Homeಕರ್ನಾಟಕಆರ್‌ಬಿಎಎನ್‌ಎಂಎಸ್ ಕಾಲೇಜು ಪ್ರಾಂಶುಪಾಲರಿಂದ ದಲಿತ ಸಮುದಾಯದ ಪ್ರಾಧ್ಯಾಪಕರಿಗೆ ಅನ್ಯಾಯ ಆರೋಪ; ದೀರ್ಘಕಾಲದಿಂದ ಅಮಾನತಿನಲ್ಲಿಟ್ಟು ಮಾನಸಿಕ ಕಿರುಕುಳ

ಆರ್‌ಬಿಎಎನ್‌ಎಂಎಸ್ ಕಾಲೇಜು ಪ್ರಾಂಶುಪಾಲರಿಂದ ದಲಿತ ಸಮುದಾಯದ ಪ್ರಾಧ್ಯಾಪಕರಿಗೆ ಅನ್ಯಾಯ ಆರೋಪ; ದೀರ್ಘಕಾಲದಿಂದ ಅಮಾನತಿನಲ್ಲಿಟ್ಟು ಮಾನಸಿಕ ಕಿರುಕುಳ

- Advertisement -
- Advertisement -

ಜಾತಿ ಮತ್ತು ಭಾಷೆಯ ಕಾರಣಕ್ಕಾಗಿ ಕೆಲಸದ ಸ್ಥಳದಲ್ಲಿ ಮಾನಸಿಕ ಹಾಗೂ ದೈಹಿಕ ಕಿರುಕುಳದ ಪ್ರಕರಣಗಳು ಆಗಾಗ ಕೇಳಿಬರುತ್ತಿವೆ. ಇದನ್ನು ತಡೆಗಟ್ಟಲು ಹಲವು ಕಾನೂನುಗಳು ಇದ್ದರೂ, ಬಂಡವಾಳಶಾಹಿಗಳು ಅದ್ಯಾವುದಕ್ಕೂ ಹೆದರದೆ ತಮ್ಮ ಅಟ್ಟಹಾಸ ಮೆರೆಯುತ್ತಾರೆ. ಬೆಂಗಳೂರಿನ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಯಾದ ಹಲಸೂರಿನ ಆರ್‌ಬಿಎಎನ್‌ಎಂಎಸ್‌ (RBANM’S) ಕಾಲೇಜಿನಲ್ಲಿ ಉತ್ತರ ಭಾರತ ಮೂಲದ ಪ್ರಾಂಶುಪಾಲರಾದ ಡಾ. ಚೇತನ್ ಬಜಾಜ್ ಅವರು ಪ್ರಾದೇಶಿಕತೆ ಹಾಗೂ ಜಾತಿ ಕಾರಣಕ್ಕಾಗಿ ಅಲ್ಲಿನ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಾಂಶುಪಾಲರು ಇಷ್ಟೆಲ್ಲಾ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದ್ದರೂ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದು, ಹಲವು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ತೊಂದರೆ ಅನುಭವಿಸುತ್ತಿದ್ದಾರೆ.

ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್‌ ಫೋನ್‌ ಬಳಸುತ್ತಿದ್ದನ್ನು ಪ್ರಶ್ನಿಸಿದ ದಲಿತ ಸಮುದಾಯದ ಪ್ರಾಧ್ಯಾಪಕ ಡಾ.  ಅವಿನಾಶ್. ವಿ, ಬೋಧಕೇತರ ಸಿಬ್ಬಂದಿ ದೀಪಾ ಸೇರಿದಂತೆ ಐದು ಜನರನ್ನು ಸಕಾರಣವಿಲ್ಲದೆ ಅಮಾನತು ಮಾಡಿ, ವಿಚಾರಣೆಯನ್ನೇ ನಡೆಸದೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಕಳೆದ ಐದು ತಿಂಗಳಿನಿಂದ ಹಲವು ಸಿಬ್ಬಂದಿಗಳನ್ನು ಅಮಾನತಿನಲ್ಲಿಟ್ಟಿರುವ ಆರ್‌ಬಿಎಎನ್‌ಎಂಎಸ್‌ ಕಾಲೇಜು ಆಡಳಿತ ಮಂಡಳಿ, ದೀರ್ಘಕಾಲದಿಂದ ವಿಚಾರಣೆ ನಡೆಸದೆ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ.

