“ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ತೆಗೆದುಹಾಕುತ್ತದೆ. ಕನಿಷ್ಠ ಬೆಂಬಲ ಬೆಲೆ, ಆಹಾರ ಸಂಗ್ರಹಣೆ ಮತ್ತು ಸಗಟು ವ್ಯಾಪಾರಗಳು ದೇಶದ ಮೂರು ಸ್ತಂಭಗಳಿದ್ದಂತೆ. ಪ್ರಧಾನಿ ನರೇಂದ್ರ ಮೋದಿ ಈ ವ್ಯವಸ್ಥೆಯನ್ನು ನಾಶಪಡಿಸುತ್ತಿದ್ದಾರೆ” ಎಂದು ಪಂಜಾಬ್ ರೈತರು ನಡೆಸುತ್ತಿರುವ 3 ದಿನಗಳ ಟ್ರ್ಯಾಕ್ಟರ್ ರ್ಯಾಲಿಯನ್ನು ಉದ್ಘಾಟಿಸುತ್ತಾ ಹೇಳಿದರು.
“ಬಿಜೆಪಿಯ ಏಕೈಕ ಗುರಿ ಕನಿಷ್ಠ ಬೆಂಬಲ ಬೆಲೆ ಮತ್ತು ಆಹಾರ ಸಂಗ್ರಹಣೆಯನ್ನು ನಾಶಪಡಿಸುವುದೇ ಆಗಿದೆ. ಆದರೆ ಎಂದಿಗೂ ಇದನ್ನು ಮಾಡಲು ಕಾಂಗ್ರೆಸ್ ಬಿಡುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಈ ಕರಾಳ ಕಾಯ್ದೆಗಳನ್ನು ತೆಗೆದುಹಾಕುತ್ತದೆ ಎಂಬುದನ್ನು ನಾನು ಖಾತರಿಪಡಿಸುತ್ತೇನೆ. ನಾವು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹೋರಾಡಿ ಈ ಕರಾಳ ಕಾನೂನುಗಳನ್ನು ತೆಗೆದುಹಾಕುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿ: ಕೃಷಿ ಕಾನೂನುಗಳು ನಮ್ಮ ರೈತರನ್ನು ಗುಲಾಮರನ್ನಾಗಿಸುತ್ತವೆ: ರಾಹುಲ್ ಗಾಂಧಿ
ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಗಳನ್ನು ಐತಿಹಾಸಿಕ ಸುಧಾರಣೆಗಳು ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ, “ಬಿಜೆಪಿಯು ತನ್ನ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳಲು ರೈತರನ್ನು ಮರಳುಮಾಡುತ್ತಿದೆ” ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನೂ ಓದಿ: Explainer: ಕೃಷಿ ಮಸೂದೆಗಳಿಂದ ರೈತರಿಗೆ ಲಾಭವಾಗಲಿದೆಯೇ?
ದೇಶದಾದ್ಯಂತ ರೈತರ ಪ್ರತಿಭಟನೆಗಳು ನಡೆಯುತ್ತಿದ್ದು, ಪಂಜಾಬ್ನಲ್ಲಿ ಇನ್ನೂ ತೀವ್ರವಾಗಿ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿಯೂ ಸುಮಾರು 39 ದಲಿತ, ಕಾರ್ಮಿಕ ಮತ್ತು ರೈತ ಸಂಘಟನೆಗಳು ಸೇರಿ ಐಕ್ಯ ಹೊರಾಟವನ್ನು ಮಾಡುತ್ತಿವೆ. ಇದರ ಭಾಗವಾಗಿ ಕಳೆದ ತಿಂಗಳು ಭಾರತ್ ಬಂದ್ ಮಾಡಲಾಗಿತ್ತು. ಸೆ. 28ರಂದು ಕರ್ನಾಟಕ ಬಂದ್ ಕೂಡಾ ಯಶಸ್ವಿಯಾಗಿತ್ತು.
ಕೇಂದ್ರ ಸರ್ಕಾರದ ರೈತವಿರೋಧಿ ಕಾನೂನುಗಳನ್ನು ವಿರೋಧಿಸಿ, ಅಕಾಲಿ ಶಿರೋಮಣಿ ದಳದ ಹರ್ಸಿಮ್ರತ್ ಕೌರ್ ಬಾದಲ್ ಕಳೆದ ತಿಂಗಳು ಸಚಿವ ಸಂಪುಟಕ್ಕೆ ರಾಜಿನಾಮೆ ನೀಡಿದ್ದರು.
ಇದನ್ನೂ ಓದಿ: ರೈತರು ಮೋದಿ ಸರ್ಕಾರದ ಅಹಂಕಾರವನ್ನು ಮಟ್ಟಹಾಕುತ್ತಾರೆ: ಪ್ರತಿಭಟನಾ ನಿರತ ರೈತರು
ವಿವಾದಾತ್ಮಕ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಅಕ್ಟೋಬರ್ 4 ರಿಂದ 6 ರವರೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪಂಜಾಬ್ ಮತ್ತು ಹರಿಯಾಣದಲ್ಲಿ ಟ್ರ್ಯಾಕ್ಟರ್ ರ್ಯಾಲಿಗಳನ್ನು ನಡೆಸಲಿದ್ದಾರೆ. ಇದಕ್ಕೂ ಮೊದಲು ಅಕ್ಟೋಬರ್ 3 ರಿಂದ 5ರವರೆಗೆ ರ್ಯಾಲಿ ನಿರ್ಧರಿಸಲಾಗಿತ್ತು.
ಟ್ರ್ಯಾಕ್ಟರ್ ರ್ಯಾಲಿಗಳಿಗೆ ರೈತರ ಸಂಘಟನೆಗಳು ಬೆಂಬಲ ನೀಡಲಿದ್ದು, ಮೂರು ದಿನಗಳಲ್ಲಿ 50 ಕಿ.ಮೀ ಗಿಂತಲೂ ಹೆಚ್ಚು ದೂರ ಕ್ರಮಿಸಲಿದೆ. ರ್ಯಾಲಿಗಳು ಪ್ರತಿದಿನ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಕೊವೀಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ ಎಂದು ಪಂಜಾಬ್ ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಕೃಷಿ ಮಸೂದೆಗಳು ಹೇಳುವುದೇನು..?: ವಿರೋಧಕ್ಕೆ ಕಾರಣಗಳೇನು..?