ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್ಪಿ) ಹಗರಣ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಲು ಬಯಸಿದರೆ ಅವರಿಗೆ ಮೂರು ದಿನಗಳ ಮುಂಗಡ ನೋಟಿಸ್ ನೀಡುವಂತೆ ಬಾಂಬೆ ಹೈಕೋರ್ಟ್ ಬುಧವಾರ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ.
ರಿಪಬ್ಲಿಕ್ ಟಿವಿ, ಎಲ್ಲಾ ರಿಪಬ್ಲಿಕ್ ಟಿವಿ ಚಾನೆಲ್ಗಳನ್ನು ನಡೆಸುವ ಎಆರ್ಜಿ ಔಟ್ಲೈಯರ್ ಮೀಡಿಯಾದ ಇತರ ಉದ್ಯೋಗಿಗಳು ಮತ್ತು ಇತರ ಟೆಲಿವಿಷನ್ ಚಾನೆಲ್ಗಳ ವಿರುದ್ಧದ ತನಿಖೆ 12 ವಾರಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
ಈ ಪ್ರಕರಣದಲ್ಲಿ ಹಲವಾರು ವಿನಾಯಿತಿಗಳನ್ನು ಕೋರಿ ಅರ್ನಾಬ್ ಗೋಸ್ವಾಮಿ ಮತ್ತು ಎಆರ್ಜಿ ಮೀಡಿಯಾ ಸಲ್ಲಿಸಿದ್ದ ಮನವಿಯನ್ನು, ನ್ಯಾಯಮೂರ್ತಿಗಳಾದ ಎಸ್.ಎಸ್ ಶಿಂಧೆ ಮತ್ತು ಮನೀಶ್ ಪಿತಾಲೆ ಅವರ ನ್ಯಾಯಪೀಠ ವಿಚಾರಣೆ ನಡೆಸಿತು.
ಇದನ್ನೂ ಓದಿ: ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ ಟ್ವೀಟ್ ಅನ್ನು ‘ಲೈಕ್’ ಮಾಡಿದ ಪುದುಚೇರಿ ಮುಖ್ಯ ಚುನಾವಣಾಧಿಕಾರಿ!
ಮುಂಬೈ ಪೊಲೀಸರ ಅಪರಾಧ ವಿಭಾಗದ ಬಳಿ ಅರ್ನಾಬ್ ಗೋಸ್ವಾಮಿ ಮತ್ತು ಎಆರ್ಜಿ ಮೀಡಿಯಾ ವಿರುದ್ಧ ಯಾವುದೇ ಪುರಾವೆಗಳಿಲ್ಲ. ಆದರೆ ಅದು ಕೇವಲ ಚಾರ್ಜ್ಶೀಟ್ನಲ್ಲಿ ಶಂಕಿತರೆಂದು ಹೆಸರಿಸುವ ಮೂಲಕ ತನಿಖೆಯನ್ನು ಹೆಚ್ಚಿಸುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಕಳೆದ ಸೋಮವಾರ ನಡೆದ ವಿಚಾರಣೆಯಲ್ಲಿ, ಪ್ರಕರಣವೊಂದರಲ್ಲಿ ಯಾರನ್ನಾದರೂ ಆರೋಪಿಗಳೆಂದು ಹೆಸರಿಸದೆ ತಿಂಗಳುಗಟ್ಟಲೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಪೊಲೀಸರಿಗೆ ತಿಳಿಸಿತ್ತು. ಪೊಲೀಸರು ಸಲ್ಲಿಸಿರುವ ಈ ದಾಖಲೆಯಲ್ಲಿ ಗೋಸ್ವಾಮಿ ವಿರುದ್ಧ ಪ್ರಮುಖವಾದದ್ದು ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ಗೋಸ್ವಾಮಿಯನ್ನು ಕರೆಸಲು ಅಥವಾ ಬಂಧಿಸಲು ನಿರ್ಧರಿಸಿದರೆ ಮೂರು ದಿನಗಳ ಮುಂಚಿತವಾಗಿ ನೋಟಿಸ್ ನೀಡುವಂತೆ ನ್ಯಾಯಪೀಠ ಪೊಲೀಸರಿಗೆ ನಿರ್ದೇಶನ ನೀಡಿದೆ. ಅರ್ಜಿಯಲ್ಲಿ ಹೆಸರಿರದ ಹಲವಾರು ಉದ್ಯೋಗಿಗಳಿಗೆ ಇಂತಹ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
“ತನಿಖೆಯ ಸಮಯದಲ್ಲಿ, ನೀವು ಗೋಸ್ವಾಮಿ ವಿರುದ್ಧ ಏನನ್ನಾದರೂ ಕಂಡರೇ ಮತ್ತು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಬಯಸಿದರೆ, ನೀವು 72 ಗಂಟೆಗಳ ಮುಂಚಿತವಾಗಿ ನೋಟಿಸ್ ನೀಡಬೇಕು” ಎಂದು ನ್ಯಾಯಪೀಠ ಹೇಳಿದೆ. ಜೂನ್ 28 ರಂದು ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ: ಅರ್ನಾಬ್ ಗೋಸ್ವಾಮಿಗೆ ದೆಹಲಿ ಕೋರ್ಟ್ ನೋಟಿಸ್