Homeಅಂಕಣಗಳುಸರಳ ಭಾಷೆಯೊಳಗ ಮಾಹಿತಿ ಪಡೆಯೋದು ನಮ್ಮ ಹಕ್ಕು: ಅದಕ್ಕಾಗಿ ಹೋರಾಡಬೇಕು

ಸರಳ ಭಾಷೆಯೊಳಗ ಮಾಹಿತಿ ಪಡೆಯೋದು ನಮ್ಮ ಹಕ್ಕು: ಅದಕ್ಕಾಗಿ ಹೋರಾಡಬೇಕು

ಯುರೋಪಿಯನ್ ಯೂನಿಯನ್‍ನವರು ಒಂದು ಹೊಸ ಕಾನೂನು ಮಾಡ್ತಾ ಇದ್ದಾರ. ಅದರ ಪ್ರಕಾರ ಜನರು ಖರೀದಿ ಮಾಡುವ ಎಲ್ಲ ಸಾಮಾನುಗಳ ಮೇಲಿನ ಲೇಬಲ್‍ಗಳು ಸರಳ ಭಾಷೆಯೊಳಗ ಇರಬೇಕು.

- Advertisement -
- Advertisement -

ನೀವು ಯಾವಾಗರ ಲೋಕೋಪಯೋಗಿ ಇಲಾಖೆ ಕಚೇರಿಗೆ ಹೋಗಿರತೀರಿ ಅಂತ ತಿಳಕೋರಿ. ವಾಪಸ್ ಬರುವಾಗ ಯಾರರ ಕೇಳಿದರ, ನಾನು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅವರನ್ನು ಭೇಟಿ ಆದೆ ಅಂತ ಹೇಳ್ತೀರಾ?

ನಿಮ್ಮ ಜೀವನದಾಗ ಒಂದು ಸತಿ ಆದರೂ `ಪೊಲೀಸ್ ಠಾಣೆಯಲ್ಲಿ ಆರಕ್ಷಕ ನಿರೀಕ್ಷಕರಿಗೆ ಅರ್ಜಿ ಕೊಟ್ಟೆ’ ಅಂತ ಯಾರಿಗರ ಹೇಳೀರಾ? ನಾವು ಯಾರು ಬಳಸದೆ ಇರೋ ಶಬ್ದಗಳನ್ನ ಸರಕಾರ ಭಾಷಾಂತರದ ನೆಪದಲ್ಲಿ ಯಾಕ್ ಉಪಯೋಗ ಮಾಡತದ?

ಅದರ ನೀವು ತಮಿಳು ನಾಡಿನಾಗ ಇದ್ದರ ನಾನು ಕಾವಲು ನಿಲಯಂಗೆ ಹೋಗಿದ್ದೆ. ಕಾವಲು ರಚಕನ ಅವರನ್ನು ಭೇಟಿ ಅಗಿದ್ದೇ ಅಂತ ಹೇಳ್ತಾ ಇದ್ದೀರಿ. ಅಲ್ಲಿಯ ಹಂಗ ಜನಸ್ನೇಹಿ ಭಾಷಾಂತರ ನಮ್ಮಲ್ಲಿ ಯಾಕ್ ಸಾಧ್ಯ ಆಗೋದಿಲ್ಲ?

ಈ ಪದ್ಧತಿ ನಮ್ಮ ಕಾನೂನು ಮಾಡುವರಲ್ಲೂ ಐತಿ. ಈ ಉದಾಹರಣೆ ನೋಡ್ರಿ.

“ಪ್ರಾದೇಶಿಕ ಅಪರಾಧ ಪ್ರಯೋಗಾಲಯವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಘೋಷಿಸಲು ಈ ಕಾಯಿದೆ ರೂಪಿಸಲಾಗಿದೆ. ಅದರಂತೆ ಪ್ರಾದೇಶಿಕ ಅಪರಾಧ ಪ್ರಯೋಗಾಲಯವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಘೋಷಿಸಲಾಗುತ್ತಿದೆ’’- ಈ ಮೇಲಿನ ಅತ್ಯಂತ ಪ್ರಮುಖ ಘೋಷಣೆ ಪ್ರಾದೇಶಿಕ ಅಪರಾಧ ಪ್ರಯೋಗಾಲಯ ಕಾಯಿದೆ ಒಳಗ ಐತಿ.

