ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಅಡ್ಡಿ ಪಡಿಸುವಂತೆ ವಿದ್ಯಾರ್ಥಿಗಳನ್ನು ಹಿಂದೂ ಜಾಗರಣಾ ವೇದಿಕೆ (ಹಿಂಜಾವೇ) ಹೇಗೆ ಪ್ರಚೋದಿಸಿತು ಎಂಬುದನ್ನು `ದಿ ನ್ಯೂಸ್ ಮಿನಿಟ್’ ಸುದ್ದಿ ಜಾಲತಾಣ ವರದಿ ಮಾಡಿದೆ.
ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಸಹಪಾಠಿಗಳ ವಿರುದ್ಧ ಪ್ರತಿಭಟಿಸುವಂತೆ ವಿದ್ಯಾರ್ಥಿಗಳನ್ನು ಉಡುಪಿಯ ಹಿಂದೂ ಜಾಗರಣ ವೇದಿಕೆ ಪ್ರಚೋದಿಸಿತು. ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಮತ್ತು ಪೇಟಗಳನ್ನು ಹಿಂಜಾವೇ ಒದಗಿಸಿತು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಫೆಬ್ರವರಿ 8ರಂದು 100ಕ್ಕೂ ಹೆಚ್ಚು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಮತ್ತು ಹಿಜಾಬ್ ಧರಿಸಿದ ಮುಸ್ಲಿಂ ಹುಡುಗಿಯರ ನಡುವೆ ಘರ್ಷಣೆ ನಡೆಯಿತು. ಕೇಸರಿ ಧರಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳು ‘ನ್ಯೂಸ್ ಮಿನಿಟ್’ ಜೊತೆ ಮಾತನಾಡಿ, “ಉಡುಪಿಯ ಮಹಿಳಾ ಸರಕಾರಿ ಪಿಯು ಕಾಲೇಜಿನಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿದ ನಂತರ ಈ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದೇವೆ” ಎಂದಿದ್ದಾರೆ. ಆದರೆ ಹೆಚ್ಚಿನ ತನಿಖೆ ನಡೆಸಿರುವ ನ್ಯೂಸ್ ಮಿನಿಟ್, “ಈ ಪ್ರತಿಭಟನೆಗಳು ಸ್ವಯಂಪ್ರೇರಿತವಾಗಿಲ್ಲ. ಕೇಸರಿ ಶಾಲುಗಳು ಮತ್ತು ಪೇಟಗಳನ್ನು ಹಿಂದೂ ಜಾಗರಣ ವೇದಿಕೆಯಿಂದ ನೀಡಲಾಗಿತ್ತು” ಎಂದು ತಿಳಿಸಿದೆ.
ಮಂಗಳವಾರ ನಡೆದ ಘಟನೆಗೂ ಎರಡು ದಿನ ಮೊದಲು ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು ವಾಟ್ಸ್ಆಪ್ನಲ್ಲಿ ಒಂದು ಸಂದೇಶವನ್ನು ಸ್ವೀಕರಿಸಿದ್ದರು ಎಂಬುದನ್ನು ನ್ಯೂಸ್ ಮಿನಿಟ್ ಪತ್ತೆ ಹಚ್ಚಿದೆ.
