Homeಅಂಕಣಗಳುಪುಟಕ್ಕಿಟ್ಟ ಪುಟಗಳುವಚನಗಳ ಮೂಲಕ ಮನೋವಿಜ್ಞಾನ ಹೇಳುವ ಮಾತೆ ಮಹಾದೇವಿಯವರ ಕಾದಂಬರಿ 'ಹೆಪ್ಪಿಟ್ಟ ಹಾಲು'

ವಚನಗಳ ಮೂಲಕ ಮನೋವಿಜ್ಞಾನ ಹೇಳುವ ಮಾತೆ ಮಹಾದೇವಿಯವರ ಕಾದಂಬರಿ ‘ಹೆಪ್ಪಿಟ್ಟ ಹಾಲು’

ತನ್ನ ದೌರ್ಬಲ್ಯವನ್ನು ನಿರಾಕರಿಸದೇ, ಅದನ್ನು ಹುಸಿ ಸಾಮರ್ಥ್ಯದಲ್ಲಿ ಮುಚ್ಚಿಕೊಳ್ಳದೇ, ಅಹಂಕಾರವಿಲ್ಲದೇ ಒಪ್ಪಿಕೊಳ್ಳುವುದು ಬರಿಯ ಆಧ್ಯಾತ್ಮಿಕತೆ ಮಾತ್ರವಲ್ಲ, ಸಹಜ ಮಾನಸಿಕ ಆರೋಗ್ಯಕ್ಕೆ ಅಗತ್ಯವಾದ ನಿಲುವು.

- Advertisement -
- Advertisement -

ಸಾಮಾನ್ಯವಾಗಿ ಒಬ್ಬ ತಾನು ಉನ್ನತಿಗೇರಿದಾಗ ತನ್ನ ಸಾಧನೆಯೆಂದು ಬೀಗುತ್ತಾನೆ. ಆದರೆ ತನ್ನ ಅವನತಿಗೆ ನೂರಾರು ಕಾರಣಗಳನ್ನು ಒಡ್ಡುತ್ತಾನೆ. ಅಷ್ಟೇ ಅಲ್ಲ, ಬೇರೆಯವರು ಕಾರಣ ಎಂದೂ, ತಾನೊಂದು ಬಲಿಪಶುವೆಂದು ಬಿಂಬಿಸಿಕೊಂಡು ಅನುಕಂಪ ಪಡೆಯಲು ಯತ್ನಿಸುತ್ತಾನೆ. ವಾಸ್ತವವಾಗಿ ಅದು ಅವನ ಒಲವು ಮತ್ತು ನಿಲುವುಗಳ ತಿಕ್ಕಾಟ, ಅವನದೇ ದೌರ್ಬಲ್ಯ ಮತ್ತು ಸಾಮರ್ಥ್ಯಗಳ ಹೊಯ್ದಾಟ, ಅವನ ಅಹಂಕಾರದ ಮೇಲಾಟ; ಇವುಗಳಿಂದ ತನ್ನ ಬದುಕನ್ನು ಗೊಂದಲಮಯವಾಗಿಸಿಕೊಳ್ಳುತ್ತಾನೆ ಮತ್ತು ಇತರರೊಂದಿಗಿನ ತನ್ನ ಸಂಬಂಧಗಳನ್ನು ಸಂಕೀರ್ಣಗೊಳಿಸಿಕೊಳ್ಳುತ್ತಾನೆ.

