Homeಕರ್ನಾಟಕ371J ಹೈದರಾಬಾದ್‌ ಕರ್ನಾಟಕ ಮೀಸಲಾತಿ: ಸಾಧಕ ಬಾಧಕಗಳು - ಡಾ.ರಝಾಕ ಉಸ್ತಾದ

371J ಹೈದರಾಬಾದ್‌ ಕರ್ನಾಟಕ ಮೀಸಲಾತಿ: ಸಾಧಕ ಬಾಧಕಗಳು – ಡಾ.ರಝಾಕ ಉಸ್ತಾದ

ಹೈದ್ರಾಬಾದ ಕರ್ನಾಟಕ ಪ್ರದೇಶವು ಕರ್ನಾಟಕ ರಾಜ್ಯದ ಆಡಳಿತಕ್ಕೆ ಒಳಪಟ್ಟು 70 ವರ್ಷಗಳಾಗುತ್ತ ಬಂದರೂ ಇಂದಿಗೂ ಅಭಿವೃದ್ಧಿ ಮರೀಚಿಕೆಯಾಗಿದೆ. ಈ ಭಾಗವು ವಿಶೇಷವಾಗಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಸಾರ್ವಜನಿಕ ಸೇವೆಗಳು, ಮಾನವ ಅಭಿವೃದ್ಧಿ ಪೂರಕ ವಾತಾವರಣದಿಂದ ಹಿನ್ನಡೆ ಅನುಭವಿಸಿದೆ.

- Advertisement -
- Advertisement -

ಮೀಸಲಾತಿ ಕಣ್ಣಗಾಯಕ್ಕೊಂದು ಕನ್ನಡಿ

ಸರಣಿ ಸಂಪಾದಕರು: ವಿಕಾಸ್‌ ಆರ್‌ ಮೌರ್ಯ

ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ 560ಕ್ಕೂ ಹೆಚ್ಚು ರಾಜಮಹಾರಾಜರ ಸಂಸ್ಥಾನಗಳನ್ನು ಹೊಂದಿದ್ದ ಈ ದೇಶದಲ್ಲಿ ಭೌತಿಕ ಅಭಿವೃದ್ಧಿಯಾಗಲೀ, ಸಾಮಾಜಿಕ ವ್ಯವಸ್ಥೆಯಾಗಲಿ, ಸಾಂಸ್ಕøತಿಕವಾಗಿಯಾಗಲಿ, ಶೈಕ್ಷಣಿಕವಾಗಿಯಾಗಲಿ ಏಕರೀತಿಯಾಗಿ ಇರಲಿಲ್ಲ. ಈ ವಿಭಿನ್ನ ದೃಷ್ಟಿಕೋನದ ಭಾರತವು ಒಂದು ಮಾನದಂಡದಲ್ಲಿ ಒಂದಾಗುವದು ಭವಿಷ್ಯದ ದೃಷ್ಟಿಯಿಂದ ಅವಶ್ಯಕತೆಯಿದ್ದ ಕಾರಣ ಸಂವಿಧಾನ ನಿರ್ಮಾತೃಗಳು ಸಂವಿಧಾನ ರಚನೆ ಸಂದರ್ಭದಲ್ಲಿ ಯಾವುದೇ ರಾಜ್ಯದಲ್ಲಿ ಒಂದು ಪ್ರದೇಶ ಮತ್ತೊಂದು ಪ್ರದೇಶಕ್ಕಿಂತ ಅಭಿವೃದ್ಧಿಯಲ್ಲಿ, ಶಿಕ್ಷಣದಲ್ಲಿ ವಿಭಿನ್ನವಾಗಿದ್ದರೆ ಅಂತಹ ರಾಜ್ಯಗಳಲ್ಲಿ ಆ ಒಂದು ಪ್ರದೇಶಕ್ಕೆ ವಿಶೇಷ ಕಾನೂನು ರಚನೆ ಮಾಡುವ ಅಧಿಕಾರವನ್ನು ಸಂವಿಧಾನದ ಅನುಚ್ಛೇದ 371 ರಲ್ಲಿ ನೀಡಲಾಗಿದೆ. ಅದರ ಆಧಾರದಲ್ಲಿ ಈಗಾಗಲೇ ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಅಸ್ಸಾಂ, ನಾಗಾಲ್ಯಾಂಡ, ಒಡಿಸ್ಸಾ, ಮಿಜೋರಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ತ್ರಿಪುರಾ ಹಾಗೂ ಗೋವಾ ರಾಜ್ಯಗಳಿಗೆ ಅನುಚ್ಛೇದ 371ರ ಅಡಿಯಲ್ಲಿ ವಿಶೇಷ ಕಾನೂನು ರಚಿಸಲು ಅವಕಾಶ ನೀಡಲಾಗಿದೆ.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಮತ್ತು 1956 ರವರೆಗೆ ಹೈದ್ರಾಬಾದ್ ರಾಜ್ಯದ ಅಧೀನದಲ್ಲಿ ಇದ್ದಂತಹ ಹೈದ್ರಾಬಾದ ಕರ್ನಾಟಕ (ಬೀದರ, ಗುಲ್ಬರ್ಗಾ, ಯಾದಗೀರ, ರಾಯಚೂರು ಮತ್ತು ಕೊಪ್ಪಳ) ಪ್ರದೇಶ ರಾಜ್ಯಗಳ ಪುನರ್ವಿಂಗಡನೆಯ ಸಂದರ್ಭದಲ್ಲಿ ಅಂದಿನ ಮೈಸೂರು ರಾಜ್ಯಕ್ಕೆ ಸೇರಿಸಲಾಗಿತ್ತು. ಹೈದ್ರಾಬಾದ ಸಂಸ್ಥಾನದಲ್ಲಿ ಜಾರಿಯಲ್ಲಿದ್ದಂತಹ ಮುಲ್ಕಿ ಕಾನೂನಿನ ಸಂವಿಧಾನದ ಮಾನ್ಯತೆಯನ್ನು ಆಂಧ್ರಪ್ರದೇಶ ರಾಜ್ಯದ ತೆಲಂಗಾಣ ಪ್ರದೇಶಕ್ಕೆ 1957ರಲ್ಲಿ ಸಂವಿಧಾನ ಅನುಚ್ಛೇದ 371(1) ರ ಅಡಿಯಲ್ಲಿ ನೀಡಲಾಗಿತ್ತು, ಅದರಂತೆ, ಹೈದ್ರಾಬಾದ ಸಂಸ್ಥಾನದ ಭಾಗವಾಗಿದ್ದ ಇಂದಿನ ಮಹಾರಾಷ್ಟ್ರದ ಮರಾಠಾವಾಡ ಪ್ರದೇಶವು ಸೇರಿದಂತೆ ವಿದರ್ಭಾ, ಕಚ್, ಸೌರಾಷ್ಟ್ರ ಪ್ರದೇಶಕ್ಕೆ ಅನುಚ್ಛೇದ 371(2) ಅಡಿಯಲ್ಲಿ ಮುಲ್ಕಿ ಕಾನೂನಿನ ಮಾದರಿಯಲ್ಲಿ ವಿಶೇಷ ಕಾನೂನು ರಚನೆ ಅಧಿಕಾರ ನೀಡಲಾಗಿದೆ. ಆದರೆ, 1956ರಲ್ಲಿ ಮೈಸೂರು ರಾಜ್ಯವನ್ನು ಸೇರಿದ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಮುಲ್ಕಿ ಕಾನೂನಿನ ಸೌಲಭ್ಯ ಸಿಗಲಿಲ್ಲವಾದ್ದರಿಂದ ಈಗ ಅನುಚ್ಛೇದ 371ಜೆ ಅಡಿಯಲ್ಲಿ ಮುಲ್ಕಿ ಕಾನೂನಿನ ಸೌಲಭ್ಯವನ್ನು ವಿಶೇಷ ಕಾನೂನು ಮೂಲಕ ರಚಿಸಲು ಅವಕಾಶ ನೀಡಲಾಗಿದೆ.

