್: ತುಮಕೂರು ಜಿಲ್ಲೆಗೆ ಮನುಷ್ಯ ರೂಪದ ವಿಚಿತ್ರ ಪ್ರಾಣಿ ಬಂದಿದ್ದು ನಿಜವೇ?
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಅವರು, “ಮುದ್ದಹನುಮೆಗೌಡರು ತಮ್ಮ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರಿದ್ದಾರೆ. ಆದರೆ ಅವರು ಬಿಜೆಪಿಗೆ ಹೋಗಿರುವುದು ಅವರು ನಂಬಿರುವಂತಹ ತತ್ವ ಸಿದ್ದಾಂತಗಳಿಗೆ ತದ್ವಿರುದ್ಧವಾಗಿದೆ. ಅಷ್ಟೆ ಅಲ್ಲದೆ ಬಿಜೆಪಿ ಅವರನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳುತ್ತದೆ ಎಂಬುವುದು ಕೂಡಾ ನಮಗೆ ಅನುಮಾನವಿದೆ. ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲಾ ರೀತಿಯ ಅವಕಾಶಗಳನ್ನು ನೀಡಿತ್ತು. ಅವರು ಇನ್ನೊಂದು ಸ್ವಲ್ಪ ತಾಳ್ಮೆಯಿಂದ ಇರಬೇಕಾಗಿತ್ತು ಎನ್ನುವುದು ನಮ್ಮ ನಿರೀಕ್ಷೆಯಾಗಿತ್ತು” ಎಂದು ಹೇಳಿದರು.
ಚುನಾವಣೆ ಸಮಯದಲ್ಲಿ ಪಕ್ಷದ ಹಿರಿಯ ನಾಯಕ ವಿರೋಧಿ ಪಕ್ಷಕ್ಕೆ ಸೇರಿದರೆ ಪಕ್ಷ ಅದನ್ನು ಹೇಗೆ ಸರಿತೂಗಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಿಕೇತ್ ರಾಜ್, “ಬಂದದ್ದೆಲ್ಲವೂ ಬರಲಿ, ಭಗವಂತನ ದಯೆಯೊಂದಿರಲಿ ಎಂಬ ಮಾತಿನಂತೆ ಕಾಂಗ್ರೆಸ್ ಪಕ್ಷವಿದೆ. ಪಕ್ಷ ಬಿಟ್ಟು ಹೋಗುವವರನ್ನು ಯಾರೂ ತಡೆಹಾಕಿ ನಿಲ್ಲಿಸಲು ಆಗುವುದಿಲ್ಲ. ಪಕ್ಷ ಬಿಟ್ಟು ಹೋಗುವವರು ಹೇಗೆ ಇದ್ದಾರೋ ಹಾಗೆಯೆ, ಪಕ್ಷಕ್ಕೆ ಸೇರುವವರ ಸಂಖ್ಯೆ ಕೂಡಾ ಹೆಚ್ಚಾಗಿದೆ” ಎಂದು ಹೇಳಿದರು.
“ತುಮಕೂರು ಜಿಲ್ಲೆಯ ತುರುವೇಕೆರೆ ಕ್ಷೇತ್ರಕ್ಕೆ ಅತ್ಯುತ್ತಮ ಅಭ್ಯರ್ಥಿ ಸಿಕ್ಕಿದ್ದು, ಜೆಡಿಎಸ್ ಎಮ್ಎಲ್ಸಿ ಬೆಮಲ್ ಕಾಂತರಾಜ್ ಸಿದ್ದರಾಗುತ್ತಿದ್ದಾರೆ. ಗುಬ್ಬಿ ಕ್ಷೇತ್ರದ ಶಾಸಕರು ಕೂಡಾ ಕಾಂಗ್ರೆಸ್ ಸೇರಲು ಸಿದ್ದರಾಗುತ್ತಿದ್ದಾರೆ. ಇದೇ ರೀತಿ ತುಮಕೂರು ಜಿಲ್ಲೆಯಾದ್ಯಂತ ಬಿಜೆಪಿ ಮತ್ತು ಜೆಡಿಎಸ್ನ ಹಾಲಿ ಶಾಸಕರಿಂದ ಹಿಡಿದು ಅನೇಕ ಹಿರಿಯ ಮುಖಂಡರು ಕಾಂಗ್ರೆಸ್ ಸೇರಲು ತಯಾರಾಗುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ದೃತಿಗೆಡುವುದಿಲ್ಲ” ಎಂದು ನಿಕೇತ್ ರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂಓದಿ: ತುಮಕೂರು: ದೇವರ ಮೆರವಣಿಗೆ ಕಳುಹಿಸಿ ಎಂದ ದಲಿತರ ಮೇಲೆ ದೌರ್ಜನ್ಯ; ಜೀವ ಬೆದರಿಕೆ
ಬಿಜೆಪಿ ನಾಯಕರ ಸೂಚನೆ ಮೇರೆಗೆ ತಮ್ಮ ನಿವೃತ್ತಿಯ ನಂತರ ಕೊರಟಗೆರೆ ಕ್ಷೇತ್ರದಲ್ಲಿ ಚುನಾವಣೆಗೆ ಪೂರ್ವ ತಯಾರಿ ನಡೆಸಿದ್ದ ಅನಿಲ್ಕುಮಾರ್, ಈಗ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಅವರು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಕೊರಟಗೆರೆ ಕ್ಷೇತ್ರದಲ್ಲಿ ಅನಿಲ್ಕುಮಾರ್ 2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ.
ಈ ಹಿಂದೆ ಕಾಂಗ್ರೆಸ್ನಲ್ಲಿದ್ದ ನಟ ಶಶಿಕುಮಾರ್ ಅವರು ಕಳೆದ ಚುನಾವಣೆಯಲ್ಲಿ ಜೆಡಿಎಸ್ ಸೇರಿದ್ದರು; ಇದೀಗ ಬಿಜೆಪಿ ಸೇರಿದ್ದಾರೆ. ಇಷ್ಟೆ ಅಲ್ಲದೆ ಸೇವಾ ದಳದ ರಾಜ್ಯ ಉಪಾಧ್ಯಕ್ಷ ಹನುಮಂತರಾವ್ ಜವಳಿ, ರಮೇಶ ಮುನಿಯಪ್ಪ, ಜಿ. ವೆಂಕಟಾಚಲಯ್ಯ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.