Homeಕರ್ನಾಟಕಕಾರ್ಕಳ: ರಸ್ತೆಗೆ ಗೋಡ್ಸೆ ಹೆಸರು; ಬೋರ್ಡ್ ತೆರವು ಮಾಡಿಸಿದ ಕಾಂಗ್ರೆಸ್ ಮುಖಂಡರು

ಕಾರ್ಕಳ: ರಸ್ತೆಗೆ ಗೋಡ್ಸೆ ಹೆಸರು; ಬೋರ್ಡ್ ತೆರವು ಮಾಡಿಸಿದ ಕಾಂಗ್ರೆಸ್ ಮುಖಂಡರು

- Advertisement -
- Advertisement -

ಉಡುಪಿ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಬೋಳ ಗ್ರಾಮ ಪಂಚಾಯಿತಿಗೆ ಸೇರಿದ ರಸ್ತೆಯೊಂದಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ‘ನಾಥೂರಾಮ್‌ ಗೋಡ್ಸೆ’ ಹೆಸರನ್ನು ಯಾರೋ ಕಿಡಿಗೇಡಿಗಳು ಇಟ್ಟಿದ್ದು ವಿವಾದ ಸ್ವರೂಪ ಪಡೆದ ಬೆನ್ನಲ್ಲೇ ಸ್ಥಳೀಯ ಮುಖಂಡರು ಕ್ರಮ ವಹಿಸಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ಕುಮಾರ್‌ ಅವರು ಪ್ರತಿನಿಧಿಸುತ್ತಿರುವುದು ವಿವಾದದ ಕೇಂದ್ರ ಸ್ಥಾನ ಪಡೆದ ಬಳಿಕ ‘ಗೋಡ್ಸೆ ರಸ್ತೆ’ ಫಲಕ ತೆರವಾಗಿದೆ.

“ಬೋಳ ಗ್ರಾಮ ಪಂಚಾಯತ್‌- ಪಡುಗಿರಿ ನಾಥೂರಾಮ್‌ ಗೋಡ್ಸೆ ರಸ್ತೆ” ಎಂದು ಬರೆಯಲಾಗಿರುವ ಮಾರ್ಗಸೂಚಿ ಫಲಕ ಹಾಕಲಾಗಿತ್ತು. ಬೋಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಧಾ ಎಸ್.ಪೂಜಾರಿ ಅವರೊಂದಿಗೆ ‘ನಾನುಗೌರಿ.ಕಾಂ’ ಪ್ರತಿನಿಧಿ ಮಾತನಾಡಿದಾಗ, “ಹೌದು ಈ ಫಲಕ ಇರುವುದು ನಿಜ. ಆದರೆ ಯಾರು ಇದನ್ನು ಹಾಕಿದ್ದಾರೆಂಬ ಮಾಹಿತಿ ಇಲ್ಲ. ಯಾರೋ ಖಾಸಗಿ ವ್ಯಕ್ತಿಗಳು ಈ ರೀತಿಯ ಫಲಕವನ್ನು ಪಡುಗಿರಿ ರಸ್ತೆಯಲ್ಲಿ ನೆಟ್ಟಿದ್ದಾರೆ. ಕ್ರಮ ವಹಿಸಲಾಗುವುದು” ಎಂದು ತಿಳಿಸಿದ್ದರು.

ಫಲಕ ಹಾಕಿದ್ದ ಘಟನೆ ಬಗ್ಗೆ ಸಚಿವ ಸುನೀಲ್‌ ಕುಮಾರ್ ಪ್ರತಿಕ್ರಿಯಿಸಿದ್ದು, “ಫಲಕ ಹಾಕುವುದು ಅಥವಾ ಗೋಡ್ಸೆ ಹೆಸರಿಡುವುದು ಪಂಚಾಯತ್‌ನ ನಿರ್ಧಾರವಲ್ಲ. ಫಲಕವನ್ನು ಪಂಚಾಯತ್‌ ಹಾಕಿಲ್ಲ, ಯಾರೋ ಖಾಸಗಿ ವ್ಯಕ್ತಿಗಳು ಹಾಕಿದ್ದಾರೆ. ತನಿಖೆ ನಡೆಸಿ, ವಸ್ತುಸ್ಥಿತಿಯನ್ನು ಮುಂದಿಡಲಾಗುತ್ತದೆ” ಎಂದು ಹೇಳಿದ್ದಾರೆ.

