ಕಾಲಿಗೆ ಆಗಿರುವ ಗಾಯವನ್ನು ತೋರಿಸಿದ್ದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ, ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಕಾಲುಗಳನ್ನು ಪ್ರದರ್ಶಿಸಲು ಬಯಸಿದರೆ ಬರ್ಮುಡಾ ಧರಿಸಬೇಕು ಎಂದಿದ್ದು, ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ತೃಣಮೂಲ ಕಾಂಗ್ರೆಸ್ ಸದಸ್ಯರಂತೂ ಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಅವರನ್ನು ವಿಕೃತ ಎಂದು ಕರೆದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಗಳವಾರ ಪುರುಲಿಯಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಘೋಷ್, “ಪ್ಲ್ಯಾಸ್ಟರ್ ಕತ್ತರಿಸಿ ನಂತರ ತೆಳುವಾದ ಬಟ್ಟೆಯ ಬ್ಯಾಂಡೇಜ್ ಹಾಕಲಾಯಿತು. ಈಗ ಅವರು ಎಲ್ಲರಿಗೂ ತನ್ನ ಕಾಲು ಪ್ರದರ್ಶಿಸುತ್ತಿದ್ದಾರೆ. ಒಂದು ಕಾಲು ಕಾಣವಂತೆ ಸೀರೆ ಧರಿಸುತ್ತಿದ್ದಾರೆ. ಯಾರೊಬ್ಬರೂ ಅಂತಹ ಸೀರೆಯನ್ನು ಧರಿಸುವುದನ್ನು ನಾನು ನೋಡಿಲ್ಲ. ನಿಮ್ಮ ಕಾಲುಗಳನ್ನು ಪ್ರದರ್ಶಿಸಲು ನೀವು ಬಯಸಿದರೆ, ಸೀರೆ ಏಕೆ..? ಒಂದು ಜೋಡಿ ಬರ್ಮುಡಾ ಧರಿಸಿ” ಎಂದಿದ್ದರು.
ಇದನ್ನೂ ಓದಿ: ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರನ್ನು ‘ದುರ್ಯೋಧನ, ದುಶ್ಯಾಶನ’ ಎಂದ ಮಮತಾ
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನ ನಾಯಕರು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ಸಂಸದೆ ಮೊಹುವಾ ಮೊಯಿತ್ರಾ ತಮ್ಮ ಎಂದಿನ ಶೈಲಿಯಲ್ಲಿ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.
“ಬಿಜೆಪಿ ಪಶ್ಚಿಮ ಬಂಗಾಳ ಅಧ್ಯಕ್ಷರು ಸಾರ್ವಜನಿಕ ಸಭೆಯಲ್ಲಿ ಮಮತಾ ದೀ ಸೀರೆ ಏಕೆ ಧರಿಸುತ್ತಾರೆ ಎಂದು ಕೇಳುತ್ತಾರೆ, ಆಕೆ ತನ್ನ ಕಾಲು ಉತ್ತಮವಾಗಿ ಪ್ರದರ್ಶಿಸಲು ’ಬರ್ಮುಡಾ’ ಶಾರ್ಟ್ಸ್ ಧರಿಸಬೇಕು ಎನ್ನುತ್ತಾರೆ. ಈ ವಿಕೃತ ಅನೈತಿಕ ಕೋತಿಗಳು ಬಂಗಾಳವನ್ನು ಗೆಲ್ಲುತ್ತೇವೆ ಎಂದು ಭಾವಿಸುತ್ತರಾ?” ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
@BJP WB Pres asks in public meeting why Mamatadi is wearing a saree, she should be wearing “Bermuda” shorts to display her leg better
And these perverted depraved monkeys think they are going to win Bengal?
— Mahua Moitra (@MahuaMoitra) March 24, 2021
ಇದನ್ನೂ ಓದಿ: ನನ್ನನ್ನು ಕೊಲ್ಲಲು ಬಿಜೆಪಿ ಪಿತೂರಿ ನಡೆಸುತ್ತಿದೆಯೇ? – ಮಮತಾ ಬ್ಯಾನರ್ಜಿ ವಾಗ್ದಾಳಿ
’ಬಂಗಾಳ ಬಿಜೆಪಿ ರಾಜ್ಯ ಅಧ್ಯಕ್ಷರ ಕೆಲಸವನ್ನು ಕೇವಲ ವಿಷ ಉಗುಳುವಿಕೆಗೆ ಇಳಿಸಲಾಗಿದೆ ಎಂದು ಕಂಡು ಬರುತ್ತಿದೆ. ಬಂಗಾಳದ ಸಿಎಂ ವಿರುದ್ಧ ತೀವ್ರವಾದ ದಾಳಿಯಿಂದ ಹಿಡಿದು ಕಾರ್ಯಕರ್ತರ ಮೇಲಿನ ಮೇಲಿನ ಹಿಂಸಾಚಾರದವರೆಗೆ ಅವರು ಎಲ್ಲಾ ಮಿತಿಗಳನ್ನು ದಾಟಿದ್ದಾರೆ ಎಂದು ಕಾಕೋಲಿ ಘೋಷ್ ದಸ್ತಿದಾರ್ ಟ್ವೀಟ್ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದರು. ಚುನಾವಣಾ ಆಯೋಗ ಇದನ್ನು ಅಪಘಾತ ಎಂದು ತಳ್ಳಿಹಾಕಿದರೆ, ಟಿಎಂಸಿ ಪಕ್ಷವು ಮುಖ್ಯಮಂತ್ರಿಯವರನ್ನು ಕೊಲ್ಲಲು ನಡೆದ ಯತ್ನ ಇದಾಗಿದೆ ಎಂದು ಹೇಳಿದೆ.
ನಂತರದಲ್ಲಿ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರದಲ್ಲಿ ಗಾಲಿಕುರ್ಚಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿ ರ್ಯಾಲಿಯಲ್ಲಿ, ಅವರು ತಮ್ಮ ಗಾಯಗಳ ಬಗ್ಗೆ ಮಾತನಾಡುತ್ತಾರೆ. ಜೊತೆಗೆ ಗಾಯಗಳು ನೋವಿನಿಂದ ಕೂಡಿದ್ದರೂ, ಅವು ತನ್ನನ್ನು ತಡೆಯುವುದಿಲ್ಲ ಎಂದು ಹೇಳುತ್ತಿದ್ದಾರೆ.
ಸಾರ್ವಜನಿಕ ಸಹಾನುಭೂತಿ ಪಡೆಯಲು ಮುಖ್ಯಮಂತ್ರಿ ಗಾಯವನ್ನು ತೋರಿಸುತ್ತಿದ್ದಾರೆ ಎಂದು ಬಿಜೆಪಿ ಅವರನ್ನು ವ್ಯಂಗ್ಯ ಮಾಡಿತ್ತು. ಈಗ ಬರ್ಮುಡಾ ಹೇಳಿಕೆ ಬಂಗಾಳದಲ್ಲಿ ಮತ್ತೆ ಹೊಸ ವಿವಾದ ಎಬ್ಬಿಸಿದೆ.
ಇದನ್ನೂ ಓದಿ: ಬಂಗಾಳ ಚುನಾವಣೆಗೆ ಬಿಜೆಪಿ ಫೈನಲ್ ಲಿಸ್ಟ್ ಬಿಡುಗಡೆ: ಮಿಥುನ್ ಚಕ್ರವರ್ತಿಗೆ ಟಿಕೆಟ್ ಇಲ್ಲ!