ಭವ್ಯ ಭಾರತದ ಘನ ಸರ್ಕಾರಗಳು ಸ್ವಾತಂತ್ರ್ಯ ಪೂರ್ವದಿಂದಲೂ ಪಾಸು ಮಾಡಿಕೊಂಡು ಬರುತ್ತಿರುವ ಅನೇಕ ಅರ್ಥಹೀನ-ಅನುಪಯುಕ್ತ ಕಾಯಿದೆ ಒಳಗ ಇದೂ ಒಂದು.

ಇವು ಯಾಕ್ ಹಿಂಗ ಅರ್ಥಹೀನ – ಗೈರು ಉಪಯೋಗಿ ಅದಾವು ಅಂತ ನಿಮಗ ಗೊತ್ತದ ಏನು? ಯಾಕ್ ಅಂದ್ರ ನಾವು ಮಾಡುವ ಯಾವ ಕಾನೂನು ಯಾರಿಗೂ ಅರ್ಥ ಆಗಬಾರದು ಅಂತ ಆಳುವ ನಾಯಕರಿಗೆ ಅನಸ್ತದ, ಅದಕ್ಕ. ಅದು ಅಷ್ಟ ಸರಳ. ಅದರ ಹಿಂದ ಏನು ಭಾರಿ ರಹಸ್ಯ ಇಲ್ಲ.

ನಮ್ಮಿಂದ ವೋಟು ತೊಗೊಂಡು ಹೋದವರು ನಮಗೆ ತಿಳಿಯೋ ಹಂಗ ಕಾನೂನು ಮಾಡಬೇಕು ಅನ್ನುವ ಕನಿಷ್ಟ ಆಸೆ ನಮಗ ಇರಬೇಕೋ ಬ್ಯಾಡೋ? ಇರಬೇಕು. ಅದು ಬೇಕು ಅಂತನ ಜಗತ್ತಿನ ಬ್ಯಾರೆ ಬ್ಯಾರೆ ದೇಶದಾಗ ಅದರ ಸಲುವಾಗಿ ಹೋರಾಟ ನಡದೆತಿ. ಅದು ಮಾಹಿತಿ ಹಕ್ಕಿನ ಒಂದು ಭಾಗ.

ಮಾಹಿತಿ ಹಕ್ಕು ಅಂದ ಕೂಡಲೇ – ಬರೆ ಒಂದು ಅರ್ಜಿ ಕೊಡೋದು, ಅದಕ್ಕ ಹತ್ತು ರೂಪಾಯಿ ಫೀ ಕಟ್ಟೋದು, ಅಮ್ಯಾಲೆ ಸರ್ಕಾರಿ ಅಧಿಕಾರಿಯಿಂದ ಒಂದು ಎರಡು ತಿಂಗಳ ನಂತರ ಒಂದು ಉತ್ತರ ಬರೋದು, ಅದನ್ನ ನೋಡಿದರ ನಿಮ್ಮ ಪ್ರಶ್ನೆಗೆ, ಅಲ್ಲಿನ ಉತ್ತರಕ್ಕ ಸಂಬಂಧನ ಇಲ್ಲದ ಹಂಗ ಇರೋದು, ಇಷ್ಟ ಅಲ್ಲ. ಅಥವಾ ಉತ್ತರ ಬರಲಾರದ, ಅದು ಮಾಹಿತಿ ಇಲ್ಲದ ಹಕ್ಕು ಅಂತನೂ ಆಗಿ ಬಿಡತದ, ಒಂದೊಂದು ಸತೆ.