ಹೈದ್ರಾಬಾದ ಕರ್ನಾಟಕ ಪ್ರದೇಶವು ಈಗ ಆರು ಜಿಲ್ಲೆಗಳನ್ನೊಳಗೊಂಡ ಕಂದಾಯ ವಿಭಾಗವಾಗಿದ್ದು, ಕರ್ನಾಟಕ ರಾಜ್ಯದ ಆಡಳಿತಕ್ಕೆ ಒಳಪಟ್ಟು 70 ವರ್ಷಗಳಾಗುತ್ತ ಬಂದರೂ ಇಂದಿಗೂ ಅಭಿವೃದ್ದಿ ಮರೀಚಿಕೆಯಾಗಿದೆ. ಈ ಭಾಗವು ವಿಶೇಷವಾಗಿ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ, ಸಾರ್ವಜನಿಕ ಸೇವೆಗಳು, ಮಾನವ ಅಭಿವೃದ್ಧಿ ಪೂರಕ ವಾತಾವರಣದಿಂದ ಹಿನ್ನಡೆ ಅನುಭವಿಸಿದೆ. ಎನ್.ಧರ್ಮಸಿಂಗ ಮುಖ್ಯ ಮಂತ್ರಿಯಾಗುವವರೆಗೆ ಹೈ-ಕ ಪ್ರದೇಶದಲ್ಲಿ ಒಂದೇ ಒಂದು ಸರಕಾರಿ ಮೆಡಿಕಲ್ ಕಾಲೇಜು, ಸರಕಾರಿ ಇಂಜಿನಿಯರಿಂಗ್ ಕಾಲೇಜು ಇರಲಿಲ್ಲ. ಇಂದಿಗೂ ಇಡೀ ಪ್ರದೇಶದಲ್ಲಿ ಒಂದೇ ಒಂದು ಕಾನೂನು ಮಹಾವಿದ್ಯಾಲಯವಿಲ್ಲ, ಯಾವುದೇ ವೃತ್ತಿಪರ ತಾಂತ್ರಿಕ ಅಥವಾ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳಿಲ್ಲ.

