Homeಗೌರಿ ಕಾರ್ನರ್ಗೌರಿ ಇಲ್ಲದಿದ್ದರೆ ನಾವು ಸುಲಭವಾಗಿ ಮುಖ್ಯವಾಹಿನಿಗೆ ಬರುತ್ತಿರಲಿಲ್ಲವೇನೋ? : ಸಿರಿಮನೆ ನಾಗರಾಜ್

ಗೌರಿ ಇಲ್ಲದಿದ್ದರೆ ನಾವು ಸುಲಭವಾಗಿ ಮುಖ್ಯವಾಹಿನಿಗೆ ಬರುತ್ತಿರಲಿಲ್ಲವೇನೋ? : ಸಿರಿಮನೆ ನಾಗರಾಜ್

ಅಜ್ಞಾತವಾಸದಲ್ಲಿದ್ದಾಗ ಗೌರಿ ನಮ್ಮನ್ನು ಸುಮಾರು ಮೂರು ಗಂಟೆಗೂ ಹೆಚ್ಚು ಹೊತ್ತು ತೀಕ್ಷ್ಣವಾದ ‘ಪಾಟಿಸವಾಲಿಗೆ’ ಒಳಪಡಿಸಿದ್ದರು.

- Advertisement -
- Advertisement -

ಗೌರಿ ಲಂಕೇಶ್ ಜೊತೆಗೆ ನನ್ನ ಮುಖಾಮುಖಿ ಒಡನಾಟ ಶುರುವಾಗಿದ್ದು ನಾನು ಮತ್ತು ನೂರ್ ಶ್ರೀಧರ್ ಅಜ್ಞಾತವಾಸದಿಂದ (‘ಅಂಡರ್‌ಗ್ರೌಂಡ್’ನಿಂದ) ಮುಖ್ಯವಾಹಿನಿಗೆ ಮರಳುವ ಪ್ರಕ್ರಿಯೆಯ ಸಂದರ್ಭದಲ್ಲಿ – ಅಂದರೆ ಸುಮಾರು 2014ರ ಕೊನೆಯ ಭಾಗದಲ್ಲಿ. ಅಲ್ಲಿಯವರೆಗೂ ಇಬ್ಬರಿಗೂ ಮತ್ತೊಬ್ಬರ ಬಗೆಗೆ ಗೊತ್ತಿತ್ತೇ ಹೊರತು ಮುಖತಃ ಭೇಟಿ ಆಗಿರಲಿಲ್ಲ. 2012ರಲ್ಲಿ ಪತ್ರಿಕೆಯ ಉಳಿವು ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಅವರಿಗೊಂದು ದೀರ್ಘ ಪತ್ರ ಬರೆದಿದ್ದೆ. ಅವರು ಕೂಡಲೇ ಸ್ಪಂದಿಸಿದ್ದರು. ಅಷ್ಟೇ.

2013-14ರಲ್ಲಿ ಶ್ರೀ ಎಚ್.ಎಸ್.ದೊರೆಸ್ವಾಮಿಯವರ ಮುಂದಾಳ್ತನದಲ್ಲಿ ‘ಶಾಂತಿಗಾಗಿ ನಾಗರಿಕರ ವೇದಿಕೆ’ಯಡಿ ಎ.ಕೆ.ಸುಬ್ಬಯ್ಯ, ದೇವನೂರು ಮಹಾದೇವ, ಇಂದೂಧರ ಹೊನ್ನಾಪುರ, ಗೌರಿ ಇನ್ನೂ ಮುಂತಾದ ಸಹೃದಯರು ನಮ್ಮಗಳನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ಗಂಭೀರವಾಗಿ ಕೈಗೆತ್ತಿಕೊಂಡರಷ್ಟೆ. ಅದರ ಕೊನೆಯ ಹಂತದಲ್ಲಿ, ಈ ತಂಡದವರು ಸರ್ಕಾರದ ಜೊತೆ ಕೊನೆಯ ಸುತ್ತಿನ ಮಾತುಕತೆಗಳಿಗೆ ಮುಂದಾಗುವ ಮೊದಲು ನಮ್ಮ ಜೊತೆ ನೇರವಾಗಿ ಚರ್ಚಿಸಬೇಕು ಎಂಬ ಪ್ರಸ್ತಾಪ ಬಂದು, ಅದಕ್ಕಾಗಿ ಯಾರೋ ಒಬ್ಬರ ಸ್ನೇಹಿತರ ತೋಟದ ಮನೆಯಲ್ಲಿ ಭೇಟಿ ವ್ಯವಸ್ಥೆಯಾಗಿತ್ತು. ಅಲ್ಲಿ ಅವರುಗಳು ನಮ್ಮನ್ನು ಸುಮಾರು ಮೂರು ಗಂಟೆಗೂ ಹೆಚ್ಚು ಹೊತ್ತು ತೀಕ್ಷ್ಣವಾದ ‘ಪಾಟಿಸವಾಲಿಗೆ’ ಒಳಪಡಿಸಿದರು.