ಮಾಹಿತಿ ಹಕ್ಕು ಅಂದ್ರ ಸರ್ಕಾರದ ನೀತಿ, ನಿಯಮ, ಕಾನೂನು-ಕಾಯಿದೆ ಗಳ ಬಗ್ಗೆ ಶ್ರೀ ಸಾಮಾನ್ಯ ತಿಳಕೋಬೇಕು ಅನ್ನೋ ಹಕ್ಕು, ಅದು ತನ್ನ ಮಾತೃಭಾಷೆ ಒಳಗ ಭಾಷಾಂತರ ಆಗಬೇಕು ಅನ್ನುವ ಹಕ್ಕು, ಮತ್ತು ಹಂಗ ಭಾಷಾಂತರ ಆಗಿದ್ದು ಸರಳ ಭಾಷೆ ಒಳಗ ಇರಬೇಕು. ಇಲ್ಲ ಅಂದ್ರ ಇಂಗ್ಲೀಷುದಾಗ ಇದ್ದರ ಛಲೋ ಇತ್ತು ಅನ್ನೋ ಹಂಗ ಆದೀತು.

ಒಟ್ಟಿನಾಗ ಜನರಿಗೆ ಎಲ್ಲ ವಿಷಯ ತಿಳಿಬೇಕು, ಯಾವುದು ಕತ್ತಲಿನಾಗ ನಡಿಯಬಾರದು, ಸರಕಾರ ಪಾರದರ್ಶಕವಾಗಿ ಇರಬೇಕು. ಇದು ಅದರ ಉದ್ದೇಶ.

ಕಾನೂನಿಗೆ ಒಂದಕ್ಕಿಂತ ಹೆಚ್ಚು ಅರ್ಥ ಇರೋ ಕಾರಣದಿಂದನೇ ವಕೀಲರಿಗೆ ಬೇಡಿಕೆ ಅದ. ಇಬ್ಬರು ವಕೀಲರು ಒಂದೇ ರೀತಿ ವಿಚಾರ ಮಾಡೋದಿಲ್ಲ ಅನ್ನುವ ಕಾರಣದಿಂದ ಕೋರ್ಟಿನಾಗ ವಾದ-ವಿವಾದ ನಡಿತದ. ನ್ಯಾಯ ಮೂರ್ತಿಗಳು ಮೂರನೇ ಅಭಿಪ್ರಾಯ ಹೊಂದಿರತಾರ ಅನ್ನುವುದಕ್ಕ ಒಂದರಿಂದ ಇನ್ನೊಂದು ನ್ಯಾಯಾಲಯಕ್ಕ ಕೆಳಗಿನ ಜನ ಮೇಲು ಮನವಿ ಹೋಗತಾರ. ಶಾಸನ ಸಭೆ ಮಾಡಿದ ಕಾನೂನು ಜನರಿಗೆ ಹೋಗಲಿ, ಸರ್ಕಾರದ ಅಧಿಕಾರಿಗಳಿಗೇ ತಿಳಿದಿರೋದಿಲ್ಲ.

ಭಾರತದಾಗ ಮೊದಲ ಬಾರಿಗೆ ಶಾಸನ ಸಭೆಯೊಳಗ ಮಾಹಿತಿ ಹಕ್ಕಿನ ಬೇಡಿಕೆ ಇಟ್ಟವರು ಅಂದ್ರ ಕರ್ನಾಟಕದ ವಿಧಾನ ಪರಿಷತ್ ಸದಸ್ಯ ರಾಗಿದ್ದ ಪ್ರೊ. ಲಕ್ಷ್ಮಿ ಸಾಗರ ಅವರು. ಅವರು 80 ರ ದಶಕದೊಳಗ ಬೇಡಿಕೆ ಇಟ್ಟರು. ಆದರ ನಮ್ಮಲ್ಲಿ ಜಾರಿಗೆ ಬಂದಿದ್ದು 2015 ರ ಒಳಗ. ಸ್ವೀಡನ್ ಹಾಗೂ ಕೆಲ ಚಳಿ ಪ್ರದೇಶ ರಾಜ್ಯಗಳ ಒಳಗ ಈ ಕಾಯಿದೆ ಬಂದು 250 ವರ್ಷ ಆತು. ಅಲ್ಲಿ ಮತ್ತು ಅಮೆರಿಕ ಯೂರೋಪಿನಾಗ ಈಗ ಬರೆ ಮಾಹಿತಿ ಹಕ್ಕು ಇದ್ದರೆ ಸಾಲದು, ಅದು ಜನರಿಗೆ ಅರ್ಥವಾಗೋ ಹಂಗ ಸರಳ ಭಾಷೆಯೊಳಗ ಇರಬೇಕು ಅನ್ನೋ ಆಂದೋಲನ ಶುರು ಆಗೇದ.