ಯಾವುದೇ ಒಬ್ಬ ವ್ಯಕ್ತಿಯು ತಾನು ನೈಸರ್ಗಿಕವಾಗಿ ತನ್ನೆಲ್ಲಾ ಆಸೆ ಮತ್ತು ಧೋರಣೆಗಳನ್ನು ನೇರವಾಗಿ ಪ್ರಕಟಿಸಲಾಗದಂತಹ ಸಾಮಾಜಿಕ ಕಟ್ಟುಪಾಡುಗಳಿವೆ. ಹಾಗೆಯೇ ಅವನದೇ ಆದಂತಹ ಮಾನಸಿಕ ಸಂಕೀರ್ಣತೆ (ಕಾಂಪ್ಲೆಕ್ಸ್)ಗಳೂ, ವ್ಯಕ್ತಿತ್ವದ ರಚನೆಯೂ ಮತ್ತು ಮನೋದೌರ್ಬಲ್ಯಗಳೂ ಇರುತ್ತವೆ. ಹೀಗೆ ತನ್ನ ಮಾನಸಿಕ ಒತ್ತಡಗಳು ಮತ್ತು ತನ್ನ ಬಗ್ಗೆ ಇರುವಂತಹ ಸಾಮಾಜಿಕ ನಿರೀಕ್ಷೆಗಳು; ಈವೆರಡೂ ಅವನಲ್ಲಿ ಒತ್ತಡವನ್ನು ಉಂಟುಮಾಡುತ್ತವೆ. ಶಾಲೆಗೆ ಹೋಗುವ ಮಗುವಿನಿಂದ ಹಿಡಿದು ಈಗಲೋ ಆಗಲೋ ಸಾಯುತ್ತಿರುವ ಹಣ್ಣುಹಣ್ಣಾದ ಮುದುಕನವರೆಗೂ ಈ ಒತ್ತಡಗಳು ತಪ್ಪಿದ್ದಲ್ಲ. ಯಾವುದೇ ಬಗೆಯ ಒತ್ತಡವನ್ನು ಎದುರಿಸುವುದಾದರೂ ಅದು ಹೋರಾಟವೇ. ಇಂತಹ ವ್ಯಕ್ತಿಯೊಳಗಿನ ಹೋರಾಟ, ಮಾನಸಿಕ ತುಮುಲ, ಸಾಂಪ್ರದಾಯಿಕ ಸಮಾಜದ ನಿರೀಕ್ಷೆಗಳ ಒತ್ತಡಗಳ ಕತೆಯೇ ಹೆಪ್ಪಿಟ್ಟ ಹಾಲು.

ಮಾತೆ ಮಹಾದೇವಿಯವರ ಮೊದಲ ಕಾದಂಬರಿ ಇದು. ಕಲ್ಯಾಣಿ, ನಿರಂಜನ, ಕುಸುಮ, ರಾಜನ್ ಮತ್ತು ಇತರ ಪಾತ್ರಗಳು ನಮ್ಮ ಸಮಾಜದಲ್ಲಿರುವ ಹಲವಾರು ನಮೂನೆಯ ವ್ಯಕ್ತಿಗಳ ಪ್ರತಿಮಾರೂಪಗಳು. ಪಾತ್ರಗಳ ಮೂಲಕ ಆತ್ಮಾವಲೋಕನಕ್ಕೆ ತೊಡಗುತ್ತಾ ನಮ್ಮನ್ನೇ ನೋಡಿಕೊಳ್ಳಲು ಹೋದರೆ ನಮ್ಮೊಳಗೇ ಇರುವ ದ್ವಂದ್ವ, ಸೆಳೆತ, ಸಂಕಲ್ಪ, ವಿಕಲ್ಪಗಳ ಮತ್ತು ದೌರ್ಬಲ್ಯಗಳ ಅನಾವರಣವಾಗುತ್ತಾ ಹೋಗುತ್ತದೆ.

ಕಲ್ಯಾಣಿಯೋ ಅಕ್ಕಮಹಾದೇವಿಯನ್ನು ಆದರ್ಶವಾಗಿರಿಸಿಕೊಂಡಿರುತ್ತಾಳೆ. ನಿರಂಜನನೊಂದಿಗಿನ ಅವಳ ಸಂಬಂಧವು ಹಿತವೂ ಹೌದು, ಹಿಂಸೆಯೂ ಹೌದು. ಇತ್ತ ನಿರಂಜನ ತನ್ನ ಸೆಳೆತಗಳನ್ನು ಮೀರಲಾಗದೇ ಮತ್ತೊಬ್ಬಳ ವ್ಯಾಮೋಹದಲ್ಲಿ ಸಿಲುಕುತ್ತಾನೆ. ಸೆಳೆತ ಮತ್ತು ಸಂಕಲ್ಪಗಳ ನಡುವಿನ ಹೊಯ್ದಾಟ ಒಂದು ಸಾಮಾನ್ಯ ಮಾನಸಿಕ ಸಂಘರ್ಷ. ಈ ಸಂಘರ್ಷದಲ್ಲಿ ತಾನು, ತನ್ನತನ ಮತ್ತು ತನ್ನ ಗಮ್ಯ ಇವುಗಳನ್ನು ಸ್ಥಿರಗೊಳಿಸಿಕೊಳ್ಳಲು ಪಡಬೇಕಾದ ಪಾಡು ಮನೋವೈಜ್ಞಾನಿಕವಾಗಿ, ತಾತ್ವಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ತನ್ನ ಇಚ್ಛೆಯ ವಿರುದ್ಧವಾಗಿ ಸೆಳೆಯುವ ಎಲ್ಲಾ ಶಕ್ತಿಗಳ ವಿರುದ್ಧ ಬಲಗಳಿಸಿಕೊಳ್ಳಲು ಮಾಡಬೇಕಾದ ಸಾಧನೆಯನ್ನು ಹಂತಹಂತವಾಗಿ ಗಟ್ಟಿಗೊಳಿಸಿಕೊಳ್ಳುತ್ತಾ ಹೋಗುವುದಕ್ಕೆ ಕಲ್ಯಾಣಿಯು ಒಂದು ರೂಪಕವಾಗಿ ಪರಿಣಮಿಸುತ್ತಾಳೆ.

