“ತನ್ನ ಅತ್ಯುನ್ನತ ನಾಯಕತ್ವವನ್ನು ಕಳೆದುಕೊಳ್ಳುವಂತಹ ತುರ್ತು ಪರಿಸ್ಥಿತಿಗಳು ಸೇರಿದಂತೆ, ಅಮೆರಿಕದೊಂದಿಗಿನ ಸಂಭಾವ್ಯ ಯುದ್ಧಕ್ಕಾಗಿ ಇರಾನ್ ನಾಲ್ಕು ದಶಕಗಳಿಂದ ಸಿದ್ಧತೆ ನಡೆಸಿದೆ. ಹೀಗಾಗಿ ಎದುರಾಳಿಗಳಿಗೆ ಆ ದೇಶವನ್ನು ಸಂಪೂರ್ಣವಾಗಿ ನಾಶಪಡಿಸುವುದು ಕಷ್ಟಕರವಾಗಿದೆ” ಎಂದು ಭಾರತೀಯ ಮಿಲಿಟರಿ ತಜ್ಞರೊಬ್ಬರು ಹೇಳಿದ್ದಾರೆ.
ವಾಷಿಂಗ್ಟನ್ನಲ್ಲಿ ‘ಒಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ಅಮೆರಿಕ’ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ಧಿಲ್ಲೋನ್, “ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಸಂಘರ್ಷದಲ್ಲಿ ಭಾರಿ ನಷ್ಟ ಅನುಭವಿಸಿದರೂ, ಇರಾನ್ ದೀರ್ಘಕಾಲೀನ ಯುದ್ಧ” (attritional warfare) ನಡೆಸುವ ಸಾಮರ್ಥ್ಯವನ್ನು ಕಾಯ್ದುಕೊಂಡಿದೆ” ಎಂದಿದ್ದಾರೆ.
“ಈ ಯುದ್ಧದಿಂದ ಕಲಿಯಬೇಕಾದ ಪ್ರಮುಖ ಪಾಠವೆಂದರೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ರಾಷ್ಟ್ರೀಯ ಗುರಿ ಮತ್ತು ಸೂಕ್ತವಾದ ನಿರ್ಗಮನ ತಂತ್ರದ ಅಗತ್ಯತೆ” ಎಂದು ಹೇಳಿದರು.
“ನೀವು ಯುದ್ಧವನ್ನು ಪ್ರಾರಂಭಿಸುವ ಮೊದಲು ಕೆಲವು ವಿಷಯಗಳನ್ನು ಮೊದಲೇ ತಿಳಿದುಕೊಳ್ಳುವುದು ಅತ್ಯಗತ್ಯ. ನಿಮ್ಮ ಘೋಷಿತ ರಾಷ್ಟ್ರೀಯ ಗುರಿಯು ನಿಮಗೂ, ನಿಮ್ಮ ಸೇನೆಗೂ ಮತ್ತು ಸರ್ಕಾರದಲ್ಲಿರುವ ಜನರಿಗೂ ಸ್ಪಷ್ಟವಾಗಿರಬೇಕು. ಹಾಗೆಯೇ ವಿಜಯವನ್ನು ಘೋಷಿಸಬಹುದಾದ ಅಂತಿಮ ಹಂತದ ಬಗ್ಗೆಯೂ ಸ್ಪಷ್ಟತೆ ಇರಬೇಕು” ಎಂದು ಅವರು ಹೇಳಿದರು.
“ನಂತರ, ನಿರ್ಗಮನ ತಂತ್ರ, ವಿಶೇಷವಾಗಿ ಅದು ವಿದೇಶಿ ನೆಲದ ಯುದ್ಧವಾಗಿದ್ದಾಗ, ಆ ಪ್ರದೇಶದಿಂದ ನಾನು ಹೊರಬರುವುದು ಹೇಗೆ?” ಎಂದು ಅವರು ಪ್ರಶ್ನಿಸಿದರು. “ಅಲ್ಲದೆ, ಯುದ್ಧಕ್ಕೆ ಹೋಗುವ ದೇಶಗಳು ವಿಶೇಷವಾಗಿ ಅಮೆರಿಕ ಮತ್ತು ಇಸ್ರೇಲ್ನಂತಹ ಶಕ್ತಿಗಳನ್ನು ಒಟ್ಟಿಗೆ ಎದುರಿಸುವಾಗ, ಯುದ್ಧದ ತೀವ್ರತೆಯ ಹೆಚ್ಚಳವನ್ನು ನಿಯಂತ್ರಿಸಲು ಯೋಜನೆ ರೂಪಿಸಿಕೊಳ್ಳಬೇಕು” ಎಂದು ಅವರು ಹೇಳಿದರು.