ಮೂರು ವರ್ಷದ ಹಿಂದೆ ಅಮೆರಿಕಾದಾಗ ಸರಳ ಭಾಷಾ ಕರಡು ನಿಯಮ ಕಾಯಿದೆ ಅಂತ ಜಾರಿಗೆ ಬಂದದ. ಬ್ರಿಟಿಷ್ ಸರ್ಕಾರದವರು ಸರಳ ಭಾಷಾ ಆಯೋಗ ಅಂತ ಸ್ಥಾಪನೆ ಮಾಡಿದ್ದಾರ. ಸರ್ಕಾರದ ಎಲ್ಲಾ ಕಾನೂನುಗಳು ಸರಳ ಅದಾವ ಇಲ್ಲ ಅಂತ ನೋಡೋದು ಇವರ ಕೆಲಸ.

ಯುರೋಪಿಯನ್ ಯೂನಿಯನ್‍ನವರು ಒಂದು ಹೊಸ ಕಾನೂನು ಮಾಡ್ತಾ ಇದ್ದಾರ. ಅದರ ಪ್ರಕಾರ ಜನರು ಖರೀದಿ ಮಾಡುವ ಎಲ್ಲ ಸಾಮಾನುಗಳ ಮೇಲಿನ ಲೇಬಲ್‍ಗಳು ಸರಳ ಭಾಷೆಯೊಳಗ ಇರಬೇಕು. ಅದು 2021ರಲ್ಲಿ ಜಾರಿಗೆ ಬರ್ತದ.

ಈ ಜನ ಆಂದೋಲನ ಯೂರೋಪಿನಲ್ಲಿ 60-70ರ ದಶಕದೊಳಗ ಶುರು ಆತು. ಡೇವಿಡ್ ಮಾಲೀನಕಾಫ, ರಿಚರ್ಡ್ ವಿಡಿಕ, ಮಾರ್ಟಿನ್ ಕಟ್ಸ್, ಕ್ರಸಿ ಮೇಹರ ಮುಂತಾದ ಭಾಷಾತಜ್ಞ, ಹೋರಾಟಗಾರರು ಜನಜಾಗೃತಿ ಮೂಡಿಸಿ, ಸರಕಾರಗಳನ್ನು ಒಪ್ಪಿಸಿ ಜನಪರ ಭಾಷೆ ಬಳಕೆ ಜನಪ್ರಿಯ ಆಗೋ ಹಂಗ ನೋಡಿಕೊಂಡಾರ.

ಆದರ ನಾವು ಇನ್ನೂ ಅವರ ಬಗ್ಗೆ ಸುದ್ದಿ ಓದೋದರಾಗ ಇದ್ದೇವಿ. ಇರುವ ಒಂದು ಮಾಹಿತಿ ಹಕ್ಕು ಕಾಯಿದೆಯ ಮೂಲ ಸ್ವರೂಪ ಉಳಿಸಿಕೊಳ್ಳಲಿಕ್ಕೆ ನಮಗ ಆಗವಲ್ಲತು.

ಆಳುವ ಪಕ್ಷಗಳು ತಾವು ಮಾಡುವ ಎಲ್ಲ ಕೆಲಸಗಳಿಗೂ ನಮ್ಮಿಂದ ಪೂರ್ವ ಅನುಮತಿ ತೊಗೊಂಡಬಿಟ್ಟವರ ಗತೆ ಮಾಡಲಿಕ್ಕೆ ಹತ್ತಿದಾರು. ಅವರಿಗೆ ಯಾವ ಜವಾಬ್ದಾರಿನೂ ಇಲ್ಲ. ನಿಮಗ ಜವಾಬ್ದಾರಿ ಇಲ್ಲ ಅಂತ ಹೇಳೋ ಧೈರ್ಯ ಯಾರಿಗೂ ಇಲ್ಲ.

