ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ವಿರುದ್ಧ ಪ್ರಕರಣ ದಾಖಲಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದ ತಂದೆ ಮೇಲೆ, ದುಷ್ಕರ್ಮಿಗಳು ಆಸ್ಪತ್ರೆ ಹೊರ ಭಾಗದಲ್ಲಿ ಟ್ರಕ್ ಹರಿಸಿ ಕೊಲೆ ಮಾಡಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಕಾನ್ಪುರದ ತನ್ನ ಗ್ರಾಮದಲ್ಲಿ 13 ವರ್ಷದ ಬಾಲಕಿ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಾಲಕಿಯನ್ನು ವೈದ್ಯಕೀಯ ತಪಾಸಣೆಗಾಗಿ ತಂದೆ ಆಸ್ಪತ್ರೆಗೆ ಕರೆತಂದಿದ್ದರು. ಈ ಸಮಯದಲ್ಲಿ ಆಸ್ಪತ್ರೆಯ ಹೊರಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾಗಿರುವ ಮುಖ್ಯ ಆರೋಪಿ ಗೋಲು ಯಾದವ್ ತಂದೆ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾನ್ಪುರದಿಂದ 100 ಕಿ.ಮೀ ದೂರದಲ್ಲಿರುವ ಕನ್ನೌಜ್ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಪ್ರಪಾತಕ್ಕಿಳಿದ ಉತ್ತರ ಪ್ರದೇಶ ಪರಿಸ್ಥಿತಿ: ಮಗಳ ತಲೆ ಕಡಿದು ರಸ್ತೆಯಲ್ಲಿ ಪ್ರದರ್ಶಿಸಿದ ಕ್ರೂರ ತಂದೆ
ಮುಖ್ಯ ಆರೋಪಿ ಗೋಲು ಯಾದವ್ನನ್ನು ಬಂಧಿಸಲಾಗಿದ್ದರೂ, ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾದಾಗಿನಿಂದಲೂ ಆರೋಪಿಗಳ ಕುಟುಂಬ ನಮಗೆ ಬೆದರಿಕೆ ಹಾಕುತ್ತಿದೆ. “ಪೊಲೀಸರು ಇದಕ್ಕೆ ಸಹಕರಿಸುತ್ತಿದ್ದಾರೆ” ಎಂದು ಸಂತ್ರಸ್ತ ಬಾಲಕಿಯ ಕುಟುಂಬವು ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ.
“ನನ್ನ ಮಗನನ್ನು ಕೊಲೆ ಮಾಡಲಾಗಿದೆ, ಪೊಲೀಸರು ಇದಕ್ಕೆ ಸಹಕರಿಸಿದ್ದಾರೆ” ಎಂದು ಸಾವನ್ನಪ್ಪಿದ ವ್ಯಕ್ತಿಯ ತಂದೆ ಬುಧವಾರ ಬೆಳಿಗ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ಎನ್ಡಿಟಿವಿ ಉಲ್ಲೇಖಿಸಿದೆ.
ಮಂಗಳವಾರ ಬಾಲಕಿಯ ಕುಟುಂಬದ ಮತ್ತೊಬ್ಬ ಸದಸ್ಯರೂ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ನಾವು ದೂರು ಸಲ್ಲಿಸಿದ ಕೂಡಲೇ, ಮುಖ್ಯ ಆರೋಪಿಗಳ ಹಿರಿಯ ಸಹೋದರ ನಮಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ‘ನನ್ನ ತಂದೆ ಸಬ್ ಇನ್ಸ್ಪೆಕ್ಟರ್ ಎಚ್ಚರವಹಿಸಿ’ ಎಂದು ಅವರು ನಮಗೆ ಎಚ್ಚರಿಕೆ ನೀಡಿದ್ದರು” ಎಂದು ಹೇಳಿದ್ದರು.
ಇದನ್ನೂ ಓದಿ: ಉತ್ತರ ಪ್ರದೇಶ- ಶಾಲೆಗೆ ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ನಾಪತ್ತೆ
“ವೈದ್ಯಕೀಯ ಪರೀಕ್ಷೆ ನಡೆಯುತ್ತಿರುವಾಗ, ಮೃತ ವ್ಯಕ್ತಿ ಒಂದು ಕಪ್ ಚಹಾಕ್ಕಾಗಿ ಹೊರಗೆ ಹೋಗಿದ್ದರು. ಆ ಸಮಯದಲ್ಲಿ, ಟ್ರಕ್ ಅಪಘಾತಕ್ಕೆ ಒಳಗಾಗಿದ್ದಾರೆ. ತಕ್ಷಣ ಅವರನ್ನು ಕಾನ್ಪುರ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅವರು ಮೃತಪಟ್ಟಿದ್ದರು. ನಾವು ಅಪಘಾತ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ “ಎಂದು ಕಾನ್ಪುರ ಪೊಲೀಸ್ ಮುಖ್ಯಸ್ಥ ಡಾ.ಪ್ರೀತಿಂದರ್ ಸಿಂಗ್ ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಕಾನ್ಪುರ ಪೊಲೀಸರು ಮಂಗಳವಾರ ಸಾಮೂಹಿಕ ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಿದ್ದರು.
“ತಂದೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ನಾವು ಕೂಡಲೇ ಅದರ ಮೇಲೆ ಕ್ರಮ ಕೈಗೊಂಡಿದ್ದೇವೆ. ಸಂತ್ರಸ್ತ ಬಾಲಕಿ ಆರೋಗ್ಯ ಸ್ಥಿರವಾಗಿದೆ. ಪ್ರಕರಣದ ತನಿಖೆಗಾಗಿ ನಾವು ಐದು ತಂಡಗಳನ್ನು ರಚಿಸಿದ್ದೇವೆ” ಎಂದು ಕಾನ್ಪುರದ ಹಿರಿಯ ಪೊಲೀಸ್ ಅಧಿಕಾರಿ ಬ್ರಿಜೇಶ್ ಶ್ರೀವಾಸ್ತವ ಮಂಗಳವಾರ ಹೇಳಿದ್ದರು.
ಘಟನೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ, ಎರಡು ಪ್ರಕರಣಗಳ ತ್ವರಿತ ತನಿಖೆಗೆ ಯುಪಿ ಪೊಲೀಸರು ಕಾನ್ಪುರ ಪೊಲೀಸರಿಗೆ ಆದೇಶಿಸಿದೆ. ಜೊತೆಗೆ ಅಪಘಾತ ಮಾಡಿದ ಟ್ರಕ್ ವಶಪಡಿಸಿಕೊಂಡು, ಚಾಲಕನನ್ನು ಬೇಗ ಬಂಧಿಸುವಂತೆ ಹೇಳಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ಮರಣದಂಡನೆ
BJP dodda deshapremi paksha…
Sachagalu jasthi…