Homeಕರ್ನಾಟಕಕುಂದಗೋಳ, ಚಿಂಚೋಳಿ ಉಪಚುನಾವಣೆ ಎರಡು, ಮೂರು ಪಕ್ಷಗಳಿಗೂ ಎಡರು-ತೊಡರು!

ಕುಂದಗೋಳ, ಚಿಂಚೋಳಿ ಉಪಚುನಾವಣೆ ಎರಡು, ಮೂರು ಪಕ್ಷಗಳಿಗೂ ಎಡರು-ತೊಡರು!

- Advertisement -
- Advertisement -

 | ಮಲ್ಲಿ |

ಎರಡು ಉಪಚುನಾವಣೆಗಳು ಈಗ ಉತ್ತರ ಕರ್ನಾಟಕದಲ್ಲಿ ಮೇ 19ರಂದು ಜರುಗಲಿವೆ. ಇವಕ್ಕೀಗ ಸರ್ಕಾರವನ್ನೇ ‘ನಿರ್ಧರಿಸಬಲ್ಲ’ ಚುನಾವಣೆಗಳು ಎಂಬ ಮಾನ್ಯತೆಯನ್ನು ನಮ್ಮ ಮೂರೂ ರಾಜಕೀಯ ಪಕ್ಷಗಳು ತಂದು ಕೊಟ್ಟಿವೆ. ಪಕ್ಷಾಂತರಕ್ಕೆ, ಕುಟುಂಬ ರಾಜಕಾರಣಕ್ಕೆ ಅಸ್ತು… ಭಿನ್ನಮತ ಶಮನಗೊಳಿಸಲು ಸುಸ್ತು… ಇದೆಲ್ಲದರ ಹೊರತಾಗಿ ‘ರೊಕ್ಕ’ವೇ ಇವೆರಡೂ ಕ್ಷೇತ್ರಗಳಲ್ಲಿ ಕುಣಿಯುತ್ತಿದೆಯಾದರೂ, ಮತದಾರ ಮಾತ್ರ ಗಲಿಬಿಲಿಗೊಂಡಿಲ್ಲ….

ಚಿಂಚೋಳಿ: ಪಕ್ಷಾಂತರದ ದಂಧೆ, ಲಂಬಾಣಿಗಳ ಹೆಸರು!
ಚಿಂಚೋಳಿಯ ಜನತೆ ಎದುರಿಸುತ್ತಿರುವ ಅಸಹ್ಯ ಇಲೆಕ್ಷನ್ ಇದು. ಇಲ್ಲಿ ಪಕ್ಷಾಂತರ ಮಾಡಿದವರಿಗೇ ಮಣೆ ಹಾಕಲಾಗಿದೆ. ಭಿನ್ನಮತ ಎತ್ತಿದ ಮಹಾಶಯರೂ ಪಕ್ಷಾಂತರಿಗಳೇ. ಬಿಜೆಪಿಯ ಮಾನಗೆಟ್ಟ ( ಸ್ವತ: ಪ್ರಧಾನಿಯೇ ತಮ್ಮ ಪಕ್ಷ ಸೇರಲು 40 ಟಿಎಂಸಿ ಸದಸ್ಯರು ರೆಡಿಯಾಗಿದ್ದು, ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸಾರ್ವಜನಿಕವಾಗಿ ಹೇಳಿಯೂ ಬಚಾವಾಗುತ್ತಾರೆ ಎಂದರೆ, ಇದನ್ನು ಮಾನಗೆಟ್ಟ ಕೆಲಸ ಅನ್ನವುದಾದರೂ ಹೇಗೆ?) ‘ಆಪರೇಷನ್ ಕಮಲ’ದ ಕಾರಣಕ್ಕಾಗಿ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ.

ಸಂಸತ್ತಿನಲ್ಲಿ ಹಲವು ಸಲ ಪ್ರಧಾನಿ ಮತ್ತು ಅವರ ಸರ್ಕಾರದ ಬೆವರು ಇಳಿಸಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಲು ನಾನಾ ತಂತ್ರ-ಕುತಂತ್ರ ಮಾಡಿದ ಬಿಜೆಪಿ, ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್‍ನ ಡಾ. ಉಮೇಶ್ ಜಾಧವರನ್ನು ತನ್ನತ್ತ ಬರ ಮಾಡಿ-‘ಕೊಂಡು’ ಬೀಗಿತು. ಇಲ್ಲಿ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಹುದ್ದೆ ಪ್ರಾಪ್ತ ಮಾಡಲು ಶುರು ಮಾಡಿದ ಆಪರೇಷನ್ ಕಮಲ ಬಕ್ಕಬರಲು ಮಲಗಿತಾದರೂ, ಖರ್ಗೆ ವಿರುದ್ಧ ಒಬ್ಬ ಅಭ್ಯರ್ಥಿಯನ್ನು ತರಲು ಯಶಸ್ವಿಯಾಯಿತು.