ಆದರ ನಮ್ಮ ಸಾಂಸ್ಕೃತಿಕ ಇತಿಹಾಸ ನೋಡಿದರ ನಮಗ ಸರಳ ಭಾಷೆಯ ಬಗ್ಗೆ ಹೊರಗಿನವರು ಹೇಳಿಕೊಡಬೇಕಾಗಿಲ್ಲ ಅಂತ ಅನ್ನಿಸತದ.

ಉದಾಹರಣೆಗೆ ಸಂಸ್ಕೃತದ ಮಹಾ ಕಾವ್ಯಗಳನ್ನ ಕನ್ನಡಕ್ಕೆ ತಂದ ಪಂಪ – ಕುಮಾರವ್ಯಾಸನಂತವರು, ಭಕ್ತಿ ಪಂಥದ ಸಂತರು, `ಓಣಿಯ ಭಾಷೆಯಲ್ಲಿ’ ಅಸಂಖ್ಯ ಪದ ಹಾಡಿದ ಹರಿದಾಸರು, ಮತ್ತು ವಚನ ರಚನೆ ಮಾಡಿದ ಶರಣರು ಸರಳ ಭಾಷೆಯ ಬಗ್ಗೆ ಮಾತು ಆಡದೆ ಮಾಡಿ ತೋರಿಸಿದವರು.

`ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಅನ್ನುವ ಮಾತಿನ ಸರಳತೆ ಕೋಡ್ ಆಫ್ ಹಮ್ಮುರಬಿಯಿಂದ ಹಿಡಕೊಂಡು ಭಾರತೀಯ ಸಂವಿಧಾನದ ವರೆಗೂ ಧ್ವನಿಸುತ್ತದ.

ಕೆಲವು ವಚನಕಾರರು ಅರ್ಥ ಆಗಲಾರದ ವಚನ ಬರೆದರು, ಇನ್ನೂ ಕೆಲವರು ಬೆಡಗಿನ ವಚನ ಬರೆದರು ಅನ್ನುವುದ ಖರೆ.

ಹನ್ನೆರಡನೇ ಶತಮಾನದೊಳಗ ಸಾಧ್ಯ ಆಗಿದ್ದು 20ನೇ ಶತಮಾನದೊಳಗ ಯಾಕ್ ಸಾಧ್ಯ ಆಗತಾ ಇಲ್ಲ? ಇದಕ್ಕ ಉತ್ತರ ಸರಳ ಇಲ್ಲ.

ಇಲ್ಲ ಅನ್ನುವದಕ್ಕ ಅಪವಾದವಾಗಿ ಕೆಲವರು ಪ್ರಯತ್ನ ಮಾಡಿದರು. ಅದರಲ್ಲಿ ಮುಖ್ಯವಾದವರು ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿದ್ದ ಜ್ಯೋತಿ ಸನ್ಯಾಲ್ ಅವರು. ಅವರು ಪ್ಲೇನ್ ಇಂಗ್ಲೀಷ್ ಇಂಡಿಯಾ ಅಂತ ಒಂದು ಸಂಸ್ಥೆ ಶುರು ಮಾಡಿದರು. ಇಂಗ್ಲೀಷ್ ಮಾತು ಆಡುವ ಪ್ರತಿಯೊಬ್ಬ ಭಾರತೀಯ ಓದಲೇಬೇಕಾದ ಪುಸ್ತಕ ಅಂತ ಅನ್ನಿಸಿಕೊಳ್ಳುವ `ಇಂಡ್ಲಿಷ’ ಅನ್ನುವ ಮಜವಾದ ಹೆಸರಿನ ಪುಸ್ತಕ ಬರೆದರು.

ಭಾರತೀಯ ಪತ್ರಿಕೋದ್ಯಮ ಇತಿಹಾಸದಲ್ಲಿ ಪ್ರಥಮ ಅನ್ನುವ ದಿ ಸ್ಟೇಟ್ಸ್‌ಮನ್ ಪತ್ರಿಕೆ ಭಾಷಾ ಬಳಕೆ ಕೈಪಿಡಿ ಪುಸ್ತಕ ಬರೆದರು.

