Homeಮುಖಪುಟಉಡುಪಿಯ ಸಹಬಾಳ್ವೆ ಸಮಾವೇಶ ಅಭೂತಪೂರ್ವ ಯಶಸ್ಸು ಕಂಡಿದ್ದು ಹೇಗೆ?

ಉಡುಪಿಯ ಸಹಬಾಳ್ವೆ ಸಮಾವೇಶ ಅಭೂತಪೂರ್ವ ಯಶಸ್ಸು ಕಂಡಿದ್ದು ಹೇಗೆ?

ಉಡುಪಿಯ ಸಹಬಾಳ್ವೆ ಸಮಾವೇಶದ ಸ್ಫೂರ್ತಿಯೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಸಹಬಾಳ್ವೆಯನ್ನು ಉದ್ದೀಪನಗೊಳಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಲಾಗಿದೆ.

- Advertisement -
- Advertisement -

ಎಲ್ಲಾ ಸಮುದಾಯದ ಜನರು ಸಾಮರಸ್ಯದಿಂದ ಬದುಕುತ್ತಿದ್ದ ಸುಂದರ ಪಟ್ಟಣ ಉಡುಪಿ. ಎಲ್ಲಾ ಕಡೆ ಇರುವಂತೆ ಅಲ್ಲಿಯೂ ಜನರಿಗೆ ಸಂಕಷ್ಟ, ನೋವು ನಲಿವುಗಳಿದ್ದವು. ಆದರೆ ಅಲ್ಲಿ ಕಳೆದ ಕೆಲ ದಿನಗಳಿಂದ ದ್ವೇಷದ ಬೀಜವೊಂದು ಮೊಳಕೆಯೊಡೆದಿತ್ತು. ಮುಸ್ಲಿಂ ಹೆಣ್ಣು ಮಕ್ಕಳು ತಲೆ ಮೇಲೆ ಹಾಕುವ ತುಂಡು ಬಟ್ಟೆಯನ್ನು ಹಿಡಿದುಕೊಂಡು ಕೆಲವರು ದೊಡ್ಡ ರಾದ್ಧಾಂತ ಮಾಡಿದರು. ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ದ್ವೇಷ ಪ್ರಚಾರ ಮಾಡಲಾಯ್ತು. ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಎಂಬ ಬ್ಯಾನರ್‌ ಹಾಕಲಾಯ್ತು ಮಾತ್ರವಲ್ಲ ಅದನ್ನು ಇಡೀ ರಾಜ್ಯಕ್ಕೆ ವ್ಯಾಪಿಸಲಾಯ್ತು. ಇವುಗಳಿಗೆ ಮಾಧ್ಯಮಗಳು ಭರ್ಜರಿ ಪ್ರಚಾರ ನೀಡಿದವು. ಇದನ್ನು ನಿಯಂತ್ರಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸರ್ಕಾರ ಕೈಕಟ್ಟಿ ಕುಳಿತಿತ್ತು.

ಇದೆಲ್ಲವೂ ಎಲ್ಲಾ ಸಮುದಾಯದ ಬಹುಸಂಖ್ಯಾತರಿಗೆ ಬೇಕಿರಲಿಲ್ಲ. ಉಡುಪಿಯ ಹೆಸರನ್ನು ಕೆಲವರು ಹಾಳು ಮಾಡುತ್ತಿದ್ದಾರೆ, ತೀರಾ ಅತಿ ಮಾಡುತ್ತಿದ್ದಾರೆ ಎಂದು ಅಲ್ಲಿನ ಬಹುತೇಕರಿಗೆ ಅನ್ನಿಸಿತ್ತು. ಆದರೆ ಧರ್ಮಾಂದರ, ದ್ವೇಷ ಹರಡುವವರ ಆರ್ಭಟದ ಮುಂದೆ ಅವರು ಏನಾದರೂ ಮಾಡಬೇಕೆಂದು ತಹತಹಿಸುತ್ತಿದ್ದರು. ಅದಕ್ಕೆ ವೇದಿಕೆಯಾಯಿತು ಸಾಮರಸ್ಯ ನಡಿಗೆ, ಸಹಬಾಳ್ವೆ ಸಮಾವೇಶ.. ಸಹಬಾಳ್ವೆ ಸಮಾವೇಶದ ಜೊತೆಗೂಡಿದ ಜನರು ನಮಗೆ ಶಾಂತಿ, ಸೌಹಾರ್ದ ನೆಮ್ಮದಿ ಬೇಕೆ ಹೊರತು ದ್ವೇಷ-ವಿವಾದಗಳಲ್ಲ ಎಂಬುದನ್ನು ಸಾರಿದರು.