2011 ರವರೆಗೆ ಕೇವಲ ಒಂದೇ ವಿಶ್ವವಿದ್ಯಾಲಯ ಅದು ಗುಲ್ಬರ್ಗಾ ವಿಶ್ವವಿದ್ಯಾಲಯ ಈ ಭಾಗದ ಉನ್ನತ ಶಿಕ್ಷಣ ಪೂರೈಸುವ ಸಂಸ್ಥೆಯಾಗಿತ್ತು. 2015 ರವರೆಗೆ ಈ ಭಾಗದಲ್ಲಿ ಇರುವ ಪದವಿ ಮಹಾವಿದ್ಯಾಲಯಗಳಲ್ಲಿ ಶೇ 50 ರಷ್ಟು ಹುದ್ದೆಗಳು ಖಾಲಿ ಇದ್ದವು. ಗ್ರಾಮೀಣ ಭಾಗದ ಯಾವ ಪದವಿ ಪೂರ್ವ ಕಾಲೇಜುಗಳಲ್ಲಿಯೂ ಇಂದಿಗೂ ಪೂರ್ಣ ಪ್ರಮಾಣದ ಉಪನ್ಯಾಸಕರಿಲ್ಲ. 371ಜೆ ಕಾನೂನು ಜಾರಿಯಾಗಿ ಆರು ವರ್ಷವಾದರೂ ಹೈ-ಕ ಪ್ರದೇಶದಲ್ಲಿ 12,000 ಪ್ರಾಥಮಿಕ ಶಾಲಾಶಿಕ್ಷಕರ ಹುದ್ದೆಗಳು ಖಾಲಿ ಇವೆ, 2000 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶೈಕ್ಷಣಿಕ ವ್ಯವಸ್ಥೆ ಇದ್ದೂ ಇಲ್ಲದಂತಾಗಿರುವದು ಈ ಭಾಗದ ದುರಂತವೇ ಸರಿ. ಇಂತಹ ವ್ಯವಸ್ಥೆಯಲ್ಲಿ ಓದಿದಂತಹ ಈ ಭಾಗದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವ ರೀತಿ ಭಾಗವಹಿಸಲು ಸಾಧ್ಯ?

ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಇರುವಂತಹ ಬಡತನ, ನಿರುದ್ಯೋಗ ಮತ್ತು ಉದ್ಯೋಗ ಅವಕಾಶ ಇಲ್ಲದಿರುವ ಕಾರಣದಿಂದ ಬಹುತೇಕ ಗ್ರಾಮೀಣ ಭಾಗದ ಜನ ಪ್ರತಿವರ್ಷ ಮಹಾನಗರಗಳಿಗೆ ಕುಟುಂಬ ಸಮೇತ ಗುಳೆ ಹೋಗುವ ಪರಿಸ್ಥಿತಿ ಇದೆ. ಈ ಗುಳೆ ಹೋಗುವ ಕಾರಣಕ್ಕೆ ತಮ್ಮ ಜೊತೆಗೆ ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವುದರಿಂದ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ, ಶಾಲೆಯಿಂದ ಹೊರಗುಳಿದ ಮಕ್ಕಳು, ಉನ್ನತ ಶಿಕ್ಷಣದಿಂದ ವಂಚಿತರಾಗುವ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತ ಬಂದಿದೆ. ಇತ್ತೀಚಿಗೆ ಬಂದ 2018-19ನೇ ಸಾಲಿನ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವರದಿಯ ಪ್ರಕಾರ ದೇಶದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಅನುಪಾತ (Gross Enrollment Ratio) ಶೇ 26.3 ರಷ್ಟಿದೆ, ರಾಜ್ಯದ ಉಇಖ ಸರಾಸರಿ ಅನುಪಾತ ಶೇ 28.2 ರಷ್ಟಿದೆ. ಅದೇರೀತಿ ಹೈದ್ರಾಬಾದ ಕರ್ನಾಟಕದ ಈ ಆರು ಜಿಲ್ಲೆಗಳ ಉಇಖ ಕೇವಲ ಶೇ 10.14 ಎಂದು ವರದಿಯಾಗಿದೆ. ಅದರಲ್ಲಿಯೂ ಯಾದಗೀರಿ ಜಿಲ್ಲೆಯ ಉಇಖ ರಾಷ್ಟ್ರಮಟ್ಟದಲ್ಲಿಯೇ ಅತ್ಯಂತ ಕಡಿಮೆ ಅಂದರೆ ಕೇವಲ ಶೇ 4.07 ಇರುವುದು ಸರಕಾರದ ನಡೆಗೆ ಹಿಡಿದ ಕನ್ನಡಿಯಾಗಿದೆ.