ತನ್ನ ದೌರ್ಬಲ್ಯವನ್ನು ನಿರಾಕರಿಸದೇ, ಅದನ್ನು ಹುಸಿ ಸಾಮರ್ಥ್ಯದಲ್ಲಿ ಮುಚ್ಚಿಕೊಳ್ಳದೇ, ಅಹಂಕಾರವಿಲ್ಲದೇ ಒಪ್ಪಿಕೊಳ್ಳುವುದು ಬರಿಯ ಆಧ್ಯಾತ್ಮಿಕತೆ ಮಾತ್ರವಲ್ಲ, ಸಹಜ ಮಾನಸಿಕ ಆರೋಗ್ಯಕ್ಕೆ ಅಗತ್ಯವಾದ ನಿಲುವು. ಕಾದಂಬರಿಯ ಸೊಗಸೇ ಆಧ್ಯಾತ್ಮ ಮತ್ತು ಮನಶಾಸ್ತ್ರಗಳನ್ನು ತಾತ್ವಿಕವಾಗಿ ಹೆಣೆದಿರುವುದು. ಉತ್ತಮ ಮಾನಸಿಕ ಆರೋಗ್ಯವುಳ್ಳವನು ಉತ್ತಮ ಆಧ್ಯಾತ್ಮಿಕ ಸಾಧಕನಾಗುತ್ತಾನೆ ಅಥವಾ ಪ್ರಾಮಾಣಿಕ ಆಧ್ಯಾತ್ಮಿಕ ಸಾಧಕನು ಸಹಜವಾಗಿ ಮಾನಸಿಕ ಆರೋಗ್ಯವನ್ನು ಹೊಂದಿರುತ್ತಾನೆ. ಇದು ಹೆಪ್ಪಿಟ್ಟ ಹಾಲಿನ ಕೆನೆ.

PC : Lingayat Religion, (ಮಾತೆ ಮಹಾದೇವಿ)

ಕಾದಂಬರಿಕಾರರು ಮೊದಲಿಗೆ ತಾವೇ ಒಂದು ಹೆಣ್ಣಾಗಿ ಸಮಾಜದಲ್ಲಿನ ತನ್ನ ಸ್ಥಾನ ಮತ್ತು ಸಮಾಜವು ಆರೋಪಿಸುವ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ನಂತರ ಆಧ್ಯಾತ್ಮಿಕವಾಗಿ ಅಕ್ಕಮಹಾದೇವಿಯನ್ನು ತಮ್ಮ ಮಾದರಿಯಾಗಿ ಮುಂದಿರಿಸಿಕೊಂಡು ಹೆಣ್ಣಿನ ಸಹಜತೆ ಮತ್ತು ಅನನ್ಯತೆ; ಈ ಎರಡನ್ನೂ ಸಮದೂಗಿಸುತ್ತಾ ಕೊನೆಗೆ ತಮ್ಮ ತಾತ್ವಿಕವಾದ ಗಮ್ಯವನ್ನು ತನ್ನ ಬದುಕಿನ ಕೇಂದ್ರವನ್ನಾಗಿಸಿಕೊಳ್ಳುತ್ತಾರೆ. ಮಾನುಷ ಸಹಜ ಮಾನಸಿಕ ತುಮುಲಗಳು ಮತ್ತು ಆಧ್ಯಾತ್ಮಿಕ ಸಾಧನೆಗಳು; ಈ ಎರಡೂ ಮಾತಾಜಿಯವರ ಅನುಭವಕ್ಕೆ ಮೀರಿದ್ದೇನಲ್ಲ. ಹಾಗಾಗಿಯೇ ಕಲ್ಯಾಣಿ ಪಾತ್ರದಲ್ಲಿ ಅವೆಲ್ಲವನ್ನೂ ಸಶಕ್ತವಾಗಿ ಅನಾವರಣ ಮಾಡಿದ್ದಾರೆ.

