ಜೈ ಭೀಮ್
—————–
ಸಂವಿಧಾನದ ಬೇರ
ಈ ಮಣ್ಣಿನೊಳಗೂರಿ
ಮರವಾಗಿ ಬೆಳೆಸಿದೆ
ಹೆಮ್ಮರವಾಗಿ ಬೆಳೆಸಿದೆ
ರೆಂಬೆ ಕೊಂಬೆಗಳಲೆಲ್ಲಾ
ಹಕ್ಕುಗಳನಿರಿಸಿ
ಪಕ್ಷಿಗಳಾಗಿಸಿದೆ
ಸ್ವಚ್ಛಂದ ಹಕ್ಕಿಗಳಾಗಿಸಿದೆ
ಉಸಿರ ಗಾಳಿಗೂ
ನಿರಾಳತೆಯ ಕೊಟ್ಟೆ
ಒಂದೇ ವೃಕ್ಷದಡಿ
ಎಲ್ಲರಿಗೂ ನೆರಳಿತ್ತು
ಭಾರತೀಯರೆಂದೆ
ನಾವು ಭಾರತೀಯರೆಂದೆ..
ಕೆರೆಯ ನೀರನೇನಂತೆ
ಬಾಂದಳದ ಮಳೆಹನಿಗೆ
ಬಾಯ್ತೆರೆದು ನಿಂತೆವು
ಅವರೆದೆಗೆ ಎದೆ ಕೊಟ್ಟು
ಈವರೆಗೆ ಬಂದೆವು.
ನಿನ್ನ ಮರದಡಿಯು
ಅವರಿಗೆ ಸಹ್ಯವಲ್ಲ
‘ಶ್ರೇಷ್ಠತೆ’ಗೆ ಅಲ್ಲಿ
ಒಂದಿನಿತೂ ಜಾಗವಿಲ್ಲ
ನಿನ್ನವರನೆ ದಾಳವಾಗಿಸಿ
ಉರುಳಿಸುವ ತಂತ್ರ!
ಕುಳಿತು ತಿನ್ನುವಿರಂತೆ
ವಿಧವಿಧದ ಹೂ ಹಣ್ಣು
ಕಿತ್ತು ತರುವೆ ಎಂದರು
ಅತ್ತಿತ್ತ ನೋಡದೆ ಅಂಧರು
ಹೆಗಲು ಕೊಟ್ಟು ಬಿಟ್ಟರು
ತುತ್ತ ತುದಿಯಲಿ ಕುಳಿತು
ಕೊಡಲಿ ಕೈಯಲ್ಲಿ ಹಿಡಿದು
ಒಂದೊಂದೆ ರೆಂಬೆಯ
ಕತ್ತರಿಸುತಿಹರು
ನೀ ಕೊಟ್ಟ ನೆರಳ
ಇಲ್ಲವಾಗಿಸುತಿಹರು..
ಆಳವಾದ ಬೇರನು
ಸಡಿಲಗೊಳ್ಳಲು ಬಿಡೆವು
ಜೈ ಭೀಮನೆನುವೆವು
ಉರಿಬಿಸಿಲಲೂ.
ಸಂವಿಧಾನದ ಮರವ
ಉಳಿಸಲೆಂದು
ಜೊತೆ ಸೇರುವೆವು
ಹಗಲಿರುಳಲೂ..
– ಮಿಸ್ರಿಯಾ.ಐ.ಪಜೀರ್
ಮಂಗಳೂರು