ಪಿಎಚ್ಡಿ ಹಾಗು ಎಂಫಿಲ್ ಅಧ್ಯಯನ ಕೈಗೊಳ್ಳುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ರಾಜ್ಯ ಅಲ್ಪಸಂಖ್ಯಾತ ಇಲಾಖೆ ಕಡಿತಗೊಳಿಸಿ ಆದೇಶ ಹೊರಡಿಸಿರುವುದು ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿದೆ.
ಪಿಎಚ್ಡಿ ಅಧ್ಯಯನ ಕೈಗೊಂಡ ಅಲ್ಪಸಂಖ್ಯಾತ ವಿಧ್ಯಾರ್ಥಿಗಳಿಗೆ 3 ವರ್ಷಕ್ಕೆ ಹಾಗೂ ಎಂಫಿಲ್ ಮಾಡುವ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್. ಮಾದರಿಯಲ್ಲಿ 2 ವರ್ಷಕ್ಕೆ ಪ್ರತಿ ತಿಂಗಳು 25 ಸಾವಿರ ರುಪಾಯಿಗಳಂತೆ, ಜೊತೆಗೆ ವರ್ಷಕ್ಕೆ 10 ಸಾವಿರ ರೂಗಳನ್ನು ನಿರ್ವಹಣಾ ವೆಚ್ಚವನ್ನು ಫೆಲೋಶಿಪ್ ಆಗಿ ಅಲ್ಪಸಂಖ್ಯಾತ ಇಲಾಖೆ ಇದುವರೆಗೂ ನೀಡುತ್ತಿತ್ತು.
ಆದರೆ ಇದೀಗ ಇಲಾಖೆಯು ಹೊಸ ಆದೇಶ ಹೊರಡಿಸಿದ್ದು, ಪಿಎಚ್.ಡಿ. ಅಧ್ಯಯನ ಕೈಗೊಂಡ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ನೀಡುತ್ತಿದ್ದ ಮಾಸಿಕ ರೂ. 25000 ಪ್ರೋತ್ಸಾಹ ಧನವನ್ನು ಕಡಿತಗೊಳಿಸಿ ಇನ್ನು ಮುಂದೆ ಮಾಸಿಕ 10,000 ದಂತೆ ವಾರ್ಷಿಕ 1,00,000 ಮೀರದಂತೆ ನೀಡಲಾಗುವುದು ಎಂದು ಆದೇಶ ಹೊರಡಿಸಿದೆ. ಮಾತ್ರವಲ್ಲದೆ ವಾರ್ಷಿಕವಾಗಿ ನೀಡುತ್ತಿದ್ದ 10 ಸಾವಿರ ರೂಗಳ ನಿರ್ವಹಣಾ ವೆಚ್ಚವನ್ನು ಕೂಡಾ ಹಿಂತೆಗೆದುಕೊಂಡಿದೆ.
ಇದನ್ನೂ ಓದಿ: ಸ್ಟಾರ್ಟ್ಅಪ್: ಮೈಸೂರಿನಲ್ಲಿ ಬಯೋಪಾಲಿಮರ್ ಉದ್ಯಮ ಆರಂಭಿಸಿದ ಚೀನಾ ರಿಟರ್ನ್ ಗುರುಪ್ರಸಾದ್!
ಈ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಯೊಬ್ಬರು ನಾನುಗೌರಿ.ಕಾಂ ಜೊತೆ ಮಾತನಾಡಿದ್ದು, ಸರ್ಕಾರವು ಫೆಲೋಶಿಪ್ ತಿದ್ದುಪಡಿ ಮಾಡಿರುವುದು ವಿದ್ಯಾರ್ಥಿಗಳ ಭವಿಷ್ಯವನ್ನೇ ಮಂಕಾಗಿಸಿದೆ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
“ಈ ಹಿಂದಿನ ಸರ್ಕಾರಗಳು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಉನ್ನತ ಶಿಕ್ಷಣದ ಕೊರತೆಯಿದೆ ಎಂದು ಈ ಯೋಜನೆಯನ್ನು ಪ್ರಾರಂಭಿಸಿತ್ತಾದರೂ ಆ ಹಣವನ್ನು ಕೂಡಾ ಸಮಯ ಮೀರಿ ನೀಡುತ್ತಿತ್ತು. ಇದೀಗ ಅದನ್ನೂ ಮಾಸಿಕ ಹತ್ತು ಸಾವಿರಕ್ಕೆ ಇಳಿಸಿದೆ. ಜನರು ಕೊರೊನಾ ಸಂಕಷ್ಟದಲ್ಲಿ ಇರುವಾಗ ವಿದ್ಯಾರ್ಥಿಗಳಿಗೆ ನೆರವಾಗುವುದನ್ನು ಬಿಟ್ಟು, ಗಾಯದ ಮೇಲೆ ಬರೆ ಎಳೆಯಲು ಸರ್ಕಾರ ಹೊರಟಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಉನ್ನತ ಶಿಕ್ಷಣ ಪಡೆಯುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಹಿನ್ನಡೆ ಉಂಟಾಗುತ್ತದೆ. ಆದ್ದರಿಂದ ಸರ್ಕಾರ ಹೊಸ ಆದೇಶವನ್ನು ಹಿಂಪಡೆದು, ಹಿಂದಿನ ನೀತಿಯನ್ನು ಜಾರಿಗೊಳಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಪಿಎಚ್ಡಿ ಮಾಡುವ ವಿದ್ಯಾರ್ಥಿಗಳು ಈ ಯೋಜನೆಯ ಅವಧಿಯನ್ನು 3 ರಿಂದ 5 ವರ್ಷಕ್ಕೆ ಏರಿಸಬೇಕು ಎಂಬ ಒತ್ತಾಯವನ್ನು ಮಾಡುತ್ತಿದ್ದ ಈ ಸಂದರ್ಭದಲ್ಲಿ, ಇಲಾಖೆಯ ಈ ಆದೇಶ ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿದ್ದು ತೀರಾ ಆರ್ಥಿವಾಗಿ ಹಿಂದುಳಿದವರಿಗೆ ಇನ್ನು ಮುಂದೆ ಸಂಶೋಧನಾ ಕ್ಷೇತ್ರದಲ್ಲಿ ಮುಂದುವರೆಯುವುದು ಕಷ್ಟಕರವಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಸಾಂವಿಧಾನಿಕ ರಕ್ಷಣೆಯನ್ನು ಎತ್ತಿಹಿಡಿದ ಈ ಎರಡು ಮಹತ್ವದ ತೀರ್ಪುಗಳು