ಈಗ ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಸೋಲುವ ಎಲ್ಲ ಲಕ್ಷಣಗಳನ್ನೂ ಮುಖದ ಮೇಲೆ ಹೊತ್ತುಕೊಂಡೇ ತಿರುಗುತ್ತಿರುವ ಉಮೇಶ್ ಜಾಧವ್, ‘ಎಲ್ಲ ತುಂಬಿ’ ತಾವು ತೆರವು ಮಾಡಿದ ಕ್ಷೇತ್ರಕ್ಕೆ ತಮ್ಮ ಮಗ ಡಾ. ಅವಿನಾಶ್ ಜಾಧವರನ್ನು ಬಿಜೆಪಿ ಅಭ್ಯರ್ಥಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಯಡಿಯೂರಪ್ಪರ ಶಿಷ್ಯ, ಮಾಜಿ ಸಚಿವ ಸುನೀಲ್ ವಲ್ಯಾಪುರೆಯವರನ್ನು ಹಿಮ್ಮೆಟ್ಟಿಸಿ ಉಮೇಶ್ ಜಾಧವ್ ತಮ್ಮ ಮಗನಿಗೆ ಟಿಕೆಟ್ ತಂದಿದ್ದಾರೆ! ಮುಖಭಂಗವಾದರೂ ತೆಪ್ಪಗೆ ಇರಬೇಕಾದ ಸ್ಥಿತಿಯಲ್ಲಿರುವ ಯಡಿಯೂರಪ್ಪ ಸುನೀಲ್ ವಲ್ಯಾಪುರೆ ಕಡೆ ಜೋಲು ಮುಖ ಮಾಡಿ ಮೌನವಾಗಿದ್ದಾರೆ.

ಆದರೆ, ಸುನೀಲ್ ವಲ್ಯಾಪುರೆ ಬಹಿರಂಗವಾಗಿ, ‘ನಾನು ಜಾಧವ್ ಪರ ಕೆಲಸ ಮಾಡುತ್ತೇನೆ’ ಎಂದಿದ್ದರೂ ಅದನ್ನು ನಂಬುವುದು ಕಷ್ಟವೇ. ಇದರ ಹೊರತಾಗಿ ಅವರು (ಬೇಕೆಂತಲೇ) ಹೇಳಿರುವ ಅಭಿಪ್ರಾಯವೊಂದು ರಾಜ್ಯದ ಕುಲಗೆಟ್ಟ ರಾಜಕಾರಣಕ್ಕೆ, ಅದಕ್ಕೂ ಮುಖ್ಯವಾಗಿ ಬಿಜೆಪಿಯ ನಿರ್ಲಜ್ಜತನಕ್ಕೆ ಕನ್ನಡಿ ಹಿಡಿಯುವಂತಿದೆ: ‘ನಾನು ಆಪರೇಷನ್ ಕಮಲಕ್ಕಾಗಿ ತ್ಯಾಗ ಮಾಡಿದ್ದೇನೆ. ಉಮೇಶ್ ಜಾಧವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಲು ಕಾರಣವಾದ ಆಪರೇಷನ್ ಕಮಲದ ಬಗ್ಗೆ ಬೇರೆಯವರಲ್ಲಿ ತಪ್ಪು ಭಾವನೆ ಹುಟ್ಟಬಾರದು. ಆಪರೇಷನ್ ಕಮಲಕ್ಕೆ ಒಳಗಾದವರನ್ನು ಬಿಜೆಪಿ ನಿರ್ಲಕ್ಷಿಸುವುದಿಲ್ಲ ಎಂಬುದನ್ನು ತೋರಿಸಲು ನಾನು ಜಾಧವರಿಗೆ ಟಿಕೆಟ್ ಕೊಟ್ಟಿದ್ದನ್ನು ಸಮರ್ಥಿಸಿ ಅವರ ಪರ ನಿಂತಿದ್ದೇನೆ… ನಮ್ಮ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜಾಧವರ ಕುಟುಂಬಕ್ಕೆ ಟಿಕೆಟ್ ನೀಡುವ ವಾಗ್ದಾನ ಮಾಡಿದ್ದರು. ಹಾಗಾಗಿ ನಾನು ಪಕ್ಷದ ನಿಲುವಿಗೆ ಬದ್ಧ… ಮುಂದೆ ಲೋಕಸಭಾ ಚುನಾವಣೆ ನಂತರ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬರಲಿರುವ ಶಾಸಕರಿಗೆ ಬಿಜೆಪಿ ಅನ್ಯಾಯ ಮಾಡುವುದಿಲ್ಲ ಎಂದು ತೋರಿಸಲು ನಾನು ತ್ಯಾಗ ಮಾಡಿದ್ದೇನೆ……’