ಆ ನಂತರದಲ್ಲಿ ಪಂಚಾಯತ್‌ ಸದಸ್ಯರು, ಕಾಂಗ್ರೆಸ್ ಮುಖಂಡರು, ಅಧಿಕಾರಿಗಳ ನೇತೃತ್ವದಲ್ಲಿ ತೆರಳಿ ಫಲಕ ತೆರವಿಗೆ ಕ್ರಮ ವಹಿಸಿದ್ದಾರೆ.

“ನಾಥೂರಾಮ್‌ ಗೋಡ್ಸೆ ಫಲಕವನ್ನು ಇಂದು ಬೆಳಿಗ್ಗೆ ತೆರವು ಮಾಡಲಾಗಿದೆ” ಎಂದು ಬೋಳ ಗ್ರಾಪಂ ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿಯವರು ‘ನಾನುಗೌರಿ.ಕಾಂ’ಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಯುವ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದರು.

ಯುವ ಕಾಂಗ್ರೆಸ್ ಮುಖಂಡ ದೀಪಕ್‌ ಕೋಟ್ಯಾನ್‌ ಮಾತನಾಡಿ, “ಯಾರೋ ಕಿಡಿಗೇಡಿಗಳು ದೇಶದ ಮೊದಲ ಭಯೋತ್ಪಾದಕ ನಾಥೂರಾಮ್‌ ಗೋಡ್ಸೆ ಹೆಸರನ್ನು ಯಾರೋ ಇಟ್ಟಿದ್ದರು. ಬ್ಲಾಕ್‌ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯ ಎಚ್ಚರಿಕೆ ನೀಡಿದೆವು. ಇದರಿಂದ ಎಚ್ಚೆತ್ತ ಬೋಳ ಗ್ರಾಪಂ ಪಿಡಿಒ ಹಾಗೂ ಆಡಳಿತ ವರ್ಗ ಬೋರ್ಡ್ ತೆರವುಗೊಳಿಸಿದೆ” ಎಂದು ತಿಳಿಸಿದ್ದಾರೆ.

“ಬೋರ್ಡ್ ಹಾಕುವಂತಹ ಘಟನೆಗಳು ಖಂಡನೀಯ ಹಾಗೂ ಖೇದಕರ. ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶ ಎತ್ತ ಸಾಗುತ್ತಿದೆ? ಯುವಕರಿಗೆ ಎಂತಹ ಸಂದೇಶವನ್ನು ನೀಡುತ್ತಿದ್ದಾರೆ ಎಂಬುದು ಕಳವಳಕಾರಿ ವಿಚಾರವಾಗಿದೆ. ಮುಂದೆ ಏನಾದರೂ ಇದು ಮರುಕಳುಸಿದರೆ ಉಡುಪಿ ಕಾಂಗ್ರೆಸ್‌ ಘಟಕವು ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕರಾದ ಬಿ.ಕೆ.ಹರಿಪ್ರಸಾದ್‌ ಪ್ರತಿಕ್ರಿಯೆ ನೀಡಿದ್ದು, “ಈ ನೆಲದಲ್ಲಿ ಗೋಡ್ಸೆ ಸಂತತಿಗಳನ್ನ ಬುಡ ಸಮೇತ ಕಿತ್ತು ಹಾಕಬೇಕು. ಅದು ಥೇಟ್ ಕಾರ್ಕಳದ ರಸ್ತೆಗೆ ಇಟ್ಟಿದ್ದ ಗೋಡ್ಸೆಯ ನಾಮಫಲಕವನ್ನ ಕಿತ್ತು ಹಾಕಿದಂತೆ. ನಾಮ ಫಲಕ ತೆರವುಗೊಳಿಸಿ ಅದೇ ಜಾಗದಲ್ಲಿ ಶ್ರೀ ನಾರಾಯಣ ಗುರುಗಳ ಹೆಸರಿಡಲು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿರುವ ಯುವ ಕಾಂಗ್ರೆಸ್ ಕಾರ್ಯಕರ್ತರ ಕೆಲಸಕ್ಕೆ ಸಲಾಂ” ಎಂದಿದ್ದಾರೆ.