ಪಾತ್ರಗಳ ಸಂಭಾಷಣೆಯ ಶೈಲಿಯೂ ಕೂಡಾ ಹೊರನೋಟಕ್ಕೆ ನಾಟಕೀಯ ಎನಿಸಿದರೂ, ನುಡಿಯ ಧೋರಣೆಯನ್ನು ಅಲಂಕಾರದಲ್ಲಿ ಚಂದಗೊಳಿಸುವ ಪರಿ ಖುಷಿ ಕೊಡುತ್ತದೆ.

“ಕೂಡಿ ಜಗಳವಾಡಬಾರದು; ಜಗಳವಾಡಿಯೇ ಕೂಡುವುದು ಲೇಸು.”
“ಅತಿ ಸಲಿಗೆ ಅನೀತಿಗೆ ಎಡೆ ಮಾಡಿಕೊಡುತ್ತದೆ.”
“ನಾವು ಉಣ್ಣುವುದು ಪ್ರಸಾದ; ಅವರುಣ್ಣುವುದು ಭಿಕ್ಷೆ ಏನು?”

ಕಾದಂಬರಿಯುದ್ದಕ್ಕೂ ಶರಣರ ವಚನಗಳ ತಾತ್ವಿಕ ಚಿಂತನೆ ಮತ್ತು ಸಾಮಾಜಿಕ ಒಲವುಗಳನ್ನು ನೋಡುತ್ತಲೇ ಹೋಗುತ್ತೇವೆ. ಕಾರ್ಲ್‍ಮಾಕ್ಸ್ ಚಿಂತನೆಗಳೂ ಕೂಡಾ ಸ್ಪಷ್ಟವಾಗಿ ಧ್ವನಿಸುತ್ತದೆ.

ಮನವೇ ಸರ್ಪ, ತನುವೇ ಹೇಳಿಗೆ
ಹಾವಿನೊಡತಣ ಹುದುವಾಳಿಗೆ
ಇನ್ನಾವಾಗ ಕೊಂದಹುದೆಂದರಿಯೆ
ಇನ್ನಾವಾಗ ತಿಂದಹುದೆಂದರಿಯೆ

ಶರಣರ ವಚನಗಳಲ್ಲಿ ಸಾಮಾನ್ಯವಾಗಿ ಆಧ್ಯಾತ್ಮ, ಭಕ್ತಿ, ಸಾಮಾಜಿಕ ಒಲವು, ಶರಣ ತತ್ವಗಳೆಲ್ಲವನ್ನು ಮೀರಿ, ಮನೋವಿಜ್ಞಾನವನ್ನು ಹುಡುಕಿರುವ ಕಾದಂಬರಿ ಇದು.

ಅತ್ತ ಆಧ್ಯಾತ್ಮಿಕ ತೃಪ್ತಿಯನ್ನೂ ಪಡೆಯುತ್ತಿಲ್ಲ, ಇತ್ತ ಲೌಕಿಕ ಜನರು ಪಡುವ ತೃಪ್ತಿಯನ್ನೂ ಪಡೆಯುತ್ತಿಲ್ಲ ಎಂಬ ಮಾನಸಿಕ ಸಂಘರ್ಷವು ಸಾಮಾನ್ಯ ಒತ್ತಡವಲ್ಲ. ಎರಡರದ್ದೂ ಪರಿಚಯ ಇರುವ ಜನರದ್ದು ಬಲು ದೊಡ್ಡ ಸಮಸ್ಯೆ. ಅವರದ್ದೇ ಹೆಪ್ಪಿಟ್ಟ ಹಾಲಿನ ಕಲ್ಯಾಣಿಯು ಪ್ರತಿರೂಪ. ಆತ್ಮಾವಲೋಕನ ಎಂಬ ಕೀಲಿಕೈಯನ್ನು ಕಲ್ಯಾಣಿ ತನ್ನ ಬದುಕಿನುದ್ದಕ್ಕೂ ತೊಡಕಿಕೊಳ್ಳುವ ಬಂಧನಗಳಿಂದ ಬಿಡಿಸಿಕೊಳ್ಳಲು ಉಪಯೋಗಿಸುತ್ತಿರುತ್ತಾಳೆ. ತನ್ನ ತಾನು ನೋಡಿಕೊಳ್ಳುವುದು, ತನ್ನದೇ ವರ್ತನೆಗಳನ್ನು ತಾನು ಅಳೆಯುವುದು, ತನ್ನ ಮಾತಿನ ಒಳ ಹೊರಗನ್ನು ಪರೀಕ್ಷಿಸುವುದು, ತನ್ನದೇ ಬಾಧಕಗಳನ್ನು ಯಶಸ್ವೀ ಸಾಧಕರದೊಂದಿಗೆ ತುಲನೆ ಮಾಡಿಕೊಳ್ಳುವುದು; ಇವೆಲ್ಲಾ ಅವಳು ಅನುಸರಿಸುವ ವಿಧಾನಗಳು.