ಇದನ್ನೂ ಓದಿ: ಮೀಸಲಾತಿ ಮತ್ತು ಆರ್ಥಿಕತೆ : ಡಾ. ಬಿ.ಸಿ ಬಸವರಾಜ್

ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಮಾನವ ಆರೋಗ್ಯ ಮತ್ತು ಪಶು ಆರೋಗ್ಯ ಸೇವೆಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಕನಿಷ್ಠ ತಾಲ್ಲೂಕು ಆಸ್ಪತ್ರೆಯಲ್ಲಿಯೂ ಕೂಡ ವೈದ್ಯರಿಲ್ಲದ ಪರಿಸ್ಥಿತಿಯಿದೆ. ಗ್ರಾಮೀಣ ಭಾಗದಲ್ಲಿ ಸ್ಟಾಫ್ ನರ್ಸ್‍ಗಳೇ ವೈದ್ಯರಾಗಿ ಸೇವೆ ಸಲ್ಲಿಸುವಂತಹ ಪರಿಸ್ಥಿತಿಯಿದೆ. ಒಟ್ಟಾರೆಯಾಗಿ ಆರೋಗ್ಯ ಸೇವೆ ಅತ್ಯಂತ ಕೆಳಮಟ್ಟದಲ್ಲಿವೆ ಎಂದು ಹಲವಾರು ವರದಿಗಳು ಸರಕಾರಕ್ಕೆ ಹೇಳಿವೆಯಾದರೂ ಸರಕಾರ ಯಾವುದೇ ಕ್ರಮ ಕೈಗೊಂಡಿರುವ ಉದಾಹರಣೆ ಇಲ್ಲ. ತಾಲ್ಲೂಕು ಕೇಂದ್ರದಲ್ಲಿ ಮಾತ್ರ ಹೆರಿಗೆ ಆಸ್ಪತ್ರೆಯಿರುವುದರಿಂದ ಶೇ.70ರಷ್ಟು ಹೆರಿಗೆಗಳು ಈ ಭಾಗದಲ್ಲಿ ಅಸುರಕ್ಷಿತವಾಗಿ ನಡೆಯುತ್ತಿವೆ ಎಂದು ಹೇಳಲಾಗಿದೆ. ಬಡತನ, ಅನಕ್ಷರತೆ ಕಾರಣದಿಂದ ಶೇ.57ರಷ್ಟು ತಾಯಂದಿರು ಹಾಗೂ ಶೇ.65ರಷ್ಟು ಮಕ್ಕಳು ಅಪೌಷ್ಠಿಕಾಂಶದಿಂದ ಬಳಲುತ್ತಿದ್ದಾರೆ. ಇಂತಹ ಸ್ಥಿತಿ ಇದ್ದಾಗಲೂ ಕರ್ನಾಟಕ ರಾಜ್ಯದ ಘನ ಸರಕಾರ ಯಾವುದೇ ದೂರದೃಷ್ಟಿಯುಳ್ಳ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಲಿಲ್ಲ.

ಹೈದ್ರಾಬಾದ ಕರ್ನಾಟಕ ಪ್ರದೇಶವು ನೈಸರ್ಗಿಕವಾಗಿ ಅತ್ಯಂತ ಸಂಪದ್ಭರಿತ ಪ್ರದೇಶವಾಗಿದೆ, ಇಲ್ಲಿ ನೈಸರ್ಗಿಕವಾಗಿ ಸಿಗುವ ಖನಿಜ ಸಂಪತ್ತು ವಿಶೇಷವಾಗಿ ಕಬ್ಬಿಣದ ಅದಿರು, ತಾಮ್ರದ ಅದಿರು, ರಾಜ್ಯದಲ್ಲಿ ಚಿನ್ನದ ಅದಿರು ಸಿಗುವ ಏಕೈಕ ಗಣಿ ಪ್ರದೇಶ ಹಟ್ಟಿ ಚಿನ್ನದ ಗಣಿ, ಗುಲ್ಬರ್ಗಾ ಜಿಲ್ಲೆಯಲ್ಲಿ ಸುಣ್ಣದ ಕಲ್ಲು, ಇತ್ತೀಚಿಗೆ ಶಹಾಪುರ ತಾಲ್ಲೂಕಿನ ಗೋಗಿಯಲ್ಲಿ ಯುರೇನಿಯಂ ಅದಿರು ಸಿಗುತ್ತಿದೆ ಎನ್ನಲಾಗಿದೆ. ಅದೇರೀತಿ ಅತೀಹೆಚ್ಚು ನದಿಗಳು ಈ ಭಾಗದಲ್ಲಿವೆ. ಈ ಪ್ರದೇಶವು ಕೃಷ್ಣ ಮತ್ತು ಗೋದಾವರಿ ನದಿ ಪಾತ್ರ ಹೊಂದಿದ್ದು ಸಾಕಷ್ಟು ನೀರು ಪ್ರತಿವರ್ಷ ಹರಿಯುತ್ತದೆ. ಆದರೆ, ಈ ನೀರು ರೈತರ ಹೊಲಗಳಿಗೆ ಹರಿಯುವಂತಹ ಯೋಜನೆಗಳ ಕುರಿತು ರಾಜಕೀಯ ಪಕ್ಷಗಳು ಮಾತನಾಡುತ್ತವೆ ಹೊರತು ಕಾರ್ಯರೂಪಕ್ಕೆ ತರುವುದಿಲ್ಲ. ಮಳೆಗಾಲದಲ್ಲಿ ಸಾವಿರಾರು ಟಿ.ಎಂ.ಸಿ. ಅಡಿ ನೀರು ನದಿಗಳಲ್ಲಿ ಹರಿಯುವುದನ್ನು ನೋಡಿ ಯಾರಿಗಾದರೂ ಹೊಟ್ಟೆಗೆ ಬೆಂಕಿ ಬೀಳದೆ ಇರಲಿಕ್ಕೆ ಸಾಧ್ಯವಿಲ್ಲ. ಯಾಕೆಂದರೆ ರಾಜ್ಯದ ಇತರೆ ಪ್ರದೇಶದಲ್ಲಿ ಕೇವಲ ಒಂದು-ಎರಡು ಟಿ.ಎಂ.ಸಿ. ಅಡಿ ನೀರಿಗೆ ರಕ್ತಸಿಕ್ತ ಹೋರಾಟ ಮಾಡಿದ್ದನ್ನು ನೋಡಿದ್ದೇವೆ. ಕೃಷ್ಣ ಬಿ-ಸ್ಕೀಂ ಅಡಿಯಲ್ಲಿ 170 ಟಿ.ಎಂ.ಸಿ. ಅಡಿ ನೀರು ಕರ್ನಾಟಕ ರಾಜ್ಯಕ್ಕೆ ಹಂಚಿಕೆ ಮಾಡಿ ತೀರ್ಪು ಪ್ರಕಟವಾಗಿ ದಶಕವಾಗುತ್ತ ಬಂದರೂ ಅದನ್ನು ಗೆಜೆಟ್‍ನಲ್ಲಿ ಇಲ್ಲಿಯವರೆಗೂ ಪ್ರಕಟಿಸದೇ ಇರುವದರಿಂದ ಕೃಷ್ಣ ನದಿ ನೀರು ಬಳಕೆ ಮಾಡಲು ಈ ಭಾಗಕ್ಕೆ ಸಾಧ್ಯವಾಗಿಲ್ಲ.

