ತುಮಕೂರು ನಗರ ಟೌನ್ಹಾಲ್ನಲ್ಲಿ ಸಾಹಿತಿ ಕೆ.ಬಿ.ಸಿದ್ದಯ್ಯ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಗಣ್ಯರು, ಹೋರಾಟಗಾರರು, ಒಡನಾಡಿಗಳು, ಸಾಹಿತಿಗಳು ಮತ್ತು ಕಲಾವಿದರು ಅಂತಿಮ ದರ್ಶನ ಪಡೆದರು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕೆಬಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ದೂರದ ಊರುಗಳಿಂದ ಹೋರಾಟದ ನದಿಗಳು ತಾಮುಂದು ನಾಮುಂದು ದರ್ಶನ ಪಡೆಯಲು ಕಾತರಿಸಿದವು.
ದಲಿತ ಕವಿ ಸಿದ್ದಲಿಂಗಯ್ಯ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಮೈಸೂರಿನಿಂದ ಎಚ್.ಗೋವಿಂದಯ್ಯ, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಜನಪರ ಚಿಂತಕ ಕೆ.ದೊರೈರಾಜ್, ಜಿ.ಎಂ.ಶ್ರೀನಿವಾಸಯ್ಯ, ಹಿರಿಯ ಕಲಾವಿದ ಕೆ.ಟಿ. ಶಿವಪ್ರಸಾದ್, ಬೆಂಗಳೂರಿನ ಇಂದಿರಾ ಕೃಷ್ಣಪ್ಪ, ಕೋಲಾರದ ವೆಂಕಟೇಶ್, ಮಾದಾರ ಚನ್ನಯ್ಯಸ್ವಾಮೀಜಿ, ವಿಮರ್ಶಕ ನಟರಾಜ್ ಹುಳಿಯಾರ್, ಸಾಹಿತಿ ನಟರಾಜ್ ಬೂದಾಳ್, ವಡ್ಡಗೆರೆ ನಾಗರಾಜಯ್ಯ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಸ್ಥಳೀಯ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ರಾಕೇಶ್ ಸಿಂಗ್, ಸಾಹಿತಿ ಎನ್.ನಾಗಪ್ಪ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಟೌನ್ಹಾಲ್ ಆವರಣ ಜನರಿಂದ ತುಂಬಿ ಹೋಗಿತ್ತು. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎನ್ನುವಂತೆ ಎಲ್ಲರ ಮುಖದಲ್ಲಿ ದುಃಖ ಮಡುಗಟ್ಟಿತ್ತು. ದಲಿತ ಹೋರಾಟಗಾರರ ಅಂತಿಮ ದರ್ಶನ ಪಡೆಯುವ ವೇಳೆ ಹೋರಾಟ ಚಿರಾಯು ಎಂಬ ಘೋಷಣೆಗಳನ್ನು ಕೂಗಿ ಸಿದ್ದಯ್ಯ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ಹೀಗೆ ಮಹಿಳಾ ಪರ ಹೋರಾಟಗಾರ್ತಿಯರು ಅಂತಿಮ ದರ್ಶನದಲ್ಲಿ ಭಾಗಯಾಗಿ ಕವಿಗೆ ಕಂಬನಿ ಮಿಡಿದರು. ಬಹುತೇಕ ಹಿರಿಯರು ಮತ್ತು ಹೋರಾಟಗಾರರು ಮಧ್ಯಾಹ್ನದ ಊಟವನ್ನು ಮಾಡದೆ ದರ್ಶನಕ್ಕಾಗಿ ಕಾಯುತ್ತಿದ್ದುದು ಕಂಡುಬಂತು.
ರಾತ್ರಿ 6 ಗಂಟೆಗೆ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಸ್ವಗ್ರಾಮ ಕೆಂಕೆರೆಯ ತೋಟದಲ್ಲಿ ಮಣ್ಣಿನ ಕಾರ್ಯ ನಡೆಯಲಿದೆ.