2021 ಕೊರೊನಾ ಸಂಕಷ್ಟದ ಜೊತೆ ಜೊತೆಗೆ ಕನ್ನಡ ಚಿತ್ರರಂಗಕ್ಕೂ ನೋವು ನೀಡಿದೆ. ಹೊಸ ಚಿತ್ರಗಳ ಘೋಷಣೆ, ಚಿತ್ರ ಬಿಡುಗಡೆ ವೇಳೆ ಕೊರೊನಾ ನಿರ್ಬಂಧ, ಥಿಯೇಟರ್ ನಿರ್ಬಂಧಗಳ ಜೊತೆಯೇ ಚಿತ್ರರಂಗ ಹಲವು ಕಲಾವಿದರನ್ನು ಕಳೆದುಕೊಂಡು ದುಖಃದ ಮಡುವಿನಲ್ಲಿ ಬಿದ್ದ ವರ್ಷ ಇದು.
ಶನಿ ಮಹದೇವಪ್ಪ, ಶಿವರಾಂ, ಅಭಿನಯ ಶಾರದೆ ಜಯಂತಿರಂತಹ ಹಿರಿಯ ಕಲಾವಿದರ ಜೊತೆಗೆ ಪುನೀತ್ ರಾಜ್ಕುಮಾರ್, ಸಂಚಾರಿ ವಿಜಯ್ರಂತಹ ಇನ್ನು ಬದುಕಿ ಬಾಳಬೇಕಾದ, ಸಿನಿರಂಗದಲ್ಲಿ ಮಿಂಚುತ್ತಿದ್ದ ಕಲಾವಿದರನ್ನು ಚಂದನವನ ಕಳೆದುಕೊಂಡಿದೆ.
೧. ಅಭಿನಯ ಶಾರದೆ ಜಯಂತಿ

ತಮ್ಮ ಮನೋಜ್ಞ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದೇ ಕರೆಯಲ್ಪಡುತ್ತಿದ್ದ ಜಯಂತಿಯವರು ತಮ್ಮ 76ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜುಲೈ 26 ರಂದು ಕೊನೆಯುಸಿರೆಳೆದಿದ್ದರು.
1968 ರಲ್ಲಿ ತೆರೆ ಕಂಡ ವೈ.ಆರ್.ಸ್ವಾಮಿ ನಿರ್ದೇಶನದ “ಜೇನು ಗೂಡು” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಜಟಿ ಜಯಂತಿ, 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಕನ್ನಡದ ಮೇರು ನಟ ಡಾ.ರಾಜ್ಕುಮಾರ್ ಅವರೊಂದಿಗೆ 45 ಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ನಟಿ ಜಯಂತಿಯವರದ್ದು. ಇವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿಯೂ ಅಭಿನಯಿಸಿದ್ದರು.
ಇದನ್ನೂ ಓದಿ: ಶ್ರದ್ಧಾಂಜಲಿ; ಜಯಂತಿ – ದೃಡತೆ, ಸ್ವಾಬಿಮಾನದ ಕಲಾವಿದೆ
೨. ಶನಿ ಮಹದೇವಪ್ಪ

2021 ರ ಜನವರಿ 3 ರಂದು 550ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟ ಶನಿ ಮಹದೇವಪ್ಪ ನಿಧರಾದರು. ಮಹದೇವಪ್ಪ ಮೊದಲು ರಂಗಕರ್ಮಿಯಾಗಿದ್ದರು. ಗುಬ್ಬಿ ವೀರಣ್ಣನವರ ಕಂಪನಿ ಸೇರಿದಂತೆ ಅನೇಕ ನಾಟಕ ತಂಡಗಳಲ್ಲಿ ಕೆಲಸ ಮಾಡಿದ್ದರು.
ಶನಿ ಪ್ರಭಾವ ನಾಟಕದಲ್ಲಿ ಅವರ ಶನಿ ದೇವರ ಪಾತ್ರವು ಅವರಿಗೆ ಅತ್ಯಧಿಕ ಖ್ಯಾತಿ ತಂದುಕೊಟ್ಟಿತ್ತ. ಅಂದಿನಿಂದ ಅವರು ಶನಿ ಮಹದೇವಪ್ಪ ಎಂದು ಪ್ರಸಿದ್ಧರಾದರು. ಶಂಕರ್ ಗುರು (1978), ಕವಿರತ್ನ ಕಾಳಿದಾಸ (1983), ಶ್ರೀ ಶ್ರೀನಿವಾಸ ಕಲ್ಯಾಣ (1974), ಶಿವಶಂಕರ್ (1990), ಗುರು ಬ್ರಹ್ಮ (1992) ಅವರ ನಟನೆಯ ಕೆಲ ಚಿತ್ರಗಳು.
೩. ಶಂಖನಾದ