ಇದನ್ನೂ ಓದಿರಿ: ಮಡಿಕೇರಿ: ಕೇಸರಿ ಶಾಲು ಧರಿಸಲು ಬಜರಂಗದಳ ನಾಯಕರಿಂದ ಪ್ರಚೋದನೆ; ವಿಡಿಯೊ ವೈರಲ್
“ಈಗಾಗಲೇ ಹಿಜಾಬ್ ವಿವಾದ ಉಡುಪಿಯ ಎಲ್ಲಾ ಕಾಲೇಜುಗಳಲ್ಲಿ ತಾರಕ್ಕೇರಿದ್ದು ಒಂದು ಸಣ್ಣ ಬಟ್ಟೆ ಮುಖಕ್ಕೆ ಹಾಕಿಕೊಳ್ಳುವ ಸಲುವಾಗಿ ಒಂದು ತಿಂಗಳಿನಿಂದ ಮುಸ್ಲಿಂ ವಿದ್ಯಾರ್ಥಿನಿಯರ ಹುಚ್ಚಾಟ ಹಾರಾಟ ಎಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ನಾವು ನೋಡಿಯಾಗಿದೆ. ಹಿಜಾಬ್ ಸಮಸ್ಯೆ ನಮ್ಮ ಎಂಜಿಎಂ ಕಾಲೇಜಲ್ಲಿ ಕೂಡ ಇರುವುದು ನಮ್ಮೆಲ್ಲರ ಗಮನದಲ್ಲಿದೆ. ನಮ್ಮ ಕಾಲೇಜಿನಲ್ಲಿ ಕೂಡ ನಮ್ಮ ಈ ಶೈಕ್ಷಣಿಕ ವರ್ಷದಲ್ಲಿಯೇ ಹಿಜಾಬ್ ಸಮಸ್ಯೆ ಅಂತ್ಯವಾಗುವಂತೆ ಮತ್ತು ಎಲ್ಲರೂ ವಸ್ತ್ರಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಲು ನಮ್ಮ ಕಾಲೇಜಿನಲ್ಲಿ ಈಗ ವಿದ್ಯಾರ್ಥಿಗಳಾದ ನಾವು ಹೋರಾಟ ಮಾಡುವ ಅವಶ್ಯಕತೆ ಇರುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೋಮವಾರ ಕಡ್ಡಾಯವಾಗಿ ಕೇಸರಿ ಶಾಲನ್ನು ತರತಕ್ಕದ್ದು ಮತ್ತು ಅದನ್ನು ಸಂಘಟಕರು ಸೂಚನೆ ನೀಡುವ ತನಕ ತಮ್ಮ ಬ್ಯಾಗಿನ ಒಳಗಡೆ ಇಟ್ಟುಕೊಂಡು ಹೆಗಲಿಗೆ ಹಾಕಿಕೊಂಡು ಕಾಲೇಜು ಪ್ರವೇಶ ಮಾಡಬೇಕು- ಜೈಶ್ರೀರಾಮ್” ಎಂದು ವಾಟ್ಸ್ಆಪ್ ಸಂದೇಶ ಹೇಳುತ್ತದೆ.
ಅನಾಮಧೇಯತೆಯ ಸಂದೇಶದ ಕುರಿತು ಕಾಲೇಜಿನೊಂದಿಗೆ ನಿಕಟ ಸಂಬಂಧ ಹೊಂದಿರುವ ವ್ಯಕ್ತಿಯೊಬ್ಬರು ನ್ಯೂಸ್ಮಿನಿಟ್ಗೆ ತಿಳಿಸುತ್ತಾ, “ಈ ಸಂದೇಶ ಯಾರಿಂದ ಬಂದಿದೆ ಎಂಬುದು ತಿಳಿದಿಲ್ಲ. ಆದರೆ ಅದು ಕಾಲೇಜಿನ ಹೊರಗಿನಿಂದ ಬಂದಿದೆ” ಎಂದಿದ್ದಾರೆ. “ಈ ಸಂದೇಶಗಳನ್ನು ತರಗತಿಯ ಎಲ್ಲಾ ಗುಂಪುಗಳಲ್ಲಿ, ವಿಶೇಷವಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಜೊತೆ ಹಂಚಿಕೊಳ್ಳಲಾಗಿದೆ” ಎಂದು ಮೂಲಗಳು ತಿಳಿಸಿವೆ. “ಈ ಸಂದೇಶಗಳು ಎಲ್ಲಿಂದ ಬಂದಿವೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇದು ಕಾಲೇಜಿನ ಹೊರಗಿನ ಜನರಿಂದ ಬಂದಿದೆ” ಎಂದು ಮೂಲಗಳು ಹೇಳಿವೆ.