ರಾಜ್ಯ ಸರಕಾರ ನಿರ್ದಿಷ್ಟ ಯೋಜನೆಯೊಂದನ್ನು ರೂಪಿಸಿ ಇಲ್ಲಿ ಸಿಗುವ ನೈಸರ್ಗಿಕ ಸಂಪನ್ಮೂಲವನ್ನೇ ಸಮರ್ಪಕವಾಗಿ ಬಳಕೆ ಮಾಡಿ ಉದ್ಯೋಗ ಸೃಷ್ಟಿ ಮಾಡಿದಲ್ಲಿ ಗುಳೆ ಹೋಗುವ ವ್ಯವಸ್ಥೆಯನ್ನು ತಡೆಯಬಹುದು, ಅದೇರೀತಿ ಈ ಭಾಗದಲ್ಲಿ ಲಭ್ಯವಿರುವ ನೀರನ್ನು ವಿವಿಧ ನೀರಾವರಿ ಯೋಜನೆಗಳ ಮೂಲಕ ಕಾಲಮಿತಿಯೊಳಗೆ ಪೂರ್ಣಗೊಳಿಸಿದಲ್ಲಿ ರಾಜ್ಯಕ್ಕೆ, ದೇಶಕ್ಕೆ ಆಹಾರ ಉತ್ಪಾದಿಸುವ ಕಣಜವಾಗಿ ಈ ಪ್ರದೇಶ ಬದಲಾಗುವದರ ಜೊತೆಗೆ ಜನರ ಜೀವನಮಟ್ಟ ಸುಧಾರಣೆಯಾಗುವದರಲ್ಲಿ ಸಂಶಯವಿಲ್ಲ.

ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಸರಕಾರ ಹಲವಾರು ಸರಕಾರಿ ಸೌಮ್ಯದ ಕಾರ್ಖಾನೆಗಳನ್ನು ಸ್ಥಾಪಿಸಿದೆ. ಅವುಗಳಲ್ಲಿ ವಿಶೇಷವಾಗಿ ಹಟ್ಟಿ ಚಿನ್ನದ ಗಣಿ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಯರಮರಸ್ ಶಾಖೋತ್ಪನ್ನ ವಿದ್ಯುತ ಕೇಂದ್ರ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ ಕೇಂದ್ರಗಳಿದ್ದು, ಈ ಕೈಗಾರಿಕೆಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದರೂ ಬೇರೆ ರಾಜ್ಯ, ಬೇರೆ ಭಾಗದಿಂದ ಬಂದವರಿಗೆ ಇಲ್ಲಿ ಉದ್ಯೋಗ ನೀಡಿರುವುದರಿಂದ ಸ್ಥಳೀಯರೂ ಜಮೀನು, ನೀರು, ವಾತಾವರಣ ಕಳೆದುಕೊಂಡು ಕೂಡುವಂತಾಗಿದೆ. ಹಲವಾರು ಖಾಸಗಿ ಕೈಗಾರಿಕೆಗಳು ಈ ಭಾಗದಲ್ಲಿದ್ದರೂ ಅವುಗಳಲ್ಲಿಯೂ ಕೇವಲ ದಿನಗೂಲಿ ಅಥವಾ ಡಿ-ಗ್ರೂಪ್ ಹುದ್ದೆಗಳಿಗೆ ಮಾತ್ರ ಸ್ಥಳೀಯರಿಗೆ ಅದೂ ಕಡಿಮೆ ಅವಕಾಶ ನೀಡಲಾಗಿದೆ. ಹೀಗಾಗಿ ಉದ್ಯೋಗಾವಕಾಶ ಇಲ್ಲದೇ ಸಾಕಷ್ಟು ಜನ ವಿದ್ಯಾವಂತರೂ ಸಹ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಈ ಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ ಸರಕಾರಿ ಹುದ್ದೆಗಳು ಸಹ ಬೇರೆ ಭಾಗದವರ ಪಾಲಾಗಿರುವುದು ಸತ್ಯ. ಪ್ರಾಥಮಿಕ ಶಾಲಾಶಿಕ್ಷಕರ ಹುದ್ದೆಗಳಲ್ಲಿ ಶೇ.80ರಷ್ಟು ಶಿಕ್ಷಕರು, ಪ್ರೌಢ ಶಾಲಾ ವಿಭಾಗದಲ್ಲಿ ಶೇ 51 ರಷ್ಟು ಶಿಕ್ಷಕರು, ವಿಶ್ವವಿದ್ಯಾಲಯಗಳಲ್ಲಿ ಶೇ 75 ರಷ್ಟು ಹುದ್ದೆಗಳು, ಬಹುತೇಕ ಇಲಾಖೆಗಳ ಅಧಿಕಾರಿಗಳು ಬೇರೆ ಭಾಗದವರೇ ಇಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ. 2014ಕ್ಕಿಂತ ಮುಂಚೆ ಕರ್ನಾಟಕ ಸರಕಾರದಿಂದ ನೇರವಾಗಿ ಕೆ.ಎ.ಎಸ್ ಪರೀಕ್ಷೆ ಬರೆದು ಕಂದಾಯ ಇಲಾಖೆಯಲ್ಲಿ ತಹಸೀಲ್ದಾರ, ಸಹಾಯಕ ಆಯುಕ್ತ, ಅಪರ ಜಿಲ್ಲಾಧಿಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಹೈ-ಕ ಪ್ರದೇಶದ ಅಧಿಕಾರಿಗಳು ಕೇವಲ 19 ಜನ ಮಾತ್ರ, ಅದೇ ಸಂದರ್ಭದಲ್ಲಿ ಚಿತ್ರದುರ್ಗ ಒಂದು ಜಿಲ್ಲೆಯಿಂದ 21 ಜನ ಅಧಿಕಾರಿಗಳು ಕಂದಾಯ ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವದು ಕಂಡುಬಂದಿದೆ. ಅಂದರೆ, ಕಳೆದ 70 ವರ್ಷಗಳಿಂದ ಈ ಭಾಗ ಎಷ್ಟೊಂದು ನಲುಗಿ ಹೋಗಿದೆ ಎನ್ನುವದಕ್ಕೆ ಇದೊಂದು ಉದಾಹರಣೆ.

ಅದೇರೀತಿ ಕರ್ನಾಟಕ ರಾಜ್ಯದ ಆಡಳಿತ ಕೇಂದ್ರವಾಗಿರುವ ವಿಧಾನಸೌಧ, ವಿಕಾಸಸೌಧ, ಬಹುಮಹಡಿಗಳ ಕಟ್ಟಡ ಇತ್ಯಾದಿ ಸಚಿವಾಲಯಗಳಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಸಿಬ್ಬಂದಿಗಳ ಸಂಖ್ಯೆ 3885 ಜನ, ಅದರಲ್ಲಿ ಕೇವಲ 37 ಜನ ಮಾತ್ರ ಹೈ-ಕ ಪ್ರದೇಶದ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ, ಶೆ 1 ಕ್ಕಿಂತ ಕಡಿಮೆ ನೌಕರರು ಹೈ-ಕ ಭಾಗದವರು. ಈ ಎಲ್ಲ ಕಾರಣಗಳಿಂದಾಗಿ ಸಂವಿಧಾನದ ಅನುಚ್ಛೇದ 371 ತಿದ್ದುಪಡಿಗಾಗಿ ಬಹುದಿನಗಳ ಕಾಲ ಸುದೀರ್ಘ ಹೋರಾಟ ನಡೆದು, ಕೊನೆಗೂ ಡಿಸೆಂಬರ್ 2012ರಲ್ಲಿ ಅನುಚ್ಛೇದ 371ರ ತಿದ್ದುಪಡಿಯ ಮೂಲಕ ಹೈದ್ರಾಬಾದ ಕರ್ನಾಟಕವನ್ನು ಸಂವಿಧಾನದ ಅನುಚ್ಛೇದ 371ಜೆ ಅಡಿಯಲ್ಲಿ ಸೇರಿಸಲಾಯಿತು.