ಎಲ್ಲಿಗೆ ಬಂತು ರಾಜ್ಯದ ರಾಜಕಾರಣ? ಯಾವ ಲೆವೆಲ್ಲಿಗೆ ಇಳಿಯಿತು ಬಿಜೆಪಿಯ ದಂಧೆ!
ಇನ್ನೊಂದು ಕಡೆ, ಡಿಎನ್‍ಎ ಮತ್ತು ವಂಶವಾಹಿನಿ ಆಧಾರದ ಮೇಲೆ ಟಿಕೆಟ್ ಕೊಡಲಾಗಲ್ಲ ಎಂದೆಲ್ಲ ‘ಆದರ್ಶ’ದ ಡ್ರಾಮಾ ಆಡಿದ್ದ ಬಿ.ಎಲ್. ಸಂತೋಷ್ ಎಂಬ ಮುಖೇಡಿ ನಾಯಕನೂ ಇಲ್ಲಿ ಬೆತ್ತಲಾಗಿದ್ದಾರೆ. ದಶಕಗಳ ಕಾಲ ಬಿಜೆಪಿಗೆ ದುಡಿದ ತೇಜಸ್ವಿನಿ ಅನಂತಕುಮಾರರನ್ನು ಧಿಕ್ಕರಿಸಿ, ‘ಪಾಲ್ತು ಪಾಪು’ ತೇಜಸ್ವಿಗೆ ಟಿಕೆಟ್ ನೀಡಿದ್ದ ಸಂತೋಷ್ ವಿರುದ್ಧ ಈಗ ಪಕ್ಷದಲ್ಲೇ ಅಸಮಾಧಾನವಿದ್ದರೂ ಅದನ್ನು ಬಹಿರಂಗವಾಗಿ ಹೊರ ಹಾಕದ ಸ್ಥಿತಿಯಲ್ಲಿ ಬಿಜೆಪಿಯ ನಾಯಕರಿದ್ದಾರೆ! ಏಕೆಂದರೆ ಸಂತು ಕೇಶವಕೃಪಾ ಅಖಾಡಕ್ಕೆ ಬಿಟ್ಟಿರುವ ‘ಲೀಡರ್’!
ಕೊಳ್ಳುವ ದಂಧೆಯಿಂದಲೇ ಕಳೆದು’ಕೊಳ್ಳುವ’ ಭಯ!

