Homeಬಹುಜನ ಭಾರತಬಹುಜನ ಭಾರತ; ಸಾರವನು ಧಿಕ್ಕರಿಸಿ ರೂಪವನು ಪೂಜಿಸುವ ಮೋಸ

ಬಹುಜನ ಭಾರತ; ಸಾರವನು ಧಿಕ್ಕರಿಸಿ ರೂಪವನು ಪೂಜಿಸುವ ಮೋಸ

- Advertisement -
- Advertisement -

ಮೊನ್ನೆ ಸರಿದು ಹೋದಸಂವಿಧಾನ ದಿನಾಚರಣೆಯಂದು ಮಾತನಾಡಿದ ಪ್ರಧಾನಮಂತ್ರಿಯವರು, “ನಾವು ಇಂದೇನಾದರೂ ಸಂವಿಧಾನವನ್ನು ಬರೆಯಬೇಕಾಗುವ ಪರಿಸ್ಥಿತಿ ಇದ್ದಿದ್ದರೆ, ಅದರ ಒಂದೇ ಒಂದು ಪುಟವನ್ನು ಕೂಡ ಬರೆಯಲಾಗುತ್ತಿರಲಿಲ್ಲ” ಎಂದರು.

ಆದರೆ ಸಂವಿಧಾನವನ್ನು ತಿದ್ದಿ ಬರೆಯುವ ಮಾತುಗಳನ್ನು ಅವರ ಪರಿವಾರ ಕಾಲಕಾಲಕ್ಕೆ ಆಡುತ್ತಲೇ ಬರುತ್ತಿದೆ. ಪ್ರಧಾನಿಯವರು ಒಂದೆಡೆ ಸಂವಿಧಾನವನ್ನು ಹೊಗಳುತ್ತ ಮತ್ತೊಂದೆಡೆ ಅದನ್ನು ಬೀಳುಗಳೆಯುವ ಹೆಜ್ಜೆಗಳನ್ನೇ ಇಡುತ್ತ ಬಂದಿದ್ದಾರೆ. ಅವರ ಪರಿವಾರ ಸಾವಿರ ಲಕ್ಷ ನಾಲಗೆಗಳಲ್ಲಿ ಸಂವಿಧಾನವನ್ನು ಹಳಿಯುತ್ತಲೇ ಬಂದಿದೆ.

ಧನಿಕರು-ದರಿದ್ರರು, ಬಲಾಢ್ಯ ಜಾತಿಗಳು-ತಳವರ್ಗಗಳ ನಡುವಣ ಅಂತರ ತಗ್ಗುವ ಬದಲು ಹೆಚ್ಚುತ್ತಲೇ ನಡೆದಿದೆ. ನೂರಾರು ವರ್ಷಗಳಿಂದ ವಂಚಿತವಾಗಿರುವ ಸಮುದಾಯಗಳಿಗೆ ದೊರೆತಿರುವ ಮೀಸಲಾತಿಯನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಿತ್ತುಕೊಳ್ಳುವ ಹುನ್ನಾರಗಳಿಗೆ ಹೆಚ್ಚು ಬಲ ಬಂದಿದೆ. ಕರುಬುವ ತೆಗಳುವ ಹಂಗಿಸುವ ದನಿಗಳಿಗೆ ಧಾರಾಳ ಧ್ವನಿವರ್ಧಕಗಳು ಒದಗಿವೆ. ಆದಿವಾಸಿಗಳು-ದಲಿತರ ಶೋಷಣೆಗೆ ಕೊನೆಯೇ ಕಾಣದಾಗಿದೆ. ದಲಿತರು, ದಮನಿತರು ಆದಿವಾಸಿಗಳು ಅಲ್ಪಸಂಖ್ಯಾತರು, ಪ್ರಗತಿಪರರು ಮಾತ್ರವೇ ಸಂವಿಧಾನವನ್ನು ಪ್ರಾಣಪದಕವೆಂದು ಬಗೆದು ಎದೆಗೆ ಅಪ್ಪಿ ಹಿಡಿದಿದ್ದಾರೆ.