ನಾವು ಅಜ್ಞಾತವಾಸದಿಂದ ಹೊರಬರುತ್ತಿರುವುದು ಒಂದು ತಾತ್ಕಾಲಿಕ ಕಾರ್ಯತಂತ್ರದ, ‘ಹಿಡನ್ ಅಜೆಂಡಾ’ದ ಭಾಗವಾಗಿ ಅಲ್ಲ; ಬದಲಿಗೆ, ಸಂವಿಧಾನದ ಚೌಕಟ್ಟಿನಲ್ಲಿ ಬಹಿರಂಗವಾದ ಸಮೂಹ ಹೋರಾಟ ಕಟ್ಟದೆ, ದೇಶವ್ಯಾಪಿಯಾಗಿ ಎಲ್ಲ ಜನಸಮುದಾಯಗಳನ್ನು ಒಳಗೊಂಡ ಬೃಹತ್ ಸಮೂಹ ಚಳವಳಿ ಎದ್ದುನಿಲ್ಲದೆ ಈ ದೇಶದಲ್ಲಿ ಕ್ರಾಂತಿ ಅಥವಾ ಯಾವುದೇ ಮೂಲಭೂತ ಸಾಮಾಜಿಕ-ಆರ್ಥಿಕ-ರಾಜಕೀಯ ಪರಿವರ್ತನೆ ಸಾಧ್ಯವಿಲ್ಲ ಎನ್ನುವುದು ಈ ಮೂರು ದಶಕಕ್ಕೂ ಹೆಚ್ಚು ಕಾಲದ ಹೋರಾಟದಲ್ಲಿ ನಮಗೆ ದೃಢವಾಗಿ ಮನವರಿಕೆಯಾಗಿದೆ; ಆದ್ದರಿಂದ ನಾವು ನಮ್ಮ ಹಳೆಯ ನಿಲುವುಗಳಿಗೆ ಅಂಟಿಕೂರದೆ, ದೇಶದ ಈ ಕಾಲಘಟ್ಟದ ವಾಸ್ತವಕ್ಕೆ ಹೊಂದುವಂತಹ ಸಮೂಹ ಚಳವಳಿ-ಹೋರಾಟಗಳನ್ನು ರೂಪಿಸಬೇಕು, ಸಮಾಜದೊಳಗಿನ ಎಲ್ಲ ಬಗೆಯ ಅಸಮಾನತೆ-ತಾರತಮ್ಯಗಳ ವಿರುದ್ಧವೂ ಸಂಘಟನೆ-ಹೋರಾಟಗಳನ್ನು ಕಟ್ಟಬೇಕು; ಅದರಲ್ಲಿ ಎಲ್ಲ ಶೋಷಿತ-ದಮನಿತ ಸಮುದಾಯಗಳನ್ನೂ ಒಳಗೊಳ್ಳಬೇಕು, ಎಲ್ಲಾ ಜನಪರ-ಪ್ರಜಾಪ್ರಭುತ್ವವಾದಿ-ದೇಶಪ್ರೇಮಿ ಪ್ರಜ್ಞಾವಂತರನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬ ನಮ್ಮ ಮೂಲಭೂತ ಪರಿಕಲ್ಪನೆಗಳನ್ನು ಅವರ ಮುಂದಿಟ್ಟೆವು.

ಅಷ್ಟೇ ಅಲ್ಲದೆ, ಅವರುಗಳು ನಮ್ಮ ಮೇಲೆ ಇಡುತ್ತಿರುವ ವಿಶ್ವಾಸಕ್ಕೆ ನಾವು ಖಂಡಿತಾ ಎರಡು ಬಗೆಯುವುದಿಲ್ಲ ಎಂಬುದನ್ನೂ ಮನವರಿಕೆ ಮಾಡಿಕೊಟ್ಟೆವು; ಇದರಿಂದ ಅವರುಗಳಿಗೆ ನಮ್ಮ ಪ್ರಾಮಾಣಿಕತೆಯ ಬಗ್ಗೆ ಪೂರ್ತಿ ನಂಬಿಕೆ ಉಂಟಾಯಿತೆನ್ನಿಸುತ್ತೆ. ನಮ್ಮನ್ನು ಮುಖ್ಯವಾಹಿನಿಗೆ ಕರೆತರುವ ಕೊನೇ ಹಂತದ ಪ್ರಯತ್ನವನ್ನು ದೃಢವಾಗಿ ಪೂರ್ಣ ಆತ್ಮವಿಶ್ವಾಸದೊಂದಿಗೆ ಕೈಗೊಳ್ಳಲು ಅವರು ತೀರ್ಮಾನ ಮಾಡಿದರು. ಮುಂದೆ ನಡೆದದ್ದೆಲ್ಲ ಎಲ್ಲರಿಗೂ ತಿಳಿದೇ ಇದೆ.

