Homeಚಳವಳಿಪೌರತ್ವ ತಿದ್ದುಪಡಿ ಕಾಯಿದೆ ಸಂವಿಧಾನಬಾಹಿರ: ಸಂದರ್ಶನದಲ್ಲಿ ನ್ಯಾಯಮೂರ್ತಿ ಮದನ್ ಲೋಕೂರ್

ಪೌರತ್ವ ತಿದ್ದುಪಡಿ ಕಾಯಿದೆ ಸಂವಿಧಾನಬಾಹಿರ: ಸಂದರ್ಶನದಲ್ಲಿ ನ್ಯಾಯಮೂರ್ತಿ ಮದನ್ ಲೋಕೂರ್

- Advertisement -
- Advertisement -

ಕೃಪೆ: ಹಿಂದೂಸ್ತಾನ್‌ ಟೈಮ್ಸ್‌

ಅನುವಾದ: ನಿಖಿಲ್ ಕೋಲ್ಪೆ

(2018ರ ಜನವರಿಯಲ್ಲಿ ಭಾರತದ ಪ್ರಜಾತಂತ್ರ ಅಪಾಯದಲ್ಲಿದೆ ಎಂದು ಬಹಿರಂಗ ಪತ್ರಿಕಾಗೋಷ್ಠಿ ನಡೆಸಿದ ನಾಲ್ವರು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಲ್ಲಿ ಒಬ್ಬರಾದ ಮತ್ತು ಪ್ರಸ್ತುತ ಫಿಜಿ ದೇಶದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುವ ಮದನ್ ಲೋಕೂರ್‌ರವರು ಹಿಂದೂಸ್ತಾನ್‌ ಟೈಮ್ಸ್‌ ಜೊತೆಗೆ ನಡೆಸಿದ ಸಂದರ್ಶನದ ಕನ್ನಡ ಅನುವಾದ ಇಲ್ಲಿದೆ)

ಸಂವಿಧಾನದ ವಿಧಿ 14 ಎಂಬುದು ಕೇವಲ ಸಮಂಜಸ- reasonable- (ವಾಸ್ತವಿಕವಾಗಿ ವಿಚಾರಬದ್ಧ – rational-) ವರ್ಗೀಕರಣಕ್ಕೆ ಮಾತ್ರ ಸೀಮಿತವಲ್ಲ. ಯಾವುದು ಮುಖ್ಯವೆಂದರೆ, ವಿಚಾರಬದ್ಧ ವರ್ಗೀಕರಣವು- ಕಾನೂನು ಸಾಧಿಸಲು ಬಯಸುವ ಉದ್ದೇಶದೊಂದಿಗೆ ಸಮಂಜಸವಾದ ಸಂಬಂಧವನ್ನು ಹೊಂದಿರಬೇಕು ಎಂದು ನ್ಯಾ. ಮದನ್ ಲೋಕೂರ್ ಹೇಳುತ್ತಾರೆ.

ಸುಪ್ರೀಂ ಕೋರ್ಟ್ 1957ರಲ್ಲಿ ವಿಷದೀಕರಿಸಿದ ಕಾನೂನನ್ನು ಒಪ್ಪುವುದಾದಲ್ಲಿ, ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ‘ಕಾನೂನುಬಾಹಿರ ವಲಸಿಗ’ (illegal immigrant) ಎಂಬುದರ ವ್ಯಾಖ್ಯೆಗೆ ವಿಧಿಸಲಾಗಿರುವ ನಿಯಮಾವಳಿ ಸಂವಿಧಾನಬಾಹಿರ ಎಂದು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಮದನ್ ಲೋಕೂರ್ ಹೇಳುತ್ತಾರೆ.

ಭರತ್ ಸಿನ್ಹಾ ಅವರೊಂದಿಗೆ ನಡೆಸಿದ ಇ-ಮೈಲ್ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿರುವ ಅವರು, ಯಾವುದೇ ಕಾನೂನು-ಸಮಾನತೆಗೆ ಸಂಬಂಧಿಸಿದಂತೆ ಇರುವ ಸಂವಿಧಾನದ ವಿಧಿ 14ರ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ವಿಚಾರಬದ್ಧ ವರ್ಗೀಕರಣ ಮತ್ತು ಸಮಂಜಸ ಸಂಬಂಧದ ಅವಳಿ ಅಗತ್ಯ ಇರುತ್ತದೆ ಎಂದು ಹೇಳಿದ್ದಾರೆ‌. ಆದರೆ, ಈಗಿನ ಚರ್ಚೆಯಲ್ಲಿ ದುರದೃಷ್ಟವಶಾತ್ ಇದನ್ನು ಮರೆತುಬಿಡಲಾಗಿದೆ ಎಂದು ನ್ಯಾ. ಲೋಕೂರ್ ಹೇಳಿದ್ದಾರೆ.