ಪ್ರಾಂಶುಪಾಲರಾದ ಡಾ. ಚೇತನ್ ಬಜಾಜ್

ಈ ಬಗ್ಗೆ ‘ನಾನುಗೌರಿ.ಕಾಂ‘ ಜತೆಗೆ ಮಾತನಾಡಿದ ಡಾ. ಅವಿನಾಶ್, ‘ಕಳೆದ ಆರು ವರ್ಷಗಳಿಂದ ನಾನು ನಿಷ್ಠೆಯಿಂದ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದೇನೆ.. ಈ ಆರು ವರ್ಷಗಳಿಲ್ಲಿ ಹಲವಾರು ಬದಲಾವಣೆಗಳು ಆದರೂ ನನ್ನ ವೃತ್ತಿ ಧರ್ಮವನ್ನು ಪಾಲಿಸಿಕೊಂಡು ಬರುತ್ತಿದ್ದೇನೆ. ನಾನು 2018ರಲ್ಲಿ ಮಂಗಳೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದು ಆರ್‌ಬಿಎಎನ್‌ಎಂಎಸ್‌ ಕಾಲೇಜಿಗೆ ಬಂದಾಗ, ಅಲ್ಲಿದ್ದ ಉಪನ್ಯಾಸಕರಿಗೆ ಸಂಶೋಧನೆಯ ಅರಿವೆ ಇರಲಿಲ್ಲ. ಪ್ರಾಂಶುಪಾಲರು ಸಂಶೋಧನೆಯ ಮಹತ್ವದ ಬಗ್ಗೆ ತಿಳಿಸಿರಲಿಲ್ಲ, ಪ್ರಾಧ್ಯಾಪಕರಿಗೂ ಈ ಬಗ್ಗೆ ಆಸಕ್ತಿ ಇರಲಿಲ್ಲ. ನಾನು ಅಲ್ಲಿಗೆ ಹೋದಾಗ ಹಲವಾರು ವೈಮನಸ್ಸು ಇತ್ತು. ಆದರೆ, ನಾನು ಎಲ್ಲವನ್ನೂ ಸರಿದೂಗಿಸಿಕೊಂಡು ಕೆಲಸ ಮಾಡಿದ್ದೇನೆ’ ಎಂದರು.

‘ನಾನು ಅಲ್ಲಿಗೆ ಕೆಲಸಕ್ಕೆ ಸೇರಿದಾಗ ಬಿಎನಲ್ಲಿ ಒಂದಂಕಿ ವಿದ್ಯಾರ್ಥಿಗಳು ಮಾತ್ರ ಇದ್ದರು.. ಪಿಯು ಕಾಲೇಜಿನ ವಿದ್ಯಾರ್ಥಿಗಳ ಮನವೊಲಿಸಿದ ನಾನು, ಸುಮಾರು 29 ವಿದ್ಯಾರ್ಥಿಗಳನ್ನು ಬಿಎ ಪದವಿಗೆ ದಾಖಲಾಗುವಂತೆ ಮಾಡಿದ್ದೆ; ಕೊರೊನಾ ನಂತರವೂ 25 ವಿದ್ಯಾರ್ಥಿಗಳು ಬಿಎಗೆ ದಾಖಲಾಗಿದ್ದರು. ನನ್ನ ಶ್ರಮದಿಂದ ಪ್ರಸ್ತುತ ಈ ಸಾಲಿನಲ್ಲಿ ಬಿಎ ಪದವಿಗೆ ಸುಮಾರು 32 ಜನ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ. ಕೆಲವರಿಗೆ ಕಲಾ ವಿಭಾಗ ತೆಗೆದುಕೊಳ್ಳುವುದುಕ್ಕೂ ಆಸಕ್ತಿ ಇರಲಿಲ್ಲ. ಆದರೆ, ನಾನು ಸಾಕಷ್ಟು ಶ್ರಮಪಟ್ಟು ದಾಖಲಾತಿ ಹೆಚ್ಚಿಸಿದ್ದೇನೆ. ನಾನು ಹಲವು ವರ್ಷಗಳಿಂದ ಅಲ್ಲಿ ಕೆಲಸ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳ ಕುರಿತು ಪ್ರಾಥಮಿಕ ಮಾಹಿತಿ ತಿಳಿದುಕೊಂಡಿದ್ದೇನೆ; ಆ ಮೂಲಕ ದಾಖಲಾತಿ ಹೆಚ್ಚಿಸಿದ್ದೇನೆ’ ಎಂದು ಹೇಳಿದರು.