ಮಂಗಳವಾರ ಬೆಳಿಗ್ಗೆ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಹಿಂದುತ್ವವಾದಿ ಗುಂಪು ಹಿಂದೂ ಜಾಗರಣ ವೇದಿಕೆ ಕಾರ್ಯಪ್ರವೃತ್ತವಾಗಿತ್ತು ಎಂದು ಪ್ರತಿಭಟನೆಯ ವೀಡಿಯೊಗಳನ್ನು ವಿಶ್ಲೇಷಿಸುವ ಮೂಲಕ, ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಮಾತನಾಡುವ ಮೂಲಕ ನ್ಯೂಸ್ಮಿನಿಟ್ ಕಂಡುಕೊಂಡಿದೆ.
ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಾಲುಗಳನ್ನು ಧರಿಸುವಂತೆ ಸಂದೇಶದಲ್ಲಿ ತಿಳಿಸಲಾಗಿದೆ. ಸೋಮವಾರ ಯಾವುದೇ ಪ್ರತಿಭಟನೆಗಳಿಲ್ಲದಿದ್ದರೂ, ಮಂಗಳವಾರ ಬೆಳಿಗ್ಗೆ ಕೇಸರಿ ವಸ್ತ್ರಧಾರಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿದ ಹುಡುಗಿಯರನ್ನು ಎದುರಾದರು. ಇದೇ ವೇಳೆ ಎಂಜಿಎಂ ಕಾಲೇಜಿನಲ್ಲಿ ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಹಾಜರಿದ್ದರು. ಘೋಷಣೆಗಳನ್ನು ಕೂಗುತ್ತಿದ್ದ ವಿದ್ಯಾರ್ಥಿಗಳ ಮಧ್ಯೆಯೇ ಅವರು ನಿಂತಿದ್ದರು.
ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಎಂಜಿಎಂ ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿಗಳನ್ನು ಚದುರಿಸಲು ಮುಂದಾದರು. ಈ ವೇಳೆ ಅನೇಕ ಕೇಸರಿ ವಸ್ತ್ರಧಾರಿ ವಿದ್ಯಾರ್ಥಿಗಳು ಪ್ರತಿಭಟನೆಯ ವೇಳೆ ತೊಟ್ಟಿದ್ದ ಕೇಸರಿ ಉಡುಪನ್ನು ಎಂಜಿಎಂ ಕಾಲೇಜಿನ ಪಕ್ಕದಲ್ಲಿರುವ ಅಜ್ಜಮ್ಮ ಕೆಫೆಯಲ್ಲಿ ಕಾದು ಕುಳಿತಿದ್ದ ಹಿಂದೂ ಜಾಗರಣಾ ವೇದಿಕೆ ಸದಸ್ಯರಿಗೆ ಹಿಂದಿರುಗಿಸುತ್ತಿರುವುದು ಕಂಡು ಬಂತು.
ಇದನ್ನೂ ಓದಿರಿ: ಗುಜರಾತ್: ಮದುವೆಯಲ್ಲಿ ಸಾಂಪ್ರದಾಯಿಕ ಪೇಟ ಧರಿಸಿದ ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ
ಅಜ್ಜಮ್ಮ ಕೆಫೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ವಿಭಾಗೀಯ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಉಪಸ್ಥಿತರಿದ್ದರು. ನ್ಯೂಸ್ ಮಿನಿಟ್ ವರದಿಗಾರರ ಮುಂದೆಯೇ ಹಿಂದುತ್ವ ಸಂಘಟನೆಯ ಸದಸ್ಯರು ಕೇಸರಿ ಶಾಲುಗಳನ್ನು ವಾಪಸ್ ಪಡೆದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿಚಾರದಲ್ಲಿ ಹಿಂದೂ ಜಾಗರಣಾ ವೇದಿಕೆಯ ಪಾತ್ರವನ್ನು ಕೇಳಿದಾಗ, “ಉಡುಪಿಯಲ್ಲಿ ಹಿಜಾಬ್ ವಿಚಾರದಲ್ಲಿ ಕೋಮುವಾದಿ ಸಂಘಟನೆಗಳು ಸೌಹಾರ್ದತೆ ಕದಡಲು ಮತ್ತು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ. ನಾವು ಅದನ್ನು ವಿರೋಧಿಸುತ್ತೇವೆ” ಎಂದು ಪ್ರಕಾಶ್ ಅವರು ಅಜ್ಜಮ್ಮ ಕೆಫೆಯಲ್ಲಿ ನ್ಯೂಸ್ ಮಿನಿಟ್ಗೆ ಪ್ರತಿಕ್ರಿಯಿಸಿದರು.
ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್, “ಹಿಂದೂ ಜಾಗರಣಾ ವೇದಿಕೆಯಿಂದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದೆ” ಎಂಬುದನ್ನು ನಿರಾಕರಿಸಿದ್ದಾರೆ. ಹಿಂದೂ ಜಾಗರಣಾ ವೇದಿಕೆ ಸದಸ್ಯರು ಮಂಗಳವಾರ ಎಂಜಿಎಂ ಕಾಲೇಜಿನ ಬಳಿ ಏಕೆ ಇದ್ದರು ಎಂದು ಪ್ರಶ್ನಿಸಿದಾಗ, “ಇಲ್ಲಿಯವರೆಗೆ ನಡೆದದ್ದೆಲ್ಲವನ್ನೂ ವಿದ್ಯಾರ್ಥಿಗಳೇ ಮಾಡಿದ್ದಾರೆ. ನಾವು ಅದರಲ್ಲಿ ಭಾಗಿಯಾಗಿಲ್ಲ. ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ನಾವು ಈ ವಿಷಯದಲ್ಲಿ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಯಾವುದು ಸರಿ ಮತ್ತು ತಪ್ಪು, ನಾವು ಹೇಗೆ ನಡೆದುಕೊಳ್ಳಬೇಕು ಎಂದು ನಮ್ಮ ಧರ್ಮ ಹೇಳುತ್ತದೆ. ನಾವು ಹಿಂಸೆಯನ್ನು ಬೆಂಬಲಿಸುವುದಿಲ್ಲ. ಆದರೆ ನಾವು ಯಾವಾಗಲೂ ಕೈ ಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ನಮ್ಮ ಸಮಾಜವನ್ನು ರಕ್ಷಿಸುವುದು ನಮ್ಮ ಕೆಲಸ” ಎಂದು ಪ್ರಶಾಂತ್ ನಾಯಕ್ ಹೇಳಿದ್ದಾರೆ. “ನೋಡಿ, ಶಾಲು ಕೊಳ್ಳಲು ಹಣವಿಲ್ಲದವರು ಯಾರೂ ಇಲ್ಲ. ವಿದ್ಯಾರ್ಥಿಗಳು ಸ್ವತಃ ವ್ಯವಸ್ಥೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಏನು ಮಾಡಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ” ಎಂದು ನಾಯಕ್ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ‘ದುರ್ಗಾ ದೌಡ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಾಲುಗಳು ಮತ್ತು ಪೇಟಗಳನ್ನು ಸ್ವೀಕರಿಸಿದ್ದರು ಎಂದು ತಿಳಿದುಬಂದಿದೆ. “ಕಳೆದ ವರ್ಷ ದುರ್ಗಾ ದೌಡ್ ಕಾರ್ಯಕ್ರಮದ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ನಮಗೆ ವೈಯಕ್ತಿಕವಾಗಿ ಶಾಲು ನೀಡಲಾಯಿತು” ಎಂದು ಶಾಲು ಧರಿಸಿದ್ದ ವಿದ್ಯಾರ್ಥಿಯೊಬ್ಬರು ನ್ಯೂಸ್ ಮಿನಿಟ್ಗೆ ತಿಳಿಸಿದ್ದಾರೆ. ಮಂಗಳವಾರ ಆ ಶಾಲನ್ನು ಬಳಸಲು ಆ ವಿದ್ಯಾರ್ಥಿ ನಿರ್ಧರಿಸಿದ್ದನು. ಸ್ವಂತ ಶಾಲು ಹೊಂದಿರದ ಇತರ ವಿದ್ಯಾರ್ಥಿಗಳಿಗೆ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಕೇಸರಿ ಶಾಲು ಮತ್ತು ಪೇಟಗಳನ್ನು ಕಾಲೇಜು ಆವರಣದ ಹೊರಗೆ ವಿತರಿಸಿದರು.
