ದೆಹಲಿಯಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕೆಂಬ ಬಿಜೆಪಿ ಮುಖಂಡರ ಬೇಡಿಕೆಗೆ ಪ್ರತಿಕ್ರಿಯಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, “ನಿಮಗೆ ನಿಜಕ್ಕೂ ಇಡೀ ದೇಶದ ಜನ ಈ ಸಿನಿಮಾ ನೋಡಬೇಕೆಂದಿದ್ದರೆ ತೆರಿಗೆ ವಿನಾಯಿತಿ ಕೇಳುವುದರ ಬದಲು, ಯೂಟ್ಯೂಬ್ಗೆ ಅಪ್ಲೋಡ್ ಮಾಡಿ” ಎಂದು ಸವಾಲು ಹಾಕಿದ್ದಾರೆ.
ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಅವರು, “ಬಿಜೆಪಿ ನಾಯಕರು, ಶಾಸಕರು ಮತ್ತು ಸಂಸದರು ದೇಶದ ಗಲ್ಲಿ ಗಲ್ಲಿಗಳಲ್ಲಿ ಕಾಶ್ಮೀರ್ ಫೈಲ್ಸ್ ಸಿನಿಮಾ ಪೋಸ್ಟರ್ ಅಂಟಿಸುತ್ತಿದ್ದಾರೆ. ಜನ ನಿಮ್ಮನ್ನು ಆಯ್ಕೆ ಮಾಡಿರುವುದು ಪೋಸ್ಟರ್ ಅಂಟಿಸುವುದಕ್ಕಾಗಿಯೇ? ಇದೇನಾ ನಿಮ್ಮ ರಾಜಕೀಯ? ನೀವು ಮನೆಗೆ ಹೋದಾಗ ನಿಮ್ಮ ಮಕ್ಕಳು ಏನು ಕೆಲಸ ಮಾಡುತ್ತಿದ್ದೀರಿ ಎಂದು ಕೇಳಿದರೆ ಪೋಸ್ಟರ್ ಅಂಟಿಸುತ್ತೇವೆ ಎಂದು ಉತ್ತರಿಸುತ್ತೀರಾ” ಎಂದು ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.
“ಕಾಶ್ಮೀರ್ ಫೈಲ್ಸ್ ಗೆ ತೆರಿಗೆ ವಿನಾಯಿತಿ ಕೇಳುತ್ತೀರಿ? ಜನ ಅದನ್ನು ನೋಡಬೇಕು ಅಂತ ನಿಮಗೆ ಇದ್ದರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಹೇಳಿ ಯೂಟ್ಯೂಬ್ಗೆ ಅಪ್ಲೋಡ್ ಮಾಡಿಸಿ. ಆಗ ಅದು ಪೂರ್ತಿ ಉಚಿತವಾಗಿ ಒಂದೇ ದಿನದಲ್ಲಿ ಇಡೀ ದೇಶದ ಜನ ನೋಡಬಹುದಲ್ಲವೇ, ಆಗ ತೆರಿಗೆ ವಿನಾಯಿತಿಯ ಪ್ರಶ್ನೆಗೆ ಉದ್ಭವಿಸುವುದಿಲ್ಲವಲ್ಲವೇ” ಎಂದು ಪ್ರಶ್ನಿಸಿದ್ದಾರೆ.
“ಹರಿಯಾಣದ ಬಿಜೆಪಿ ಶಾಸಕ ಪಾರ್ಕ್ ಒಂದರಲ್ಲಿ ಉಚಿತವಾಗಿ ಕಾಶ್ಮೀರಿ ಫೈಲ್ಸ್ ಸ್ಕ್ರೀನಿಂಗ್ ಆಯೋಜಿಸಿದ್ದರು. ಅದನ್ನು ಖಂಡಿಸಿ ಹರಿಯಾಣದ ಮುಖ್ಯಮಂತ್ರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ವಿವೇಕ್ ಅಗ್ನಿಹೋತ್ರಿ, ಟಿಕೆಟ್ ಪಡೆದು ಸಿನಿಮಾ ನೋಡಲು ಹೇಳಿ, ಉಚಿತವಾಗಿ ಬೇಡ ಎಂದು ಒತ್ತಾಯಿಸಿದ್ದಾರೆ. ಸಹೋದರರೆ ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೆಲವರು ಕೋಟಿ ಕೋಟಿ ಹಣ ಮಾಡುತ್ತಿದ್ದಾರೆ. ಆದರೆ ನಿಮಗೆ ಅದರ ಪೋಸ್ಟರ್ ಹಚ್ಚುವ ಕೆಲಸ ನೀಡುತ್ತಿದ್ದಾರೆ” ಎಂದು ಬಿಜೆಪಿ ಶಾಸಕರನ್ನು ಉದ್ದೇಶಿಸಿ ಕೇಜ್ರಿವಾಲ್ ಮಾತನಾಡಿದ್ದಾರೆ.
ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಅವರು ಕೋಟಿ ಕೋಟಿ ದುಡ್ಡು ಮಾಡುತ್ತಿದ್ದಾಗ ನೀವು ಪೋಸ್ಟರ್ ಅಂಟಿಸುತ್ತಿದ್ದೀರಿ. ದಯವಿಟ್ಟು ಕಣ್ಣು ತೆರೆದು ನೋಡಿ ಅರ್ಥಮಾಡಿಕೊಳ್ಳಿ ಎಂದು ಬಿಜೆಪಿ ಶಾಸಕರಲ್ಲಿ ಮನವಿ ಮಾಡಿದ್ದಾರೆ.
Vintage Kejriwal!
Disclaimer : Vivek Agnihotri and BJP people shouldn't watch this video. pic.twitter.com/ablQfhdl9M
— Abhijeet Dipke (@abhijeet_dipke) March 24, 2022
8 ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದ ನಂತರವೂ ಮಾನ್ಯ ನರೇಂದ್ರ ಮೋದಿಯವರು ಕಾಶ್ಮೀರಿ ಪಂಡಿತರಿಗಾಗಿ ಏನಾದರೂ ಮಾಡಿ ಎಂದು ವಿವೇಕ್ ಅಗ್ನಿಹೋತ್ರಿ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಾರೆ ಎಂದರೆ ಅವರು 8 ವರ್ಷ ಏನೂ ಕೆಲಸ ಮಾಡಿಲ್ಲವೆಂಬುದು ಸ್ಪಷ್ಟವಾಗಿದೆ. ಹಾಗಾಗಿ ತಮ್ಮನ್ನು ಉಳಿಸಿ ಎಂದು ಅಗ್ನಿಹೋತ್ರಿ ಕಾಲಿಗೆ ಬೀಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಕೇಜ್ರಿವಾಲ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಎರಡು ನಿಮಿಷದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಶ್ಮೀರಿ ಪಂಡಿತರಿಗಾಗಿ ಏನನ್ನು ಮಾಡದ ಕೇಂದ್ರ ಸರ್ಕಾರ ಈ ಸಿನಿಮಾದ ಬೆನ್ನಿಗೆ ನಿಂತಿದೆ ಎಂದು ಟೀಕಿಸಿದ್ದಾರೆ. ಅಲ್ಲದೇ ಈ ಸಿನಿಮಾದ ಉದ್ದೇಶ ಕಾಶ್ಮೀರಿ ಪಂಡಿತರಿಗೆ ಸಹಾಯ ಮಾಡುವುದಲ್ಲ ಬದಲಿಗೆ ಅವರ ಹೆಸರಿನಲ್ಲಿ ದುಡ್ಡು ಮಾಡುವುದಾಗಿ ಎಂಬ ಟೀಕೆಗಳು ಕೇಳಿಬಂದಿವೆ.
Delhi CM @ArvindKejriwal asks @vivekagnihotri to upload #KashmirFiles on YouTube .. Why tax concessions ..? That doesn’t applies for other films .. Shame on you Ad CM …. Shame . pic.twitter.com/AgJFkh8orx
— B L Santhosh (@blsanthosh) March 24, 2022
ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಬಿ.ಎಲ್ ಸಂತೋಷ್, “ಈ ಹಿಂದೆ ಅರವಿಂದ್ ಕೇಜ್ರಿವಾಲ್ ನಿಲ್ ಬಟ್ಟೆ ಸನ್ನತಾ ಮತ್ತು ಸಾಂಡ್ ಕಿ ಆಂಖ್ ಎಂಬ ಸಿನಿಮಾಗಳಿಗೆ ದೆಹಲಿಯಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದರು. ಈಗ ಕಾಶ್ಮೀರಿ ಫೈಲ್ಸ್ ಗೆ ತೆರಿಗೆ ವಿನಾಯಿತಿ ನೀಡುವುದಿಲ್ಲ, ಯೂಟ್ಯೂಬ್ಗೆ ಹಾಕಿ ಅನ್ನುತ್ತಿದ್ದಾರೆ. ನಾಚಿಕೆಯಾಗಬೇಕು ನಿಮಗೆ” ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕಾಪು ಮಾರಿಗುಡಿ ಜಾತ್ರೆ: ಸಂಘಪರಿವಾರದ ಬೆದರಿಕೆಗೆ ಸೊಪ್ಪು ಹಾಕದೆ ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿದ ಭಕ್ತಾದಿಗಳು!