‘ನಮ್ಮ ಕಾಲೇಜಿನಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಬಿಎ ಪದವಿಗೆ ದಾಖಲಾಗಿದ್ದರೆ.. ಅದಕ್ಕೆ ಕಾರಣ ನನ್ನ ಶ್ರಮ ಮಾತ್ರ. ನ್ಯಾಕ್ ಕಮಿಟಿಯವರು ಕೂಡ ನ್ನನ್ನನ್ನು ‘ಮಲ್ಟಿ ಟ್ಯಾಲೆಂಟೆಡ್’ ಎಂದು ನಮ್ಮ ಪ್ರಾಂಶುಪಾಲರಿಗೆ ಹೇಳಿದ್ದಾರೆ; ಸಂಸ್ಥೆ ಬೆಳೆಯಲು ನನ್ನ ಕಡೆಯಿಂದ ಸಾಕಷ್ಟು ಶ್ರಮ ಹಾಕಿದ್ದೇನೆ. ಆದರೆ, ಇಷ್ಟೆಲ್ಲಾ ಕಾಲೇಜಿನ ಬೆಳವಣಿಗೆಗಾಗಿ ಶ್ರಮಿಸಿದ್ದರೂ ನನ್ನನ್ನು ಕಡೆಗಣಿಸುತ್ತಿದ್ದಾರೆ’ ಎಂದು ಅವಿನಾಶ್ ಬೇಸರ ವ್ಯಕ್ತಪಡಿಸಿದರು.

‘ಸಂಸ್ಥೆಗಾಗಿ ಇಷ್ಟೆಲ್ಲಾ ಶ್ರಮಿಸಿರುವ ನಾನು, ಕಾಲೇಜಿಗೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅದರ ವಿರುದ್ಧ ಹೋರಾಡಿದ್ದೇನೆ. 2023ರ ಸೆಪ್ಟಂಬರ್ ತಿಂಗಳಲ್ಲಿ ಮಕ್ಕಳು ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದರು; ಅದೇ ಸಮಯದಲ್ಲಿ ಪರೀಕ್ಷಾ ಕೊಠಡಿಯಲ್ಲೆ ಮಹಿಳಾ ಪ್ರಾದ್ಯಾಪಕರು ತಮ್ಮ ಮೊಬೈಲ್‌ ಫೋನಿನಲ್ಲಿ ಮಾತನಾಡುತ್ತಿದ್ದರು. ಅದನ್ನು ಗಮನಿಸಿದ ನಾನು, ಪರೀಕ್ಷಾ ಮುಖ್ಯಸ್ಥರ ಗಮನಕ್ಕೆ ತಂದಿದ್ದೆ. ಆದರೆ, ಆ ಮಹಿಳಾ ಸಿಬ್ಬಂದಿ ನನ್ನ ವಿರುದ್ಧ ಸಂಸ್ಥೆಯ ಕಾರ್ಯದರ್ಶಿಗಳಿಗೆ ದೂರು ನೀಡಿ, ಅನುಮತಿ ಇಲ್ಲದೆ ನಾನು ಫೋಟೋ ತೆಗೆದಿದ್ದೇನೆ ಎಂದು ಆರೋಪ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘ನಮ್ಮ ಸಂಸ್ಥೆಯ ಕಾರ್ಯದರ್ಶಿಗಳು ಪ್ರಕರಣದ ವಿಚಾರಣೆಯನ್ನೇ ನಡೆಸದೆ ಕಳೆದ ನಾಲ್ಕು ತಿಂಗಳಿಂದ ನನ್ನನ್ನು ಅಮಾನತಿನಲ್ಲಿ ಇಟ್ಟಿದ್ದಾರೆ. ಮಹಿಳಾ ಪ್ರಾಧ್ಯಾಪಕರು ನನ್ನ ವಿರುದ್ಧ ನೀಡಿದ ದೂರಿಗೆ ಸಾಕ್ಷಿ ಇದ್ದಿದ್ದರೆ ನನ್ನ ಮೇಲೆ ಕ್ರಮ ತೆಗೆದುಕೊಳ್ಳಲು ಇಷ್ಟು ದಿನ ಬೇಕಾಗಿತ್ತಾ’ ಎಂದು ಪ್ರಶ್ನಿಸಿದ್ದಾರೆ.