ಘಟನೆ ಬೆಳಕಿಗೆ ಬಂದ ತಕ್ಷಣ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಪ್ರಕಾಶ್ ರಾಥೋಡ್‌, “ತಾಲಿಬಾನಿಗಳನ್ನು ಬಿಜೆಪಿ ಉಗ್ರಗಾಮಿಗಳು ಎಂದು ಕರೆಯುತ್ತಿತ್ತು. ಭಾರತದಲ್ಲಿ ತಾಲಿಬಾನ್ ನಿಷೇಧಿತ ಸಂಘಟನೆ. ಆದರೆ, ಕೇಂದ್ರ ಸರ್ಕಾರ ಗೋಧಿ, ಔಷಧ, ಹಣ ಮುಂತಾದ ನೆರವನ್ನು ಅಫ್ಘನ್ ಸರ್ಕಾರಕ್ಕೆ ರವಾನೆ ಮಾಡಿ ತಾಲಿಬಾನಿಗಳ ಜತೆ ಸ್ನೇಹ-ಪ್ರೀತಿಯ ಅಪ್ಪುಗೆ ಮಾಡುತ್ತಿದ್ದಂತೆ ಉಡುಪಿಯಲ್ಲಿ ದೇಶದ್ರೋಹಿ ಗೋಡ್ಸೆ ರಸ್ತೆ ತಲೆ ಎತ್ತಿದೆ” ಎಂದಿದ್ದಾರೆ.

ಇದನ್ನೂ ಓದಿರಿ: ಪಠ್ಯ ಪುಸ್ತಕದಲ್ಲಿ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡು: ಬರೆದವರ ಹೆಸರನ್ನೇ ಬದಲಿಸಿದ ಚಕ್ರತೀರ್ಥ ಸಮಿತಿ!

“ಮಹಾತ್ಮಗಾಂಧಿಯನ್ನು ಕೊಲ್ಲುವ ಮೂಲಕ ಸ್ವತಂತ್ರ ಭಾರತದಲ್ಲಿ ಭಯೋತ್ಪಾದನೆ ಉದ್ಘಾಟಿಸಿದ ಉಗ್ರ ನಾಥೂ ಗೋಡ್ಸೆ. ಭಾರತೀಯರ ಪಾಲಿಗೆ ಈತ ತಾಲಿಬಾನಿಗಳಿಗಿಂತ ಅತ್ಯುಗ್ರ ಪಾಪಿ. ತಾಲಿಬಾನಿಗಳ ಸ್ನೇಹಕ್ಕೆ ಕೈ ಚಾಚಿದ ಬಳಿಕ ಬಿಜೆಪಿಗೆ ಉಗ್ರರ ಬಗ್ಗೆ ಪ್ರೀತಿ ಹೆಚ್ಚಾಗುತ್ತಿದೆಯೇ?” ಎಂದು ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ತಕ್ಷಣ ಎಚ್ಚೆತ್ತು ಫಲಕ ಕಿತ್ತೆಸೆದ ಎಲ್ಲರೂ ಅಭಿನಂದನಾರ್ಹರು! ಹೀಗೆ ಬಿಟ್ಟರೆ ಒಂದು ದಿನ, ನರಹಂತಕ ವೀರಪ್ಪನ್ ನಿಂದ ಹಿಡಿದು ನರಭಕ್ಷಕ ಇದೀ ಅಮೀನ್ ವರೆಗೆ ಎಲ್ಲಾ ಜನದ್ರೋಹಿಗಳೂ ನಾಗರೀಕ ಸಮಾಜದಲ್ಲಿ ಸ್ಮರಣೆಯ ಸ್ಥಾನ ಪಡೆಯುತ್ತಾರೆ – ‘ಚಕ್ರ’ದಿಂದ ‘ತೀರ್ಥ’ ಬಂದಂತೆ!

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಕೊಲೆಗೆ ರಾಜಕೀಯ ಬಣ್ಣ ಬಳಿದ ಅಣ್ಣಾಮಲೈ: ಪ್ರಕರಣ ದಾಖಲು

0
ಮಹಿಳೆಯೋರ್ವರ ಸಾವಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪಕ್ಕಿರಿಮಣಿಯಂ...