ವಿದ್ಯಾರ್ಥಿಗಳನ್ನು ಚದುರಿಸಿದ ನಂತರ, ಹಿಂದೂ ಜಾಗರಣ ವೇದಿಕೆ ಸದಸ್ಯರು ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಂದ ಈ ಶಾಲುಗಳು ಮತ್ತು ಪೇಟಗಳನ್ನು ಹಿಂಪಡೆದು ಪ್ಯಾಕ್ ಮಾಡಿದರು ಎಂಬುದಾಗಿ ವರದಿ ಹೇಳುತ್ತದೆ. ಶಾಲುಗಳು ಮತ್ತು ಪೇಟಗಳ ಸಂಗ್ರಹವನ್ನು BOOM ಲೈವ್ನ ನಿವೇದಿತಾ ನಿರಂಜನಕುಮಾರ್ ದಾಖಲಿಸಿದ್ದಾರೆ.
#Watch: MGM college students in #Udupi, #Karnataka return the orange turbans allegedly distributed by the Hindu Jagrana Vedike for the protest against students wearing Hijab. Shot by our reporter @BombayBombil#HijabRow #BOOMReports pic.twitter.com/p83mKUotCx
— BOOM Live (@boomlive_in) February 8, 2022
ಸೋಮವಾರವೂ ಅವರೆಲ್ಲರೂ ಶಾಲುಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದರು ಎಂದು ಪ್ರತಿಭಟನಾ ನಿರತ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿ ನ್ಯೂಸ್ ಮಿನಿಟ್ಗೆ ಹೇಳುತ್ತಾರೆ. “ನಾವು ಪ್ರಾಂಶುಪಾಲರೊಂದಿಗೆ ಮಾತನಾಡಿದ್ದೇವೆ. ತರಗತಿಗಳಲ್ಲಿ ಹಿಜಾಬ್ ಧರಿಸುವುದನ್ನು ನಿಲ್ಲಿಸುವಂತೆ ಕೇಳಿಕೊಂಡೆವು. ಇಂದು ಬೆಳಿಗ್ಗೆ 10 ಗಂಟೆಗೆ ನಿಲ್ಲಿಸಲಾಗುವುದು ಎಂದು ಅವರು ನಮಗೆ ಭರವಸೆ ನೀಡಿದರು. ಆದರೆ ಹಿಜಾಬ್ ಧರಿಸುತ್ತಲೇ ಇದ್ದಾರೆ. ಅದಕ್ಕಾಗಿಯೇ ನಾವು ಪ್ರತಿಭಟಿಸುತ್ತಿದ್ದೇವೆ” ಎಂದು ವಿದ್ಯಾರ್ಥಿ ಹೇಳುತ್ತಾನೆ. ಆ ವಿದ್ಯಾರ್ಥಿಯು ಸಂಘ ಪರಿವಾರದ ವಿದ್ಯಾರ್ಥಿ ಘಟಕವಾದ ಎಬಿವಿಪಿಯಲ್ಲಿದ್ದನು ಎಂಬುದನ್ನು ನ್ಯೂಸ್ ಮಿನಿಟ್ ದೃಢಪಡಿಸಿಕೊಂಡಿದೆ.