‘ನವೆಂಬರ್ ಆರನೇ ತಾರೀಖಿನಿಂದ ನಾನು ಈವರೆಗೆ ಅಮಾನತಿನಲ್ಲಿ ಇದ್ದೇನೆ. ನಾಲ್ಕು ತಿಂಗಳಿನಿಂದ ನನ್ನ ವಿಚಾರಣೆಯನ್ನೇ ನಡೆಸಿಲ್ಲ; ನನ್ನ ಜೀವನವನ್ನು ಹಾಳು ಮಾಡುವ ಏಕೈಕ ದುರುದ್ದೇಶದಿಂದ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ’ ಎಂದು ಅವಿನಾಶ್ ಆರೋಪಿಸಿದರು.

‘ನಮ್ಮ ಸಂಸ್ಥೆ ದಲಿತ ಅಭ್ಯುದಯಕ್ಕೆ ಎಂದು ಹೇಳುತ್ತಾರೆ. ಆದರೆ, ನಾನು ಕೂಡ ದಲಿತ, ನನ್ನ ಬಗ್ಗೆ ಇಷ್ಟೊಂದು ಅಸಡ್ಡೆ ಏಕೆ? ವಿದೇಶಗಳಲ್ಲಿ ಓದಿಕೊಂಡು ಬಂದಿದ್ದೇವೆ ಎಂದು ಹೇಳುವ ಇವರ ಮನಸ್ಸಿನಲ್ಲಿ ಕೊಳಕು ಇದೆ. ಇಲ್ಲದಿದ್ದರೆ ಇವರು ಇಷ್ಟು ದಿನ ನನ್ನ ವಿಚಾರಣೆ ನಡೆಸಿಲ್ಲ ಯಾಕೆ? ನಮ್ಮ ಕಾಲೇಜಿನ ಎಲ್ಲ ಕಡೆಯೂ ಸಿಸಿಟಿವಿ ಕ್ಯಾಮೆರಾಗಳಿವೆ; ಬೇಕಿದ್ದರೆ ಪರಿಶೀಲನೆ ನಡೆಸಲಿ. ಅದರಿಂದ ಅವರು ಒಂದು ನಿರ್ಧಾರಕ್ಕೆ ಬರುವುದಕ್ಕೆ ಸಾಧ್ಯವಾಗುತ್ತದೆ. ಆದರೆ, ಏನಾದರೂ ಮಾಡಿಕೊಳ್ಳಲಿ ಎಂಬ ಮನಸ್ಥಿಯ ಆಡಳಿತ ಮಂಡಳಿ ನನಗೆ ಅನ್ಯಾಯ ಮಾಡುತ್ತಿದೆ’ ಎಂದು ಬೇಸರ ಹೊರಹಾಕಿದರು.

ಕಳೆದ ಐದು ತಿಂಗಳಿನಿಂದ ಅಮಾನತಿನಲ್ಲಿರುವ ಬೋಧಕೇತರ ಸಿಬ್ಬಂದಿ ದೀಪಾ ಎಂಬುವವರು ಮಾತನಾಡಿ, ‘ಹೊಸದಾಗಿ ಬಂದಿರುವ ಪ್ರಾಂಶುಪಾಲರಿಗೆ ಕಾಲೇಜು ಆಡಳಿತದ ಬಗ್ಗೆ ಗೊತ್ತಿಲ್ಲ; ಅವರನ್ನು ಯಾಕಾಗಿ ನೇಮಕ ಮಾಡಿಕೊಂಡಿದ್ದಾರೆಯೋ ಗೊತ್ತಿಲ್ಲ. ಅವರು ಅತಿಥಿ ಉಪನ್ಯಾಸಕ ಹಾಗೂ ತರಬೇತುದಾರಾಗಿದ್ದವರು, ಶೈಕ್ಷಣಿಕ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಇಲ್ಲ. ನಾನು ಇದೇ ಕಾಲೇಜಿನಲ್ಲಿ 18 ವರ್ಷ ಕೆಲಸ ಮಾಡಿದ ಅನುಭವ ಇದೆ, ನನ್ನ ಕೆಲಸದ ಬಗ್ಗೆ ಹಿಂದಿನ ಆಡಳಿತ ಮಂಡಳಿ ಒಳ್ಳೆಯ ಮಾತನಾಡಿದ್ದಾರೆ. ಈವರೆಗೆ ನಾಲ್ಕು ಜನ ಪ್ರಾಂಶುಪಾಲರು ನನ್ನ ಕೆಲಸವನ್ನು ಒಪ್ಪಿಕೊಂಡಿದ್ದಾರೆ’ ಎಂದರು.

