Homeಮುಖಪುಟತಾಯ್ತನ ಮತ್ತು ಅನಾಥತೆಯ ಭಾವಗಳನ್ನು ಅನನ್ಯವಾಗಿ ಕಟ್ಟಿಕೊಡುವ 'ಟ್ರೂ ಮದರ್ಸ್'

ತಾಯ್ತನ ಮತ್ತು ಅನಾಥತೆಯ ಭಾವಗಳನ್ನು ಅನನ್ಯವಾಗಿ ಕಟ್ಟಿಕೊಡುವ ‘ಟ್ರೂ ಮದರ್ಸ್’

- Advertisement -
- Advertisement -

ನವೋಮಿ ಕವಾಸೆ (Naomi Kawase) ಅವರ ಹೆಸರು ಜಾಗತಿಕ ಸಿನಿಮಾವಲಯದಲ್ಲಿ ಬಹಳ ಚಿರಪರಿಚಿತ. ಬಹುಶಃ ಕಳೆದ ಮೂರು ದಶಕಗಳಿಂದ ಜಪಾನಿನ ಹಿರೊಕಝು ಕೊರೀಡನ (hirokazu koreeda) ಸಿನಿಮಾಗಳನ್ನು ಬಿಟ್ಟರೆ ಕಾನ್, ಬರ್ಲಿನ್, ಟೊರೊಂಟೊ ಮುಂತಾದ ಪ್ರಸಿದ್ಧ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರವೇಶ ಪಡೆಯುವುದಷ್ಟೇ ಅಲ್ಲ ಪ್ರಶಸ್ತಿಗಳನ್ನು ಪಡೆದ ಮತ್ತೊಬ್ಬ ಸಿನಿಮಾತೃ ಎಂದರೆ ಅದು ನವೋಮಿ ಕವಾಸೆ.

90ರ ದಶಕದ ಪ್ರಾರಂಭದಿಂದಲೂ, ತನ್ನ ಇಪ್ಪತ್ತನೇ ವಯಸ್ಸಿನಿಂದಲೇ ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವ ನವೋಮಿ, ಜಾಗತಿಕ ಸಿನಿಮಾ ವಲಯಕ್ಕೆ ಪರಿಚಿತವಾಗಿದ್ದು ಮಾತ್ರ 1997ರ ತಮ್ಮ ’ಸುಝಕು’ (Suzaku) ಸಿನಿಮಾದ ಮುಖಾಂತರ. ಈ ಸಿನಿಮಾ 1997ರ ಕಾನ್ ಸಿನಿಮೋತ್ಸವದಲ್ಲಿ ಪ್ರತಿಷ್ಠಿತ Camera d’or ಪ್ರಶಸ್ತಿ ಪಡೆಯಿತು. ಅತ್ಯಂತ ಕಿರಿಯ ವಯಸ್ಸಿನಲ್ಲೆ ಈ ಪ್ರಶಸ್ತಿ ಪಡೆದ ಹೆಗ್ಗಳಿಕೆ ನವೋಮಿಯವರದ್ದು. 2007ರ ’ದ ಮೌರ್‍ನಿಂಗ್ ಫಾರೆಸ್ಟ್’ (The Mourning Forest), 2011ರ ’ಹನೆಝು’ (Hanezu), 2014ರ ’ಸ್ಟಿಲ್ ದ ವಾಟರ್’ (Still The water) ಮತ್ತು 2015ರ ’ಸ್ವೀಟ್ ಬೀನ್’ (Sweet Bean) ಇವೆ ಮುಂತಾದ ಸಿನಿಮಾಗಳು ನವೋಮಿಯವರಿಗೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟವು.

’ಟ್ರೂ ಮದರ್ಸ್’- (True Mothers)