ಹಿರಿಯ ನಟ ಶಂಖನಾದ ಅರವಿಂದ್ ಈ ವರ್ಷದ ಮೇ ತಿಂಗಳಲ್ಲಿ ಕೊರೊನಾ ಸೋಂಕಿಗೆ ಬಲಿಯಾದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಬೆಟ್ಟದ ಹೂ ಸಿನಿಮಾದ ಮೂಲಕ ಕನ್ನಡದ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಶಂಖನಾದ ಸಿನಿಮಾದಲ್ಲಿ ದಾಸಯ್ಯನ ಪಾತ್ರದ ಮೂಲಕ ಖ್ಯಾತಿ ಪಡೆದಿದ್ದರಿಂದ ಅವರ ಹೆಸರಿನ ಮುಂದೆ ಶಂಖನಾದ ಎಂಬುದು ಇದೆ. ಕಾಡಿನ ಬೆಂಕಿ, ಪ್ರಥಮ ಉಷಾಕಿರಣ, ಅನುಭವ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಸಿದ್ದರು.
೪. ಸತ್ಯಜಿತ್

ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಸತ್ಯಜಿತ್ ಅಕ್ಟೋಬರ್ನಲ್ಲಿ ನಿಧನರಾದರು. ಸುಮಾರು 600 ಸಿನಿಮಾಗಳಲ್ಲಿ ಅಭಿನಯಿಸಿದ್ದ ಅವರು, ಖಳನಾಯಕ ಪಾತ್ರಗಳ ಮೂಲಕ ಕನ್ನಡ ಸಿನಿ ರಸಿಕರ ಮನಸೂರೆಗೊಂಡಿದ್ದಾರೆ. 2016ರಲ್ಲಿ ಗ್ಯಾಂಗ್ರೀನ್ಗೆ ತುತ್ತಾಗಿದ್ದ ಅವರು ಎಡಗಾಲನ್ನು ಕಳೆದುಕೊಂಡಿದ್ದರು.
ಇದನ್ನೂ ಓದಿ: ಕಲಾವಿದ ಸೈಯದ್, ಸತ್ಯಜಿತ್ ಆದ ಕತೆ; ಅಗಲಿದ ಹಿರಿಯ ನಟನಿಗೆ ನಮನ
೫. ಬಿ.ಜಯಾ

ಕನ್ನಡ ಚಿತ್ರರಂಗದಲ್ಲಿ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಬಿ.ಜಯಾ, ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಜೂನ್ 3 ರಂದು ಕೊನೆಯುಸಿರೆಳೆದರು.
ಚಿತ್ರರಂಗಕ್ಕೆ ಬಾಲನಟಿಯಾಗಿ 1958ರಲ್ಲಿ ಭಕ್ತ ಪ್ರಹ್ಲಾದ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಜಯಾ ಅವರು, ಸುಮಾರು 350ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸುಮಾರು 6 ದಶಕಗಳಿಗೂ ಅಧಿಕ ಕಾಲ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಜಯಾ ಅವರು ಮುಖ್ಯವಾಗಿ ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಹಾಸ್ಯನಟಿ ಎಂದು ಜನಪ್ರಿಯರಾಗಿದ್ದರು.
೬. ಶಿವರಾಂ