ಇನ್ನು ಅಲ್ಲಿನ ಅಲ್ಪ ಸಂಖ್ಯಾತ ಸಮುದಾಯ ಎಲ್ಲವನ್ನು ತಾಳ್ಮೆಯಿಂದಲೇ ಸಹಿಸಿಕೊಂಡಿತ್ತು. ದೇಶದ ಬಹುಸಂಖ್ಯಾತರು ತಮ್ಮನ್ನು ದ್ವೇಷಿಸುವುದಿಲ್ಲ ಎಂಬ ನಂಬಿಕೆ ಅವರಿಗಿತ್ತು. ಅದು ಈಗ ನಿಜವಾಯಿತು. ಮೇ 14ರಂದು ಸಾವಿರಾರು ಜೀವಪರ ಮನಸ್ಸುಗಳು ಸಾಮರಸ್ಯ ನಡಿಗೆಯಲ್ಲಿ ನಿರ್ಭೀತಿಯಿಂದ ಹೆಜ್ಜೆ ಹಾಕಿದರು. ದ್ವೇಷದ ಬೆಳೆಗೆ ನೀರೆರೆಯುವುದಿಲ್ಲ, ಬದಲಿಗೆ ಪ್ರೀತಿ ಹಂಚುತ್ತೇವೆ ಎಂದು ಸಾರಿದರು. ನಾಲ್ಕೈದು ತಿಂಗಳುಗಳಿಂದ ತಮ್ಮೊಳಗಿದ್ದ ಅಸಹಾಯಕತೆಯನ್ನು ಹೊರಹಾಕಿದರು. ನಾವು ಏಕಾಂಗಿಗಳಲ್ಲ ಎಂಬುದನ್ನು ಸಮಾವೇಶದಲ್ಲಿ ನೆರೆದ ಜನಸ್ತೋಮ ತೋರಿಸಿತು. ಕೊನೆಗೆ ಇಲ್ಲಿ ಗೆದ್ದಿದ್ದು ಬುದ್ದರ ಪ್ರೀತಿಯೆ ಹೊರತು ಗೂಡ್ಸೆಯ ದ್ವೇಷವಲ್ಲ.

ಉಡುಪಿ ಸಮಾವೇಶ ಯಶಸ್ವಿಯಾಗಿದ್ದು ಹೀಗೆ..