ಸಟೊಕೊ ಮತ್ತು ಕಿಯೊಕಝುರ 11 ವರ್ಷದ ಮಗ ಆಸಟೊನ ಮೇಲೆ, ಅವನು ಕಲಿಯುವ ಶಾಲೆಯಲ್ಲಿ, ಆಟವಾಡುವಾಗ ತನ್ನ ಸಹಪಾಠಿಯನ್ನು ಕೆಳಗೆ ಬೀಳಿಸಿದ ಎಂಬ ಅರೋಪ ಬರುತ್ತದೆ. ಈ ಅರೋಪವನ್ನ ತಾಯಿ ಸಟೊಕೊಳ ಮನಸ್ಸು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಈ ಆರೋಪ ಅವಳನ್ನು 11 ವರ್ಷದ ಹಿಂದಿನ ನೆನಪಿಗೆ ಕೊಂಡೊಯ್ಯುತ್ತದೆ. ಸಟೊಕೊ ಮತ್ತು ಕಿಯೊಕಝು ಬಹಳ ಅನ್ಸೋನ್ಯವಾದ ಜೋಡಿಗಳು. ಸಟೊಕೊಳಿಗೆ ತಾಯಿಯಾಗುವ ಬಯಕೆ, ಕಿಯೊಕಝು ಕೂಡ ಇದಕ್ಕೆ ಒಪ್ಪುತ್ತಾನೆ. ಆದರೆ
ಕಿಯೊಕಝುವಿನಲ್ಲಿರುವ ಸಮಸ್ಯೆಯಿಂದ ಮಗು ಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಸಂಗತಿ ವೈದ್ಯರಿಂದ ತಿಳಿಯುತ್ತದೆ. ಇದು ಇಬ್ಬರನ್ನೂ ಬಾಧಿಸುತ್ತದೆ. ಆನಂತರ ಅವರು ಮಗುವನ್ನು ದತ್ತು ಪಡೆಯಲು ನಿಶ್ಚಯಿಸುತ್ತಾರೆ. ಇದಿಷ್ಟು ಸಿನಿಮಾ ಪ್ರಾರಂಭದ ಮೂವತ್ತು ನಿಮಿಷಗಳ ಕಥೆ/ದೃಶ್ಯಗಳು. ಇದಿಷ್ಟನ್ನು ನೋಡುವಾಗ ನನಗೆ ಈ ಸಿನಿಮಾ ಯಾವ ಆಲೋಚನೆಯನ್ನ ಪ್ರಸ್ತುತಪಡಿಸುತ್ತದೆ ಎಂಬ ಗೊಂದಲ ಶುರುವಾಯಿತು. ಅದರಲ್ಲೂ ಸಟೊಕೊ ಪಾತ್ರ ತಾನು ತಾಯಿಯಾಗಬೇಕು ಎಂದು ಹಂಬಲಿಸುವುದು, ಅದಕ್ಕಾಗಿ ಪರಿತಪಿಸುವುದು, ಈ ಎಲ್ಲಾ ಸಂಗತಿಗಳು ಸುಲಭಕ್ಕೆ ಒಪ್ಪಿಗೆ ಆಗುತ್ತಿರಲಿಲ್ಲ.

ಅನ್ಯ ಕ್ಷೇತ್ರಗಳಂತೆ ಸಿನಿಮಾ ಕೂಡ ಪುರುಷರ ಪ್ರಾಬಲ್ಯವಿರುವ ಕ್ಷೇತ್ರ. ಇದಕ್ಕೆ ಜಪಾನ್ ಕೂಡ ಹೊರತಲ್ಲ. ಇಂತಹ ಪರಿಸರದಲ್ಲಿ ತನ್ನ ಸ್ವಂತ ಸಾಮರ್ಥ್ಯದಿಂದ ಜಾಗತಿಕ ಮನ್ನಣೆ ಪಡೆದ ನವೋಮಿ, ಈ ಸಿನಿಮಾದಲ್ಲಿ ಅದೇ ಪುರುಷ ಪ್ರಧಾನ ಸಮಾಜದ ಆಲೋಚನೆಯ ಪ್ರಭಾವದಿಂದ ಹುಟ್ಟಿದ, ಹೆಣ್ಣು ತಾಯ್ತನಕ್ಕೆ ಹಂಬಲಿಸುವ ಅದು ಸಾಧ್ಯವಿಲ್ಲದಾಗ ಅಪರಾಧಿ ಭಾವನೆಯಿಂದ ನರಳುವ, ಈ ತರಹದ ಆಲೋಚನೆಯನ್ನ ಈ ಸಿನಿಮಾ ಮುಖಾಂತರ ಪ್ರಸ್ತುತ ಪಡಿಸುತ್ತಿದ್ದಾರಾ ಎಂದು ಪ್ರಾರಂಭದಲ್ಲಿ ಗೊಂದಲವಾಯಿತು. ಆದರೆ ಅರ್ಧ ಗಂಟೆಯ ನಂತರ ತೆರೆದುಕೊಳ್ಳುವ ಚಿತ್ರಕಥೆಯಲ್ಲಿ, ಸಟೊಕೊಳ ಕಥೆಯ ಸಮಾನಾಂತರವಾಗೆ ಬರುವ ಹಿಕಾರಿಳ ಪಾತ್ರದ ಚಿತ್ರಣ ಈ ಎಲ್ಲಾ ಗೊಂದಲಗಳಿಂದ ಆಚೆ ಬರುವಂತೆ ಮಾಡಿತು. ನವೋಮಿ ಏನು ಹೇಳುತ್ತಿದ್ದಾರೋ ಅಷ್ಟು ಮಾತ್ರ ಕೇಳುವ ಮತ್ತು ಅನುಭವಿಸುವ ಹಂತಕ್ಕೆ ಅದು ನನ್ನನ್ನು ಕೊಂಡೊಯ್ದಿತು.