ಅವರು ಈ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಿ ಕೊಲೆಮಾಡಿದ ನಾಲ್ವರು ಆರೋಪಿಗಳ ಎನ್‌ಕೌಂಟರ್ ಸಾವು ಮತ್ತು ದಿಲ್ಲಿಯ ವಾಯುಮಾಲಿನ್ಯ ಇತ್ಯಾದಿ ವಿಷಯಗಳ ಬಗ್ಗೆಯೂ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ:

***

ಪ್ರಶ್ನೆ: ಹೈದರಾಬಾದಿನ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್‌ಕೌಂಟರ್ ಹತ್ಯೆಯು  ಭಾರತದ ನ್ಯಾಯದಾನ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ನ್ಯಾಯಾಂಗ ಪ್ರಕ್ರಿಯೆ ನಿಧಾನ ಮತ್ತು ಜಟಿಲ ಎಂದು ಆಡಳಿತ ಹೇಳುವುದರೊಂದಿಗೆ ಮತ್ತು ಹೈದರಾಬಾದ್ ಬಲಿಯಾದ ಮಹಿಳೆಯ ಹೆತ್ತವರು ಮತ್ತು ಇತರ ಅತ್ಯಾಚಾರ ಸಂತ್ರಸ್ತರು ಪೊಲೀಸ್ ಕೃತ್ಯವನ್ನು ಸ್ವಾಗತಿಸುವುದರೊಂದಿಗೆ ದೂರುವ ಆಟ ಆರಂಭವಾಗಿದೆ. ವಿಚಾರಣೆಯ ಹಂತದಲ್ಲಿಯೇ ಎನ್‌ಕೌಂಟರ್‌ಗಳು ತ್ವರಿತ ನ್ಯಾಯದಾನಕ್ಕೆ ಪರಿಹಾರವೆ?

ನ್ಯಾ. ಲೋಕೂರ್: ಅಲ್ಲವೆಂಬುದು ಸ್ಪಷ್ಟ. ಎನ್‌ಕೌಂಟರ್ ಸಾವಿಗೂ, ನ್ಯಾಯಾಂಗಬಾಹಿರ ಹತ್ಯೆಗೂ ವ್ಯತ್ಯಾಸವಿದೆ. ತೆಲಂಗಾಣದಲ್ಲಿ ನಡೆದದ್ದು ನ್ಯಾಯಾಂಗಬಾಹಿರ ಹತ್ಯೆ. ಪೋಲೀಸರ ಜೀವ ಅಪಾಯದಲ್ಲಿದ್ದುದರ ಪರಿಣಾಮವಾಗಿ ಎನ್‌ಕೌಂಟರ್ ಸಂಭವಿಸಿತೆ ಮತ್ತು ಎಲ್ಲಾ ನಾಲ್ವರು ಆರೋಪಿಗಳನ್ನು ಕೊಲ್ಲುವುದು ಅಗತ್ಯವಾಗಿತ್ತೆ ಎಂಬ ಕುರಿತು ವಿಚಾರಣೆ ನಡೆಯುತ್ತಿದೆ.

ಪ್ರಶ್ನೆ: ನೀವು ಜನವರಿ 2018ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನಡೆಸಿದ ಸುದ್ದಿಗೋಷ್ಠಿಯ ಭಾಗವಾಗಿದ್ದಿರಿ. ಇಂತಹಾ ತೀವ್ರ ಹೆಜ್ಜೆ ಇಡುವಂತೆ ನಿಮ್ಮನ್ನು ಪ್ರೇರೇಪಿಸಿದ್ದು ಏನು? ಆ ಬಳಿಕ ನಿಮ್ಮ ಆತಂಕಗಳನ್ನು ಪರಿಹರಿಸಲಾಯಿತೆ? ಅದು ಸಂಸ್ಥೆಯ ಒಳಗೆ ನೀವು ಬಯಸಿದ್ದ ಸುಧಾರಣೆಗಳನ್ನು ತಂದಿತೆ? ಆಗಿನ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ರಂಜನ್ ಗೊಗೋಯ್ ಅವರಿಗೆ ಸುದ್ದಿಗೋಷ್ಠಿ ಬಯಸಿದ್ದ ಸುಧಾರಣೆಗಳನ್ನು ಅನುಷ್ಟಾನಗೊಳಿಸಲು ಸಾಧ್ಯವಾಯಿತೆ?