ಅವಿನಾಶ್ ಜಾಧವ್

ಈಗ ಚಿಂಚೋಳಿ ಕ್ಷೇತ್ರದ ಕಡೆ ಬಂದರೆ, ಅತ್ಯದಿಕ ಸಂಖ್ಯೆಯಲ್ಲಿರುವ ಲಂಬಾಣಿಗರು ತಾಂಡಾಗಳಲ್ಲಿ ನಿರ್ದಿಷ್ಟ ಆದಾಯವಿಲ್ಲದೇ ಬದುಕುತ್ತಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲಾಗಿತು. ಗದಗ, ಧಾರವಾಡ, ವಿಜಯಪುರ, ಬಾಗಲಕೋಟೆಯಲ್ಲಿ ಇದು ಒಂದಷ್ಟು ಮಟ್ಟಿಗೆ ಫಲಕಾರಿಯಾಯಿತು. ಆದರೆ ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಚಿಂಚೋಳಿಯ ತಾಂಡಾಗಳಲ್ಲಿ ಇನ್ನೂ ಎಷ್ಟೋ ನಾಗರಿಕ ಸೇವೆಗಳು ಅಲಭ್ಯ. ಕೆಲ ವರ್ಷಗಳ ಹಿಂದೆ ಇಲ್ಲಿನ ಕೊಂಚಾವರಂ ಸುತ್ತಲಿನ ತಾಂಡಾಗಳು ಅಭಿಜಾತ ಶಿಶುಗಳ ಮಾರಾಟದ ಜಾಲದಲ್ಲಿ ಸಿಕ್ಕಿ ನರಳಿದ್ದ ವರದಿಗಳು ಬಂದಿದ್ದವು. ಸರ್ಕಾರಗಳ ಬೇಕಾಬಿಟ್ಟಿ ಕ್ರಮಗಳಿಂದಾಗಿ ಈಗಲೂ ಅಲ್ಲಿನ ತಾಂಡಾಗಳಲ್ಲಿ ಇದು ನಡೆಯುತ್ತಲೇ ಇದೆ. 2013 ಮತ್ತು 2018ರಲ್ಲಿ ಕಾಂಗ್ರೆಸ್‍ನಿಂದ ಶಾಸಕರಾದ ಡಾ. ಉಮೇಶ್ ಜಾಧವ್ ತಮ್ಮದೇ ಸಮುದಾಯದ ಲಂಬಾಣಿಗಳ ಬಗ್ಗೆ ಹೇಳಿಕೊಳ್ಳುವ ಕೆಲಸ ಮಾಡಲೇ ಇಲ್ಲ.

ಈಗವರು, ರಾಜಕೀಯ ಅಥವಾ ಸಮಾಜಸೇವೆಯ ಸಂಪರ್ಕವೇ ಇಲ್ಲದ ತಮ್ಮ ಮಗ ಡಾ ಅವಿನಾಶ್ ಜಾಧವರನ್ನು ಶಾಸಕರನ್ನಾಗಿ ಮಾಡಲು ಹೊರಟಿದ್ದಾರೆ. ಎರಡು ಅವಧಿಯವರೆಗೆ ಶಾಸಕರಾಗಿದ್ದ ವೇಳೆ ಜನತೆಯ ಕುಂದುಕೊರತೆ ಬಗ್ಗೆ ವಿಚಾರಿಸದೇ ಬಿಜೆಪಿಯ ಗಾಳಕ್ಕೆ ಬಿದ್ದು ರೆಸಾರ್ಟುಗಳಲ್ಲಿ ವಾಸ್ತವ್ಯ ಮಾಡುತ್ತ ಕಾಲ ಹಾಕಿದವರು. ಕೊನೆಗೆ ಖರ್ಗೆ ವಿರುದ್ಧ ಕ್ಯಾಂಡಿಡೇಟ್ ಸಿಗದೇ ಇದ್ದಾಗ ಈ ಜಾಧವರನ್ನು ದೊಡ್ಡ ಡೀಲ್ ಮೂಲಕ ಬಿಜೆಪಿಗೆ ತಂದು ಕಲಬುರ್ಗಿಯ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಅದರ ಪ್ರತಿಫಲವಾಗಿ ಮಗನಿಗೆ ಟಿಕೆಟ್ ತಂದಿದ್ದಾರೆ!
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಯಡಿಯೂರಪ್ಪ ಶಿಷ್ಯ, ಮಾಜಿ ಸಚಿವ ಸುನೀಲ್ ವಲ್ಯಾಪುರೆ ಕೂಡ ಲಂಬಾಣಿ ಸಮುದಾಯದವರೇ. 2008ರಲ್ಲಿ ಗೆದ್ದು ಸಚಿವರಾಗಿದ್ದ ವಲ್ಯಾಪುರೆ 2013ರಲ್ಲಿ ಕೆಜೆಪಿಯಿಂದ, 2018ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್‍ನ ಉಮೇಶ್ ಜಾಧವ್ ವಿರುದ್ಧ ಸೋತಿದ್ದರು.