ಸಂವಿಧಾನವು ಅದೆಷ್ಟೇ ಒಳ್ಳೆಯದಾಗಿರಲಿ, ಅದನ್ನು ಜಾರಿಗೆ ತರುವವರು ಒಳ್ಳೆಯವರಾಗಿರದಿದ್ದರೆ ಸಂವಿಧಾನವೂ ಕೆಟ್ಟದೆನಿಸಿಕೊಳ್ಳುತ್ತದೆ. ಸಂವಿಧಾನವು ಅದೆಷ್ಟೇ ಕೆಟ್ಟದಾಗಿದ್ದರೂ ಜಾರಿಗೆ ತರುವವರು ಒಳ್ಳೆಯವರಾಗಿದ್ದರೆ ಸಂವಿಧಾನ ಕೂಡ ಒಳ್ಳೆಯದೇ ಎನಿಸಿಕೊಳ್ಳುತ್ತದೆ ಎಂದಿದ್ದರು ಬಾಬಾಸಾಹೇಬರು.

ಆಳುವವರು ಟೀಕೆ ವಿಮರ್ಶೆಗಳಿಗೆ ಅಸಹನೆ ತೋರಿ ವಿಮರ್ಶಿಸುವವರನ್ನು ಜೈಲುಗಳಿಗೆ ತಳ್ಳುತ್ತಿರುವಾಗ, ಪ್ರಭುತ್ವದ ಮುಂದೆ ಪ್ರಜೆಗಳು ಮಂಡಿಯೂರಬೇಕೆಂದು ಬಯಸುವಾಗ, ಆಳುವವರ ನಡೆ ಮತ್ತು ನುಡಿಗೆ ಸಂಬಂಧವೇ ಇಲ್ಲದಿರುವಾಗ, ಸಮಾಜದ ಎಲ್ಲ ವರ್ಗಗಳನ್ನೂ ಜೊತೆಗೆ ಸೇರಿಸಿಕೊಂಡು ಮುನ್ನಡೆಯಬೇಕೆಂಬ ತತ್ವವನ್ನು ಧಿಕ್ಕರಿಸಿರುವಾಗ, ನಾಗರಿಕರ ಸ್ವಾತಂತ್ರ್ಯಗಳನ್ನು ಹಿಗ್ಗಿಸುವ ಬದಲು ಕುಗ್ಗಿಸುತ್ತಿರುವಾಗ – ಈಗ ಇದೀಗ ಸಂವಿಧಾನವನ್ನು ಬರೆಯಬೇಕಾಗಿ ಬಂದಿದ್ದರೆ.. ಊಹೆಗೂ ನಿಲುಕದ ಅನಾಹುತವಿದು.

ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಪಸರಿಸಲು ನವೆಂಬರ್ 26ರ ದಿನವನ್ನು ಸಂವಿಧಾನ ದಿವಸವೆಂದು ಆಚರಿಸುವುದಾಗಿ ಪ್ರಧಾನಿಯವರು 2015ರಲ್ಲಿ ಘೋಷಿಸಿದ್ದರು. ಸಂವಿಧಾನ ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸುವ ದಿನವಿದು. ಅವರ ಕನಸಿನ ಭಾರತವನ್ನು ಕಟ್ಟುವ ಕುರಿತ ನಮ್ಮ ಪ್ರತಿಬದ್ಧತೆಯನ್ನು ಪುನರುಚ್ಚರಿಸುವ ತೇದಿಯೂ ಹೌದು ಎಂದು ಸಾರಿದರು. 197 ಕೋಟಿ ರುಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವೂ ತಲೆಯೆತ್ತಿದೆ. ಒಳ್ಳೆಯ ನಡೆಗಳೇ ಹೌದು.

