ಕೇಂದ್ರ ಸರ್ಕಾರ ಹಾಗೂ ವ್ಯವಸ್ಥೆಯ ವಿರುದ್ಧ ಆಗಾಗ ವಾಗ್ದಾಳಿ ನಡೆಸುವ ಬಹು ಭಾಷಾ ನಟ ಕಿಶೋರ್ ಕುಮಾರ್ ಅವರು ಇದೀಗ ಜಿ-20 ಶೃಂಗಸಭೆಯ ವಿಚಾರದಲ್ಲಿ ಮಾಡಿರುವ ಭ್ರಷ್ಟಾಚಾರದ ಕುರಿತು ಕಿಡಿಕಾರಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ 18ನೇ ಜಿ-20 ಶೃಂಗಸಭೆಗೆ ಕೇಂದ್ರ ಸರಕಾರ ಸಾವಿರಾರು ಕೋಟಿ ಖರ್ಚು ಮಾಡಿದೆ ಎನ್ನಲಾದ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಇನ್ಸ್ಟಾಗ್ರಾಮ್ನಲ್ಲಿ ನಟ ಕಿಶೋರ್ ಕುಮಾರ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಕಿಶೋರ್ ಕುಮಾರ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ”ಭ್ರಷ್ಟಾಚಾರದ ವಿಶ್ವಗುರು – ಜಿ 20 ಕ್ಕೆ ದೇಶ ಕೊಟ್ಟ ಬಜೆಟ್ – 900 ಕೋಟಿ. ಲೆಕ್ಕ ಕೊಟ್ಟದ್ದು – 4100 ಕೋಟಿ (ಶಾಶ್ವತ ಆಸ್ತಿ, ಸೌಕರ್ಯಗಳ ಹೆಸರಲ್ಲಿ) ಮಥುರಾ ರೋಡಿಗೆ ಕೊಟ್ಟ ಬಜೆಟ್ (ಕಿ. ಮೀ.ಗೆ) -18 ಕೋಟಿ, ಲೆಕ್ಕ ಕೊಟ್ಟದ್ದು (ಕಿ. ಮೀ.ಗೆ)- 256 ಕೋಟಿ. ಅದಾನಿ ಹೆಸರಲ್ಲಿ ಇನ್ನೆಷ್ಟೊ..??”ಎಂದು ಕೇಂದ್ರಕ್ಕೆ ಪ್ರಶ್ನೆ ಮಾಡಿದ್ದಾರೆ.
View this post on Instagram
”ಇಲ್ಲಿ ನುಂಗಿದ ಹಣದ 10% ಈ ಸ್ಲಮ್ಮುಗಳಿಗೆ ಖರ್ಚು ಮಾಡಿದ್ದರೆ ಪರದೆಯಲ್ಲಿ ಮುಚ್ಚುವ ಖರ್ಚು ಉಳಿಯುತ್ತಿರಲಿಲ್ಲವೇ?? ಸ್ಲಂ ವಾಸಿಗಳು ಮನುಷ್ಯರಲ್ಲವೇ? ಭಾರತೀಯರಲ್ಲವೇ? ಪ್ರಜೆಗಳ ಕೋಟಿ ಕೋಟಿ ಹಣ ಜೇಬಿಗೆ ಸೇರಿಸಿ ಪ್ರಶ್ನೆಗಳನ್ನೆದುರಿಸದೇ ಟಾಟಾ ಮಾಡಿ ಹೋದವರು, ಕೊರಳ ಪಟ್ಟಿ ಹಿಡಿದು ಪ್ರಶ್ನೆ ಕೇಳದೆ ಉಧೋ ಉಧೋ ಎನ್ನುತ್ತಾ ನಿಂತ ಮಾನಗೆಟ್ಟ ಮುಖ್ಯವಾಹಿನಿ ಮಾಧ್ಯಮಗಳು. ಇವರೆಲ್ಲರನ್ನೂ ಪ್ರಶ್ನಿಸದೆ ಬಾಯಿಮುಚ್ಚಿ ಕೂತರೆ ಇಡೀ ದೇಶಕ್ಕೇ ಪರದೆ ಹಾಕಬೇಕಾದೀತು ಎಚ್ಚರ” ಎಂದು ನಟ ಕಿಶೋರ್ ಕುಮಾರ್ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನಾವು ಹಿಂದೂಗಳಲ್ಲವೇ? ಇದಾವುದು ಹೊಸ ಧರ್ಮ, ಸನಾತನ??: ನಟ ಕಿಶೋರ್ ಕುಮಾರ್ ಪ್ರಶ್ನೆ