ನ್ಯಾ. ಲೋಕೂರ್: ಅದು ಸಾಂಪ್ರದಾಯಿಕ ಅರ್ಥದಲ್ಲಿ ಸುದ್ದಿಗೋಷ್ಠಿ ಆಗಿರಲಿಲ್ಲ. ಅದು ಒತ್ತಟ್ಟಿಗಿರಲಿ; ಹೌದು, ಅದು ಕೆಲವು ಬದಲಾವಣೆಗಳನ್ನು ತಂದಿತು. ಆದರೆ, ಸಾಕಷ್ಟು ಅಲ್ಲ ಮತ್ತು ಸುಧಾರಣೆಯ ನಿಜವಾದ ಅರ್ಥದಲ್ಲಿ ಅಲ್ಲ.

ಪ್ರಶ್ನೆ: ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಆಗಾಗ ತಮ್ಮ ಮತ್ತು ಮುಖ್ಯ ನ್ಯಾಯಾಧೀಶರ ನಡುವೆ ಸಂವಹನದಲ್ಲಿ ಅಂತರದ ಕುರಿತು ಮಾತನಾಡುತ್ತಾರೆ. ಇದು ನಿಜವೆ? ಅದಕ್ಕಾಗಿಯೇ ನೀವು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದಿರೆ? ಸುದ್ದಿಗೋಷ್ಠಿ ನಡೆಸಿದ್ದಕ್ಕಾಗಿ ಎಂದಾದರೂ ವಿಷಾದವಾಗಿದೆಯೆ?

ನ್ಯಾ. ಲೋಕೂರ್: ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಾಧೀಶರ ನಡುವೆ ಸಂವಹನದ ಅಂತರವಿಲ್ಲ. ಇಲ್ಲ; ತಥಾಕಥಿತ ಸುದ್ದಿಗೋಷ್ಠಿ ನಡೆಸಿದ್ದಕ್ಕಾಗಿ ನಾನು ವಿಷಾದಪಡುವುದಿಲ್ಲ.

ಪ್ರಶ್ನೆ: ಆಯ್ದ ಪ್ರಕರಣಗಳಲ್ಲಿ ಮಾತ್ರ ತ್ವರಿತ ವಿಚಾರಣೆ ನಡೆಸುವುದಕ್ಕಾಗಿ ಸುಪ್ರೀಂ ಕೋರ್ಟ್ ಆಗಾಗ ಟೀಕೆಗೆ ಒಳಗಾಗಿದೆ. ಉದಾಹರಣೆಗೆ ಅಯೋಧ್ಯೆ. ಜನರ ಹಕ್ಕುಗಳಿಗೆ ಸಂಬಂಧಿಸಿದ ಮುಖ್ಯ ಪ್ರಕರಣಗಳು ತ್ವರಿತ ಗಮನವನ್ನು ಪಡೆಯುವುದಿಲ್ಲ. ನಿಮ್ಮ ಪ್ರಕಾರ ಇದು ನಿಜವೆ?

ನ್ಯಾ. ಲೋಕೂರ್: ಇದು ಕೇವಲ ದೃಷ್ಟಿಕೋನಕ್ಕೆ ಸಂಬಂಧಿಸಿದ ವಿಷಯ. ನನ್ನ ದೃಷ್ಟಿಯಲ್ಲಿ ಎಲ್ಲಾ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು. ದೂರುದಾರರು ತೀರ್ಪಿಗಾಗಿ ವರ್ಷಗಟ್ಟಲೆ ಕಾಯಬೇಕೆಂದು ನಿರೀಕ್ಷಿಸಬಾರದು. ಎಲ್ಲರಿಗೂ ತ್ವರಿತ ಮತ್ತು ಸಮಾನ ನ್ಯಾಯ ಒದಗಿಸಲು ತೀವ್ರವಾದ ಸುಧಾರಣೆಗಳ ಅಗತ್ಯವಿದೆ. ನ್ಯಾಯಾಂಗ ಸುಧಾರಣೆಗಳಿಗೆ ತ್ವರಿತವಾಗಿ ಗಮನಕೊಡಲು ಇವತ್ತು ಸಾಕಷ್ಟು ವಾಸ್ತವಿಕ ಆಧಾರಗಳಿವೆ.