ಈ ಹಿಂದೆಯೂ ಮುಸ್ಲಿಂ ವಿದ್ಯಾರ್ಥಿನಿಯರು ತಲೆ ಮೇಲೆ ಹಿಜಾಬ್ ಧರಿಸಿ ಶಾಲೆ-ಕಾಲೇಜಿಗೆ ಬರುತ್ತಿದ್ದರು. ಅದು ಯಾರಿಗೂ ಸಮಸ್ಯೆಯಾಗಿರಲಿಲ್ಲ. ಆದರೆ ಇತ್ತೀಚೆಗೆ ಕೆಲ ಸಂಘಟನೆಗಳು ಅದನ್ನು ಆಕ್ಷೇಪಿಸಿದವು. ಅಷ್ಟು ಮಾತ್ರವಲ್ಲದೆ ಕೆಲ ವಿದ್ಯಾರ್ಥಿಗಳಿಗೆ ಧರ್ಮಾಂಧತೆ ತುಂಬಿ ಕೇಸರಿ ಶಾಲು ಹಾಕಿಕೊಂಡು ಹೋಗುವಂತೆ ಪ್ರಚೋದಿಸಲಾಯ್ತು. ಮಾಧ್ಯಮಗಳ ಮೂಲಕ ಅದಕ್ಕೆ ಭರ್ಜರಿ ಪ್ರಚಾರ ನೀಡಲಾಯ್ತು. ಆಳುವ ಸರ್ಕಾರ ಬಹುಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟು ಈ ಅನ್ಯಾಯಗಳಿಗೆ ಬೆಂಬಲ ನೀಡಿತು. ಕೇಸರಿ ಶಾಲು ಹಾಕಿದ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ದಾಂಧಲೆ ಎಬ್ಬಿಸಿದರು. ಶಿವಮೊಗ್ಗದಲ್ಲಿ ರಾಷ್ಟ್ರಧ್ವಜದ ಬದಲು ಭಗವಧ್ವಜ ಹಾರಿಸಿ, ಗ್ರಂಥಾಲಯಕ್ಕೆ ಕಲ್ಲು ಹೊಡೆದರು. ಕೊಡಗಿನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಚಾಕುವಿನಿಂದ ಇರಿಯಲಾಯ್ತು. ಬಜರಂಗದಳ, ಬಿಜೆಪಿ ಮುಖಂಡರು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಂಚುವ ವಿಡಿಯೋಗಳು ಹರಿದಾಡಿದವು. ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಯ್ತು. ಇದು ಸಹಜವಾಗಿಯೇ ಎಲ್ಲಾ ಪೋಷಕರ ಆತಂಕಕ್ಕೆ ಕಾರಣವಾಯ್ತು. ತಮ್ಮ ಮಕ್ಕಳು ಚೆನ್ನಾಗಿ ಓದಲಿ ಎಂದು ಕಷ್ಟ ಪಟ್ಟು ಸಾಲ -ಸೋಲ ಮಾಡಿ ಕಾಲೇಜಿಗೆ ಕಳಿಸಿದರೆ ಅವರು ರಾಜಕೀಯ ದಾಳಗಳಾಗಿ ಹಿಂಸಾಚಾರದಲ್ಲಿ ಭಾಗವಹಿಸುತ್ತಿರುವುದನ್ನು ಪೋಷಕರು ಸಹಿಸದಾದರು. ಪರೀಕ್ಷೆಗಳು ಇದ್ದ ಸಮಯದಲ್ಲಿ ಹೀಗೆ ಆಗುತ್ತಿರುವುದು ಅವರನ್ನು ಮತ್ತಷ್ಟು ಕಂಗೆಡಿಸಿತು. ಹಿಜಾಬ್ ಕಾರಣಕ್ಕೆ ಮುಸ್ಲಿಂ ಹೆಣ್ಣು ಮಕ್ಕಳನ್ನು ಪರೀಕ್ಷೆಗೆ ಕೂಡಿಸದೆ ಹೊರಕಳಿಸಿದ್ದು, ಹಿಜಾಬ್ ಧರಿಸಿದ ಹೆಣ್ಣು ಮಕ್ಕಳನ್ನು ಗಿಡುಗಗಳಂತೆ ಪತ್ರಕರ್ತರು ಮುತ್ತಿಕೊಂಡಿದ್ದು ಎಂತವರಿಗೂ ಹಿಂಸೆ ಅನಿಸಿತು.

ಉಡುಪಿಯ ಕಾಪು ಮಾರಿಗುಡಿ ಜಾತ್ರೆ ಹಿಂದಿನಿಂದಲೂ ಸೌಹಾರ್ದತೆಗೆ ಸಾಕ್ಷಿ. ಅಲ್ಲಿ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಸಂಘಪರಿವಾರದ ಬೆದರಿಕೆ ಹಾಕಿತು. ದೇವಸ್ಥಾನ ಮಂಡಳಿ ಸಹ ಒತ್ತಡಕ್ಕೆ ಮಣಿದು ದೇವಾಲಯದ ಹತ್ತಿರದ ಮಳಿಗೆಗಳನ್ನು ಹಿಂದೂಗಳಿಗೆ ಮಾತ್ರ ನೀಡಿತು. ಸಹಬಾಳ್ವೆ ಉಡುಪಿ ತಂಡ ಇದನ್ನು ಖಂಡಿಸಿತು. ‌ಈ ತಾರತಮ್ಯ ಅಲ್ಲಿದ್ದ ಹಿಂದೂ ವರ್ತಕರಿಗೂ ನೋವು ತಂದಿತ್ತು. ಆದರೆ ನಂತರ ಆದದ್ದೆ ಬೇರೆ.. ಜಾತ್ರೆಗೆ ಬಂದಿದ್ದ ಭಕ್ತಾದಿಗಳು ಸಂಘಪರಿವಾದ ಬೆದರಿಕೆಗಳಿಗೆ ಸೊಪ್ಪು ಹಾಕದೆ ದೂರದಲ್ಲಿ ಅಂಗಡಿ ಹಾಕಿಕೊಂಡಿದ್ದ ಮುಸ್ಲಿಂ ವ್ಯಾಪಾರಿಗಳೊಂದಿಗೆ ವ್ಯಾಪಾರ ಮಾಡಿದರು. ಜಾತ್ರೆಯ ‘ವಾಲಗ ಚಾಕರಿ’ಯನ್ನು ಸಂಪ್ರದಾಯದಂತೆ ಮುಸ್ಲಿಂ ಸಮುದಾಯದ ವ್ಯಕ್ತಿಗಳೆ ಎರಡು ದಿನದ ವಾಲಗ ಊದಿ ‘ತುಳುನಾಡಿನ ಪರಂಪರೆ’ಯನ್ನು ಎತ್ತಿಹಿಡಿದರು.

