ರಾಜ್ಯ ವಿಧಾನಸಭೆಯ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಇಂದು (ಏಪ್ರಿಲ್ 24) ಅನೇಕ ಬಂಡಾಯ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ವಿಶೇಷವಾಗಿ ಬಿಎಸ್ಪಿ ಪ್ರಬಲವಾಗಿರುವ ಕೊಳ್ಳೇಗಾಲ ಕ್ಷೇತ್ರದಲ್ಲಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ರೇಖಾ ನಾಗರಾಜ್ ಅವರೂ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ.
ಬಹುಜನ ಚಳವಳಿಯ ಮೂಲಕ ಮುಂಚೂಣಿಗೆ ಬಂದು ಬಹಳ ಕಾಲ ಬಿಎಸ್ಪಿಯಲ್ಲೇ ಇದ್ದ ಎನ್.ಮಹೇಶ್ ಅವರು ಹಲವು ಸೋಲುಗಳ ಬಳಿಕ 2018ರಲ್ಲಿ ಗೆಲುವು ಪಡೆದಿದ್ದರು. ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಆದರೆ ಆಪರೇಷನ್ ಕಮಲದ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದರು. ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕ ಬಿಜೆಪಿ ಸೇರಿಕೊಂಡಿದ್ದರು.
ಬಿಎಸ್ಪಿ ವರಿಷ್ಠರ ಇಚ್ಛೆಗೆ ವಿರುದ್ಧವಾಗಿ ಮಹೇಶ್ ನಡೆದುಕೊಂಡರೆಂಬ ಆರೋಪಗಳು ಈಗಲೂ ಇವೆ. ಹೀಗಾಗಿ ಮಹೇಶ್ ಅವರನ್ನು ಸೋಲಿಸುವ ಉದ್ದೇಶವನ್ನು ಹೊಂದಿರುವ ಬಿಎಸ್ಪಿ ವರಿಷ್ಠರು, ಕೊಳ್ಳೇಗಾಲ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಿದ್ದಾರೆಂದು ಮೂಲಗಳು ಹೇಳಿವೆ.
ಎನ್.ಮಹೇಶ್ ದೂರವಾದ ಬಳಿಕ ಕ್ಷೇತ್ರದಲ್ಲಿ ಪಕ್ಷದ ಹಿಡಿತ ಕೊಂಚ ಕಡಿಮೆಯಾದಂತೆ ಕಂಡು ಬಂದರೂ, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿಯೇ ಇದ್ದಾರೆ. ಪಕ್ಷದ ರಾಜ್ಯ ಕಾರ್ಯದರ್ಶಿ ಕಮಲ್ ನಾಗರಾಜು ಹಾಗೂ ಅವರ ಪತ್ನಿ ರೇಖಾ ನಾಮಪತ್ರ ಸಲ್ಲಿಸಿದ್ದರು. ಕಮಲ್ ನಾಮಪತ್ರ ತಿರಸ್ಕೃತವಾಗಿತ್ತು. ಆದರೆ ರೇಖಾ ಉಮೇದುವಾರಿಕೆ ಕ್ರಮಬದ್ಧವಾಗಿತ್ತು.
ದಿಢೀರ್ ಬೆಳವಣಿಗೆಯಲ್ಲಿ ರೇಖಾ ಸೋಮವಾರ ನಾಮಪತ್ರ ವಾಪಸ್ ಪಡೆದಿದ್ದಾರೆ.
“ಪಕ್ಷದ ವರಿಷ್ಠರು ಕೊಳ್ಳೇಗಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಪಕ್ಷಕ್ಕೆ ಮೋಸ ಮಾಡಿರುವ ಎನ್.ಮಹೇಶ್ ಅವರನ್ನು ಸೋಲಿಸುವ ಗುರಿಯೊಂದಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಬಿಎಸ್ಪಿ ನಾಮಪತ್ರ ವಾಪಸ್ ಪಡೆಯಲು ಸೂಚಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿಯವರನ್ನು ಬಿಎಸ್ಪಿ ಬೆಂಬಲಿಸಲಿದೆ” ಎಂದು ರೇಖಾ ನಾಗರಾಜ್ ತಿಳಿಸಿದ್ದಾರೆ.
ಇದನ್ನೂ ಓದಿರಿ: ಇದುವರೆಗೂ ಬಿಜೆಪಿ ಖಾತೆ ತೆರೆಯಲಾಗದ ಕ್ಷೇತ್ರಗಳಿವು: ಕಾರಣವೇನು?