ಪ್ರಶ್ನೆ: ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದ ನ್ಯಾಯಮಂಡಳಿಯನ್ನು- ದೂರುದಾರರಿಗೆ ವರದಿಯ ಪ್ರತಿಯನ್ನು ನೀಡದುದಕ್ಕಾಗಿ ಟೀಕಿಸಿ ನೀವೊಂದು ಲೇಖನ ಬರೆದಿದ್ದಿರಿ. ನಿಯಮಗಳು ಅವಕಾಶ ನೀಡುವುದಿಲ್ಲವೆಂದಾದಲ್ಲಿ ನ್ಯಾಯಮಂಡಳಿಯು ಹೇಗೆ ಅದನ್ನು ಮಾಡಲು ಸಾಧ್ಯ? ಈ ವಿಷಯದಲ್ಲಿ ಮುಖ್ಯ ನ್ಯಾಯಾಧೀಶರು ಒಳಗೊಂಡಿದ್ದಾರೆಂಬ ಮಾತ್ರಕ್ಕೆ ಬೇರೆಯೇ ನಿಯಮಾವಳಿ ರೂಪಿಸಲು ಸಾಧ್ಯವೆ?

ನ್ಯಾ. ಲೋಕೂರ್: ವರದಿಯ ಪ್ರತಿಯನ್ನು ದೂರುದಾರರಿಗೆ ನೀಡಬಾರದೆಂದು ಯಾವ ನಿಯಮ ಹೇಳುತ್ತದೆ? ಅದಕ್ಕೆ ವ್ಯತಿರಿಕ್ತವಾಗಿ, ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ವರದಿಯ ಪ್ರತಿಯನ್ನು ನೀಡಬೇಕೆಂದು ನಾನೇ ನೇತೃತ್ವ ವಹಿಸಿದ್ದ ಪೀಠವೊಂದು ನಿರ್ದೇಶನ ನೀಡಿತ್ತು. ನನಗೆ ನೆನಪಿನಲ್ಲಿ ಇರುವಂತೆ, ನ್ಯಾಯಾಲಯದಲ್ಲಿ ವರದಿಯ ಪ್ರತಿಯೊಂದು ಅಲ್ಲೇ ಇದ್ದುದರಿಂದ ಅಲ್ಲಿಯೇ, ಆಗಲೇ ದೂರುದಾರರಿಗೆ ಅದನ್ನು ನೀಡಲಾಗಿತ್ತು.

ಪ್ರಶ್ನೆ: ಹಸಿರು ನ್ಯಾಯಪೀಠದ ಭಾಗವಾಗಿ, ನೀವು ದಿಲ್ಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ನಿಯಂತ್ರಿಸಲು ಲೆಕ್ಕವಿಲ್ಲದಷ್ಟು ಆದೇಶಗಳನ್ನು ನೀಡಿದ್ದಿರಿ. ನ್ಯಾಯಾಂಗವು ಮಿತಿ ಮೀರಿತೆ? ತನ್ನ ಕೆಲಸವನ್ನು ಮಾಡುವಂತೆ ನ್ಯಾಯಾಂಗವು ಕಾರ್ಯಾಂಗಕ್ಕೆ ಚುಚ್ಚುತ್ತಲೇ ಇರಬೇಕೆ? ಯಾರು ಇಲ್ಲಿ ಹಿಂದೆ ಉಳಿದಿದ್ದಾರೆ ಮತ್ತು ಎಲ್ಲಿ?