ಆ ನಂತರವೂ ಅಷ್ಟೇ. ಸಂಘಪರಿವಾರ ಉಗಾದಿ ಹಬ್ಬಕ್ಕೆ ಜಟ್ಕಾ ಕಟ್ ವಿವಾದ ತಂದು ಮುಸ್ಲಿಮರ ಬಳಿ ಮಾಂಸ ಖರೀದಿ ಮಾಡಬಾರದೆಂಬ ಕರೆ ನೀಡಿ ಮುಖಭಂಗ ಅನುಭವಿಸಿತು. ಇಷ್ಟು ವರ್ಷ ಖರೀದಿಸಿದ್ದವರು ಏಕಾಏಕಿ ಏಕೆ ನಿಲ್ಲಿಸುತ್ತಾರೆ? ಮೈಸೂರಿನಲ್ಲಿ ದೇವನೂರು ಮಹಾದೇವ, ಪ ಮಲ್ಲೇಶ್ ರೀತಿಯ ಚಿಂತಕ ಹೋರಾಟಗಾರರು ತಾವೇ ಮುಂದೆ ನಿಂತು ಮುಸ್ಲಿಮರ ಬಳಿ ಮಾಂಸ ಖರೀದಿಸಿ ಐಕ್ಯತೆ ಪ್ರದರ್ಶಿಸಿದರು. ಸಂಘಪರಿವಾರ ಮತ್ತು ಸರ್ಕಾರ ದಿನಕ್ಕೊಂದು ವಿವಾದ ಸೃಷ್ಟಿಸುತ್ತಿತ್ತು. ಆದರೆ ಬಹುತೇಕ ಜನರಿಗೆ ಅವು ಬೇಕಿರಲಿಲ್ಲ. ಪೆಟ್ರೋಲ್-ಡೀಸೆಲ್ ಬೆಲೆ ಮತ್ತು ಅಡುಗೆ ಗ್ಯಾಸ್ ಬೆಲೆ ದಿನೇ ದಿನೇ ಏರುತ್ತಲೇ ಇತ್ತು. ಅಡುಗೆ ಎಣ್ಣೆ ತರಕಾರಿ ಬೆಲೆ ಗಗನಕ್ಕೇರುತ್ತಿತ್ತು. ಜನರಿಗೆ ಬೇಕಿದ್ದು ಬೆಲೆ ಇಳಿಕೆ, ಮಕ್ಕಳಿಗೆ ಉತ್ತಮ ಶಿಕ್ಷಣ, ಕೃಷಿ ಬೆಳೆಗಳಿಗೆ ಒಳ್ಳೆಯ ಬೆಲೆ ಮತ್ತು ಶಾಂತಿ – ನೆಮ್ಮದಿಯಾಗಿತ್ತು. ಆದರೆ ಸರ್ಕಾರ ಇದಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿತ್ತು. 40% ಕಮಿಷನ್ ಭ್ರಷ್ಟಾಚಾರ ಮಾಡುತ್ತಿದೆ ಎಂದು ಪ್ರಧಾನಿಗೆ ಗುತ್ತಿಗೆದಾರರು ಪತ್ರ ಬರೆದಿದ್ದರು. ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರನೊಬ್ಬ ತನ್ನ ಸಾವಿಗೆ ಮಂತ್ರಿ ಈಶ್ವರಪ್ಪ, ಸರ್ಕಾರ ಕಾರಣವೆಂದು ಪತ್ರ ಬರೆದು ಉಡುಪಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡರು. ಆನಂತರ ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಸರ್ಕಾರದ ಪ್ರಭಾವಿ ಸಚಿವರ ಮೆಲೆ ಆರೋಪ ಬಂದಿತು. ಇವೆಲ್ಲವನ್ನು ಮುಚ್ಚಿ ಹಾಕಲು ಸರ್ಕಾರ ದ್ವೇಷ ಪ್ರಚಾರದಲ್ಲಿ ತೊಡಗಿತ್ತು.