ಕನ್ನಡ ಚಿತ್ರರಂಗದ ಹಿರಿಯ ನಟ 83 ವರ್ಷದ ಶಿವರಾಂ ಅವರು ಡಿಸೆಂಬರ್ನಲ್ಲಿ ನಿಧನರಾದರು. ಮನೆಯಲ್ಲಿ ಜಾರಿ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ, ಮೆದುಳಿನಲ್ಲಿ ರಕ್ತಸ್ರಾವ ಹೆಚ್ಚಾಗಿತ್ತು. ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದರು.
ಕನ್ನಡ ಚಿತ್ರರಂಗದಲ್ಲಿ ಆರು ದಶಕಗಳ ಕಾಲ ಪೋಷಕನಟನಾಗಿ, ಹಾಸ್ಯನಟನಾಗಿ ಸಿನಿಮಾಸಕ್ತರನ್ನು ರಂಜಿಸಿರುವ ಎಸ್. ಶಿವರಾಂ ಅವರು 1938ರಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಯಲ್ಲಿನ ಚೂಡಸಂದ್ರ ಹಳ್ಳಿಯಲ್ಲಿ ಜನಿಸಿದ್ದರು. ಕೇವಲ ನಟನೆ ಜೊತೆಗೆ ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ.
‘ಶರಪಂಜರ’, ‘ನಾಗರಹಾವು’ , ‘ಶುಭಮಂಗಳ’, ‘ಚಲಿಸುವ ಮೋಡಗಳು’ , ‘ಶ್ರಾವಣ ಬಂತು’ , ‘ಹಾಲು ಜೇನು’, ‘ಹೊಂಬಿಸಿಲು’, ‘ಹೊಸ ಬೆಳಕು’, ‘ಗುರು ಶಿಷ್ಯರು’ , ‘ಸಿಂಹದಮರಿ ಸೈನ್ಯ’ , ‘ಮಕ್ಕಳ ಸೈನ್ಯ’, ‘ಆಪ್ತಮಿತ್ರ’, ‘ಹುಚ್ಚ’ ಮುಂತಾದ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
೭. ಸಂಚಾರಿ ವಿಜಯ್

ಚಂದನವನದ ಪ್ರತಿಭಾನ್ವಿತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ರಸ್ತೆ ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೇ ತಮ್ಮ 38ನೇ ವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದಾರೆ.
ಇವರು ನಟಿಸಿದ್ದ ನಾನು ಅವನಲ್ಲ…ಅವಳು ಕನ್ನಡ ಸಿನಿಮಾ ಚಿತ್ರಕ್ಕೆ 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಜಯ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಈ ಚಿತ್ರದಲ್ಲಿ ಅವರು ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದಾರೆ.
ನಾತಿಚರಾಮಿ, ದಾಸವಾಳ, ಪಾದರಸ, ವರ್ತಮಾನ, ಒಗ್ಗರಣೆ, ರಂಗಪ್ಪ ಹೋಗ್ಬಿಟ್ನ, ಜೆಂಟಲ್ಮ್ಯಾನ್, ಆಕ್ಟ್-1978, ಉಲವಚಾರು ಬಿರಿಯಾನಿ ಮುಂತಾದ ಸಿನಿಮಾಗಳಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ.
೮. ಜಯಶ್ರೀ

ಬಿಗ್ ಬಾಸ್ ಸೀಸನ್ 3ಯಲ್ಲಿ ಭಾಗವಹಿಸಿದ್ದ ನಟಿ ಜಯಶ್ರೀ ರಾಮಯ್ಯ ಜನವರಿ 25 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕನ್ನಡ್ ಗೊತ್ತಿಲ್ಲ, ಉಪ್ಪು ಹುಳಿ ಖಾರ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಜಯಶ್ರೀ ರಾಮಯ್ಯ ಹಲವು ಬಾರಿ ಖಿನ್ನತೆಗೆ ಒಳಗಾಗಿದ್ದರು.
೯. ನಿರ್ಮಾಪಕ ಕೋಟಿ ರಾಮು

