2024 ರ ಸಾರ್ವತ್ರಿಕ ಚುನಾವಣಾ ದೃಷ್ಟಿಯಿಂದ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಬಿಜೆಪಿ ಹಣ ಸಂಗ್ರಹಿಸುತ್ತಿದೆ. ಇದು ರಾಮನ ಹೆಸರಿನಲ್ಲಿ ನಡೆಸುವ ರಾಜಕೀಯವನ್ನು ಕೊನೆಗೊಳಿಸುವ ಸಮಯ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದೆ. ಅಯೋಧ್ಯೆಯ ರಾಮ ಮಂದಿರದ ನಿರ್ಮಾಣವನ್ನು ದೇಶದ ಜನರ ದೇಣಿಗೆಯೊಂದಿಗೆ ನಿರ್ಮಿಸಲಾಗುವುದು ಎಂದು ರಾಮ ಜನ್ಮಭೂಮಿ ಟ್ರಸ್ಟ್ ನಿನ್ನೆ ಹೇಳಿತ್ತು.
ಸಾರ್ವಜನಿಕ ದೇಣಿಗೆ ಸ್ವೀಕರಿಸುವ ಮೂಲಕ ರಾಮ ಮಂದಿರವನ್ನು ನಿರ್ಮಿಸಲು ಎಂದಿಗೂ ನಿರ್ಧರಿಸಿರಲಿಲ್ಲ ಎಂದು ಶಿವಸೇನೆ ಹೇಳಿದ್ದು, “ಇದು ರಾಮನ ಹೆಸರಿನಲ್ಲಿ ನಡೆಸುವ ರಾಜಕೀಯ ಅಭಿಯಾನವನ್ನು ಕೊನೆಗೊಳಿಸುವ ಸಮಯ. ಮೂಲತಃ ರಾಮ ಮಂದಿರವನ್ನು ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ಲಾಭಕ್ಕಾಗಿ ನಿರ್ಮಿಸಲಾಗುತ್ತಿಲ್ಲ. ದೇಶದ ಹಿಂದೂಗಳ ಸ್ವಾಭಿಮಾನವನ್ನು ಉನ್ನತೀಕರಿಸುವುದು ಇದರ ಉದ್ದೇಶ ಎಂದು” ಎಂದು ಲೇಖನಲ್ಲಿ ಹೇಳಿದೆ.
ಇದನ್ನೂ ಓದಿ: ಮಂದಿರ ಭವ್ಯವಾಗಬಹುದು; ಪವಿತ್ರವಾಗಿರುವುದಿಲ್ಲ: ಜಿ ರಾಜಶೇಖರ್
ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸುವ ಅಭಿಯಾನದಲ್ಲಿ ಸುಮಾರು ನಾಲ್ಕು ಲಕ್ಷ ಸ್ವಯಂಸೇವಕರು ತೊಡಗಿಸಿಕೊಂಡಿದ್ದಾರೆ. ಈ ಸಾಮೂಹಿಕ ಅಭಿಯಾನವು 2024 ರ ಚುನಾವಣೆಯನ್ನು ಗುರಿಯಾಗಿರಿಸಿಕೊಂಡಿದೆ. ಈ ಸ್ವಯಂಸೇವಕರು ಯಾರು ಮತ್ತು ಅವರು ಯಾವ ಸಂಸ್ಥೆಗೆ ಸೇರಿದವರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಶಿವಸೇನೆ ಆಗ್ರಹಿಸಿದೆ.
ರಾಮ ಮಂದಿರಕ್ಕಾಗಿ ನೂರಾರು ಕರಸೇವಕರು ತಮ್ಮ ಪ್ರಾಣ ಮತ್ತು ರಕ್ತವನ್ನು ತ್ಯಾಗ ಮಾಡಿದರು. ಈ ರಾಮ ಮಂದಿರವನ್ನು ದೇಣಿಗೆಯೊಂದಿಗೆ ನಿರ್ಮಿಸಬೇಕೇ? ರಾಮ ಮಂದಿರದ ಹೆಸರಿನಲ್ಲಿ ಸ್ವಯಂಸೇವಕರು ದೇಣಿಗೆಗೆ ಬಂದರೆ ಅದು ಕರಸೇವಕರಿಗೆ ಮಾಡುವ ಅವಮಾನವಾಗಿದೆ ಶಿವಸೇನೆ ಹೇಳಿದೆ.
ತಮ್ಮ ಮಾಜಿ ಮಿತ್ರ ಪಕ್ಷ ಶಿವಸೇನೆಯ ಆರೋಪಗಳನ್ನು ಬಿಜೆಪಿ ನಿರಾಕರಿಸಿದ್ದು, ರಾಮ ಮಂದಿರ ನಿರ್ಮಾಣವು ಪಕ್ಷದ ರಾಜಕೀಯ ಕಾರ್ಯಸೂಚಿಯಲ್ಲ ಎಂದಿದೆ. ಅಲ್ಲದೆ ಶಿವಸೇನೆ ಜನರ ಸ್ವಯಂಪ್ರೇರಿತ ಕೊಡುಗೆಗಳನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಅಯೋಧ್ಯೆಯ ರಾಮ ಮಂದಿರ ನಿರ್ಮಾಣವನ್ನು ದೇಶದ ಜನರ ದೇಣಿಗೆಯೊಂದಿಗೆ ಸಂಪೂರ್ಣವಾಗಿ ಮಾಡಲಾಗುವುದು ಎಂದು ರಾಮ ಜನ್ಮಭೂಮಿ ದೇವಾಲಯ ಟ್ರಸ್ಟ್ ನಿನ್ನೆ ಹೇಳಿದೆ. ದೇಣಿಗೆಗಾಗಿ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಲು ಟ್ರಸ್ಟ್ ನಿರ್ಧರಿಸಿದ್ದು, ದೇಶದ ನಾಲ್ಕು ಲಕ್ಷ ಗ್ರಾಮಗಳನ್ನು ತಲುಪಲು ಮತ್ತು 10 ಕೋಟಿಗೂ ಹೆಚ್ಚು ಕುಟುಂಬಗಳಿಂದ ಹಣ ಸಂಗ್ರಹಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಅಭಿಯಾನವು ಜನವರಿ 15 ರಿಂದ ಫೆಬ್ರವರಿ 27 ರವರೆಗೆ ನಡೆಯಲಿದೆ.
ಇದನ್ನೂ ಓದಿ:ಕಾಶ್ಶೀರ ರಾಜ್ಯ ನೆಲಸಮ ಮಾಡಿದ ವಾರ್ಷಿಕ ದಿನವೇ ಬಾಬ್ರಿ ಮಸೀದಿ ನೆಲಸಮವಾದ ಸ್ಥಳದಲ್ಲಿ ಮಂದಿರ ಶಿಲಾನ್ಯಾಸ ಕಾಕತಾಳೀಯವೆ?