“ತನ್ನ ಅತ್ಯುನ್ನತ ನಾಯಕತ್ವವನ್ನು ಕಳೆದುಕೊಳ್ಳುವ ಸಾಧ್ಯತೆಯನ್ನೂ ಒಳಗೊಂಡಂತೆ, ಕಳೆದ 40 ವರ್ಷಗಳಲ್ಲಿ ತಾನು ಪರಿಕಲ್ಪನೆ ಮಾಡಿದ ಮಾರ್ಗಗಳಲ್ಲೇ ಇರಾನ್ ಯುದ್ಧ ಮಾಡಿದೆ” ಎಂದು ಧಿಲ್ಲೋನ್ ಹೇಳಿದರು.
“ಇರಾನ್ ಮೊಸಾಯಿಕ್ ಸಿದ್ಧಾಂತವನ್ನು (mosaic doctrine) ಅಳವಡಿಸಿಕೊಂಡಿದೆ. ಕೇಂದ್ರ ನಾಯಕತ್ವವು ನಾಶವಾದರೂ ಕೆಲಸ ಮಾಡುವುದನ್ನು ಮುಂದುವರಿಸಬಹುದಾದ 31 ಸ್ವತಂತ್ರ ಪ್ರಧಾನ ಕಚೇರಿಗಳಾಗಿ ತನ್ನ ಸಶಸ್ತ್ರ ಪಡೆಗಳನ್ನು ವಿಕೇಂದ್ರೀಕರಿಸಿದೆ” ಎಂದು ಅವರು ಹೇಳಿದರು.
“ದೀರ್ಘಕಾಲದ ಸಂಘರ್ಷದಲ್ಲಿ ಬಲಹೀನ ಬದಿಗೆ ಅನುಕೂಲಕರವಾಗುವ ಸವಕಳಿ ಯುದ್ಧವನ್ನು ನಡೆಸುವ ಸಾಮರ್ಥ್ಯವನ್ನು ಇರಾನ್ ಉಳಿಸಿಕೊಂಡಿದೆ” ಎಂದು ಅವರು ತಿಳಿಸಿದರು.
“ಇರಾಕ್ ಮತ್ತು ಸೌದಿ ಅರೇಬಿಯಾದ ತೆರೆದ ಮರುಭೂಮಿಗಳಿಗೆ ಹೋಲಿಸಿದರೆ, ಇರಾನ್ನ ಪರ್ವತಮಯ ಭೂಪ್ರದೇಶವು ಎದುರಾಳಿಗಳಿಗೆ ಭೂಸೇನೆಯ ಆಕ್ರಮಣವನ್ನು ಕಷ್ಟಕರವಾಗಿಸಿದೆ. ಇರಾನ್ ಎನ್ನುವುದು ಸುತ್ತಲೂ ಪರ್ವತಗಳಿಂದ ಆವೃತವಾದ ತಟ್ಟೆಯಂತಿದ್ದು, ಒಳಭಾಗದಲ್ಲಿ ಮರುಭೂಮಿ ಇದೆ. ಬೇಸಿಗೆಯಲ್ಲಿ ಇಲ್ಲಿನ ತಾಪಮಾನವು 55 ರಿಂದ 60 ಡಿಗ್ರಿ ಸೆಲ್ಸಿಯಸ್ಗೆ ಏರುತ್ತದೆ” ಎಂದು ಅವರು ಹೇಳಿದರು.
“ಇರಾನ್ನ ಹೃದಯಭಾಗವನ್ನು ತಲುಪಲು ಆ ಪರ್ವತಗಳನ್ನು ದಾಟಬೇಕು. ನೀವು ಪ್ರತಿಯೊಂದು ಸೇನಾ ನೆಲೆಯನ್ನೂ ವಶಪಡಿಸಿಕೊಳ್ಳಬೇಕಾಗುತ್ತದೆ, ಆದ್ದರಿಂದ ನೇರ ಭೂಸೇನಾ ಆಕ್ರಮಣ ಸಾಧ್ಯವಿಲ್ಲದ ಮಾತಾಗಿತ್ತು” ಎಂದು ಧಿಲ್ಲೋನ್ ಹೇಳಿದರು.