ಕಲ್ಕತ್ತಾದ ಹತ್ತಿರ ಹಳ್ಳಿಯಲ್ಲಿ ಬೆಳೆದ ಅವರು ಜಾಧವಪುರ ವಿಶ್ವವಿದ್ಯಾಲಯದೊಳಗ ಸಾಹಿತ್ಯ ಪದವಿ ಪಡೆದು ಕಲ್ಕತಾ-ಬೆಂಗಳೂರುಗಳಲ್ಲಿ ಕೆಲಸ ಮಾಡಿದರು. ವಿಶ್ವದ ಅತಿ ಶ್ರೇಷ್ಟ ಪತ್ರಿಕೆಗಳನ್ನು ಓದಿ – ಮನನ ಮಾಡಿ – ಸರಳ ಭಾಷೆಯ ಅಗತ್ಯವನ್ನು ಮನದಟ್ಟುಮಾಡಿಕೊಂಡರು.

ತಮ್ಮ ನಿವೃತ್ತಿ ನಂತರ ಲಂಡನ್ನಿನ ಮಾರ್ಟಿನ್ ಕಟ್ಸ್ ಅವರ ಸಹಯೋಗದಲ್ಲಿ ಸರಳ ಭಾಷೆ ಆಂದೋಲನ ಶುರು ಮಾಡಿದರು. ಐಸಿಐಸಿಐ ಬ್ಯಾಂಕ್‍ನಂತಹ ಕೆಲವು ಕಂಪನಿಗಳ ನೀತಿ- ನಿಯಮಗಳನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ತಿದ್ದಿ ಬರೆದರು.

ಭಾರತೀಯ ಕಾನೂನುಗಳು ಇನ್ನೂ ಬ್ರಿಟಿಷರ ನೆರಳಿನಲ್ಲಿ ಇವೆ. ಇವು ಬದಲು ಆಗದೆ ಇದ್ದರೆ ಅಳುವವರು ಎಷ್ಟು ಬದಲು ಆದರೂ ಕೂಡ ಬ್ರಿಟೀಷ್ ಆಡಳಿತವೇ ಮುಂದುವರೆಯುತ್ತದೆ ಅಂತ ಅವರು ಹೇಳುತ್ತಾ ಇದ್ದರು.

ಪತ್ರಿಕೆಗಳು ಸರಳವಾದ ಭಾಷೆ ಬಳಸಬೇಕು. ಇಲ್ಲದೆ ಹೋದಲ್ಲಿ ಇನ್ನೂ ಅನೇಕ ಶತಮಾನಗಳು ಹೋದರೂ ಕೂಡ ಓದುಗರಿಗೆ ಬಜೆಟ್ ಮರುದಿನದ ಪತ್ರಿಕೆಯಲ್ಲಿ ಅರ್ಥವಾಗೋದಿಲ್ಲ. ಯಾವ ಮುಖ್ಯ ಕಾಯ್ದೆ, ತಿದ್ದುಪಡಿ, ನೀತಿ ನಿಯಮ ಯಾವುದೂ ಓದುಗರನ್ನು ಮುಟ್ಟುವುದಿಲ್ಲ, ಅಂತ ಅವರು ಪ್ರತಿಪಾದನೆ ಮಾಡುತ್ತಿದ್ದರು.

ಅವರು ಹೋದ ಮೇಲೆ ಕೆಲವು ಬದಲಾವಣೆಗಳು ಅಗಿದಾವ. ರೋಹಿಣಿ ನಿಲೇಕಣಿ ಅವರು ನಡೆಸುವ `ನ್ಯಾಯ’ ಅನ್ನುವ ಸಂಸ್ಥೆ ವಿವಿಧ ಜನೋಪಯೋಗಿ ಕಾಯಿದೆಗಳ ಸರಳ ರೂಪಗಳನ್ನು ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟ ಮಾಡತದ.