ಈ ಲೇಖನದ ಉದ್ದೇಶ ಹೆಪ್ಪಿಟ್ಟ ಹಾಲಿನ ಕತೆ ಹೇಳುವುದಲ್ಲ. ಅದರ ತಾತ್ವಿಕ ನಿಲುವನ್ನು ಮತ್ತು ಶಕ್ತಿಯನ್ನು ಪರಿಚಯಾತ್ಮಕವಾಗಿ ಹೇಳುವುದಷ್ಟೇ ಆಗಿದೆ. ಒಟ್ಟಿನಲ್ಲಿ ಮನೋವೈಜ್ಞಾನಿಕವಾಗಿ ಆಧ್ಯಾತ್ಮಿಕತೆಯನ್ನು, ಸಾಮಾಜಿಕವಾಗಿ ತಾತ್ವಿಕತೆಯನ್ನು ಹೇಳುವುದರಲ್ಲಿ ಮಾತೆ ಮಹಾದೇವಿಯವರು ಇಡೀ ಹೆಪ್ಪಿಟ್ಟ ಹಾಲಿನ ಕತೆಯನ್ನು ರೂಪಕವಾಗಿ ಬಳಸಿಕೊಂಡಿದ್ದಾರೆ. ಬದಲಾದ ಕಾಲಘಟ್ಟಗಳಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನವು ಪ್ರಗತಿಯನ್ನು ಹೊಂದಿದ್ದರೂ ಮನುಷ್ಯನ ಮನಸ್ಸು ಅದರ ಮೂಲಭೂತ ಸಮಸ್ಯೆಗಳಲ್ಲಿ ಬಳಲುತ್ತಲೇ ಇರುತ್ತದೆ. ಅದನ್ನು ಸರಿಪಡಿಸಿಕೊಳ್ಳುವ ಮೊದಲ ಹೆಜ್ಜೆಯೇ ಆತ್ಮಾವಲೋಕನ ಎಂಬುದನ್ನು ಕಲ್ಯಾಣಿ ನಿರೂಪಿಸುತ್ತಾಳೆ.

ದೇವರು, ಧರ್ಮ, ಸಿದ್ಧಾಂತ, ಧ್ಯಾನ; ಇವೆಲ್ಲವೂ ಮನುಷ್ಯರು ಪರಸ್ಪರ ಆರೋಗ್ಯಕರ ಮನಸ್ಥಿತಿಗಳಿಂದ ಉತ್ತಮ ಸಂಬಂಧವನ್ನು ಹೊಂದಿ ಸಮಾಜದಲ್ಲಿ ಆನಂದವಾಗಿರಬೇಕು ಮತ್ತು ವ್ಯಕ್ತಿಗತವಾಗಿ ತನ್ನ ಆತ್ಮಿಕ ಔನ್ನತ್ಯವನ್ನು ಪಡೆಯಬೇಕು, ಅಷ್ಟೇ. ಹೆಪ್ಪಿಟ್ಟ ಹಾಲಿನ ಮಧುರ ರುಚಿಯೂ ಅದೇ ಅಭಿರುಚಿಯನ್ನು ಪ್ರಚೋದಿಸುವುದು ಎಂದರೆ ಅದೇನೂ ಉತ್ಪ್ರೇಕ್ಷೆಯ ಮಾತಲ್ಲ.


ಇದನ್ನೂ ಓದಿ: ಆರ್ಯ-ಅನಾರ್ಯರ ನಡುವಿನ ಕಾಳಗ ಮತ್ತು ಮಿಲನ: ಗೊಂಡಿಯರ ಸಂಭೂ ಶೇಖರ ಶಂಭೋ ಶಂಕರನಾದ ಕಥೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...