ಸುಭಾಷ್ ರಾಠೋಡ್

ಕಾಂಗ್ರೆಸ್ ಕೂಡ ಪಕ್ಷಾಂತರಕ್ಕೆ ಮಣೆ ಹಾಕಿದೆ. ಆದರೆ ಅದು ಲಂಬಾಣಿ ಸಂಘಟನೆಯಲ್ಲಿ ಪರಿಣಾಮಕಾರಿ ಕೆಲಸ ಮಾಡಿರುವ ಸುಭಾಷ್ ರಾಠೋಡರಿಗೆ ಟಿಕೆಟ್ ನೀಡಿದೆ. ಸುಭಾಷ್ ಬಿಜೆಪಿಯೊಂದಿಗೆ ಗುರುತಿಸಿಕೊಂಡು ಅದರ ಟಿಕೆಟ್ ಪಡೆಯುವಲ್ಲಿ ವಿಫಲರಾಗಿ ಕಾಂಗ್ರೆಸ್ ಕಡೆ ಬಂದವರೇ! ಮೊದಲು ಕಾಂಗ್ರೆಸ್‍ನಲ್ಲಿ ಮಂತ್ರಿಯಾಗಿದ್ದ, ನಂತರ ಬಿಜೆಪಿ ಸೇರಿದ್ದ ಬಾಬುರಾವ್ ಚೌಹಾಣ್ ಇತ್ತೀಚೆಗಷ್ಟೇ ಮತ್ತೆ ಕಾಂಗ್ರೆಸ್‍ಗೆ ಬಂದು ಟಿಕೆಟ್ ಬಯಸಿದ್ದರು. ಈಗ ನಿರಾಶೆಗೊಂಡಿರುವ ಇವರು ಮುನಿಸಿಕೊಂಡಿದ್ದಾರೆ.

ಇಲ್ಲಿ ಲಂಬಾಣಿ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಎರಡೂ ಪಕ್ಷಗಳೂ ಲಂಬಾಣಿ ಅಭ್ಯರ್ಥಿಗಳನ್ನೇ ಹಾಕಿವೆ. ಎಸ್‍ಸಿ ಮೀಸಲು ಕ್ಷೇತ್ರವಾದ ನಂತರ ಮೂರು ಸಲ ಗೆದ್ದವರು, ರನ್ನರ್ ಅಪ್ ಆದವರೂ ಲಂಬಾಣಿ ನಾಯಕರೇ. ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಇತರ ದಲಿತರಿಗೆ ಯಾವ ಪಕ್ಷವೂ ಮಹತ್ವ ನೀಡಿಲ್ಲ. ಖರ್ಗೆ ಕಾರಣದಿಂದ ದಲಿತರು ಕಾಂಗ್ರೆಸ್ ಬೆಂಬಲಿಸುತ್ತ ಬಂದಿದ್ದಾರೆ. ಈಗ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿರುವ ಲಿಂಗಾಯತರು ಮತ್ತು ಮುಸ್ಲಿಮರ ಮತಗಳು ನಿರ್ಣಾಯಕ.

ಕಾಂಗ್ರೆಸ್‍ನ ಲೋಕಲ್ ಸಚಿವರಾದ ಪ್ರಿಯಾಂಕ್ ಖರ್ಗೆ, ರಹಿಂಖಾನ್, ರಾಜಶೇಖರ್ ಪಾಟೀಲ್, ಜೆಡಿಎಸ್ ಸಚಿವ ಕಾಶೆಪ್ಪ ಬಂಡೆಂಪುರ್ ಅಲ್ಲದೇ ಬಳ್ಳಾರಿಯ ಸಚಿವ ತುಕಾರಾಂ ಕೂಡ ಕಾಂಗ್ರೆಸ್ ಅಭ್ಯರ್ಥಿಯ ಪರ ಹಾರ್ಡ್‍ವರ್ಕ್ ಮಾಡುತ್ತಿದ್ದಾರೆ. ಆಪರೇಷನ್ ಕಮಲದ ಮೂಲಕ ಹೆಸರು ಬೇನಾಮ್ ಮಾಡಿಕೊಂಡಿರುವ ಉಮೇಶ್ ಜಾಧವ್ ಈಗ ಮಗನಿಗಾಗಿ ಮತ ಕೇಳಲೂ ನೈತಿಕತೆ ಕಳೆದುಕೊಂಡಿದ್ದಾರೆ.
ಸದ್ಯಕ್ಕೆ ಇಲ್ಲಿ ಕಾಂಗ್ರೆಸ್ ಈ ಸ್ಥಾನವನ್ನು ಉಳಿಸಿಕೊಳ್ಳುವ ಲಕ್ಷಣಗಳಿದ್ದು, ಹಾಗಾದರೆ, ಬಿಜೆಪಿಗೆ ಆಪ್ ಕಮಲಕ್ಕಾಗಿ ಖರ್ಚು ಮಾಡಿದ ಕೋಟಿಗಳು ವ್ಯರ್ಥವಾದಂತೆಯೇ…..