ಅಂದು ಈ ಎಲ್ಲ ಚರ್ಚೆ ನಡೆದ ನಂತರ, ಅವರುಗಳು ‘ಮೈಚಳಿ ಬಿಟ್ಟು’ ನಮ್ಮೊಂದಿಗೆ ಒಂದಷ್ಟು ಹೊತ್ತು ಲೋಕಾಭಿರಾಮವಾಗಿ, ತಮಾಷೆಯಾಗಿ ಮಾತಾಡುತ್ತ ಕಳೆದರು. ಪರಸ್ಪರ ವಿಶ್ವಾಸ, ಆತ್ಮೀಯತೆಯ ಭಾವನೆಯೊಂದಿಗೆ ನಾವಿಬ್ಬರೂ ವಾಪಸ್ ಹೊರಟೆವು. ಗೌರಿ ಈ ಇಡೀ ಪ್ರಕ್ರಿಯೆಯಲ್ಲಿ ಎಷ್ಟೊಂದು ಕಕ್ಕುಲಾತಿಯಿಂದ, ಉತ್ಕಟತೆಯಿಂದ ತೊಡಗಿಸಿಕೊಂಡರೆಂದರೆ, ಅವರು ಇರದಿದ್ದರೆ ನಾವು ಬಹಿರಂಗಕ್ಕೆ ಬರುವ ಪ್ರಕ್ರಿಯೆ ಇಷ್ಟು ಸುಮುಖವಾಗಿ ಪೂರ್ಣಗೊಳ್ಳಲು ಸಾಧ್ಯವಿತ್ತಾ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಅಷ್ಟೇ ಅಲ್ಲ, ಆ ನಂತರವೂ ಸಹ ಕಳೆದ ಐದೂಮುಕ್ಕಾಲು ವರ್ಷಗಳಲ್ಲಿ ದೊರೆಸ್ವಾಮಿಯವರ ಜೊತೆ ನಿಂತು, ಇನ್ನೂ ಹಲವಾರು ಸಮಾನ ಮನಸ್ಕ ಹೋರಾಟ ನಿರತ ಸಂಘನೆಗಳನ್ನೂ, ಮುಂದಾಳುಗಳನ್ನೂ ಜೊತೆಗೂಡಿಕೊಂಡು ನಾವು ಏನೇನು ಜನಪರ ಕೆಲಸಗಳನ್ನು ಮಾಡುತ್ತ ಬರಲು ಸಾಧ್ಯವಾಯಿತೋ, ಅದೆಲ್ಲದರಲ್ಲೂ ಗೌರಿಯವರ ಪಾತ್ರ ಅಚ್ಚಳಿಯದೆ ಬೆಸೆದುಕೊಂಡಿದೆ. ಅವರ ಹತ್ಯೆಯೊಂದು ಹೇಗೆ ಇಡೀ ನಾಡಿನ ಜನಪರ ಹೋರಾಟ-ಚಳವಳಿಗಳಿಗೆ ಉಂಟಾದ ಮರ್ಮಾಘಾತವೋ ಹಾಗೆಯೇ ನಮ್ಮ ಎಲ್ಲಾ ಸಮಾಜಮುಖಿ ಕೆಲಸಗಳಿಗೂ ಉಂಟಾದ ಗಂಭೀರ ನಷ್ಟ ಎಂದರೆ ಉತ್ಪ್ರೇಕ್ಷೆಯಲ್ಲ.


ಇದಮ್ಮೂ ಓದಿ: ವಿದ್ಯಾರ್ಥಿ ಮಿತ್ರರಾಗಿ ಸ್ಫೂರ್ತಿ ತುಂಬುತ್ತಿದ್ದ ಗೌರಿ ಮೇಡಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಮಾತಾಡುವಾಗ “ಹತ್ಯೆ” ಎಂಬ ಪದವನ್ನು ಕನ್ನಡಿಗರು ಬಳಸುವುದನ್ನು ಕೇಳಿದ್ದೀರಾ?

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...