ಇಂತಹ ವಿಷಮ ಸ್ಥಿತಿಯಲ್ಲಿ ನಾವೆಲ್ಲರೂ ಮನುಜರು, ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಲು ಸದುದ್ದೇಶದಿಂದ ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶ ನಡೆಸಲು ಘೋಷಿಸಲಾಯ್ತು. ಈ ನೆಲದಲ್ಲಿ ಹಾಸುಹೊಕ್ಕಾಗಿರುವ ಸಹಬಾಳ್ವೆಯನ್ನು ಮುಕ್ಕಾಗಲು ನಾವು ಬಿಡುವುದಿಲ್ಲ ಎಂದು ಪಣ ತೊಡಲಾಯಿತು. ಎಲ್ಲಿಂದ ಈ ಗಲಭೆ ಆರಂಭಿಸಲಾಯಿತೊ ಅಲ್ಲಿಯೇ ಸಮಾವೇಶ ನಡೆಸಿ ಪ್ರೀತಿ ಹಂಚುವುದಾಗಿ ನಿರ್ಧರಿಸಲಾಯಿತು. ಅದಕ್ಕಾಗಿಯೇ ಕಾಯುತ್ತಿದ್ದ ಉಡುಪಿಯ ಜೀವಪರ ಮನಸ್ಸುಗಳು ಸಮಾವೇಶಕ್ಕಾಗಿ ಹಗಲು ರಾತ್ರಿ ದುಡಿದರು. ಪೂರ್ವಭಾವಿಯಾಗಿ ರಾಜ್ಯದೆಲ್ಲಡೆ ಸಭೆಗಳು, ಇಫ್ತಾರ್‌ ಕೂಟಗಳು ನಡೆದವು. ಉಡುಪಿಯಲ್ಲಿ ಸಹಬಾಳ್ವೆ ಸಂಘಟನಾ ಸಮಿತಿ ರಚನೆಯಾಯಿತು. ಒಳಿತನ್ನು ಬಯಸುವ ಎಲ್ಲಾ ಸಮುದಾಯದ ಧರ್ಮಗುರುಗಳು, ಹೋರಾಟಗಾರರು, ಚಿಂತಕರು, ಯುವ ತಲೆಮಾರನ್ನು ಅತಿಥಿಗಳನ್ನಾಗಿ ಮಾಡಲು ನಿರ್ಧರಿಸಲಾಯಿತು. ಆ ಸಂದರ್ಭದಲ್ಲಿ ಬಲಪಂಥೀಯ ವಿಚಾರಗಳನ್ನು ಪ್ರತಿಪಾದಿಸಿದ್ದ ಪ್ರಣವಾನಂದ ಎಂಬ ಸ್ವಾಮಿಯನ್ನು ಆಹ್ವಾನಿಸಿ ವಿವಾದ ಏರ್ಪಟ್ಟಿತು. ಸಾರ್ವಜನಿಕರಿಂದ ಟೀಕೆಗಳು ಕೇಳಿಬಂದವು. ಸಂಘಟನಾ ಸಮಿತಿಯು ಇದನ್ನು ಆರೋಗ್ಯಕರವಾಗಿ ಪರಿಗಣಿಸಿ ತಪ್ಪಾಯಿತು ಎಂದು ಕ್ಷಮೆಯಾಚಿಸಿತು. ಅತಿಥಿಯನ್ನು ಕೈಬಿಟ್ಟು ಮುನ್ನಡೆಯಿತು. ಇದು ಸಹ ಜನರಿಗೆ ಸಮಾವೇಶದ ಆಶಯದ ಬಗ್ಗೆ ಭರವಸೆ ಮೂಡಿಸಿತು.

