ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಬಿಹಾರದ ತಮ್ಮ ಬೆಗುಸರಾಯ್ ಲೋಕಸಭಾ ಕ್ಷೇತ್ರದ ಜನರಿಗೆ, ’ನಿಮ್ಮ ಅಹವಾಲುಗಳಿಗೆ ಸ್ಪಂದಿಸದ ಅಧಿಕಾರಿಗಳನ್ನು ಬಿದಿರಿನ ಕೋಲುಗಳಿಂದ ಹೊಡೆಯಿರಿ’ ಎಂದು ಸಲಹೆ ನೀಡಿದ್ದಾರೆ.
ಬೆಗುಸಾರಾಯ್ನಲ್ಲಿ ಕೃಷಿ ಸಂಸ್ಥೆ ಆಯೋಜಿಸಿದ್ದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸಚಿವರು ಈ ಹೇಳಿಕೆ ನೀಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದ್ದು, ಎಎನ್ಐ ಈ ಕುರಿತ ವಿಡಿಯೊವನ್ನು ಟ್ವೀಟ್ ಮಾಡಿದೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆಗಳನ್ನು ಹೊಂದಿರುವ ಸಚಿವರು, ’ಸಾಮಾನ್ಯ ನಾಗರಿಕರು ಆಗಾಗ್ಗೆ ನನಗೆ ದೂರುಗಳನ್ನು ನೀಡುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ದೂರುಗಳಿಗೆ ಸ್ವಲ್ಪವೂ ಗಮನ ಹರಿಸುತ್ತಿಲ್ಲ ಎಂದು ಜನಸಾಮಾನ್ಯರು ಆರೋಪಿಸುತ್ತಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ: ಟಿಎಂಸಿ ಅಭ್ಯರ್ಥಿಗಳ ಪಟ್ಟಿ: ಮಹಿಳೆಯರಿಗೆ ಆದ್ಯತೆ, 114 ಹೊಸಮುಖಗಳು, ಎಸ್ಸಿ-ಎಸ್ಟಿಗೆ ಒತ್ತು
#WATCH | If someone (any government official) doesn't listen to your grievances, hit them with a bamboo stick. Neither we ask them to do any illegitimate job, nor will we tolerate illegitimate 'nanga nritya' by any official: Union Minister Giriraj Singh in Begusarai, Bihar pic.twitter.com/Wxc6TlHiYC
— ANI (@ANI) March 6, 2021
“ನಾನು ಜನರಿಗೆ ಹೇಳುತ್ತೇನೆ, ಇಂತಹ ಸಣ್ಣ ವಿಷಯಗಳಿಗಾಗಿ ನೀವು ನನ್ನ ಬಳಿಗೆ ಏಕೆ ಬರುತ್ತೀರಿ? ಸಂಸದರು, ಶಾಸಕರು, ಗ್ರಾಮದ ಮುಖ್ಯಸ್ಥರು, ಡಿಸಿಗಳು, ಉಪ ಡಿಸಿಗಳು, ಬಿಡಿಒಗಳ ಬಳಿಗೆ ಹೋಇ, ಇವರೆಲ್ಲರೂ ಜನರ ಸೇವೆ ಮಾಡುವ ಜವಾಬ್ದಾರಿಯಲ್ಲಿದ್ದಾರೆ. ಅವರು ನಿಮ್ಮ ಮಾತನ್ನು ಕೇಳದಿದ್ದರೆ, ಎರಡೂ ಕೈಗಳಿಂದ ಬಿದಿರಿನ ಕೋಲನ್ನು ತೆಗೆದುಕೊಂಡು ಅವರ ತಲೆಯ ಮೇಲೆ ಬಲವಾದ ಏಟು ನೀಡಿ’ ಎಂದು ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
“ಅದು ಸಹ ಕೆಲಸ ಮಾಡದಿದ್ದರೆ, ಈ ಗಿರಿರಾಜ್ ಸಿಂಗ್ ನಿಮ್ಮ ಜೊತೆ ಬರುತ್ತಾನೆ” ಎಂದು ಅವರು ಹೇಳಿದ್ದಾರೆ. ಇದಕ್ಕೆ ಕಾರ್ಯಕ್ರಮದಲ್ಲಿದ್ದ ಜನರು ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ. ವೇದಿಕೆಯಲ್ಲಿದ್ದ ಗಣ್ಯರು ತಮ್ಮ ಆಸನಗಳಲ್ಲಿ ಕುಳಿತು ಸುಮ್ಮನೇ ಗಿರಿರಾಜ್ ಸಿಂಗ್ ಮಾತುಗಳನ್ನು ಕೇಳುತ್ತಿದ್ದರು.
ಘಟನೆಗೆ ಪ್ರತಿಕ್ರಿಯಿಸಿರುವ ಬಿಹಾರ ಬಿಜೆಪಿ ಮುಖಂಡರೊಬ್ಬರು, “ಗಿರಿರಾಜ್ ಸಿಂಗ್ ಅವರು ಸಾರ್ವಜನಿಕ ಕೋಪಕ್ಕೆ ಸ್ಪಂದಿಸಬೇಕಾದ ಸಾಮೂಹಿಕ ನಾಯಕರಾಗಿದ್ದಾರೆ. ಅವರ ಹೇಳಿಕೆಯನ್ನು ನಾವು ಸಾಂಕೇತಿಕವಾಗಿ ತೆಗೆದುಕೊಳ್ಳಬೇಕು, ಅಕ್ಷರಶಃ ಅಲ್ಲ” ಎಂದು ಹೇಳಿದ್ದಾರೆ.
ಇಂತಹ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಗಿರಿರಾಜ್ ಸಿಂಗ್ ಹೆಸರು ಹಲವು ಬಾರಿ ಬಂದಿದ್ದು, ಈ ಹಿಂದೆ ಅವರು ಹಲವು ಸಲ ಕೋಮು ಪ್ರಚೋದನೆಯ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸಿದ್ದರು.
ಇದನ್ನೂ ಓದಿ: ತಮ್ಮ ವಿರುದ್ಧ ವಿಡಿಯೋ ಪ್ರಸಾರ ಮಾಡದಂತೆ ಕೋರ್ಟ್ಗೆ ಹೋಗಿದ್ದೇಕೆ?: ಸಚಿವ ಸುಧಾಕರ್ ಸ್ಪಷ್ಟನೆ