Homeಅಂಕಣಗಳುಸುಮಲತಾರದ್ದು ಈ ಶತಮಾನದ ಎರಡನೇ ದ್ರೋಹ

ಸುಮಲತಾರದ್ದು ಈ ಶತಮಾನದ ಎರಡನೇ ದ್ರೋಹ

- Advertisement -
- Advertisement -

ಮಂಡ್ಯ ಜಿಲ್ಲೆ ಜನತೆಗೆ ಸುಮಲತಾ ನಡೆ ಈ ಶತಮಾನದ ಎರಡನೇ ದ್ರೋಹವಾಗಿ ಕಾಣತೊಡಗಿದೆಯಂತಲ್ಲಾ. ಮೊದಲ ದ್ರೋಹ ಎಸ್.ಎಂ ಕೃಷ್ಣರದ್ದು. ಯಾರನ್ನು ಕೇಳಿದರೂ ತಾವು ಮೋಸ ಹೋದ ಮಾತು ಅವರಿಂದ ಹೊರಬರುತ್ತಿದೆ. ಇದಕ್ಕೆ ಅವರು ಕೊಡುವ ಕಾರಣ: ಸುಮಲತಾ ಚುನಾವಣೆ ಮುಗಿಯುವ ಹಂತದಲ್ಲಿ ಸೆರಗೊಡ್ಡಿ ಸ್ವಾಭಿಮಾನದ ಭಿಕ್ಷೆ ಬೇಡಿದರು; ಇದರಿಂದ ಕರಗಿಹೋದ ಮಂಡ್ಯದ ಜನ ತಮ್ಮ ಮನೆಯ ಮಗಳಾಗಿ ಸ್ವೀಕರಿಸಿದರು; ಅಂದು ಮುಖ್ಯಮಂತ್ರಿ ಮಗನೇ ಮೈತ್ರಿ ಸರ್ಕಾರದ ಅಭ್ಯರ್ಥಿಯಾದರೂ ಕಾಂಗ್ರೆಸ್ಸಿಗರು ಒಳಗೊಳಗೇ ಕೆಲಸ ಮಾಡಿದರು. ಭಾಷಾಭಿಮಾನಿಗಳು, ರೈತಸಂಘದವರು, ದಲಿತ ಸಂಘದ ಲೀಡರುಗಳು ಹಗಲು ರಾತ್ರಿ ಕೆಲಸ ಮಾಡಿದ್ದರಿಂದ ಸುಮಲತಾ ಒಂದೂಕಾಲು ಲಕ್ಷದ ಲೀಡು ಪಡೆದು ಗೆದ್ದರು. ಆದರೇನು ಗೆದ್ದ ಕ್ಷಣದಿಂದಲೇ ಅವರ ಒಡನಾಟ ಮನೆಹಾಳು ಬಿಜೆಪಿಗಳ ಜೊತೆ ಆರಂಭವಾಯ್ತು. ಈಗ ಅವರು ಹೆಚ್ಚುಕಮ್ಮಿ ಬಿಜೆಪಿ ಸೇರಿದಂತೆಯೇ ಅಂಬಂತೆ ಬಿಜೆಪಿಗೆ ಬಂಬಲ ಘೋಷಿಸಿರುವುದು ಕೂಡ ಸಕಾರಣವಾಗಿರದೆ ಇನ್ನ ವರ್ಷವಿರುವ ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ಸೇರಿ ಮತದಾರರಿಗೆ ಆಘಾತ ನೀಡಿದ್ದಾರೆ. ಈಕೆಯನ್ನು ಬೆಂಬಲಿಸಿದ ಸಿನಿಮಾ ನಟರೂ ಕೂಡ ಮೋಸ ಹೋಗಿದ್ದಾರೆ. ಆದರೇನು ಇಂತಹ ಯಾವ ನೋವೂ ಅವರನ್ನು ಭಾಧಿಸಿದಂತಿಲ್ಲ. ಇವರ ಬಗ್ಗೆ ಅಪ್ರಭುದ್ಧವಾಗಿ ಮಾತನಾಡಿದ್ದ ರೇವಣ್ಣ, ಶಿವರಾಮೇಗೌಡರ ಮಾತುಗಳೇ ನಿಜವಾಗಿರುವ ಈ ಸಮಯದಲ್ಲಿ, ಶಿವರಾಮೇಗೌಡ ಸುಮಲತಾ ಒಂದೇ ವೇದಿಕೆಗೆ ಬಂದರಲ್ಲಾ ಥೂತ್ತೇರಿ.