ಇದನ್ನೂ ಓದಿ: ದೇಶ ಒಗ್ಗೂಡಿಸುವವರು ದೇಶಪ್ರೇಮಿಗಳು, ದೇಶ ಒಡೆಯುವವರು ದೇಶದ್ರೋಹಿಗಳು: ಯೋಗೇಂದ್ರ ಯಾದವ್

ಸಹಬಾಳ್ವೆ – ಸಾಮರಸ್ಯದ ಜರೂರಿ ಬಗ್ಗೆ 600 ಕ್ಕೂ ಹೆಚ್ಚು ಕಲಾವಿದರು, ಹೋರಾಟಗಾರರು, ಸಾಹಿತಿಗಳು ತಮ್ಮ ಅನಿಸಿಕೆ ಅಭಿಪ್ರಾಯ ವ್ಯಕ್ತಪಡಿಸಿದರು. ಅದನ್ನು ಪೋಸ್ಟರ್‌ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ ಪ್ರಚಾರ ಮಾಡಲಾಯ್ತು. ಸಮಾವೇಶದ ಸಾಮಾಜಿಕ ಜಾಲತಾಣ ಪ್ರಚಾರ ಸಮಿತಿಗೆ ನೂರಾರು ಜನ ಕೊಡುಗೆ ನೀಡಿದರು. ಶಿಸ್ತು ಮತ್ತು ಸೃಜನಾತ್ಮಕವಾಗಿ ತಂಡ ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಇದು ಸಾವಿರಾರು ಜನ ಉಡುಪಿಯ ಕಡಲ ತಡಿಗೆ ಬಂದು ಸೇರುವಂತೆ ಮಾಡಿತು.

ಉಡುಪಿಯ ಸ್ಥಳೀಯ ಸಂಘಟನೆಗಳ ಪರಿಶ್ರಮ – ರಾಜ್ಯದ ಸಂಘಟನೆಗಳ ಸಕ್ರಿಯ ಬೆಂಬಲ

ಇಂತದ್ದೊಂದು ಬೃಹತ್ ಕಾರ್‍ಯಕ್ರಮ ಅಚ್ಚುಕಟ್ಟಾಗಿ ಯೋಜನೆಯಂತೆ ನಡೆಯಲು, ಯಶಸ್ವಿಯಾಗುವುದರ ಹಿಂದೆ ಉಡುಪಿಯ ಸ್ಥಳೀಯ ಸಂಘಟನೆಗಳ ಪರಿಶ್ರಮ ಎದ್ದು ಕಾಣುತ್ತಿತ್ತು. ಇಡೀ ಜಿಲ್ಲೆಯ ಪ್ರತಿ ಮನೆ ಮನೆಗೂ ಸಹಬಾಳ್ವೆ ಸಮಾವೇಶ ನಡೆಯುವುದರ ಮಾಹಿತಿ ತಲುಪಿಸಲಾಯ್ತು. ಎಲ್ಲಾ ಸಮುದಾಯಗಳು ಭಾಗವಹಿಸಿ ಸೌಹಾರ್ದ ಸಂದೇಶ ಸಾರುವಂತೆ ಮನವಿ ಮಾಡಲಾಯ್ತು. ಮೆರವಣಿಗೆಯನ್ನು ಆಕರ್ಷಕವಾಗಿ ನಡೆಯುವಂತೆ ರೂಪಿಸಲಾಯ್ತು. ಸ್ವಾಮಿ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್‌, ಮದತ್ ಥೇರೆಸಾ, ನಾರಾಯಣ ಗುರು, ಖಾಜಿ ಅಬ್ದುಲ್ಲಾ, ವಡ್ಡರ್ಸೆ ರಘುರಾಮ ಶೆಟ್ಟಿ, ಟಿ.ಎಂ ಪೈ ಸೇರಿದಂತೆ ಹಲವು ಮಹನೀಯರ ಟ್ಯಾಬ್ಲೋಗಳನ್ನು ಉಡುಪಿ ಬೀದಿಗಳಲ್ಲಿ ಸಂಚರಿಸಲಾಯ್ತು. ಬಣ್ಣ ಬಣ್ಣದ ಬಾವುಟಗಳು ಹಾರಾಡಿ ಭಾರತದ ಬಹುತ್ವವನ್ನು ಎತ್ತಿ ಹಿಡಿಯಲಾಯ್ತು. ಸಮಾವೇಶದ ಉದ್ಘಾಟನಾ ಬ್ಯಾನರ್‌ನಲ್ಲಿ ಮನುಜ ಜಾತಿ ತಾನೊಂದೆ ವಲಂ ಎಂದು ಪ್ರತಿಪಾದಿಸಲಾಯ್ತು. ಬ್ಯಾನರ್‌ನ ಒಂದು ಬದಿಯಲ್ಲಿ ಸಾಮಾಜಿಕ-ಧಾರ್ಮಿಕ ಸುಧಾರಕರರ ಚಿತ್ರಗಳು ಮತ್ತೊಂದು ಬದಿಯಲ್ಲಿ ಸಮಾಜವನ್ನು ಸರಿದಾರಿಗೆ ತರಲು ಹೋರಾಡಿದ ಹೋರಾಟಗಾರರ ಚಿತ್ರಗಳನ್ನು ಮುದ್ರಿಸಲಾಯ್ತು. ಇಡೀ ಸಮಾವೇಶ ನೂರಾರು ರೂಪಕಗಳನ್ನು ಒಳಗೊಂಡು ಸಂಪನ್ನಗೊಂಡಿತು.

