2021ರಲ್ಲಿ ನಡೆಯಲಿರುವ ಅಸ್ಸಾಂನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ರವರು ಕಣಕ್ಕಿಳಿಯಲಿದ್ದಾರೆ ಎಂಬ ಊಹಾಪೋಹಗಳಿಗೆ ಸ್ವತಃ ಅವರೆ ತೆರೆಎಳೆದಿದ್ದು, ನನಗೆ ಅಂತಹ ಬಯಕೆಯಿಲ್ಲ ಎಂದು ಗೊಗೊಯ್ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ನ ತರುಣ್ ಗೊಗೊಯ್ರವರು “ತಮಗಿರುವ ಆಂತರೀಕ ಮಾಹಿತಿಗಳ ಪ್ರಕಾರ ಬಿಜೆಪಿಯು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಜಿ ಸಿಜೆಐ ರಂಜನ್ ಗೊಗೊಯ್ರವರನ್ನು ಕಣಕ್ಕಿಳಿಸಲಿದೆ” ಎಂಬ ಹೇಳಿಕೆ ನೀಡಿದ ನಂತರ ಹಲವು ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಆ ರೀತಿಯ ಆಕಾಂಕ್ಷೆಗಳನ್ನು ಇಟ್ಟುಕೊಳ್ಳಲು ನಾನು ರಾಜಕಾರಣಿಯಲ್ಲ. ಯಾರೂ ಕೂಡ ನಾನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಹೆಸರಿಸಿಲ್ಲ ಎಂದು ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಗೊಗೊಯ್ ತಿಳಿಸಿದ್ದಾರೆ.
ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಅವಕಾಶವೆಂದು ಭಾವಿಸಿ ರಾಜ್ಯಸಭಾ ಸದಸ್ಯತ್ವನ್ನು ಒಪ್ಪಿಕೊಂಡೆ. ನಾನು ಪ್ರಜ್ಞಾಪೂರ್ವಕವಾಗಿಯೇ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ನಾಮಕರಣವನ್ನು ಆರಿಸಿಕೊಂಡೆ. ಏಕೆಂದರೆ ಅದು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ನೀಡುತ್ತದೆ. ಅಂದ ಮಾತ್ರಕ್ಕೆ ನಾನು ರಾಜಕಾರಣಿಯೇ ಎಂದು ಅವರು ಪ್ರಶ್ನಿಸಿದ್ದಾರೆ.
ರಂಜನ್ ಗೊಗೊಯ್ರವರು ನವೆಂಬರ್ 17, 2019ರಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿಯಾಗಿದ್ದರು. ಅದಾದ ನಾಲ್ಕು ತಿಂಗಳಿನಲ್ಲಿಯೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ರವರು ಅವರನ್ನು ರಾಜ್ಯಸಭಾ ಸ್ಥಾನಕ್ಕೆ ನಾಮಕರಣ ಮಾಡಿದ್ದರು. ಆ ಸಮಯದಲ್ಲಿ ಗೊಗೊಯ್ರವರು ‘ಇದು ನ್ಯಾಯಾಂಗದ ಆಶಯಗಳನ್ನು ಸಂಸತ್ತಿನಲ್ಲಿಯೂ ಮತ್ತು ಸಂಸತ್ತಿನ ಆಶಯಗಳನ್ನು ನ್ಯಾಯಾಲಯದಲ್ಲಿಯೂ ವ್ಯಕ್ತಪಡಿಸಲು ಇದು ಉತ್ತಮ ಅವಕಾಶ’ ಎಂದಿದ್ದರು. ಆದರೆ ಹಲವು ರಾಜಕಾರಣಿಗಳು ಮತ್ತು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರು ಈ ನಡೆಯನ್ನು ಟೀಕಿಸಿದ್ದರು. ಅದರಲ್ಲಿ ಮದನ್ ಲೋಕುರ್ ಮತ್ತು ಕುರಿಯನ್ ಜೋಸೆಫ್ ಬಹಿರಂಗವಾಗಿಯೇ ಗೊಗೊಯ್ ನಾಮಕರಣವನ್ನು ವಿರೋಧಿಸಿದ್ದರು.
‘ರಂಜನ್ ಗೊಗೊಯ್ರವರು ಅಯೋಧ್ಯೆ ವಿಷಯವಾಗಿ ಬಿಜೆಪಿ ಪರವಾಗಿ ತೀರ್ಪು ನೀಡಿದ ಪರಿಣಾಮವಾಗಿ ಅವರಿಗೆ ರಾಜ್ಯಸಭಾ ಸದಸ್ಯತ್ವ ನೀಡಲಾಗಿದೆ. ಇನ್ನು ಮುಂದೆಯೂ ಸಹ ಅವರನ್ನು ಹಂತ ಹಂತವಾಗಿ ಪಕ್ಷದಲ್ಲಿ ಮೇಲಿನ ಸ್ಥಾನಗಳಿಗೆ ನೇಮಿಸಲಾಗುತ್ತದೆ’ ಎಂದು ತರುಣ್ ಗೊಗೊಯ್ ಆರೋಪಿಸಿದ್ದಾರೆ.
ತರುಣ್ ಗೊಗೊಯ್ಯವರ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಬಿಜೆಪಿ ಅಸ್ಸಾಂ ರಾಜ್ಯಾಧ್ಯಕ್ಷ ರಂಜಿತ್ ದಾಸ್ ಹೇಳಿದ್ದಾರೆ.
ಇದನ್ನೂ ಓದಿ: ನ್ಯಾಯಾಂಗ ನಿಂದನೆ: ಸ್ವರ ಭಾಸ್ಕರ್ ವಿರುದ್ಧದ ವಿಚಾರಣೆ ಅರ್ಜಿ ತಿರಸ್ಕಾರ!