ಉದ್ಯಮಿ ಮುಖೇಶ್ ಅಂಬಾನಿ ಅವರ ಮುಂಬೈ ಮನೆಯ ಬಳಿ ಗುರುವಾರ ಸ್ಫೋಟಕ ಸಾಮಗ್ರಿಗಳೊಂದಿಗೆ ನಿಲುಗಡೆ ಮಾಡಿದ್ದ ವಾಹನ ಪತ್ತೆಯಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ.
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಹೆಚ್ಚಿನ ಭದ್ರತೆಯಲ್ಲಿ ವಾಸಿಸುವ ಸ್ಥಳದಿಂದ ಕೆಲವೇ ಮೀಟರ್ ದೂರದಲ್ಲಿ ಈ ವಾಹನ ನಿಲ್ಲಿಸಲಾಗಿತ್ತು ಎಂದು ಎನ್ಡಿಟಿವಿ, ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿವೆ.
“ಮುಂಬೈನ ಮುಖೇಶ್ ಅಂಬಾನಿಯ ಮನೆಯಿಂದ ಸ್ವಲ್ಪ ದೂರದಲ್ಲಿ ಕೆಲವು ಜೆಲಟಿನ್ ಕಡ್ಡಿಗಳಿರುವ ಸ್ಕಾರ್ಪಿಯೋ ವ್ಯಾನ್ ಪತ್ತೆಯಾಗಿದೆ. ಮುಂಬೈ ಅಪರಾಧ ಶಾಖೆ ಇದರ ಬಗ್ಗೆ ತನಿಖೆ ನಡೆಸುತ್ತಿದೆ. ಸತ್ಯ ಹೊರಬರಲಿದೆ” ಎಂದು ದೇಶಮುಖ್ ಹೇಳಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಕಾರ್ಮೈಕಲ್ ರಸ್ತೆಯಲ್ಲಿ ಗುರುವಾರ ಸಂಜೆ ಅನುಮಾನಾಸ್ಪದ ವಾಹನ ವರದಿಯಾಗಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ನಂತರ ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ ಅಥವಾ ಬಿಡಿಡಿಎಸ್ ತಂಡ ಮತ್ತು ಇತರ ಪೊಲೀಸ್ ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿದವು.
ಇದನ್ನೂ ಓದಿ: ಹೊಸ ಮಾರ್ಗಸೂಚಿ: ಆನ್ಲೈನ್ ಸುದ್ದಿ ಮಾಧ್ಯಮ, ಒಟಿಟಿ ಮೇಲಾಗುವ ಪರಿಣಾಮವೇನು?
“ಅವರು ವಾಹನವನ್ನು ಪರಿಶೀಲಿಸಿದಾಗ ಒಳಗೆ 20 ಸ್ಫೋಟಕ ಜೆಲಟಿನ್ ತುಂಡುಗಳು ಕಂಡುಬಂದಿವೆ. ಇದು ಜೋಡಿಸಲಾದ ಸ್ಫೋಟಕ ಸಾಧನವಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ನಿನ್ನೆ (ಬುಧವಾರ-ಗುರುವಾರ ಮಧ್ಯರಾತ್ರಿ) ರಾತ್ರಿ 1 ಗಂಟೆ ಸುಮಾರಿಗೆ ಕಾರನ್ನು ಈ ಪ್ರದೇಶದಲ್ಲಿ ನಿಲ್ಲಿಸಲಾಗಿದೆ ಎಂದು ಅವರು ಹೇಳಿದರು.
ವಾಹನದೊಳಗೆ ಪತ್ರವೊಂದು ಕಂಡುಬಂದಿದೆ ಆದರೆ ಅದರ ವಿಷಯಗಳನ್ನು ಬಹಿರಂಗಪಡಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕುತೂಹಲಕಾರಿಯೆಂದರೆ, ವಾಹನದ ನೋಂದಣಿ ಸಂಖ್ಯೆ ಅಂಬಾನಿಯ ಭದ್ರತಾ ವ್ಯವಸ್ಥೆಯ ವಾಹನದ ನೋಂದಣಿ ಸಂಖ್ಯೆಗೆ ಹೊಂದಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪುರಸಭೆ ಅಧಿಕಾರಿಗಳಿಂದ ಕಿರುಕುಳ: ಡೆತ್ನೋಟ್ ಬರೆದಿಟ್ಟು ಪೌರಕಾರ್ಮಿಕ ಆತ್ಮಹತ್ಯೆ
ಈ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಅಂಬಾನಿ, ದಕ್ಷಿಣ ಮುಂಬೈನ ಐಷಾರಾಮಿ ಕುಂಬಲ್ಲಾ ಹಿಲ್ ಪ್ರದೇಶದಲ್ಲಿ ಆಂಟಿಲಿಯಾ ಎಂಬ ಐಷಾರಾಮಿ, 27 ಅಂತಸ್ತಿನ, 400,000 ಚದರ ಅಡಿ ವಿಶಾಲವಾದ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಅವರ ಕುಟುಂಬವು 2012 ರಲ್ಲಿ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.
ಚಿಕಾಗೊ ಮೂಲದ ಸಂಸ್ಥೆ ಪರ್ಕಿನ್ಸ್ ಮತ್ತು ವಿಲ್ ವಿನ್ಯಾಸಗೊಳಿಸಿದ ಇದು ಮೂರು ಹೆಲಿಪ್ಯಾಡ್ಗಳು, 168 ಕಾರುಗಳ ಗ್ಯಾರೇಜ್, ಬಾಲ್ ರೂಂ, ಒಂಬತ್ತು ಹೈಸ್ಪೀಡ್ ಎಲಿವೇಟರ್ಗಳು, 50 ಆಸನಗಳ ಥಿಯೇಟರ್, ಟೆರೇಸ್ ಗಾರ್ಡನ್ಸ್, ಈಜುಕೊಳ, ಸ್ಪಾ, ಹೆಲ್ತ್ಸೆಂಟರ್, ದೇವಾಲಯ, ಮತ್ತು ಹಿಮ ಕೋಣೆಯನ್ನು ಹೊಂದಿದೆ.
ಇದನ್ನೂ ಓದಿ: ಗುಜರಾತ್ನಲ್ಲಿ 25 ವರ್ಷದಿಂದ ಬಿಜೆಪಿಯೊಂದೇ ಏಕೆ ಆಡಳಿತ ನಡೆಸುತ್ತಿದೆ..?- ಕೇಜ್ರಿವಾಲ್