ಸಟೊಕೊ ದಂಪತಿಗಳಿಗೆ ದತ್ತುವಾಗಿ ಸಿಗುವ ಮಗು ಹಿಕಾರಿಯಳದು. ಹಿಕಾರಿ ತನ್ನ 14ನೇ ವಯಸ್ಸಿಗೆ ತನ್ನ ಸಹಪಾಠಿಯೊಂದಿಗಿನ ಪ್ರೀತಿಯ ಕಾರಣವಾಗಿ ಆ ಮಗುವನ್ನು ಪಡೆಯುತ್ತಾಳೆ. ಹಿಕಾರಿಗೆ ತನ್ನ ಮಗುವಿಂದ ದೂರವಾಗಲೂ ಇಷ್ಟ ಇಲ್ಲ. ಆದರೆ ತನ್ನ ತಂದೆ ತಾಯಿಯರ ಒತ್ತಾಯಕ್ಕೆ ಮಣಿದು ಅವಳು ತನ್ನಮಗುವನ್ನು ದೂರಮಾಡಿಕೊಳ್ಳಬೇಕಾಗುತ್ತದೆ. ಸಟೊಕೊ ತಾಯ್ತತನದ ಹಂಬಲ ಮತ್ತು ತಾಯ್ತನದ ಅನುಭವ ಮತ್ತು ಹಿಕಾರಿಯ ಪ್ರೇಮ ಮತ್ತು ಮಗು ಕಳೆದುಕೊಂಡ ಅನಾಥತೆಯನ್ನ ನವೋಮಿ ಕವಾಸೆ ತನ್ನ ಅದ್ಭುತ ದೃಶ್ಯಕಟ್ಟುಗಳಲ್ಲಿ ಕಟ್ಟಿಕೊಡುತ್ತಾಳೆ. ಈ ಅದ್ಬುತ ದೃಶ್ಯಗಳು ಮೊದಲರ್ಧ ಗಂಟೆ ನನ್ನಲ್ಲಿ ಉಂಟಾದ ವೈಚಾರಿಕ ಗೊಂದಲಗಳಿಗೆ ಉತ್ತರ ಸಿಕ್ಕಿತು ಅಂತ ಖಂಡಿತ ಹೇಳಲಾರೆ. ಆದರೆ ನವೋಮಿ ಕವಾಸೆಯ ಕಲಾತ್ಮಕ ದೃಷ್ಟಿ ಸಮ್ಮೋಹನಗೊಳಿಸಿಬಿಟ್ಟಿತು.

ಯಾವುದೇ ಒಂದು ಐಡಿಯಾ (ಆಲೋಚನೆ), ಸಿನಿಮಾದಲ್ಲಿ ಹೆಚ್ಚು ಭಾವುಕವಾಗಿ ಅಥವಾ ಮೆಲೋಡ್ರಮ್ಯಾಟಿಕ್ ಆಗಿ ಬಂದುಬಿಟ್ಟರೆ ಅದು ಆ ಕ್ಷಣಕ್ಕೆ ಪ್ರೇಕ್ಷಕನನ್ನ ಆರ್ದ್ರಗೊಳಿಸಿ ಅಲುಗಿಸಿಬಿಡುತ್ತದೆ ನಿಜ. ಆದರೆ ಆ ಸಿನಿಮಾ ತನ್ನ ಪ್ರೇಕ್ಷಕನನ್ನು ಅದರಾಚೆ ಆಲೋಚಿಸಲು ಪ್ರೇರೇಪಿಸಬೇಕೆಲ್ಲ! ಕವಾಸೆಯ ’ಟ್ರೂ ಮದರ್ಸ್’ ಸಿನಿಮಾ ಹೆಚ್ಚು ಮೆಲೋಡ್ರಮ್ಯಾಟಿಕ್ ಆಗಿ ಭಾವುಕವಾಗಿ ಪ್ರಸ್ತುತವಾಗಿದ್ದರೂ ಕೂಡ ಈ ಮೇಲಿನ ಅಭಿಪ್ರಾಯವನ್ನ ಇದಕ್ಕೂ ಅನ್ವಯಿಸಲಾಗುವುದಿಲ್ಲ. ಕವಾಸೆಯ 2015ರ ’ಸ್ವೀಟ್ ಬೀನ್’ (Sweet Bean) ಸಿನಿಮಾದಲ್ಲೂ ಇದು ಅನಿಸಿತ್ತು.

