ಪುಲ್ವಾಮ ದಾಳಿ ವಿಚಾರವಾಗಿ ದಿ ವೈರ್ ನಡೆಸಿದ ಸಂದರ್ಶನದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯ ರಾಜ್ಯಪಾಲ ಸತ್ಯಪಾಲ್ ಮಲೀಕ್ ಅವರು ಪ್ರಧಾನಿ ಮೋದಿ ಮೇಲೆ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಗೃಹ ಸಚಿವ ಅಮಿತ್ ಶಾ ಹಾಗೂ ಸತ್ಯಪಾಲ್ ನಡುವೆ ವಾಕ್ ಸಮರ ಶುರುವಾಗಿದೆ.
”ಬಿಜೆಪಿಯು ದೇಶದ ಜನತೆ ಮುಂದೆ ಮುಚ್ಚಿಡುವ ಯಾವ ಕೆಲಸವನ್ನೂ ಮಾಡಿಲ್ಲ ಎಂದು ನಾನು ಸಂಪೂರ್ಣ ದೃಢವಾಗಿ ಹೇಳಬಲ್ಲೆ. ನಮ್ಮ ಜತೆಗಿನ ಸಂಬಂಧ ಕಡಿದುಕೊಂಡ ಬಳಿಕ ಅವರು ಆರೋಪ ಮಾಡುತ್ತಿದ್ದಾರೆ, ಅದನ್ನು ಮಾಧ್ಯಮಗಳು ಮತ್ತು ಜನರು ಅದಕ್ಕೆ ಅನುಗುಣವಾಗಿ ಮೌಲ್ಯಮಾಪನ ಮಾಡಬೇಕು” ಎಂದು ಕಳೆದ ವಾರ ಖಾಸಗಿ ಟಿವಿ ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
ರಾಜಸ್ತಾನದ ಸಿಕಾರ್ನಲ್ಲಿ ಶಾ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಮ್ಮು ಹಾಗೂ ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ರಾಜ್ಯಪಾಲ ಅವರು, ”ಹುದ್ದೆ ತೊರೆದ ಬಳಿಕ ನಾನು ಪುಲ್ವಾಮಾ ದಾಳಿ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳುವುದು ತಪ್ಪು. ಆ ದಾಳಿಯ ದಿನದಂದೇ ನಾನು ಮಾತನಾಡಿದ್ದೇನೆ” ಎಂದು ತಿರುಗೇಟು ನೀಡಿದ್ದಾರೆ.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಮಲಿಕ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ಹುದ್ದೆಗೆ ”ಗಂಭೀರ ಅಭ್ಯರ್ಥಿ”, ಅದು ಅವರ ಹಣೆಬರಹದಲ್ಲಿದ್ದರೆ ಆಗುತ್ತಾರೆ” ಎಂದು ಹೇಳಿದರು.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ”ನಾನು ಅವರಿಗೆ ಶುಭ ಹಾರೈಸುತ್ತೇನೆ, ಆದರೆ ರಾಜಕೀಯ ಮತ್ತು ಚುನಾವಣೆಯಲ್ಲಿ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ, ಪ್ರಸ್ತುತ ಪರಿಸ್ಥಿತಿ ಅವರಿಗೆ ಕಷ್ಟಕರವಾಗಿದೆ, ಅವರು ಬೇರೆ ಏನಾದರೂ ಪ್ಯತ್ನಗಳನ್ನು ಮಾಡಬಹುದು” ಎಂದು ಉತ್ತರಿಸಿದರು.
ಇದನ್ನೂ ಓದಿ: ಪುಲ್ವಾಮ ದಾಳಿ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಗೌವರ್ನರ್ ಸತ್ಯಪಾಲ್ ಮಲಿಕ್ಗೆ ಸಿಬಿಐ ನೋಟಿಸ್
ಗೌತಮ್ ಅದಾನಿ ಹಗರಣದ ವಿಚಾರದಲ್ಲಿ ಪ್ರಧಾನಿ ಮೋದಿಯವರ ಮೌನ ತನಗೆ ಹಾನಿ ಮಾಡುತ್ತದೆ. ಇದರ ಜೊತೆಗೆ ಪುಲ್ವಾಮಾ ವಿಷಯದ ಬಗ್ಗೆಯೂ ಪ್ರಧಾನಿ ಮಾತನಾಡಬೇಕು ಎಂದು ಮಲಿಕ್ ಒತ್ತಾಯಿಸಿದರು.
ಈ ವರ್ಷಾಂತ್ಯದಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಬಿಜೆಪಿಯು ವಸುಂಧರಾ ರಾಜೇ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿದರೆ, ಬಿಜೆಪಿಯ ಗೆಲುವಿನ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ಮಲಿಕ್ ಹೇಳಿದ್ದಾರೆ.
ಪುಲ್ವಾಮಾ ದಾಳಿ: ಸತ್ಯಪಾಲ ಹೇಳಿದ್ದೇನು?
