ಕೇಂದ್ರ ಸರ್ಕಾರವು ಮಂಗಳವಾರ ಸಂಜೆ ಭಯೋತ್ಪಾದಕ ಚಟುವಟಿಕೆಗಳ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಅದರ ಅಂಗಸಂಘಟನೆಗಳನ್ನು 5 ವರ್ಷ ನಿಷೇಧಿಸಿರುವುದರ ಕುರಿತು ಪ್ರತಿಕ್ರಿಯಿಸಿರುವ ಕೇರಳದ ಮಲಪ್ಪುರಂ ಸಂಸದ ಕೋಡಿಕುನ್ನಿಲ್ ಸುರೇಶ್, RSS ಅನ್ನು ಕೂಡ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪಿಎಫ್ಐ ಒಂದನ್ನೇ ಬ್ಯಾನ್ ಮಾಡಿದರೆ ಪರಿಹಾರ ಸಿಗುವುದಿಲ್ಲ. ಆರ್ಎಸ್ಎಸ್ ಅನ್ನು ಸಹ ಬ್ಯಾನ್ ಮಾಡಬೇಕು. ಏಕೆಂದರೆ ಆರ್ಎಸ್ಎಸ್ ಸಹ ಇಡೀ ದೇಶಾದ್ಯಂತ ಹಿಂದೂ ಕೋಮುವಾದವನ್ನು ಹರಡುತ್ತಿದೆ. ಆರ್ಎಸ್ಎಸ್ ಮತ್ತು ಪಿಎಫ್ಐ ಎರಡೂ ಸಹ ಸಮಾನವಾಗಿದ್ದು ಎರಡನ್ನು ನಿಷೇಧಿಸಬೇಕು, ಆದರೆ ಕೇವಲ ಪಿಎಫ್ಐ ಅನ್ನು ನಿಷೇಧಿಸುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
Kerala | We demand for RSS also to get banned. #PFIban is not a remedy, RSS is also spreading Hindu communalism throughout the country. Both RSS & PFI are equal, so govt should ban both. Why only PFI?: Kodikunnil Suresh, Congress MP & Lok Sabha Chief Whip, in Malappuram pic.twitter.com/nzCVTImWw4
— ANI (@ANI) September 28, 2022
ಕೇರಳದ ಆಡಳಿತರೂಡ ಪಕ್ಷ ಸಿಪಿಎಂ ಸಹ ಆರ್ಎಸ್ಎಸ್ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿದೆ. “ಬಹುಸಂಖ್ಯಾತ ಕೋಮುವಾದ ಮತ್ತು ಅಲ್ಪಸಂಖ್ಯಾತ ಕೋಮುವಾದ ಸಹ ಸಮಾನವಾಗಿ ಅಪಾಯಕಾರಿಯಾಗಿವೆ” ಎಂದು ಪಕ್ಷ ಹೇಳಿದೆ.
ಎಲ್ಲಾ ರೀತಿಯ ಕೋಮುವಾದಗಳು ಅಪಾಯಕಾರಿ. ಸಂಘಟನೆಯನ್ನು ನಿಷೇಧಿಸುವುದರಿಂದ ಅದರ ಸಿದ್ಧಾಂತ ಕೊನೆಗೊಳ್ಳುವುದಿಲ್ಲ. ಅವರು ಹೊಸ ಹೆಸರು ಅಥವಾ ಗುರುತಿನೊಂದಿಗೆ ಹಿಂತಿರುಗುತ್ತಾರೆ. ನೀವು ಎಲ್ಲಾ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸುವ ತರ್ಕವನ್ನು ಅನುಸರಿಸಿದರೆ, RSS ಮೊದಲು ಬರುತ್ತದೆ. ಅದನ್ನೂ ನಿಷೇಧಿಸಲಾಗುವುದೇ?” ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಪ್ರಶ್ನಿಸಿದ್ದಾರೆ.
ಸಮಾಜದಲ್ಲಿ ದ್ವೇಷವನ್ನು ಹರಡಲು ಆರ್ಎಸ್ಎಸ್ ಸಮಾನ ಜವಾಬ್ದಾರಿಯನ್ನು ಹೊಂದಿದೆ ಮತ್ತು ಇದು ದೇಶದಲ್ಲಿ ಅನೇಕ ಹಿಂಸಾತ್ಮಕ ಘಟನೆಗಳ ಹಿಂದೆ ಇದರ ಪಾತ್ರವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಪಿಎಫ್ಐ ಸಂಘಟನೆ ಮೇಲಿನ ನಿಷೇಧವನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ವಾಗತಿಸಿದ್ದಾರೆ. “ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ. ನರೇಂದ್ರ ಮೋದಿಯವರು ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ಇಂಥವುಗಳಿಗೆ ಎಡೆಯಿಲ್ಲ ಎಂಬ ನಿರ್ಣಯ ಸ್ಪಷ್ಟವಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.
ಪಿ.ಎಫ್.ಐ ಸಂಘಟನೆಯ ಬಹಳಷ್ಟು ಜನ ಪ್ರಮುಖರು ಗಡಿಯಾಚೆ ಹೋಗಿ ತರಬೇತಿ ಪಡೆದವರಿದ್ದಾರೆ. ಅವರು ಅಲ್ಲಿಂದಲೇ ಕಾರ್ಯಾಚರಣೆ ಮಾಡುತ್ತಿದ್ದು, ಸಂಸ್ಥೆ ಹಲವಾರು ವರ್ಷ, ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದೆ. ಕರ್ನಾಟಕದಾದ್ಯಂತ ವಿಧ್ವಂಸಕ ಕೃತ್ಯಗಳನ್ನು ನಡೆಸಿರುವುದು ಜಗಜ್ಜಾಹೀರಾಗಿದೆ. ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವಂತೆ ಎಲ್ಲಾ ರಾಜ್ಯಗಳ ಜನ ಒಕ್ಕೊರಲಿನಿಂದ ಬೇಡಿಕೆ ಇಟ್ಟಿದ್ದಾರೆ. ವಿರೋಧಪಕ್ಷದವರೂ, ಸಿಪಿಐ, ಕಾಂಗ್ರೆಸ್, ಸಿ.ಪಿ.ಎಂ ಎಲ್ಲರೂ ಕೂಡ ಪಿ.ಎಫ್.ಐ ನಿಷೇಧಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಹಾಗಾಗಿ ನಿಷೇಧಿತ ಸಂಸ್ಥೆಗಳೊಂದಿಗೆ ಯಾರೂ ಸಂಪರ್ಕ ಅಥವಾ ನಂಟನ್ನು ಇಟ್ಟುಕೊಳ್ಳಬಾರದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಪಿಎಫ್ಐ ಜೊತೆಗೆ, ಅದರ ಸಹವರ್ತಿ ಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್(NWF), ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರೆಹಬ್ ಫೌಂಡೇಶನ್-ಕೇರಳ ಸಂಘಟನೆಗಳನ್ನು ಕೂಡಾ ನಿಷೇಧಿಸಲಾಗಿದೆ.
ಇದನ್ನೂ ಓದಿ: ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳಿಗೆ ಐದು ವರ್ಷಗಳ ನಿಷೇಧ