’ಟ್ರೂ ಮದರ್ಸ್’ ಯಾಕೆ ಪ್ರೇಕ್ಷಕನನ್ನ ಸಮ್ಮೋಹನಗೊಳಿಸುತ್ತದೆ? ಪ್ರತಿ ಪಾತ್ರಗಳ ಪ್ರತಿ ಭಾವಗಳನ್ನ ತುಂಬಾ ಕ್ಲೋಸಪ್ ಷಾಟ್‌ಗಳಲ್ಲಿ ಚಿತ್ರಿಸಲಾಗಿದೆ. ಅದರಲ್ಲೂ ಸಿನಿಮಾದ ಎರಡು ಪ್ರಧಾನ ಪಾತ್ರಗಳಾದ ಸಟೊಕೊ ಮತ್ತು
ಹಿಕಾರಿಯರು ಇರುವ ದೃಶ್ಯಗಳನ್ನು. ಈ ಎರಡು ಪಾತ್ರಗಳಲ್ಲಿ ಕ್ರಮವಾಗಿ ಹಿರೋಮಿ ನಾಗಸಕು (Hiromi Nagasaku) ಮತ್ತು ಅಜು ಮಕಿಟ (Aju Makita) ಬಹಳ ಅದ್ಭುತವಾಗಿ ನಟಿಸಿದ್ದಾರೆ. ಕಥೆ, ಪಾತ್ರಗಳಲ್ಲಿ ಉಂಟಾಗುವ ಭಾವನೆ, ಅದರ ಅಭಿವ್ಯಕ್ತಿ, ಅದನ್ನು ಸೆರೆ ಹಿಡಿಯುವ ಕ್ಯಾಮರಾದ ಸ್ಥಿತಿ ಮತ್ತು ಚಲನೆ, ಅದರ ನಡುವೆ ಬರುವ ಆ ಪುಟ್ಟ ನಗರದ ಪರಿಸರದ ದೃಶ್ಯಗಳು, ಈ ಎಲ್ಲಾ ಸಂಗತಿಗಳು ಸಾವಯವಾಗಿ ಒಂದಕ್ಕೊಂದು ಲಯ ಕಂಡುಕೊಂಡಿವೆ.

ಈ ಸಿನಿಮಾಕ್ಕೆ ಮೂಲ ಪ್ರೇರಣೆ ಮಿಝುಕಿ ಸುಜಿಮುರ ಅವರ ಕಾದಂಬರಿ ‘Morning Comes’. ನವೋಮಿ ಕವಾಸೆ ಸಮಕಾಲೀನ ಜಪಾನ್ ಸಮಾಜ ಮತ್ತು ಕುಟುಂಬದ ಸಂಘರ್ಷಗಳನ್ನ ವೈಯಕ್ತಿಕ ನೆಲೆಯಲ್ಲಿ ತನ್ನ ಸಿನಿಮಾಗಳ ಮುಖಾಂತರ ಪ್ರಸ್ತುತಪಡಿಸುತ್ತಾರೆ ಎಂಬ ಮಾತಿದೆ. ಕವಾಸೆಯ ಬಹುತೇಕ ಸಿನಿಮಾಗಳು ಅವರ ’ಅರೆ ಆತ್ಮಚರಿತ್ರೆಗಳು’ ಕೂಡ. ಕವಾಸೆ ಬಾಲ್ಯದಲ್ಲಿಯೇ ಅವರ ತಂದೆ-ತಾಯಿ ವಿಚ್ಚೇದನ ಪಡೆದ ಕಾರಣವಾಗಿ, ಅವರು ತಮ್ಮ ದೊಡ್ಡಮ್ಮನ ಹತ್ತಿರ ಬೆಳೆಯಬೇಕಾದ ಸಂದರ್ಭ ಬರುತ್ತದೆ. ಮಿಝುಕಿ ಸುಜಿಮುರರ ಕಾದಂಬರಿಯ ವಸ್ತು ಈ ಕಾರಣಕ್ಕೆ ನವೋಮಿಯವರಿಗೆ ಹತ್ತಿರವಾಗಿರಬಹುದು. ನವೋಮಿ ತನ್ನ ಪ್ರೇಕ್ಷಕನನ್ನ ಸಿನಿಮಾ ಪ್ರಾರಂಭದಿಂದಲೂ ಅಳಿಸಲು ಪ್ರಯತ್ನಿಸುತ್ತಾಳೆ. ಈ ಸಂಗತಿಗಳಿಗೆಲ್ಲಾ ಭಾವುಕವಾಗಬಾರದು ಅಂತ ಎಷ್ಟೇ ಕಠಿಣವಾಗಿರಲೂ ಪ್ರಯತ್ನಿಸಿದರೂ ಸಿನಿಮಾದ ಕಡೆಯ ಹಿಂದಿನ ಒಂದು ದೃಶ್ಯ ಮಾತ್ರ ಆರ್ದ್ರಗೊಳಿಸದೆ ಬಿಡದು.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.


ಇದನ್ನೂ ಓದಿ: ಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...