ಸುಭಾಷ್ ವಿಜಯರಣ ಅನ್ನುವ ವಕೀಲರು ಸುಪ್ರೀಂ ಕೋರ್ಟ್‍ದೊಳಗ ಎಲ್ಲ ಕಾಯಿದೆಗಳು ಸರಳ ಭಾಷೆ ಒಳಗ ಇರಬೇಕು ಅನ್ನುವ ಅರ್ಜಿ ದಾಖಲು ಮಾಡಿದ್ದಾರ. ಯುವ ವಕೀಲರಿಗೆ ಸರಳ ಭಾಷೆಯಲ್ಲಿ ಕಾಯಿದೆ ಕರಡು ತಯಾರಿ ಮಾಡುವ ತರಬೇತಿ ಕೊಡಬೇಕು ಅಂತ ಅದರೊಳಗ ಬೇಡಿಕೆ ಇಟ್ಟಾರ. ಮಹೇಶ್ ಶಾರದ ಅನ್ನುವ ನಿವೃತ ನ್ಯಾಯಾಧೀಶರು ನ್ಯಾಯಾಲಯಗಳಲ್ಲಿ ಸರಳ ಭಾಷೆಯ ಅವಶ್ಯಕತೆಗೆ ಬೆಂಬಲ ಸೂಚಿಸಿದ್ದಾರ.

ಆದರ ಅದು ನಮ್ಮ ಜನರಿಗೆ ಇನ್ನೂ ಅವಶ್ಯಕ ಅನ್ನಿಸಿಲ್ಲ. ಹಂಗಾರ ಇದು ನಮಗ ಬ್ಯಾಡ್ ಏನು? ಪೀಜಾ, ಬರ್ಗರ್ – ಕೋಲ್ಡ್ ಕಾಫಿ ಎಲ್ಲ ಬೇರೆ ದೇಶದವರನ್ನು ನೋಡಿ ನಾವು ಕಾಪಿ ಮಾಡತೆವಿ, ಆದರ ಇಂಥಾ ಒಳ್ಳೆ ವಿಚಾರ ಯಾಕ ನಾವು ಪಾಲಿಸೋದಿಲ್ಲ?

ಯಾಕ್ ಅಂದ್ರ ನಾವು ಸರಕಾರ ನಡಸಲಿಕ್ಕೆ ಕೆಲವು ಜನರಿಗೆ ಹೊರಗುತ್ತಿಗೆ ಕೊಟ್ಟಿರತೇವು. ಆದರ ಬ್ಯಾರೆ ವಿಷಯ ಎಲ್ಲ ನಾವು ಸ್ವಂತ ಪಾಲನೆ ಮಾಡ್ತೇವಿ. ಅಷ್ಟ.


ಇದನ್ನೂ ಓದಿ: ಬೈ ಎಲೆಕ್ಷನ್ ಅನ್ನು ಬೈಯ್ಯೋ ಎಲೆಕ್ಷನ್ನು ಅಂತ ತಿರುಗಿಸಿಬಿಟ್ಟ ನಮ್ಮ ಠೀವಿ ಚಾನಲ್ಲುಗಳು…
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕನ್ನಡದ ಮಟ್ಟಿಗಂತೂ, ಸಂಸ್ಕೃತ ಪದಗಳನ್ನು ಕನ್ನಡ ಬರವಣಿಗೆಗೆ ನುಸುಳಿಸಿರುವುದರಿಂದ ಕನ್ನಡ ಕಗ್ಗಂಟಾಗಿದೆ.
    ವಿಜಾತಿಯ ಒತ್ತಕ್ಷರಗಳಿಂದ,ಮಹಾಪ್ರಾಣ ಅಕ್ಕರಗಳನ್ನೊಳಗೊಂಡ ಪದಗಳು ಕನ್ನಡಬೇರಿನ ಪದಗಳಲ್ಲ ಎಂಬ ಕನ್ನಡನುಡಿಯರಿಗರ ಮಾತನ್ನು ಲೆಕ್ಕಕ್ಕೆ ತೆಗೆದುಕೊಂಡು ಮುನ್ನಡೆಯದಿದ್ದರೆ ಕನ್ನಡ ಮತ್ತಷ್ಟು ಕಗ್ಗಂಟಾಗಲಿದೆ.
    ಉದಾ:-ಪ್ರಥಮ…ಮೊದಲ
    ದ್ವಿತೀಯ… ಎರಡನೆಯ

LEAVE A REPLY

Please enter your comment!
Please enter your name here

- Advertisment -

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...