ಎಕೆ 47, ಸಿಂಹದ ಮರಿ, ಗೋಲಿಬಾರ್, ಕಲಾಸಿಪಾಳ್ಯದಂತಹ ಚಿತ್ರಗಳನ್ನು ನಿರ್ಮಿಸಿ ಕನ್ನಡದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು ಕಳೆದ ಏಪ್ರೀಲ್ನಲ್ಲಿ ನಿಧನರಾದರು. ಕೊರೊನಾದಿಂದಾಗಿ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕನ್ನಡದ ಪ್ರಖ್ಯಾತ ನಟಿ ಮಾಲಾಶ್ರೀ ಪತಿ ಕೋಟಿ ರಾಮು.
೧೦. ಜಿ.ಕೆ.ಗೋವಿಂದ ರಾವ್

ಹಿರಿಯ ರಂಗಕರ್ಮಿ, ನಟ, ಚಿಂತಕ, ಬರಹಗಾರ, ನಾಡಿನ ಸಾಕ್ಷಿಪ್ರಜ್ಞೆಯಾಗಿದ್ದ ಪ್ರೊ.ಜಿ.ಕೆ ಗೋವಿಂದ ರಾವ್ ತಮ್ಮ 84 ವಯಸ್ಸಿನಲ್ಲಿ ಅಕ್ಟೋಬರ್ 15 ರಂದು ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ನಿಧನರಾದರು.
ರಂಗಭೂಮಿ, ಸಿನಿಮಾರಂಗದಲ್ಲಿ ಸಕ್ರಿಯ ಒಡನಾಟ ಇಟ್ಟುಕೊಂಡಿದ್ದ ಇವರು ಕಥಾ ಸಂಗಮ, ಗ್ರಹಣ, ಮಿಥಿಲೆಯ ಸೀತೆಯರು, ಕರ್ಫ್ಯೂ, ನಿಶ್ಯಬ್ದ, ಭೂಮಿ ತಾಯಿಯ ಚೊಚ್ಚಲ ಮಗ, ಅಜ್ಜು, ಶಾಸ್ತ್ರಿ, ರೇ ಮುಂತಾದ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದರು. ಮಾಲ್ಗುಡಿ ಡೇಸ್, ಮಹಾಪರ್ವ ಧಾರಾವಾಹಿ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದರು.
೧೧. ಪುನೀತ್ ರಾಜ್ಕುಮಾರ್

ಈ ವರ್ಷದಲ್ಲಿ ಇಡೀ ಕರುನಾಡನ್ನೇ ದುಖಃಕ್ಕೆ ತಳ್ಳಿದ್ದು ಕನ್ನಡದ ಪ್ರತಿಭಾವಂತ ನಟ ಪುನೀತ್ ರಾಜ್ಕುಮಾರ್ ಅವರ ಸಾವು. ಅಕ್ಟೋಬರ್ 29 ರಂದು ತೀವ್ರ ಹೃದಯಾಘಾತಕ್ಕೆ ಒಳಗಾಗಿ, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
1976 ರಲ್ಲಿ ತೆರೆಕಂಡ ಡಾ.ರಾಜ್ಕುಮಾರ್ ಅಭಿನಯದ `ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಆಗ ಪುನೀತ್ ಆರು ತಿಂಗಳು ಮಗು. ನಂತರ ವಸಂತ ಗೀತ (1980)ಮೂಲಕ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುನೀತ್ ರಾಜ್ಕುಮಾರ್, ಸುಮಾರು ನಾಲ್ಕು ದಶಕಗಳ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ 14 ಚಿತ್ರಗಳು ಮತ್ತು ನಾಯಕ ನಟನಾಗಿ 28 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಪುನೀತ್ ನಟನೆಯ 1985ರಲ್ಲಿ ತೆರೆಕಂಡ ಬೆಟ್ಟದ ಹೂವು ಚಿತ್ರದ ರಾಮು ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಚಲಿಸುವ ಮೋಡಗಳು’ ಹಾಗೂ ‘ಎರಡು ಕನಸು’ ಚಿತ್ರಗಳಿಗಾಗಿ ಅತ್ಯುತ್ತಮ ಬಾಲ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.


