ಕ್ರಿಯಾ ಮಾಧ್ಯಮ ಮತ್ತು ನವಕರ್ನಾಟಕ ಜಂಟಿಯಾಗಿ ಹಮ್ಮಿಕೊಂಡಿರುವ ‘ಏಂಗೆಲ್ಸ್-200 ಮಾಲಿಕೆ’ಯ ಲೇಖಕ ನಾ. ದಿವಾಕರ ಅವರು ಅನುವಾದಿಸಿರುವ ‘ಜರ್ಮನ್ ರೈತ ಯುದ್ಧ’ ಪುಸ್ತಕ ಬಿಡುಗಡೆ ಸೆಪ್ಟೆಂಬರ್ 21ರ ಬುಧವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ‘ಕ್ರಿಯಾ ಮಾಧ್ಯಮ ಪುಸ್ತಕ ಮಳಿಗೆ’ಯಲ್ಲಿ ನಡೆಯಲಿದೆ.
ಚಿಂತಕ ಜಿ.ಎನ್.ನಾಗರಾಜ್ ಅವರು ಪುಸ್ತಕವನ್ನು ಬಿಡುಗಡೆ ಮಾಡಿ, “ಜರ್ಮನ್ ರೈತ ಯುದ್ಧದ ಮರು-ಓದು: ಜನರ ಸಂಕಟಗಳು, ಚಳುವಳಿಗಳು ಮತ್ತು ಧಾರ್ಮಿಕ ರೂಪಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಸಂವಾದಕ್ಕೆ ಚಾಲನೆ ನೀಡಲಿದ್ದಾರೆ. ಸಂವಾದದಲ್ಲಿ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಮತ್ತು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಭಾಗವಹಿಸಲಿದ್ದಾರೆ. ರೈತ ಹೋರಾಟಗಾರ ನವೀನ್ ಕುಮಾರ್ ಎಚ್.ಆರ್ ಪುಸ್ತಕವನ್ನು ಪರಿಚಯ ಮಾಡಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
1524-25ರಲ್ಲಿ ನಡೆದ ಜರ್ಮನ್ ರೈತ ಯುದ್ಧ 1789ರ ಫ್ರೆಂಚ್ ಕ್ರಾಂತಿಯ ಮೊದಲು ನಡೆದ ಅತ್ಯಂತ ದೊಡ್ಡ ಕ್ರಾಂತಿಕಾರಿ ಹೋರಾಟವಾಗಿದೆ. ಇತರ ಹಲವು ಅಂಶಗಳ ಜತೆಗೆ ಲೂಥರ್ ಮಂಡಿಸಿದ ಧಾರ್ಮಿಕ ಸುಧಾರಣೆಗಳ ಹಿನ್ನೆಲೆಯಲ್ಲಿ ಬೆಳೆದು ಬಂದ ಇದು, ಹಲವು ತಿಂಗಳ ಕಾಲ ಮಧ್ಯ ಯುರೋಪಿನ ಈಗಿನ ಜರ್ಮನಿ, ನೆದರ್ ಲ್ಯಾಂಡ್ಸ್ ಗಳ ಬಹುಭಾಗಗಳನ್ನು ಆವರಿಸಿ ಬೃಹತ್ ರೈತ ಯುದ್ಧವಾಗಿತ್ತು.
ಇದನ್ನೂ ಓದಿ: ತ್ಯಾಗ -ಸ್ಪೂರ್ತಿಯ ಸಂಕೇತ ಮಾತೆ ರಮಾಬಾಯಿ ಅಂಬೇಡ್ಕರ್
ಚಳುವಳಿಯ ಆರಂಭದಲ್ಲೇ ರೂಪಿತವಾಗಿದ್ದ “ರೈತರ ಹನ್ನೆರಡು ಕಟ್ಟಳೆಗಳ” ಜಾರಿಗಾಗಿ ಈ ಯುದ್ಧವನ್ನು ಸಾರಲಾಯಿತು. ಇದು ರೈತ ಸಂಘಟನೆಗಳ ಒಕ್ಕೂಟದ ಪ್ರಣಾಳಿಕೆ, ಸಂವಿಧಾನ, ಹಕ್ಕೊತ್ತಾಯಗಳ ಪಟ್ಟಿ, ಗೆದ್ದರೆ ಮುಂಬರುವ ಆಡಳಿತದ ಕಾರ್ಯಸೂಚಿ ಇವೆಲ್ಲವನ್ನೂ ಒಳಗೊಂಡಿತ್ತು. ಇದನ್ನು ಮೊದಲ ಮಾನವ ಹಕ್ಕುಗಳ ಘೋಷಣೆ ಎಂದೂ ಪರಿಗಣಿಸಲಾಗಿದೆ.
ಜರ್ಮನ್ ರೈತ ಯುದ್ಧದಲ್ಲಿ ಸಶಸ್ತ್ರವಾಗಿ ಭಾಗವಹಿಸಿದ ರೈತರ ಸಂಖ್ಯೆ 3 ಲಕ್ಷವನ್ನು ಮೀರಿತ್ತು. ಯುದ್ಧದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈತರು ಬಲಿಯಾಗಿದ್ದರು. ಈ ಚಾರಿತ್ರಿಕ ರೈತರ ಯುದ್ಧ ಸೋತರೂ ಯುರೋಪಿನಲ್ಲೂ ಜಾಗತಿಕವಾಗಿಯೂ ಹಲವು ಸ್ಥಿತ್ಯಂತರಗಳ ಮುನ್ನುಡಿ ಬರೆಯಿತು. ಇಂದಿನವರೆಗೂ ಎಲ್ಲ ರೈತ ಯುದ್ಧಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದು, ಪಾಳೆಯಗಾರಿ ವ್ಯವಸ್ಥೆಯ ವಿರುದ್ಧ ಬಂಡಾಯದ ಪ್ರತೀಕವಾಗಿದೆ.
ಇದನ್ನೂ ಓದಿ: ಓಶೋ ಕಂಡಂತೆ ವಿವೇಕಾನಂದರು
ಹೆಚ್ಚಿನ ರೈತ ಸಂಬಂಧಿ ಪ್ರಶ್ನೆಗಳನ್ನು ಮೊದಲ ಬಾರಿಗೆ ಅಂದಿನ ಸಂದರ್ಭದಲ್ಲಿ ಎತ್ತಿ ಉತ್ತರಿಸಲು ಪ್ರಯತ್ನಿಸಿದ, ಈ ಕೃತಿ ಇಂದಿಗೂ ಅತ್ಯಂತ ಪ್ರಸ್ತುತ ಎಂದು ಕ್ರಿಯಾ ಮಾಧ್ಯಮ ಹೇಳಿದೆ. ಪುಸ್ತಕವು ಏಂಗೆಲ್ಸ್ ಅವರ ಗತಿತಾರ್ಕಿಕ ಭೌತವಾದವನ್ನು ಚರಿತ್ರೆಗೆ ಅನ್ವಯಿಸಿದ ಆರಂಭಿಕ ಪ್ರಯತ್ನಗಳಲ್ಲಿ ಒಂದಾಗಿದ್ದು, ಈ ವಿಧಾನ ಇತರ ಚಾರಿತ್ರಿಕ ವಿದ್ಯಮಾನಗಳ ಸಮಗ್ರ ಅರ್ಥೈಸುವಿಕೆಗೆ ಒಂದು ಮಾದರಿಯನ್ನು ಒದಗಿಸುತ್ತದೆ ಎಂದು ಕ್ರಿಯಾ ಮಾಧ್ಯಮ ತಿಳಿಸಿದೆ.