ಕುಂದಗೋಳ: ಮೆಣಸಿನಕಾಯಿ ಬೆಳೆವ ಕರಿನೆಲದಲ್ಲಿ ರಾಜಕೀಯದ ಉರಿ…
ಕಾಂಗ್ರೆಸ್ ಶಾಸಕ ಚನ್ನಬಸಪ್ಪ ಶಿವಳ್ಳಿ (ಸಿ.ಎಸ್ ಶಿವಳ್ಳಿ) ನಿಧನದ ಕಾರಣಕ್ಕೆ ಇಲ್ಲಿ ಮತ್ತೆ ಉಪ ಚುನಾವಣೆ ನಡೆಯುತ್ತಿದೆ. ಎಲ್ಲ ರಾಜಕೀಯ ಪಕ್ಷಗಳಂತೆ ಅನುಕಂಪದ ಲಾಭ ಪಡೆಯಲು ಇಲ್ಲಿ ಕಾಂಗ್ರೆಸ್ ಶಿವಳ್ಳಿಯವರ ಪತ್ನಿ ಕುಸುಮಾವತಿಯವರಿಗೆ ಟಿಕೆಟ್ ನೀಡಿದೆ. ಈ ಕಾರಣಕ್ಕೆ ಕಾಂಗ್ರೆಸ್‍ನಲ್ಲಿ ಭಿನ್ನಮತ ಶುರುವಾಗಿ ಏಳೆಂಟು ಜನ ನಾಮಪತ್ರ ಸಲ್ಲಿಸಿದ್ದಾರೆ. ಕುಸುಮಾ ಅವರ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದ ಸಿದ್ದರಾಮಯ್ಯ ಭಿನ್ನಮತ ಶಮನ ಮಾಡಲು ಎಲ್ಲ ಯತ್ನ ಮಾಡಿ ಹೋಗಿದ್ದಾರೆ.

ಸಿ.ಎಸ್ ಶಿವಳ್ಳಿ

ಇಲ್ಲಿ ಮುಖ್ಯವಾಹಿನಿಗಳು ಗುರುತಿಸದ ಒಂದಂಶ ಎಂದರೆ, ಸುಮಲತಾ ಅಂಬರೀಷ್‍ಗೆ ಕಾಂಗ್ರೆಸ್ ಬೆಂಬಲಿಸಬೇಕಿತ್ತು ಎನ್ನುವ ವಾದವೊಂದು ಈಗಲೂ ತೇಲಾಡುತ್ತಿದೆ. ಅದಕ್ಕೆ ನಿಖಿಲ್ ಎಂಬ ವಂಶದ ಕುಡಿಯನ್ನು ಜೆಡಿಎಸ್ ಕಣಕ್ಕೆ ದೂಕಿದ್ದೂ ಕಾರಣವಿರಬಹುದು. ಅದು ಬಿಡಿ, ಇಲ್ಲಿ ಸುಮಲತಾರಿಗಿಂತ ಕುಸುಮಾ ಹೇಗೆ ಭಿನ್ನವೆಂದರೆ, ಸುಮಲತಾರಂತೆ ಯಾವ ಲೈಮ್‍ಲೈಟೂ ಇಲ್ಲದೇ ಕುಸುಮಾ ಕುಂದಗೋಳದ ಜನತೆಯ ಪ್ರೀತಿಗೆ ಪಾತ್ರವಾಗಿದ್ದರು. ಕುಂದಗೋಳದ ಯರಗುಪ್ಪಿ ನಿವಾಸಿ ಸಿ.ಎಸ್ ಶಿವಳ್ಳಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹುಬ್ಬಳ್ಳಿಯಲ್ಲೂ ಒಂದು ಮನೆ ಮಾಡಿದ್ದರು. ಆ ಮನೆಗೆ ಶಾಸಕರನ್ನು ಭೇಟಿಯಾಗಲು ಬಂದವರಿಗಷ್ಟೇ ಅಲ್ಲ, ಶಾಸಕರ ಜೊತೆ ಭಿನ್ನಮತ ವ್ಯಕ್ತ ಮಾಡಲು, ಜಗಳ ಮಾಡಲು ಬಂದ ಕುಂದಗೋಳದ ಜನತೆಗೆ ಉಪಹಾರ, ಊಟ ಮತ್ತು ವಸತಿ ವ್ಯವಸ್ಥೆ ಮಾಡುವ ಮೂಲಕ ಕುಸುಮಾ ‘ಗೃಹಿಣಿ’ಯಾಗಿಯೇ ತಮ್ಮ ಜನಸೇವೆ ಮಾಡಿದ್ದು ಬಹುತೇಕ ಮಾಧ್ಯಮಗಳಿಗೆ ಗೊತ್ತಿಲ್ಲ ಎನ್ನುವುದನ್ನು ಅಲ್ಲಿಯ ಮುಖ್ಯ ವರದಿಗಾರರು ಹೇಳುತ್ತಾರೆ.