ಪುಲ್ವಾಮಾದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯು ಭಾರತೀಯ ಗುಪ್ತಚರ ಇಲಾಖೆಯ ಬಹುದೊಡ್ಡ ವೈಫಲ್ಯ ಮತ್ತು ನಿರ್ದಿಷ್ಟವಾಗಿ ಗೃಹ ಸಚಿವಾಲಯದ ಅಸಮರ್ಥತೆಯ ಪರಿಣಾಮವಾಗಿದೆ. ಆಗ ರಾಜನಾಥ್ ಸಿಂಗ್ ಗೃಹ ಸಚಿವರಾಗಿದ್ದರು. ಸಿಆರ್ಪಿಎಫ್ ತನ್ನ ಜವಾನರನ್ನು ಸಾಗಿಸಲು ವಿಮಾನವನ್ನು ಕೇಳಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಅದನ್ನು ನಿರಾಕರಿಸಿತು” ಎಂದು ಮಲಿಕ್ ದೂರಿದ್ದಾರೆ.
ಸತ್ಯ ಪಾಲ್ ಮಲಿಕ್ ಪುಲ್ವಾಮ ದಾಳಿ ನಡೆದಾಗ ಮತ್ತು ಆರ್ಟಿಕಲ್ 370 ಅನ್ನು ಕಿತ್ತು ಹಾಕಿದ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದರು. ನಂತರ ಗೋವಾದ ರಾಜ್ಯಪಾಲರಾಗಿದ್ದ ಅವರು, ಆನಂತರ 2022ರವರೆಗೆ ಮೇಘಾಲಯದ ರಾಜ್ಯಪಾಲರಾಗಿದ್ದರು. ಮೋದಿ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದಾಗ ಅದನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದರು. ಅಲ್ಲದೇ ಆರ್ಎಸ್ಎಸ್ ಭಾರೀ ಭ್ರಷ್ಟಾಚಾರ ನಡೆಸುತ್ತದೆ ಎಂದು ಆರೋಪಿಸಿದ್ದರು
ದಾಳಿ ನಡೆದ ದಿನ ಸಂಜೆಯೇ ಪ್ರಧಾನಿ ಮೋದಿಯವರಿಗೆ ಈ ವೈಫಲ್ಯಗಳ ಬಗ್ಗೆ ತಿಳಿಸಿದೆ. ನಮ್ಮ ತಪ್ಪಿನಿಂದಾಗಿ 40 ಸೈನಿಕರು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ವಿವರಿಸಿದೆ. ಆದರೆ ಅವರು ಯಾರಿಗೂ ಹೇಳಬೇಡಿ, ಸುಮ್ಮನಿದ್ದುಬಿಡಿ ಎಂದರು. ಎನ್ಎಸ್ಎ ಅಜಿತ್ ದೋವಲ್ ಕೂಡ ನನ್ನ ಬಾಯಿ ಮುಚ್ಚಿಸಿದರು. ಆಗ ನನಗೆ ತಕ್ಷಣವೇ ಅರ್ಥವಾಯಿತು, ಅವರ ಉದ್ದೇಶ ಪಾಕಿಸ್ತಾನದ ಮೇಲೆ ದೋಷಾರೋಪ ಮಾಡಿ ಚುನಾವಣೆಯಲ್ಲಿ ಸರ್ಕಾರ ಮತ್ತು ಬಿಜೆಪಿಗೆ ಲಾಭ ಪಡೆಯುವುದಾಗಿತ್ತು ಎಂದು ಸತ್ಯಪಾಲ್ ಮಲಿಕ್ ಸಂದರ್ಶನದಲ್ಲಿ ಹೇಳಿದ್ದಾರೆ.
ಪುಲ್ವಾಮಾ ಘಟನೆಯಲ್ಲಿ 300 ಕೆಜಿ ಆರ್ಡಿಎಕ್ಸ್ ಸ್ಫೋಟಕಗಳನ್ನು ಹೊತ್ತ ಕಾರು ಪಾಕಿಸ್ತಾನದಿಂದ ಬಂದಿದ್ದು, ಜಮ್ಮು ಮತ್ತು ಕಾಶ್ಮೀರದ ರಸ್ತೆಗಳು ಮತ್ತು ಹಳ್ಳಿಗಳಲ್ಲಿ 10-15 ದಿನಗಳ ಕಾಲ ಯಾರಿಗೂ ಗೊತ್ತಾಗದಂತೆ ಮತ್ತು ಯಾರಿಗೂ ತಿಳಿಯದಂತೆ ಸಂಚರಿಸುತ್ತಿತ್ತು ಎಂದರೆ ಇದು ಗಂಭೀರ ಗುಪ್ತಚರ ವೈಫಲ್ಯ ಅಲ್ಲವೇ ಎಂದಿದ್ದಾರೆ.