“ಸಾಗರಗಳಲ್ಲಿ ಅಮೆರಿಕವನ್ನು ನೇರವಾಗಿ ಎದುರಿಸಲು ಇರಾನ್ ಬಳಿ ವಿಮಾನವಾಹಕ ನೌಕೆಗಳಾಗಲಿ ಅಥವಾ ಬಲವಾದ ವಾಯುಪಡೆಯಾಗಲಿ ಇಲ್ಲ. ಬದಲಿಗೆ ಹೊರ್ಮುಜ್ ಜಲಸಂಧಿಯ ರಕ್ಷಣೆಗೆ ಸೂಕ್ತವಾದ ಸಾಮರ್ಥ್ಯಗಳನ್ನು ಅದು ಅಭಿವೃದ್ಧಿಪಡಿಸಿದೆ” ಎಂದು ಹೇಳಿದರು.
“ವೇಗದ ದೋಣಿಗಳು, ಟಾರ್ಪಿಡೊ ದೋಣಿಗಳು, ಕರಾವಳಿ ಬಂದೂಕುಗಳು, ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಬಳಸಿಕೊಂಡು ಜಲಸಂಧಿಗಳನ್ನು ತಡೆಯುವ ತಂತ್ರವನ್ನು ಇರಾನ್ ಅಳವಡಿಸಿಕೊಂಡಿದೆ. ಪ್ರಮುಖ ಜಲಮಾರ್ಗದ ರಕ್ಷಣೆಗಾಗಿ ಮುಖ್ಯವಾಗಿ ವಿನ್ಯಾಸಗೊಳಿಸಲಾದ ನೌಕಾಪಡೆ ಇದಕ್ಕೆ ಬೆಂಬಲ ನೀಡಿದೆ” ಎಂದು ಧಿಲ್ಲೋನ್ ತಿಳಿಸಿದರು.
“ಇರಾನ್ ವಾಯುಪಡೆಯನ್ನು ನಿರ್ಮಿಸಲಿಲ್ಲ; ಅದು ಕ್ಷಿಪಣಿಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿತ್ತು, ಆ ಮೂಲಕವೇ ಅದು ಹೋರಾಡಿತು” ಎಂದು ಅವರು ಹೇಳಿದರು.
“ಇವು ಮಿಲಿಟರಿ ತಜ್ಞರಿಗೆ ಪಾಠಗಳು. ಈ ದೇಶವು ಅತ್ಯಂತ ಪ್ರಬಲ ಶತ್ರುವಿನ ವಿರುದ್ಧ ಹೋರಾಡುತ್ತಿದೆ. 40 ವರ್ಷಗಳಿಂದ ಈ ಯುದ್ಧಕ್ಕೆ ಸಿದ್ಧವಾಗಿದ್ದರಿಂದಲೇ ಇಂದಿಗೂ ಸಂಪೂರ್ಣವಾಗಿ ನಾಶವಾಗಿಲ್ಲ” ಎಂದು ಧಿಲ್ಲೋನ್ ಹೇಳಿದರು.
ಧಿಲ್ಲೋನ್ ಅವರು ತಮ್ಮ ಹೊಸ ಪುಸ್ತಕ, “ಆಪರೇಷನ್ ಸಿಂಧೂರ್: ದಿ ಅನ್ಟೋಲ್ಡ್ ಸ್ಟೋರಿ ಆಫ್ ಇಂಡಿಯಾಸ್ ಡೀಪ್ ಸ್ಟ್ರೈಕ್ಸ್ ಇನ್ಸೈಡ್ ಪಾಕಿಸ್ತಾನ್” ಅನ್ನು ಅಮೆರಿಕದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ.
ವಾಷಿಂಗ್ಟನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧಿಲ್ಲೋನ್ ಅವರನ್ನು ಇಂಡಿಯನ್ ಅಮೆರಿಕನ್ ಡಯಾಸ್ಪೊರಾ ಅಸೋಸಿಯೇಷನ್ ಗೌರವಿಸಿತು.