ದಲಿತರ ಮತಗಳನ್ನು ಸೆಳೆಯುವ ಪ್ರತಿಮೆ-ಪ್ರತೀಕ-ಸ್ಮಾರಕ ರೂಪಕಗಳಾಗಿ ಮಾತ್ರವೇ ಪಕ್ಷ ಪರಿವಾರಗಳು ಅಂಬೇಡ್ಕರ್ ಮತ್ತು ಸಂವಿಧಾನವನ್ನು ನೋಡುತ್ತಿವೆ. ನಿಜದ ಬಾಬಾಸಾಹೇಬರ, ಅವರ ಪ್ರಖರ ವಿಚಾರಗಳ, ಅವರು ಕೊಡಮಾಡಿದ ಸಂವಿಧಾನದ ಮೌಲ್ಯಗಳ ನಿತ್ಯ ನಿರಂತರ ಹತ್ಯೆ ನಡೆಯುತ್ತಿದೆ. ಸಂವಿಧಾನ ದಿನಾಚರಣೆಯನ್ನು ಜಾರಿಗೆ ತಂದರೆ ಸಾಲದು, ಅದು ಎತ್ತಿ ಹಿಡಿದಿರುವ ಮೌಲ್ಯಗಳನ್ನು ಗೌರವಿಸಬೇಕು.

1949ರಲ್ಲಿ ಮದ್ರಾಸ್‌ನಲ್ಲಿ ಮಾಡಿದ ಭಾಷಣವೊಂದರಲ್ಲಿ ಅಂದಿನ ಗೃಹಮಂತ್ರಿ ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ಪಟೇಲ್ ಅವರು ತೀವ್ರ ಎಡಪಂಥೀಯ ಶಕ್ತಿಗಳು ಮತ್ತು ಆರೆಸ್ಸೆಸ್ ಅಪಾಯಗಳ ಕುರಿತು ಮಾತಾಡಿದ್ದರು.

“ಹೈದರಾಬಾದ್ ಸರ್ಕಾರ ತನ್ನದೇ ಸ್ವಾರ್ಥಕ್ಕೆ ಬೆಳೆಯಲು ಬಿಟ್ಟ ಕಮ್ಯುನಿಸ್ಟರು, ತಮ್ಮ ಸೋದರರೇ ಆದ 200ಕ್ಕೂ ಹೆಚ್ಚು ಕಾಂಗ್ರೆಸ್ಸಿಗರನ್ನು ಕೊಂದಿದ್ದಾರೆ. ಈ ಭಯೋತ್ಪಾದಕರನ್ನು ಹೈದರಾಬಾದ್ ಪ್ರಾಂತ್ಯದಿಂದ ಹೊರದಬ್ಬಿದ ನಂತರ ಬೇರೆ ಗಡಿಗಳನ್ನು ಪ್ರವೇಶಿಸಿ ಅಂತಹುದೇ ಕೃತ್ಯಗಳಲ್ಲಿ ತೊಡಗುತ್ತಾರೆ.. ಇವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲು ನಾವು ತಯಾರಿದ್ದೇವೆ. ಆದರೆ ಅವರು ಭಯೋತ್ಪಾದನೆಯಲ್ಲೇ ತೊಡಗುವುದಾದರೆ ಹಿಡಿದು ಜೈಲಿಗೆ ತಳ್ಳಲು, ಭೂಗತರಾಗಿ ತಲೆ ಮರೆಸಿಕೊಳ್ಳುವಂತೆ ನಿಗ್ರಹಿಸಲು ನಾವು ಹಿಂಜರಿಯುವುದಿಲ್ಲ” ಎಂದು ಪಟೇಲ್ ಅವರು ಎಚ್ಚರಿಕೆ ನೀಡಿದ್ದರು.

“ನಿಮ್ಮ ಹಂಚಿಕೆಗಳನ್ನು ಕೈಬಿಡಿ, ಕೋಮುವಾದಿ ಘರ್ಷಣೆಗಳನ್ನು ದೂರವಿಡಿ, ಭಾರತದ ಸಂವಿಧಾನವನ್ನು ಗೌರವಿಸಿರಿ, ರಾಷ್ಟ್ರಧ್ವಜಕ್ಕೆ ನಿಷ್ಠೆ ತೋರಿರಿ. ನಿಮ್ಮ ಮಾತುಗಳ ನಂಬಬಹುದೆಂದು ನಮಗೆ ಮನವರಿಕೆ ಮಾಡಿಕೊಡಿರಿ, ಹೇಳುವುದೇ ಒಂದು, ಮಾಡುವುದು ಮತ್ತೊಂದು ಎಂಬ ಧೋರಣೆ ನಡೆಯುವುದಿಲ್ಲ” ಎಂಬುದು ಅವರು ಆರೆಸ್ಸೆಸ್‌ಗೆ ತಾಕೀತು ಮಾಡಿದ್ದರು.

