ಸಂಘಪರಿವಾರ, ಸರ್ಕಾರದ ದಾಳಿಗೆ ಹೆದರುವುದಿಲ್ಲ. ಸರ್ಕಾರದ ಜನವಿರೋಧಿ ನೀತಿಗಳನ್ನು ಮತ್ತಷ್ಟು ಪ್ರಶ್ನಿಸುತ್ತೇವೆ. ಶುಲ್ಕ ಹೆಚ್ಚಳದ ವಿರುದ್ಧ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿಕೊಳ್ಳಲು ಹೋರಾಡುತ್ತೇವೆ ಎಂದು ಜೆಎನ್ಯು ವಿದ್ಯಾರ್ಥಿಗಳು ಗುಡುಗಿದ್ದಾರೆ.
ಇಂದು ಸಬರಮತಿ ಹಾಸ್ಟೆಲ್ ಎದುರು ನಡೆದ ಜೆಎನ್ಯು ಪ್ರಾಧ್ಯಾಪಕರ ಸಂಘ ಮತ್ತು ವಿದ್ಯಾರ್ಥಿ ಸಂಘದ ಭಾರೀ ಸಭೆ ನಡೆಸಿ ಹೋರಾಟವನ್ನು ತೀವ್ರಗೊಳಿಸುವ ಸಂಕಲ್ಪ ತೊಟ್ಟಿದ್ದಾರೆ.
ಸಭೆಗೆ ಜೆನ್ಯು ಹಿರಿಯ ವಿದ್ಯಾರ್ಥಿಗಳಾದ ಯೋಗೇಂದ್ರ ಯಾದವ್, ಕವಿತಾ ಕೃಷ್ಣನ್, ಶಾ ಅಲಂ ಖಾನ್, ಕನ್ಹಯ್ಯ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಇನ್ನೊಂದೆಡೆ ಸೀತಾರಾಮ್ ಯೆಚೂರಿ ಮಾತಾಡಿ, ಜೆಎನ್ಯು ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟನ್ನು ತೋರಿಸಲು ನಾನು ಬಂದಿದ್ದೇನೆ. ನಾನು JNU ಹಿಂಸಾಚಾರವನ್ನು ಖಂಡಿಸುತ್ತೇನೆ. ಇದರಿಂದ ಕುಲಪತಿಗಳು ವಿದ್ಯಾರ್ಥಿಗಳನ್ನು ಮೌನಗೊಳಿಸಬಹುದೆಂದು ಭಾವಿಸಿದರೆ ಅದು ಆಗುವುದಿಲ್ಲ. ಕೂಡಲೇ ಕುಲಪತಿಯನ್ನು ವಜಾ ಮಾಡುವುದು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರನ್ನು ಗುರುತಿಸಿ ಶಿಕ್ಷಿಸುವುದು ಮತ್ತು ಸರ್ಕಾರ ಶುಲ್ಕ ಹೆಚ್ಚಳದಿಂದ ಹಿಂದೆ ಸರಿಯಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.
ಈ ಸರ್ಕಾರದ ವಕ್ತಾರನಾಗಿ ಜೆಎನ್ಯುನಲ್ಲಿ ವಿಸಿಯಾಗಿರುವ ಈ ಜಗದೀಶ್ ಕುಮಾರ್, ಒಂದು ವೇಳೆ ನ್ಯಾಯಯುತ ನೇಮಕಾತಿ ನಡೆದಲ್ಲಿ ಈತ ಗುಮಾಸ್ತನ ಕೆಲಸವನ್ನು ಸಹ ಪಡೆಯುವುದಿಲ್ಲ. ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಪ್ರಶಾಂತ್ ಭೂಷಣ್ ಅಭಿಪ್ರಾಯಪಟ್ಟಿದ್ದಾರೆ.
ಜೆಎನ್ಯುನಲ್ಲಿನ ಹಿಂಸಾಚಾರವು ‘ನೋವಿನಿಂದ ಕೂಡಿದೆ’ ಎಂದು ಜೆಎನ್ಯು ವಿಸಿ ಜಗದೀಶ್ ಕುಮಾರ್ ಹೇಳುತ್ತಾರೆ: ಹೌದು, ತುಂಬಾ ನೋವಿನಿಂದ ಕೂಡಿದೆ. ಆದರೆ ಅವರು ಇದುವರೆಗೂ ಗಾಯಗೊಂಡ ಯಾವುದೇ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಭೇಟಿ ಮಾಡಿಲ್ಲ. ಭಾನುವಾರ ಸಂಜೆ 4.30 ರಿಂದ 7.45 ರ ನಡುವೆ ಅವರು ಪೊಲೀಸರಿಗಾಗಿ ಅಥವಾ ಸಿಬ್ಬಂದಿಗೆ ಭದ್ರತೆಗಾಗಿ ಕರೆ ನೀಡದಿರುವುದು ತುಂಬಾ ನೋವಿನಿಂದ ಕೂಡಿದೆ! ನಾಚಿಕೆಯಾಗಬೇಕು ನಿಮಗೆ ಎಂದು ರಾಜ್ದೀಪ್ ಸರ್ದೇಸಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾ ಅಲಂ ಖಾನ್ರವರು ಜೆಎನ್ಯುನಲ್ಲಿ ಮಾತನಾಡುತ್ತಾ, ಜೆಎನ್ಯು ಆಕ್ರಮಣಕ್ಕೆ ಒಳಗಾಗಿದೆ ಏಕೆಂದರೆ ಅದು ದುರಾಶೆ ಮತ್ತು ಮೂರ್ಖತನವನ್ನು ಪ್ರಶ್ನಿಸುತ್ತದೆ ಎಂದಿದ್ದಾರೆ.