ಅದೇ ರೀತಿ ರಾಜ್ಯದ ವಿವಿಧ ಜಿಲ್ಲೆಗಳ ಸಂಘಟನೆಳು ಸಮಾವೇಶವನ್ನು ಗಂಭೀರವಾಗ ಪರಿಗಣಿಸಿ ಭಾಗವಹಿಸಿದರು. ಅದಕ್ಕೂ ಮುನ್ನ ಪೂರ್ವಭಾವಿ ಸಭೆ ನಡೆಸಿ ತಯಾರಿ ನಡೆಸಿ ಕೆಲಸ ಮಾಡಿದವು. ಇದು ಕಾಲದ ಅಗತ್ಯ ಎಂದು ಮನಗಂಡು ತನು ಮನು ಧನ ಅರ್ಪಿಸಿದ್ದರಿಂದ ಸಮಾವೇಶ ಯಶಸ್ವಿಯಾಯಿತು.

“ಸಮಾಜದಲ್ಲಿ ಆತಂಕದ ಪರಿಸ್ಥಿತಿ ಇದ್ದಾಗ ವಿಶ್ವಾಸ ನೀಡುವ ಕೆಲಸಗಳು ನಡೆಯಬೇಕು. ಅದನ್ನು ಈ ಸಾಮರಸ್ಯ ನಡಿಗೆ, ಸಹಬಾಳ್ವೆ ಸಮಾವೇಶ ಸಮರ್ಪಕವಾಗಿ ನಿರ್ವಹಿಸಿತು. ಸಮಾಜ ಏನು ಬೇಕೆಂದು ಕೇಳುತ್ತಿತ್ತೊ ಆ ಕೆಲಸಕ್ಕೆ ಎಲ್ಲಾ ಸಂಘಟನೆಗಳು ಶಕ್ತಿ ಮೀರಿ ಚಾಲನೆ ನೀಡಿದವು. ಸೌಹಾರ್ದ, ಸಾಮರಸ್ಯೆ ಮತ್ತು ಸಹಬಾಳ್ವೆ ಇಡೀ ರಾಜ್ಯಮಟ್ಟಕ್ಕೆ ತಳಹಂತದಿಂದ ಹೋಗಬೇಕು ಎನ್ನುವುದನ್ನು ಸಮಾವೇಶ ತೋರಿಸಿತು. ರಾಜ್ಯದ ಮತ್ತು ಸ್ಥಳೀಯ ಸಂಘಟನೆಗಳು ಮತ್ತು ಜನರು ತಮ್ಮ ಹೃದಯಕ್ಕೆ ಇಳಿಸಿಕೊಂಡು ಕೆಲಸ ಮಾಡಿದರು. ಹಾಗಾಗಿ ಸಮಾವೇಶ ಯಶಸ್ವಿಯಾಯಿತು” ಎನ್ನುತ್ತಾರೆ ಸಂಘಟಕರಲ್ಲಿ ಒಬ್ಬರಾದ ಕೆ.ಎಲ್ ಅಶೋಕ್.