ಕಳೆದ ಆರು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ, ಅದರಂತೆ ಹೈದ್ರಾಬಾದ ಕರ್ನಾಟಕದಲ್ಲಿಯೂ ಬದಲಾವಣೆಗಳಾಗುತ್ತಿವೆ. ಆದರೆ, ಅನುಚ್ಛೇದ 371ಜೆ ಈ ಭಾಗಕ್ಕೆ ಬಂದಿರುವ ಸಂವಿಧಾನಬದ್ದ ಹಕ್ಕು ಎನ್ನುವುದನ್ನು ಮರೆತಿರುವ ಸರಕಾರ ಮತ್ತು ನಾವು ಬಂದಷ್ಟು ಬಂತು ಪಂಚಾಮೃತವೆಂದು ಬಳಸುತ್ತಿದ್ದೇವೆ. ಕನಿಷ್ಠ ಒಂದು 371ಜೆ ಅರ್ಹತಾ ಪ್ರಮಾಣಪತ್ರವೂ ಸಹ ಹಕ್ಕುಬದ್ಧವಾಗಿ ಪಡೆಯಲು ಸಾಧ್ಯವಾಗದೇ ಕಚೇರಿಯಿಂದ ಕಚೇರಿಗೆ ಅಲೆಯುತ್ತ ಮೂರು-ಮೂರು ತಿಂಗಳಾದರೂ ಪಡೆಯದೇ ಕೊರಗುವಂತಾಗಿದೆ ನಮ್ಮ ಪರಿಸ್ಥಿತಿ. ಇದಕ್ಕೆ ಮೂಲಕಾರಣ, ನಮ್ಮ ಭಾಗದ ವಿದ್ಯಾವಂತ ಜನ 371ಜೆ ಕಾನೂನನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿರುವುದು ಮತ್ತು ಯಾವುದೇ ಕಾನೂನು ನಮ್ಮ ದೇಶದಲ್ಲಿ ಸಮರ್ಪಕವಾಗಿ ಜಾರಿಯಾಗಬೇಕೆಂದರೆ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದರಲ್ಲಿರುವ ಪ್ರತಿಯೊಂದು ಅಂಶವೂ ಮನವರಿಕೆ ಮಾಡಿಕೊಂಡಾಗ ಮಾತ್ರ ಸಾಧ್ಯವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BREAKING NEWS: ಉನ್ನಾವೋ ಅತ್ಯಾಚಾರ: ಸೆಂಗಾರ್ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

2017 ರ ಉನ್ನಾವೋ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು...

‘ಲವ್ ಜಿಹಾದ್’ ಆರೋಪ: ಬರೇಲಿಯಲ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ಹಿಂಸಾಚಾರಕ್ಕೆ ತಿರುಗಿಸಿದ ಬಜರಂಗದಳ 

ಬರೇಲಿಯ ಕೆಫೆಯೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯ ಹುಟ್ಟುಹಬ್ಬದ ಆಚರಣೆಯಾಗಿ ಆರಂಭವಾದ ಸಂಭ್ರಮ, ಶನಿವಾರ ಬಜರಂಗದಳ ಸದಸ್ಯರು ಸ್ಥಳಕ್ಕೆ ನುಗ್ಗಿ, ಅತಿಥಿಗಳ ಮೇಲೆ ಹಲ್ಲೆ ನಡೆಸಿ, ಅಲ್ಲಿದ್ದ ಇಬ್ಬರು ಮುಸ್ಲಿಂ ಹುಡುಗರನ್ನು "ಲವ್ ಜಿಹಾದ್" ಎಂದು...

ಉನ್ನಾವೋ ಅತ್ಯಾಚಾರ: ಕುಲದೀಪ್ ಸೆಂಗಾರ್ ಶಿಕ್ಷೆ ಅಮಾನತು ಪ್ರಶ್ನಿಸಿದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ನ ಜೀವಾವಧಿ ಶಿಕ್ಷೆ ಅಮಾನತ್ತಿನಲ್ಲಿಟ್ಟಿರುವುದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು (ಡಿ.29) ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ...

ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ : ಓರ್ವ ಪ್ರಯಾಣಿಕ ಸಾವು

ಆಂಧ್ರ ಪ್ರದೇಶದ ಅನಕಪಲ್ಲಿ ಜಿಲ್ಲೆಯ ಎಲಮಂಚಿಲಿ ಬಳಿ ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನ ಎರಡು ಬೋಗಿಗಳಲ್ಲಿ ಸೋಮವಾರ (ಡಿ.29) ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅನಕಪಲ್ಲಿ ಪೊಲೀಸ್ ವರಿಷ್ಠಾಧಿಕಾರಿ...

ಉಸ್ಮಾನ್ ಹಾದಿ ಹತ್ಯೆ : ಇಬ್ಬರು ಪ್ರಮುಖ ಶಂಕಿತರು ಮೇಘಾಲಯ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದ ಬಾಂಗ್ಲಾ ಪೊಲೀಸರು

ಬಾಂಗ್ಲಾದೇಶದ ರಾಜಕೀಯ ಕಾರ್ಯಕರ್ತ ಉಸ್ಮಾನ್ ಹಾದಿ ಹತ್ಯೆಯ ಇಬ್ಬರು ಪ್ರಮುಖ ಶಂಕಿತರು ಮೇಘಾಲಯ ಗಡಿಯ ಮೂಲಕ ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಢಾಕಾ ಮೆಟ್ರೋಪಾಲಿಟನ್ ಪೊಲೀಸರು (ಡಿಎಂಪಿ) ತಿಳಿಸಿದ್ದಾರೆ ಎಂದು ದಿ ಡೈಲಿ...