ನ್ಯಾ. ಲೋಕೂರ್: ನಾನು ಯಾವತ್ತೂ ಒಂದು ಪ್ರಶ್ನೆ ಕೇಳಿದ್ದೇನೆ: ಸಂಸತ್ತು ಅಂಗೀಕರಿಸಿದ ಕಾನೂನು ವಿಧಿಸಿರುವ ಕರ್ತವ್ಯಗಳನ್ನು ಕಾರ್ಯಾಂಗ ಪರಿಪಾಲಿಸದಿದ್ದರೆ, ಒಬ್ಬ ನಾಗರಿಕ ಏನು ಮಾಡಬೇಕು? ಒಂದೋ ನಾಗರಿಕ ಬೀದಿಗಿಳಿಯಬೇಕು ಇಲ್ಲವೇ ನ್ಯಾಯಾಲಯಕ್ಕೆ ಹೋಗಬೇಕು. ಒಬ್ಬ ನಾಗರಿಕ ನ್ಯಾಯಾಲಯಕ್ಕೆ ಬಂದರೆ, ಅದು ತನ್ನ ಕಾನೂನು ಬಾಧ್ಯತೆಗಳನ್ನು ಅನುಸರಿಸುವಂತೆ ಕಾರ್ಯಾಂಗಕ್ಕೆ ಹೇಳಲು ಬದ್ಧವಾಗಿರುತ್ತದೆ. ಇದು ಕಾನೂನು ನಿಯಮದ ಜೀವಾಳ. ಇದನ್ನು ಮಿತಿಮೀರುವುದು ಎಂದು ಕರೆಯುವುದಾದರೆ, ಅದು ಶಾಸನಾತ್ಮಕ ಮತ್ತು ಸಾಂವಿಧಾನಿಕ ಬಾಧ್ಯತೆಗಳ ಕುರಿತ ತಿರುಚಿದ ತಿಳುವಳಿಕೆಯಾಗುತ್ತದೆ.

ಪ್ರಶ್ನೆ: ಸರಕಾರವು ಅನಧಿಕೃತ ಬಡಾವಣೆಗಳ ಸಕ್ರಮಕ್ಕೆ ಅಂಗೀಕಾರ ನೀಡುತ್ತಿದೆ. ಇದರಿಂದ ನಗರಗಳನ್ನು ಸ್ವಚ್ಛಗೊಳಿಸುವ ನ್ಯಾಯಾಲಯಗಳ ಯತ್ನ ವಿಫಲವಾಗುತ್ತಿದೆಯೆ? ಅನಧಿಕೃತ ಕಟ್ಟಡಗಳು ಮತ್ತು ವಸತಿ ಪ್ರದೇಶಗಳ ಕಾನೂನುಬಾಹಿರ ಬಳಕೆಗೆ ಕಡಿವಾಣ ಹಾಕುವ ಮೇಲುಸ್ತುವಾರಿ ಸಮಿತಿಗಳನ್ನು ಪುನರುಜ್ಜೀವನಗೊಳಿಸಿದ್ದು ನಿಮ್ಮದೇ ಪೀಠವಾಗಿತ್ತು.

ನ್ಯಾ. ಲೋಕೂರ್: ಅನಧಿಕೃತ ಬಡಾವಣೆಗಳನ್ನು ಸಕ್ರಮಗೊಳಿಸುವುದರಿಂದ ನಗರಗಳ ಕೊಳಚೆ ಸ್ವಚ್ಛವಾಗುವುದಿಲ್ಲ ಎಂದು ಖಂಡಿತಾ ನೆನಪಿರಲಿ.

ಪ್ರಶ್ನೆ: ಪೌರತ್ವ ತಿದ್ದುಪಡಿ ಕಾಯಿದೆಯು ಟೀಕಾಕಾರರು ಹೇಳುವಂತೆ ‘ಸಂವಿಧಾನದ ಜಾತ್ಯತೀತ ಸ್ವರೂಪವನ್ನು ಉಲ್ಲಂಘಿಸುವ ಕಾನೂನು’ ಎಂಬ ಕಾರಣದಿಂದ ವ್ಯಾಪಕ ಟೀಕೆಗೆ ಒಳಗಾಗಿದೆ. ಸರಕಾರವು ಅದನ್ನು ಸಂವಿಧಾನದ ವಿಧಿ 14ನ್ನು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿರುವಂತೆ- ಸಮಂಜಸ ವರ್ಗೀಕರಣದ ಹೆಸರಿನಲ್ಲಿ ಸಮರ್ಥಿಸುತ್ತಿದೆ. ನೀವು ಈ ಕಾಯಿದೆಯನ್ನು ಹೇಗೆ ವಿಶ್ಲೇಷಿಸುತ್ತೀರಿ? ಅದು ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಭಾರತವು ಹೇಳುತ್ತಿರುವ ದೇಶಗಳ ಆಂತರಿಕ ಆಡಳಿತದ ಬಗ್ಗೆ ಪರೋಕ್ಷ  ಟೀಕೆಯೂ ಆಗುವುದಿಲ್ಲವೆ?