ಹಾಗಂತ ಪಾರ್ಟಿಯ ಇತರ ಹಿರಿಯ ಕಾರ್ಯಕರ್ತರನ್ನು ತಳ್ಳಿ ಕುಸುಮಾಗೆ ಟಿಕೆಟು ಕೊಡಬೇಕೆಂದೇನೂ ಅವರ ವಾದವಲ್ಲ. ಆದರೆ, ಸುಮಲತಾಗಿಂತ ಕುಸುಮಾವತಿ ಶಿವಳ್ಳಿ ಬೆಟರ್ ಎಂಬುದನ್ನು ಅವರು ಸೂಚ್ಯವಾಗಿ ಹೇಳಿದರು.

ಅದಿರಲಿ, ರಾಜಕೀಯಕ್ಕೆ ಬಂದರೆ, ನಿಕಟಪೂರ್ವ ಶಾಸಕ, ಸಚಿವ ಶಿವಳ್ಳಿ ನಿಧನ ಹೊಂದಿದಾಗ ಜನಪ್ರಿಯ ಮಾಧ್ಯಮಗಳು ಬರೆದಂತೆ ಅವರು ಸರಳ ಜೀವಿಯಾಗಿದ್ದರು. ಎಷ್ಟು ಸಾಧ್ಯವೋ ಅಷ್ಟು ಜನರ ಕಷ್ಟಗಳಿಗೆ ಮಿಡಿಯುತ್ತಿದ್ದರು. ಜನಪ್ರಿಯ ಮಾಧ್ಯಮಗಳು ಮರೆತ ವಿಷಯವೇನೆಂದರೆ, ಎಸ್ ಎಂ ಕೃಷ್ಣ ಅವಧಿಯಲ್ಲಿ ಎಚ್.ಕೆ. ಪಾಟೀಲರನ್ನು ‘ಹಣಿಯಲು’ ಉತ್ತರ ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಛೂ ಬಿಟ್ಟಿದ್ದಾಗ ಅದಕ್ಕೆ ಬಲಿಯಾದ 4-5 ಕಾಂಗ್ರೆಸ್ ರಾಜಕಾರಣಿಗಳಲ್ಲಿ ಶಿವಳ್ಳಿ ಕೂಡ ಒಬ್ಬರು… ಆದರೆ ಹೀಗೆ ಈ ಬಲೆಗೆ ಬಿದ್ದ ನವಲಗುಂದದ ಮಾಜಿ ಶಾಸಕ ಕೆ.ಎನ್ ಗಡ್ಡಿ, ಹುಬ್ಬಳ್ಳಿಯ ರೌಡಿ ಎಲಿಮೆಂಟು, ಹು-ಧಾ ಕಾರ್ಪೊರೇಷನ್ ಮಾಜಿ ಅಧ್ಯಕ್ಷ ಅನಿಲ್‍ಕುಮಾರ್ ಪಾಟೀಲ, ಗದಗಿನ ಚಿಲ್ಟು ಅನಿಲ್ ಮೆಣಸಿನಕಾಯಿ ನಂತರದ ಕಾಲಘಟ್ಟದಲ್ಲಿ ರಾಜಕೀಯವಾಗಿ ಬೆಳೆಯಲೇ ಇಲ್ಲ. ಆದರೆ, ಆ ವ್ಯೂಹದಿಂದ ಹೊರಬಂದ ಶಿವಳ್ಳಿ ಮತ್ತೆ ಶಾಸಕರಾದರು, ಮಂತ್ರಿಯೂ ಆದರು. ತಮ್ಮ ತಪ್ಪುಗಳ ಅರಿವು ಅವರಿಗೆ ಇತ್ತು. ಅದಕ್ಕಿಂತ ಮುಖ್ಯವಾಗಿ ಶಿವಳ್ಳಿ ಜನಸ್ನೇಹಿಯಾಗಿದ್ದರು.