ಪಟೇಲರು ತಿದ್ದಬಯಸಿದ ಈ ಧೋರಣೆಗಳು ಅಂತರಾಳದಿಂದ ಬದಲಾಗಿರುವ ಸೂಚನೆಗಳಿಲ್ಲ. ಬದಲಾಗಿ ಇನ್ನಷ್ಟು ಆಕ್ರಮಣಕಾರಿಯಾಗಿ ಪ್ರಕಟಗೊಳ್ಳತೊಡಗಿವೆ.

“ಹೊಸ ಸಂವಿಧಾನದ ಅತಿ ಕೇಡಿನ ಅಂಶವೆಂದರೆ ಅದರಲ್ಲಿ ಭಾರತೀಯ ಎಂಬುದು ಏನೇನೂ ಇಲ್ಲ….. ಪ್ರಾಚೀನ ಭಾರತದ ವಿಶಿಷ್ಟ ಸಾಂವಿಧಾನಿಕ ಬೆಳವಣಿಗೆಗಳ ಕುರಿತ ಪ್ರಸ್ತಾಪವೇ ಇಲ್ಲ. ಪ್ರಾಚೀನ ಗ್ರೀಸ್ ದೇಶದ ಕಾನೂನು ಬರೆದು ದಂತಕತೆಯೇ ಆಗಿಹೋದ ಲೈಕರ್ಗಸ್ ಮತ್ತು ಅಥೆನ್ಸಿನ ಸೋಲನ್ ಅವರಿಗಿಂತ ಬಹಳ ಮೊದಲೇ ಭಾರತದಲ್ಲಿ ಮನುಸ್ಮೃತಿಯ ರಚನೆಯಾಗಿತ್ತು. ಮನು ರಚಿಸಿದ ಕಾನೂನುಗಳು ಇಂದಿಗೂ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದ್ದು, ಭಾರತದಲ್ಲಿ ಹಿಂದೂಗಳು ಅವುಗಳನ್ನು ಸ್ವಯಂಪ್ರೇರಣೆ ಮತ್ತು ವಿಧೇಯತೆಯಿಂದ ಪಾಲಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರ ಪಾಲಿಗೆ ಈ ಕಾನೂನುಗಳು ಲೆಕ್ಕಕ್ಕೇ ಇಲ್ಲ ಎಂದು 1949ರ ನವೆಂಬರ್ 30ರ ಆರೆಸ್ಸೆಸ್ ಮುಖವಾಣಿ ’ದಿ ಆರ್ಗನೈಸರ್’ನ ಸಂಚಿಕೆಯಲ್ಲಿ ಸಂಪಾದಕೀಯ ಬರೆಯಲಾಗಿತ್ತು.

ಇಂದಿಗೂ ಪರಿವಾರದಲ್ಲಿ ಪ್ರತಿಧ್ವನಿಸುವ ಸಂಪಾದಕೀಯವಿದು. ಕಾಲಕಾಲಕ್ಕೆ ಕೇಂದ್ರ ಮಂತ್ರಿಗಳು, ಪರಿವಾರದ ತಲೆಯಾಳುಗಳು- ಕಾಲಾಳುಗಳು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬುದಾಗಿ ಹಾಕುವ ಗುಟುರುಗಳ ಮೂಲಸೆಲೆಯಿದು.