ನ್ಯಾ. ಲೋಕೂರ್: ಸುಪ್ರೀಂ ಕೋರ್ಟ್ 1957ರಷ್ಟು ಹಿಂದೆಯೇ ಅನ್ವರ್ ಆಲಿ ಸರ್ಕಾರ್ ವಿರುದ್ಧ ಪಶ್ಚಿಮ ಬಂಗಾಳ ಸರಕಾರ ಪ್ರಕರಣದಲ್ಲಿ ವಿಷದೀಕರಿಸಿದ ರೀತಿಯಲ್ಲಿ ವಿಧಿ 14ನ್ನು ಒಪ್ಪುವುದಾದಲ್ಲಿ, ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ಸೇರಿಸಲಾಗಿರುವ ‘ಕಾನೂನುಬಾಹಿರ ವಲಸಿಗ’ (illegal immigrant) ಎಂಬುದರ ವ್ಯಾಖ್ಯೆಗೆ ವಿಧಿಸಲಾಗಿರುವ ನಿಯಮಾವಳಿಯು ಸ್ಪಷ್ಟವಾಗಿ ಸಂವಿಧಾನಬಾಹಿರ.  ಸಂವಿಧಾನದ ವಿಧಿ 14 ಎಂಬುದು ಕೇವಲ ಸಮಂಜಸ- reasonable- (ವಾಸ್ತವಿಕವಾಗಿ ವಿಚಾರಬದ್ಧ – rational) ವರ್ಗೀಕರಣಕ್ಕೆ ಮಾತ್ರ ಸೀಮಿತವಲ್ಲ. ಯಾವುದು ಮುಖ್ಯವೆಂದರೆ, ವಿಚಾರಬದ್ಧ ವರ್ಗೀಕರಣವು ಕಾನೂನು ಸಾಧಿಸಲು ಬಯಸುವ ಉದ್ದೇಶದೊಂದಿಗೆ ಸಮಂಜಸವಾದ ಸಂಬಂಧವನ್ನು ಹೊಂದಿರಬೇಕು.

ಸುಪ್ರೀಂ ಕೋರ್ಟ್ ನ್ಯಾಯಧೀಶ ನ್ಯಾ. ಎಸ್. ಕೆ. ದಾಸ್ ಅವರು ಸ್ಪಷ್ಟವಾಗಿ ತೀರ್ಪುನೀಡಿದ್ದರು: “ವರ್ಗೀಕರಣವು ಅನಿಯಂತ್ರಿತ (ನಿರಂಕುಶ)ವಾಗಿರಬಾರದು ಬದಲಾಗಿ ಅದು ವಿಚಾರಬದ್ಧವಾಗಿರಬೇಕು; ಅದರ ಅರ್ಥ- ಒಂದು ಗುಂಪಿನಲ್ಲಿ ಸೇರಿಸಲಾದ ಎಲ್ಲಾ ವ್ಯಕ್ತಿಗಳಲ್ಲಿ ಕಂಡುಬರಬಹುದಾದ ಮತ್ತು  ಅದರಿಂದ ಹೊರಗಿಟ್ಟ ಇತರರಲ್ಲಿ ಕಂಡುಬರಲಾರದ ಕೆಲವು ಗುಣಗಳು ಅಥವಾ ಸ್ವಭಾವಗಳ ಮೇಲೆ ಅದು ಆಧರಿತವಾಗಿರಬೇಕು ಮಾತ್ರವಲ್ಲ, ಆ ಗುಣಗಳು ಮತ್ತು ಸ್ವಭಾವಗಳು ಕಾನೂನಿನ ಉದ್ದೇಶದೊಂದಿಗೆ ಸಮಂಜಸವಾದ ಸಂಬಂಧ ಹೊಂದಿರಬೇಕು.