*****

ಇದ್ದಕ್ಕಿದ್ದಂತೆ ಮಂಡ್ಯ ಜಿಲ್ಲೆಯ ಉರಿಗೌಡ, ನಂಜೇಗೌಡರ ಬಗ್ಗೆ ವಕಾಲತ್ತು ವಹಿಸಿರುವ ಶೋಭಾ ಕರಂದ್ಲಾಜೆ ಎಂಬ ಸಂಶೋಧಕಿ ಎಡೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಬಲಗೈನಂತಿದ್ದವರು. ನೂರು ವರ್ಷದ ಇತಿಹಾಸವಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು (ವಿಐಎಸ್‌ಎಲ್) ಕೇಂದ್ರ ಸರಕಾರ ಮುಚ್ಚಿ ಒಂದು ಸಾವಿರ ಕುಟುಂಬಗಳು ಬೀದಿಗೆ ಬಿದ್ದಾಗ ಇವರು ಮಾತನಾಡಲಿಲ್ಲ. ವಿಐಎಸ್‌ಎಲ್ ಮುಚ್ಚಲು ಸಹಕರಿಸಿದ ಶಿವಮೊಗ್ಗದ ರಾಜಕಾರಣಿಗಳ ಮನಸ್ಸಿನ ಹಿಂದೆ ಇದ್ದ ಕುತ್ಸಿತ ಭಾವನೆಗಳು ಹಲವು: ಭದ್ರಾವತಿ ಹಿಂದಿನಿಂದ ಕಾಂಗ್ರೆಸ್ಸನ್ನು ಬೆಂಬಲಿಸಿಕೊಂಡು ಬಂದ ಕ್ಷೇತ್ರ; ಅಲ್ಲಿಗೆ ಶಿವಮೊಗ್ಗದ ಯಾವ ಮತೀಯ ಕಾಯಿಲೆಗಳೂ ತಲುಪಲಿಲ್ಲ. ಅಲ್ಲಿನ ಎಂಪಿಎಂ (ಮೈಸೂರು ಪೇಪರ್ ಮಿಲ್ಸ್) ಮತ್ತು ವಿಐಎಸ್‌ಎಲ್‌ನಲ್ಲಿನ ಬಹುತೇಕ ಕಾರ್ಮಿಕರೆಲ್ಲಾ ಒಕ್ಕಲಿಗರು. ಇವರ ಬಗ್ಗೆ ಮೊದಲಿನಿಂದಲೂ ಎಡೂರಪ್ಪನವರ ಟೀಮಿಗೆ ತಾತ್ಸಾರ. ಅದೇನೇ ಇರಲಿ ಮಂಡ್ಯಕ್ಕೆ ಬಂದು ಉರಿಗೌಡ ನಂಜೇಗೌಡರ ಬಗ್ಗೆ ಸಂಶೋಧನೆಗೆ ತೊಡಗಿರುವ ಈ ಶೋಭಾ ಕರಂದ್ಲಾಜೆ ನೂರುವರ್ಷದ ಇತಿಹಾಸವಿರುವ ವಿಐಎಸ್‌ಎಲ್ ಬಗ್ಗೆ ಈವರೆಗೂ ಚಕಾರವೆತ್ತದಿರುವುದು ಭದ್ರಾವತಿ ಜನರಿಗೆ ಬಗೆದಿರುವ ದ್ರೋಹವೆಂದು ಅರಿವು ಮಾಡಿಕೊಡಬೇಕಿದೆಯಲ್ಲಾ, ಥೂತ್ತೇರಿ.

ಇದನ್ನೂ ಓದಿ: ಮಾಜಿ ರೌಡಿ ಶೀಟರ್‌ಗೆ ನಮಸ್ಕರಿಸುವುದೂ ಸಂಸ್ಕಾರವಂತಲ್ಲಾ!

ಇತಿಹಾಸದ ಸಮಾಧಿ ಅಗೆದು ಅಲ್ಲಿನ ಸತ್ಯಸಂಗತಿಗಳನ್ನು ಮರೆಮಾಡಿ ತಮಗೆ ಬೇಕಿರುವುದನ್ನು ಸೃಷ್ಟಿಸಿ ಸುಳ್ಳು ಹೇಳುತ್ತ ಹೋಗುವುದು ಬಿಜೆಪಿಗಳ ಹಳೆಯ ಚಾಳಿ. ಅದರಂತೆ ಮಂಡ್ಯ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನ ಬದಿಗೊತ್ತಿ ಉರಿ ಹಿಡಿದು ನಂಜುಕಾರುತ್ತ ಹೊರಟಿವೆ. ಸಂಶೋಧಕ ಹ.ಕ.ರಾಜೇಗೌಡರು ಉರಿಗೌಡ ಮತ್ತು ನಂಜೇಗೌಡರು ಟಿಪ್ಪು ಆಡಳಿತದ ವಿರುದ್ಧ ದಂಗೆ ಎದ್ದರು ಎಂಬ ಸಾಲನ್ನು ಹಿಡಿದುಹೊರಟಿರುವ ಬಿಜೆಪಿಯ ಮಂದಮತಿಗಳು ಒಂದಿಷ್ಟು ಧ್ಯಾನಿಸಿ ಸತ್ಯಸಂಗತಿಯನ್ನು ಗ್ರಹಿಸಿದ್ದಾರೆ. ಟಿಪ್ಪು ಸಂಪುಟದಲ್ಲಿದ್ದ ಎಂಟು ಜನ ಮಂತ್ರಿಗಳಲ್ಲಿ ಐವರು ಬ್ರಾಹ್ಮಣರಿದ್ದರು. ಅದರಲ್ಲಿ ದಿವಾನ್ ಪೂರ್ಣಯ್ಯನೂ ಬ್ರಾಹ್ಮಣ; ಇವರ ಆಣತಿಯಂತೇ ಆಡಳಿತ ನಡೆದಿದೆ. ಆ ಸಮಯದಲ್ಲಿ ಇವರುಗಳ ವರ್ಗವೆಲ್ಲಾ ಸವಲತ್ತಿನಿಂದ ಸಂತೃಪ್ತವಾಗಿದೆ. ಆದಕಾರಣ ವಿರೋಧ ವ್ಯಕ್ತವಾಗಿದೆ; ಟಿಪ್ಪು ಆಡಳಿತದ ಚುಕ್ಕಾಣಿ ಹಿಡಿದಿದ್ದ ಬ್ರಾಹ್ಮಣರು ಏನು ಮಾಡಿದರು, ಎಷ್ಟು ಜಹಗೀರಿಗಳನ್ನು ಪಡೆದು ಆ ಭೂಮಿಯಲ್ಲಿ ಒಕ್ಕಲಿಗರಿಗೆ ಬೇಸಾಯ ಮಾಡಲು ಬಿಟ್ಟು ಗರ್ಭಗುಡಿಯಲ್ಲಿ ತಾವು ಆರಾಮವಾಗಿದ್ದು ಅವಸಾನ ಹೊಂದಿದರು ಎಂಬ ಸಂಗತಿ ಉರಿಗೌಡ ನಂಜೇಗೌಡರ ಸಂಗತಿಯೊಂದಿಗೆ ಈಚೆಬರಬೇಕಾಗಿದೆಯೆಲ್ಲಾ, ಥೂತ್ತೇರಿ.