ರಾಷ್ಟ್ರಪಿತನ‌ ಹೆಸರನ್ನೇ ಅಳಿಸುವ ಪಿತೂರಿಯನ್ನು ಸೋಲಿಸೋಣ : ಸಿಎಂ ಸಿದ್ದರಾಮಯ್ಯ

ನರೇಗಾ ಯೋಜನೆಗೆ ಮರುನಾಮಕರಣದ ಮೂಲಕ ರಾಷ್ಟ್ರಪಿತನ ಹೆಸರನ್ನೇ ಅಳಿಸಲು ಹೊರಟಿರುವ ಪ್ರಯತ್ನವನ್ನು ವಿಫಲಗೊಳಿಸಬೇಕು. ಗ್ರಾಮೀಣ ಆರ್ಥಿಕತೆಯನ್ನೇ ಹಾಳು ಮಾಡುವ ಹುನ್ನಾರ ಬಿಜೆಪಿಯದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿಯ ಭಾರತ್...

ವಿದ್ಯಾರ್ಥಿಗಳ ಪ್ರತಿಭಟನೆ: ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿ ಇರಿಸಿದ ಜಮ್ಮು-ಕಾಶ್ಮೀರ ಪೊಲೀಸರು

ಸರ್ಕಾರ ಮೀಸಲಾತಿ ನೀತಿಯನ್ನು ತರ್ಕಬದ್ಧಗೊಳಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಜೆ & ಕೆ ವಿದ್ಯಾರ್ಥಿಗಳು ಪ್ರತಿಭಟನೆ ಘೋಷಿಸುತ್ತಿದ್ದಂತೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಸಂಸದ ಮತ್ತು ಪೀಪಲ್ಸ್...

ಆರ್‌ಎಸ್‌ಎಸ್‌-ಬಿಜೆಪಿ ಸಂಘಟನಾ ಶಕ್ತಿ ಶ್ಲಾಘಿಸಿದ ದಿಗ್ವಿಜಯ ಸಿಂಗ್‌ಗೆ ಶಶಿ ತರೂರ್‌ ಬೆಂಬಲ : ಪವನ್‌ ಖೇರಾ ತಿರುಗೇಟು

ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಆರ್‌ಎಸ್‌ಎಸ್‌ನ ಸಂಘಟನಾ ಶಕ್ತಿಯನ್ನು ಶ್ಲಾಘಿಸಿ ಹೇಳಿಕೆ ನೀಡಿರುವುದು ಪಕ್ಷದೊಳಗೆ ಮುಜುಗರ, ಅಸಮಾಧಾನ ಮತ್ತು ಅಪಸ್ವರಕ್ಕೆ ಕಾರಣವಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಸಿಂಗ್ ಹೇಳಿಕೆಯನ್ನು ಕಾಂಗ್ರೆಸ್‌...

ಕೋಗಿಲು ಬಳಿ ಒತ್ತುವರಿ ತೆರವು: ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಹೈಕಮಾಂಡ್: ಪರಿಹಾರ ಕ್ರಮ ಜಾರಿಗೆ ತರುವಂತೆ ಸಿಎಂ, ಡಿಸಿಎಂಗೆ ಒತ್ತಾಯ 

ಬೆಂಗಳೂರು ಉತ್ತರದ ಕೋಗಿಲು ಲೇಔಟ್ ಬಳಿ ನಡೆದ ಮನೆಗಳ ತೆರವು ಪ್ರಕರಣ ಇದೀಗ ಕಾಂಗ್ರೆಸ್ ಪಕ್ಷದೊಳಗೆ ಬಿರುಕಿಗೂ ಕಾರಣವಾಗಿದೆ. ಮನೆಗಳ ತೆರವು ವಿಚಾರ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಆಡಳಿತ ಪಕ್ಷಕ್ಕೆ ಅಹಿತಕರವಾಗಿ ಪರಿಣಮಿಸುತ್ತಿದ್ದಂತೆಯೇ...

ಛತ್ತೀಸ್‌ಗಢ : ಹಿಂಸಾಚಾರಕ್ಕೆ ತಿರುಗಿದ ಕಲ್ಲಿದ್ದಲು ಗಣಿ ವಿರೋಧಿ ಹೋರಾಟ : ಹಲವು ಪೊಲೀಸರಿಗೆ ಗಾಯ, ವಾಹನಗಳಿಗೆ ಬೆಂಕಿ

ಛತ್ತೀಸ್‌ಗಢದ ರಾಯ್‌ಗಢ ಜಿಲ್ಲೆಯ ತಮ್ನಾರ್ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯನ್ನು ವಿರೋಧಿಸಿ ಶನಿವಾರ (ಡಿ.27) ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದು, ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ ಎಂಟು ಜನರು ಗಾಯಗೊಂಡಿದ್ದಾರೆ ಮತ್ತು...