“ಎಂಜಿಎಂನಲ್ಲಿ ವಿದ್ಯಾರ್ಥಿಗಳು ಕಳೆದ ವಾರದವರೆಗೆ ಮುಕ್ತವಾಗಿ ಹಿಜಾಬ್ ಧರಿಸಿದ್ದರು. 2011 ಮತ್ತು 2013ರ ನಡುವೆ ವಿದ್ಯಾರ್ಥಿಯಾಗಿದ್ದಾಗ ಈ ಕಾಲೇಜಿನಲ್ಲಿ ಹಿಜಾಬ್ ಅನ್ನು ಅನುಮತಿಸಲಾಗಿದೆ” ಎಂದು ಕಾಲೇಜಿನ ಹಳೆಯ ವಿದ್ಯಾರ್ಥಿ ಅರ್ನವ್ ಅಮೀನ್ ತಿಳಿಸಿದ್ದಾರೆ. “ನನ್ನ ತರಗತಿಯಲ್ಲಿ ಹಿಜಾಬ್ ಧರಿಸುವ ಹುಡುಗಿಯರಿದ್ದರು. ಅವರು ಹಿಜಾಬ್ಅನ್ನು ಮುಕ್ತವಾಗಿ ಧರಿಸುತ್ತಿದ್ದರು” ಎಂದಿದ್ದಾರೆ.
ಉಡುಪಿಯಲ್ಲಿ ಹಿಜಾಬ್ ಧರಿಸಿ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಂ ಹುಡುಗಿಯರನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟಿಸಿದೆ, ಇದನ್ನು ಎಸ್ಡಿಪಿಐ ಬೆಂಬಲಿಸುತ್ತದೆ ಎಂದು ಉಡುಪಿಯ ಬಿಜೆಪಿ ಮತ್ತು ಹಿಂದೂ ಜಾಗರಣ ವೇದಿಕೆಯಂತಹ ಹಿಂದುತ್ವ ಗುಂಪುಗಳು ಪದೇ ಪದೇ ಹೇಳುತ್ತಿವೆ. ಉಡುಪಿಯ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದವರನ್ನು ತರಗತಿಗೆ ನಿರ್ಬಂಧಿಸಿದ ಬಳಿಕ ಆ ಹುಡುಗಿಯರ ವೈಯಕ್ತಿಕ ಹಕ್ಕುಗಳನ್ನು ಬೆಂಬಲಿಸಿದೆವು ಎಂದು ಸಿಎಫ್ಐ ಹೇಳಿಕೊಂಡಿದೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಮಾತನಾಡಿ, “ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಬಾಲಕಿಯರನ್ನು ತರಗತಿಗೆ ನಿರ್ಬಂಧಿಸಿದ ನಂತರ ನಮ್ಮ ಸಂಘಟನೆಯು ಕೈಜೋಡಿಸಿದೆ. ಇದು ಸಿಎಫ್ಐನ ಆಂದೋಲನ ಎಂದು ಹೇಳಲಾಗುತ್ತಿದೆ. ಆದರೆ ಅದು ನಿಜವಲ್ಲ. ಎಂಜಿಎಂ ಕಾಲೇಜಿನಲ್ಲಿ ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಅವರು ವಿದ್ಯಾರ್ಥಿಗಳ ಏನು ಮಾಡುತ್ತಿದ್ದರು ಎಂದು ನಾವು ಕೇಳಲು ಬಯಸುತ್ತೇವೆ? ಈ ವಿಚಾರವಾಗಿ ಅವರು ರಾಜಕೀಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ವರದಿ ಕೃಪೆ: ದಿ ನ್ಯೂಸ್ ಮಿನಿಟ್
ಇದನ್ನೂ ಓದಿರಿ: ಅರ್ಜಿ ಸ್ವೀಕರಿಸದ ರಾಜ್ಯ ಸರ್ಕಾರ: ಕೆಲಸ ಕಳೆದುಕೊಂಡ ಅತಿಥಿ ಉಪನ್ಯಾಸಕಿ ಆತ್ಮಹತ್ಯೆ
Hijab was exect choice