****

ಈ ಜಗತ್ತಿಗೆ ಶ್ರೇಷ್ಠ ರಾಜಕೀಯ ವ್ಯವಸ್ಥೆ ಎಂದರೆ ಅದು ಪ್ರಜಾತಂತ್ರ. ಇಂತಹ ವ್ಯವಸ್ಥೆಯನ್ನು ದುರುಳವಾಗಿ ಬಳಸಿಕೊಂಡ ಬಿಜೆಪಿಗಳು ಏನೆಲ್ಲಾ ಅನಾಹುತ ಸಾಧ್ಯವೊ ಅದನ್ನೆಲ್ಲಾ ಮಾಡಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲೇ ಚುನಾವಣೆಗೆ ಸ್ಪರ್ಧಿಸಿ ಗೆದ್ದುಬಂದು ತಮ್ಮ ಅಜೆಂಡಾಗಳನ್ನು ಕೈಗೆತ್ತಿಕೊಂಡರು. ಆರಂಭವೇ ರಥಯಾತ್ರೆ, ಇದು ಮುಗಿದನಂತರ ರಾಮಜ್ಯೋತಿ ಪಾದುಕೆ ಮತ್ತು ಇಟ್ಟಿಗೆ ಯಾತ್ರೆ ನಂತರ ಬಾಬರಿ ಮಸೀದಿಯನ್ನು ಕೆಡವಲಾಯ್ತು. ಅಲ್ಲಿಗೆ ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನೇ ಕೆಡವಿ ಕೋಮುಘರ್ಷಣೆಯನ್ನು ದೊಡ್ಡಮಟ್ಟದಲ್ಲಿ ಉದ್ಘಾಟಿಸಲಾಯ್ತು. ಅಂದಿನಿಂದ ನಿರಂತರವಾಗಿ ಮತೀಯ ಘರ್ಷಣೆ ನಡೆಸುತ್ತ, ಪ್ರಜಾತಂತ್ರ ಬಳಸಿಕೊಂಡು ಗೆದ್ದು ಬಂದು, ನಾವು ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ ಎಂದು ಹೇಳಿದ ಸಂಸದನ ವಿರುದ್ಧ ಮೋದಿ ಮಾತನಾಡಲಿಲ್ಲ. ಇಲ್ಲಿನ ಶಿಕ್ಷಣ ಸಂಸ್ಥೆಗಳನ್ನು ಹಾಳುಮಾಡಿ ನ್ಯಾಯಾಂಗ ವ್ಯವಸ್ಥೆಯನ್ನು ಶಿಥಿಲಗೊಳಿಸಿ ದೇಶಕ್ಕೆ ಗಂಡಾಂತರ ತಂದಿರುವಾಗ ಆ ಬಗ್ಗೆ ಮಾತನಾಡಿದ ರಾಹುಲಗಾಂಧಿಗೇ ಪ್ರಜಾತಂತ್ರದಿಂದ ತೊಂದರೆಯಾಗಿದೆ ಎನ್ನುವ ಮೋದಿಯವರು ಪ್ರಜಾತಂತ್ರದ ಬುಡಕ್ಕೆ ಕೊಡಲಿ ಏಟು ಕೊಡುತ್ತ ಬಂದಿರುವುದು ಅರಿವಿಗೇ ಬಂದಿಲ್ಲವಂತಲ್ಲಾ, ಥೂತ್ತೇರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...