‘ಉತ್ತರ ಭಾರತದಿಂದ ಬಂದಿರುವ ಪ್ರಾಂಶುಪಾಲರು ತಮಗೆ ಬೇಕಾದವರನ್ನು ಕೆಲಸಕ್ಕೆ ನೇಮಕ ಮಾಡಿಕೊಂಡು, ಸ್ಥಳೀಯರು ಮತ್ತು ಕನ್ನಡಿಗರನ್ನು ಕೆಲಸದಿಂದ ತೆಗೆಯುವುದಕ್ಕೆ ಪಿತೂರಿ ನಡೆಸುತ್ತಿದ್ದಾರೆ. ನಮ್ಮ ಬಗ್ಗೆ ಕಾರ್ಯದರ್ಶಿಗಳಿಗೆ ತಪ್ಪು ಮಾಹಿತಿ ನೀಡಿ, ಅವರನ್ನು ಭೇಟಿಯಾಗದಂತೆ ಮಾಡಿದ್ದಾರೆ. ಡಾ. ಅವಿನಾಶ್ ಅವರಿಗಿಂತ ಮೊದಲೆ ನನ್ನನ್ನು ಅಮಾನತು ಮಾಡಿದ್ದಾರೆ. ಐದು ತಿಂಗಳಿನಿಂದ ಅಮಾನತಿನಲ್ಲಿಟ್ಟು, ನನಗೆ ಆರು ತಿಂಗಳ ವೇತನವನ್ನೂ ಕೊಡದೆ ಸತಾಯಿಸುತ್ತಿದ್ದಾರೆ. ನಾನು ಕೊಟ್ಟಿರುವ ಲಾಯರ್ ನೋಟಿಸ್‌ಗೂ ಅವರು ಉತ್ತರಿಸಿಲ್ಲ, ಸಂಸ್ಥೆ ವಿಚಾರಣೆ ಆಗುವವರೆಗೂ ಲೇಬರ್ ಕೋರ್ಟಿಗೆ ಹೋಗುವುದಕ್ಕೆ ಸಾಧ್ಯವಿಲ್ಲ’ ಎಂದು ದೀಪಾ ಅಸಹಾಯಕತೆ ವ್ಯಕ್ತಪಡಿಸಿದರು.

‘ಪ್ರಾಂಶುಪಾಲರು ಮತ್ತು ಕಾಲೇಜು ಆಡಳಿತ ಮಂಡಳಿ ನೀಡುವ ಮಾನಸಿಕ ಹಿಂಸೆಯಿಂದ ನಾನು ಅನಾರೋಗ್ಯಕ್ಕೆ ಈಡಾಗಿದ್ದೇನೆ. ಒಟ್ಟು ಐದು ಜನರನ್ನು ಅಮಾನತಿನಲ್ಲಿಟ್ಟಿದ್ದು, 12 ಜನರಿಗೆ ಮಾನಸಿಕ ಹಿಂಸೆ ನೀಡಿ ಕೆಲಸ ಬಿಡಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆಯಲು ಸಂಸ್ಥೆಯ ಕಾರ್ಯದರ್ಶಿಗಳಾದ ಸಂಜೀವ್ ನರೇನ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೂಡಲೇ ಕರೆ ಸ್ಥಗಿತಗೊಳಿಸಿದರು; ಪ್ರಾಂಶುಪಾಲರು ಕರೆ ಸ್ವೀಕರಿಸಲಿಲ್ಲ.

ಇದನ್ನೂ ಓದಿ; ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ಹಿಂಪಡೆದ ಉಮರ್‌ ಖಾಲಿದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...