ಸ್ಥಳೀಯ ಅಭ್ಯರ್ಥಿಗಳಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇಕಡಾ 75 ರಷ್ಟು ಮೀಸಲಾತಿ ನೀಡುವ ಹರಿಯಾಣ ರಾಜ್ಯ ಸರ್ಕಾರದ ಕಾನೂನಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಿಧಿಸಿದ್ದ ಮಧ್ಯಂತರ ತಡೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಹಿಂಪಡೆದಿದೆ.
ಇದರ ಜೊತೆಗೆ, ಸದ್ಯದ ಸಮಯದಲ್ಲಿ ಈ ವಿವಾದಾತ್ಮಕ ಹೊಸ ಕಾನೂನನ್ನು ಅನುಸರಿಸದಿರಲು ನಿರ್ಧರಿಸುವ ಖಾಸಗಿ ವಲಯದ ಕಂಪನಿಗಳ ಉದ್ಯೋಗದಾತರ ವಿರುದ್ಧ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಿರಲು ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಹರಿಯಾಣ ಸರ್ಕಾರಕ್ಕೆ ತಿಳಿಸಲಾಗಿದೆ.
ಈ ಮೀಸಲಾತಿ ಸಮರ್ಥನೀಯವಲ್ಲ ಮತ್ತು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾದದ್ದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಡೆ ನೀಡಿದ್ದನ್ನು ವಿರೋಧಿಸಿ ಈ ತಿಂಗಳ ಆರಂಭದಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಸರ್ಕಾರ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಕೇವಲ 90 ಸೆಕೆಂಡುಗಳ ವಿಚಾರಣೆಯ ನಂತರ ಆದೇಶ ನೀಡಲಾಗಿತ್ತು ಎಂದು ಸರ್ಕಾರ ವಾದಿಸಿತ್ತು.
ಇದನ್ನೂ ಓದಿ: NEET: ಒಬಿಸಿಗೆ ಶೇ. 27ರಷ್ಟು ಮೀಸಲಾತಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿ ನಾಲ್ಕು ವಾರಗಳಲ್ಲಿ ತೀರ್ಪು ನೀಡುವಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಮತ್ತು ಪಿಎಸ್ ನರಸಿಂಹ ಅವರ ಪೀಠ ಹೈಕೋರ್ಟ್ಗೆ ಸೂಚಿಸಿದೆ.
“ಸದ್ಯ ಉದ್ಯೋಗದಾತರ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹರಿಯಾಣಕ್ಕೆ ನಿರ್ದೇಶಿಸಲಾಗಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆ ಆದೇಶವನ್ನು ಹೈಕೋರ್ಟ್ ಸಾಕಷ್ಟು ಕಾರಣಗಳನ್ನು ನೀಡದ ಕಾರಣ ರದ್ದುಗೊಳಿಸಲಾಗಿದೆ” ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆ- 2020 ಅನ್ನು ಕಳೆದ ವರ್ಷ ನವೆಂಬರ್ನಲ್ಲಿ ಅಂಗೀಕರಿಸಿದೆ. ಇದು ಗರಿಷ್ಠ ಒಟ್ಟು ಮಾಸಿಕ ವೇತನ ಅಥವಾ 30,000 ರೂಪಾಯಿ ವೇತನವನ್ನು ನೀಡುವ ಉದ್ಯೋಗಗಳಿಗೆ ಅನ್ವಯಿಸುತ್ತದೆ. ಈ ಮೀಸಲಾತಿ ಈ ವರ್ಷದ ಜನವರಿ 15 ರಿಂದ ಜಾರಿಗೆ ಬರುತ್ತದೆ ಎಂದು ಆದೇಶಿಸಲಾಗಿತ್ತು.
ಈ ಕಾನೂನಿನಿಂದ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಅವರು ರಾಜ್ಯದ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗದ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ಹೇಳಿದ್ದರು. ಹರಿಯಾಣ ಸರ್ಕಾರದ ಈ ನಿರ್ಧಾರಕ್ಕೆ ಉದ್ಯಮ ವಲಯದಿಂದ ವಿರೋಧ ಕೇಳಿ ಬಂದಿತ್ತು.
ಇದನ್ನೂ ಓದಿ: ನಿರುದ್ಯೋಗ, ಸಾಲದ ಸಮಸ್ಯೆಯಿಂದ 3 ವರ್ಷಗಳಲ್ಲಿ 25 ಸಾವಿರ ಭಾರತೀಯರ ಆತ್ಮಹತ್ಯೆ: ಸರ್ಕಾರ