ನಾಗರಿಕರಿಗೆ ಸಂವಿಧಾನದತ್ತವಾಗಿ ದೊರಕಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿ ಸರ್ಕಾರ ಹಲವಾರು ನೀತಿ ನಿರ್ಧಾರಗಳು ಕಾಯಿದೆ ಕಾನೂನುಗಳನ್ನು ಹೊರಡಿಸಿದೆ. ಇವುಗಳನ್ನು ಪ್ರಶ್ನಿಸಿರುವ ಅರ್ಜಿಗಳು ಅಹವಾಲುಗಳು ಹೈಕೋರ್ಟುಗಳು ಮತ್ತು ಸುಪ್ರೀಮ್ ಕೋರ್ಟಿನಲ್ಲಿ ಕೊಳೆಯುತ್ತಿವೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೆಯ ಮತ್ತು 35ಎ ಕಲಮುಗಳನ್ನು 2019ರಲ್ಲಿ ರದ್ದು ಮಾಡಿ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಲಾಯಿತು. ಜಮ್ಮು-ಕಾಶ್ಮೀರಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಲ್ಲಿಸಲಾಗಿರುವ ಸುಮಾರು 25 ಅರ್ಜಿಗಳು ದೀರ್ಘ ಕಾಲದಿಂದ ವಿಚಾರಣೆಗೆ ಕಾದಿವೆ.

ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ಮತ್ತು ನಿರಾಕರಿಸುವ ಪೌರತ್ವ ತಿದ್ದುಪಡಿ ಕಾಯಿದೆ, ರಾಷ್ಟ್ರೀಯ ಪೌರತ್ವ ರಿಜಿಸ್ಟರನ್ನು ಪ್ರಶ್ನಿಸಿರುವ 143 ರಿಟ್ ಅರ್ಜಿಗಳು, ರಾಜಕೀಯ ಪಕ್ಷಗಳು ಚುನಾವಣೆಗಳಿಗೆ ಅಜ್ಞಾತ ದೇಣಿಗೆದಾರರಿಂದ ಹಣ ಪಡೆಯುವ ಚುನಾವಣಾ ಬಾಂಡ್‌ಗಳ ವ್ಯವಸ್ಥೆ, ತನ್ನ ನೀತಿ ಸಿದ್ಧಾಂತಗಳನ್ನು ಒಪ್ಪದಿರುವ ಭಿನ್ನಮತವನ್ನು ಜೈಲಿಗೆ ತಳ್ಳುವ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯಿದೆ (ಯುಎಪಿಎ) ಮತ್ತು ರಾಜದ್ರೋಹದ ಕಾಯಿದೆ, ಅಂತರ್ಜಾಲ ಮಾಧ್ಯಮವನ್ನು ನಿಯಂತ್ರಿಸಲು ಮಿತಿಯಿಲ್ಲದ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯಿದೆ ಮುಂತಾದ ಸಮಾನತೆ, ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕಾಯಿದೆಗಳನ್ನು

ಈ ಬೆಳವಣಿಗೆ ಸಂವಿಧಾನದ ಅಡಿಪಾಯವನ್ನು ಕದಲಿಸಿದೆಯೇ ವಿನಾ ಗಟ್ಟಿ ಮಾಡಿಲ್ಲ.

“ಸಾಮಾಜಿಕ ಜನತಂತ್ರದ ಆಧಾರದ ವಿನಾ ರಾಜಕೀಯ ಜನತಂತ್ರ ಉಳಿದು ಬಾಳಲಾರದು. ಸಾಮಾಜಿಕ ಜನತಂತ್ರವೆಂದರೇನು? ಸ್ವಾತಂತ್ರ್ಯ ಸಮಾನತೆ ಹಾಗೂ ಸೋದರತೆಯ ತತ್ವಗಳು ಜೀವನಮೌಲ್ಯಗಳೇ ಆಗುವ ಬದುಕಿನ ವಿಧಾನವೇ ಸಾಮಾಜಿಕ ಜನತಂತ್ರ” ಎಂಬ ಬಾಬಾಸಾಹೇಬರ ನೀತಿ ಕಳೆದೇಹೋಗಿದೆ.


ಇದನ್ನೂ ಓದಿ: ಒಂದು ಪ್ರಕರಣಕ್ಕೆ ತಡೆ ಬೆನ್ನಲ್ಲೇ ಹಂಸಲೇಖರ ಹೊಸ ಸಂಯೋಜನೆ ‘ಸಂವಿಧಾನ ಗೀತೆ’ ವೈರಲ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...