ಈ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಎರಡು ಶರತ್ತುಗಳನ್ನು ಪೂರೈಸಬೇಕು- ಅವೆಂದರೆ, ಒಂದು ಗುಂಪಿನ ಜೊತೆ ಸೇರಿಸಲಾದವರ ಮತ್ತು ಹೊರಗಿಡಲಾದವರ ನಡುವಿನ ವ್ಯತ್ಯಾಸವನ್ನು ತೋರಿಸುವ ಗ್ರಾಹ್ಯ ಮಾನದಂಡದ ಮೇಲೆ ವರ್ಗೀಕರಣವು ಆಧರಿತವಾಗಿರಬೇಕು. (ಎರಡನೆಯದಾಗಿ) ವ್ಯತ್ಯಾಸದ ಮಾನದಂಡವು ಕಾನೂನು ಸಾಧಿಸಲು ಉದ್ದೇಶಿಸಿರುವ ಗುರಿಯೊಂದಿಗೆ ವಿಚಾರಬದ್ಧ ಸಂಬಂಧವನ್ನು ಹೊಂದಿರಬೇಕು. ವರ್ಗೀಕರಣಕ್ಕೆ ಆಧಾರವಾಗಿರುವ ವ್ಯತ್ಯಾಸದ ಮಾನದಂಡ ಮತ್ತು ಕಾಯಿದೆಯ ಉದ್ದೇಶ ಎರಡು ಪ್ರತ್ಯೇಕ ವಿಷಯಗಳಾಗಿದ್ದು, ಇಲ್ಲಿ ಅಗತ್ಯವಿರುವುದು ಏನೆಂದರೆ, ಅವುಗಳ ನಡುವೆ ಸಮಂಜಸ ಸಂಬಂಧ ಇರಬೇಕು.”

(ಚುಟುಕಾಗಿ ಹೇಳಬೇಕೆಂದರೆ, ಒಂದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜನರ ಗುಂಪಿನಲ್ಲಿ ಕೆಲವರನ್ನು ಮಾತ್ರ ಅನಿಯಂತ್ರಿತ ಅಥವಾ ನಿರಂಕುಶವಾಗಿ ಪ್ರತ್ಯೇಕಿಸಿ ಅನುಕೂಲತೆಗಳನ್ನಾಗಲೀ, ಅನಾನುಕೂಲತೆಗಳನ್ನಾಗಲೀ ವಿಧಿಸುವಂತಹ  ವರ್ಗಾಧರಿತ ಶಾಸನವನ್ನು ವಿಧಿ 14 ನಿಷೇಧಿಸುತ್ತದೆ. ಅದು ಕಾನೂನಿನ ಸಲುವಾಗಿ ವರ್ಗೀಕರಣವನ್ನು ನಿಷೇಧಿಸುವುದಿಲ್ಲವಾದರೂ, ವರ್ಗೀಕರಣವು ಮೇಲೆ ಹೇಳಿದ ರೀತಿಯಲ್ಲಿ ನಿರಂಕುಶ ಅಥವಾ ಅನಿಯಂತ್ರಿತವಾಗಿರಬಾರದೆಂಬು ನ್ಯಾ. ಎಸ್.ಕೆ. ದಾಸ್ ಅವರ ತೀರ್ಪಿನ ಅರ್ಥ- ಅನುವಾದಕ)

ಈ ದೃಷ್ಟಿಕೋನವನ್ನು ಸುಪ್ರೀಂ ಕೋರ್ಟ್ ನೂರಾರು ಬಾರಿ ಮತ್ತು ಎಲ್ಲಾ ಹೈಕೋರ್ಟುಗಳು ಸಾವಿರಾರು ಬಾರಿ ಅನುಸರಿಸಿವೆ. ಈ ನ್ಯಾಯಶಾಸ್ತ್ರೀಯ ಪರೀಕ್ಷೆಯನ್ನು ಅನ್ವಯಿಸಿದರೆ, ಪೌರತ್ವ ತಿದ್ದುಪಡಿ ಕಾಯಿದೆಯ ನಿಯಮಾವಳಿ ಸಂವಿಧಾನಬಾಹಿರವಾಗಿದೆ.

ಕಾಯಿದೆಯ ಜೊತೆಗಿರುವ ಉದ್ದೇಶ ಮತ್ತು ಕಾರಣಗಳ ಹೇಳಿಕೆಯು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತದೆ. ಇದು ರಾಜತಾಂತ್ರಿಕವಾಗಿ ಅವಿವೇಕ ಎಂದು ಎಂದು ನನ್ನ ಅಭಿಪ್ರಾಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....