ದಲಿತ – ರೈತ ಸಂಘಟನೆಗಳ ಭಾಗಿ

ಈ ದೇಶದ ಎಲ್ಲಾ ಅನ್ಯಾಯ, ತರತಮಗಳನ್ನು ವಿರೋಧಿಸಿ ಹೋರಾಡುವ, ಎಲ್ಲೆ ಅನ್ಯಾಯ ನಡೆದರೂ ಪ್ರತಿಭಟಿಸುವ ದಲಿತ ಸಂಘಟನೆಗಳು ಸಮಾವೇಶದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದವು. ಅದೇ ರೀತಿಯಾಗಿ ರೈತ ಸಂಘಟನೆಗಳು ಭಾಗವಹಿಸಿ ಸೌಹಾರ್ದ – ಸಾಮರಸ್ಯದ ಅರಿವು ಬಿತ್ತಿದವು. ಉಡುಪಿಯ ಎಲ್ಲಾ ಸಮುದಾಯ ಜನರು ಸಮಾವೇಶವನ್ನು ಹಬ್ಬದಂತೆ-ಜಾತ್ರೆಯಂತೆ ಪರಿಗಣಿಸಿ ಭಾಗವಹಿಸಿದರು. ರಾಜ್ಯದ ಮೂಲೆ ಮೂಲೆಗಳಿಂದ ಸೌಹಾರ್ದ ಮನುಸ್ಸುಗಳು ಉಡುಪಿಯೆಡೆಗೆ ಹೆಜ್ಜೆ ಹಾಕಿದರು. 6 ವರ್ಷಗಳ ಹಿಂದೆ ಇದೇ ಉಡುಪಿಯಲ್ಲಿ ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು ಎಂಬ ಘೋಷಣೆಯಡಿ ’ಉಡುಪಿ ಚಲೋ’ ನಡೆದು ಯಶಸ್ವಿಯಾಗಿತ್ತು. ಪ್ರಗತಿಪರ ಶಕ್ತಿಯ ಶಕ್ತಿ ಪ್ರದರ್ಶನ ಮಾಡಲಾಗಿತ್ತು. ಅದೆ ಮತ್ತುಷ್ಟು ಶಕ್ತಿಯೊಂದಿಗೆ ಸಹಬಾಳ್ವೆ ಸಮಾವೇಶದಲ್ಲಿ ಅಭಿವ್ಯಕ್ತಗೊಂಡಿತು.

ಇದನ್ನೂ ಓದಿ: ಭಾರತವನ್ನು ನಂಬದ ಮನಸ್ಥಿತಿಯವರು ತಮ್ಮ ದ್ವೇಷಕ್ಕೆ ಉಡುಪಿ ಆಯ್ದುಕೊಂಡು ತಪ್ಪು ಮಾಡಿದರು: ಸಸಿಕಾಂತ್ ಸೆಂಥಿಲ್

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮಾವೇಶಕ್ಕೆ ಸ್ಫೂರ್ತಿ

ಉಡುಪಿಯ ಸಹಬಾಳ್ವೆ ಸಮಾವೇಶದ ಸ್ಫೂರ್ತಿಯೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಸಹಬಾಳ್ವೆಯನ್ನು ಉದ್ದೀಪನಗೊಳಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಲಾಗಿದೆ. ಯುವಜನರು ಮತ್ತು ಸ್ಥಳೀಯ ಸಂಘಟನೆಗಳು ಸೇರಿ ಸಮಾವೇಶ ಸಂಘಟಿಸಲು ಆಶಿಸಲಾಗಿದೆ. ಅಲ್ಲಿಗೆ ಈ ಸಮಾವೇಶ ಇಲ್ಲಿಗೆ ಮುಗಿಯುವುದಿಲ್ಲ ಎಂಬ ಸಂದೇಶ ಸಾರಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...