ಆಕ್ಸಿಜನ್ ಕೊರತೆ, ವೈದ್ಯರು ಮತ್ತು ದಾದಿಯರ ಅಭಾವದಿಂದಾಗಿ ಸೋಮವಾರ 8 ಜನ ರೋಗಿಗಳು ಮೃತಪಟ್ಟ ಕೋಲಾರದ ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಯಲ್ಲಿನ ಕೊರತೆಗಳನ್ನು ಸರಿಪಡಿಸಲು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟಗಾರರು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಸಿಗದೇ ಬಹಳಷ್ಟು ರೋಗಿಗಳು ಮನೆಗೆ ವಾಪಸ್ ಹೋಗಿ ಕ್ವಾರಂಟೈನ್ ಆಗಬೇಕಾದ ಪರಿಸ್ಥಿತಿ ಇದೆ. ಒಂದಷ್ಟು ರೋಗಿಗಳು ಬೆಡ್ಗಾಗಿ ದಿನವಿಡೀ ಕಾಯಬೇಕಾದ ಸ್ಥಿತಿ ಇದೆ. ಸಾಕಷ್ಟು ಸಂಖ್ಯೆಯ ವೈದ್ಯರುಗಳು ಇಲ್ಲ. ಆದರೆ ಈ ಕುರಿತು ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ರವರನ್ನು ಪ್ರಶ್ನಿಸಿದರೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ , ಬೆಡ್ ಕೊರತೆ ಇಲ್ಲ ಎನ್ನುತ್ತಾರೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಯುವ ರೈತ ಹೋರಾಟಗಾರ್ತಿ ನಳಿನಿ, “ನಿನ್ನೆ ಈ ಆಸ್ಪತ್ರೆಗೆ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್ ಅಶ್ವಥ್ ನಾರಾಯಣ್ರವರು ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಮತ್ತು ವೈದ್ಯರ ನಿರ್ಲಕ್ಷ್ಯದಿಂದಾಗಿ ಸಾವನಪ್ಪಿದ ರೋಗಿಗಳ ಕುಟುಂಬಕ್ಕೆ ಪರಿಹಾರ ನೀಡಬೇಕು, ಕೂಡಲೇ ಇಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದವು. ಆದರೆ ಯಾವುದೇ ಸಮಸ್ಯೆಯಿಲ್ಲ, ಎಲ್ಲವೂ ಸರಿಯಿದೆ ಎಂದು ಅವರು ನಿರ್ಲಕ್ಷ್ಯ ತೋರಿದ್ದಾರೆ” ಎಂದು ಆರೋಪಿಸಿದರು.
ಕಳೆದ ವರ್ಷದ ತುಮಕೂರು ರಸ್ತೆಯ ವಸ್ತು ಪ್ರದರ್ಶನ ಮೈದಾನದಲ್ಲಿ ಸ್ಥಾಪಿಸಿದ್ದ 10100 ಬೆಡ್ಗಳ ಕೋವಿಡ್ ಕೇರ್ ಸೆಂಟರ್ ಏನಾಯಿತು? ಅಲ್ಲಿ ರೋಗಿಗಳನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ಮಾಡಬಹುದಲ್ಲವೇ ಎಂಬ ಪ್ರಶ್ನೆಗೆ ‘ಆ ಕೋವಿಡ್ ಕೇರ್ ಸೆಂಟರ್ ಅನ್ನು ಉಪಯೋಗಿಸುವ ಅವಶ್ಯಕತೆ ಬರಲಿಲ್ಲ. ಅವಶ್ಯಕತೆ ಬಂದರೆ ಉಪಯೋಗ ಮಾಡುತ್ತೇವೆ ಎಂದರು’ ಎಂದು ನಳಿನಿ ತಿಳಿಸಿದ್ದಾರೆ.
ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಪ್ರತಿದಿನ 200 ಬೆಡ್ ವ್ಯವಸ್ಥೆ ಮಾಡಬೇಕು, ಸಮರ್ಪಕ ಆಕ್ಸಿಜನ್ ವ್ಯವಸ್ಥೆ ಮಾಡಬೇಕು ಎಂಬ ಹಕ್ಕೊತ್ತಾಯ ಪತ್ರ ನೀಡಲಾಯಿತು ಎಂದು ಅವರು ಹೇಳಿದರು.
ಇದನ್ನೂ ಓದಿ: ಬೆಡ್ಗಾಗಿ ಸೋಂಕಿತರ ಪರದಾಟ: ಬೆಂಗಳೂರಿನ 10,100 ಬೆಡ್ಗಳ ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಏನಾಯಿತು?
ಇತ್ತೀಚಿನ ಕೆಲವು ದಿನಗಳಿಂದ ನಿಮ್ಮ ನ್ಯೂಸ್ ಅನ್ನು ಫೆಸಬುಕ್ನ ನನ್ನ ಅಕೌಂಟಿಗೆ ಅಪ್ ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ… ವಾಟ್ಸಾಪ್ ಗೆ ಸುಲಭವಾಗಿ ಅಪ್ಲೋಡ್ ಆಗ್ತಿದೆ.. ದಯವಿಟ್ಟು ಇದರ ಹಿಂದಿನ ರಾಜಕೀಯ ಕೈವಾಡವನ್ನು ಬಯಲಿಗೆಳೆಯಬೇಕೆಂದು ನನ್ನ ಕೋರಿಕೆ.. ನಿಮ್ಮ ಈ ಗ್ರೂಪ್ ಪ್ರಾರಂಭವಾದಗಿನಿಂದ ಇಂದಿನವರೆಗೆ ಯಾವುದೇ ತೊಂದರೆ ಇರಲಿಲ್ಲ..ಆದರೆ ಇತ್ತೀಚೆಗೆ ಹೀಗೆ ಆಗುತ್ತಿದೆ.. ನೈಜ ಸಮಾಚಾರಗಳನ್ನು ಪಸರಿಸದಂತೆ ಮಾಡುವ ಹುನ್ನಾರ ಎಂದು ನನಗನ್ನಿಸುತ್ತಿದೆ..