ಕುಸುಮಾ ಶಿವಳ್ಳಿ

ಈಗ ಅವರ ಪತ್ನಿ ಇಲ್ಲಿ ಅಭ್ಯರ್ಥಿ. ಬಿಜೆಪಿಯಿಂದ ಎಸ್ ಐ ಚಿಕ್ಕನಗೌಡರ್ ಅಭ್ಯರ್ಥಿಯಾಗಿದ್ದು, ಇವರು ಯಡಿಯೂರಪ್ಪನವರ ಖಾಸಾ ಸಂಬಂಧಿ, ಬೀಗ. ಯಡಿಯೂರಪ್ಪ ವಿರೋಧಿಯಾದ ಸಂಸದ ಪ್ರಹ್ಲಾದ್ ಜೋಶಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣ ಎಂದು ಚಿಕ್ಕನಗೌಡರ್ ಧ್ವನಿ ಎತ್ತುತ್ತಲೇ ಬಂದಿದ್ದರು. ಅಲ್ಲಿ ಚಿಂಚೋಳಿಯಲ್ಲಿ ಯಡಿಯೂರಪ್ಪ ಶಿಷ್ಯ ಸುನೀಲ್ ವಲ್ಯಾಪುರೆಗೆ ಟಿಕೆಟ್ ತಪ್ಪಿಸಿದ ಸಂತೋಷ್-ಜೋಶಿ ಗ್ಯಾಂಗ್‍ಗೆ ಇಲ್ಲಿ ಯಡಿಯೂರಪ್ಪ ಬೀಗ ಚಿಕ್ಕನಗೌಡರಿಗೆ ಟಿಕೆಟ್ ತಪ್ಪಿಸಲು ಆಗಿಲ್ಲ. ಆದರೆ ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಂ.ಎಸ್ ಅಕ್ಕಿ, ಎಂ.ಆರ್ ಪಾಟೀಲ್ ಸೆಟಗೊಂಡಿರುವ ಲಕ್ಷಣಗಳಿವೆ…

ಇಲ್ಲಿ ಕ್ರಮವಾಗಿ ಕುರುಬರು, ಲಿಂಗಾಯತರು ಮತ್ತು ಮುಸ್ಲಿಮರ ಮತಗಳು ಜಾಸ್ತಿಯಿವೆ. ಸಿದ್ದರಾಮಯ್ಯ ಈ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈ ಕ್ಷೇತ್ರದ ಹೊಣೆಯನ್ನು ಡಿಕೆ ಶಿವಕುಮಾರ್‍ಗೆ ವಹಿಸಲಾಗಿದ್ದು, ಕುರುಬ ಸಮುದಾಯದ ಶಾಸಕ ಎಂ.ಟಿ.ಬಿ ನಾಗರಾಜ್, ಲಿಂಗಾಯತ ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲರಿಗೂ ಜವಾಬ್ದಾರಿ ನೀಡಲಾಗಿದೆ.

ಚಿಕ್ಕನಗೌಡರ್

ಇಲ್ಲಿನ ಫಲವತ್ತಾದ ಕರಿಮಣ್ಣಿನ ಭೂಮಿಯಲ್ಲಿ ಉತ್ತಮ ದರ್ಜೆಯ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಯಾವುದನ್ನು ಬ್ಯಾಡಗಿ ಮೆಣಸಿನಕಾಯಿ ಅಂತಿವೋ ಅದು ಈ ನೆಲದಲ್ಲೇ ಬೆಳೆಯುವಂತದ್ದು. ಆದರೆ ಹಸಿ ಮೆಣಸಿನ ಕಾಯಿಯನ್ನು ಕೆಂಪು ಮಾಡಿ ಬ್ಯಾಡಗಿ ಮಾರುಕಟ್ಟೆಗೆ ಒಯ್ಯುವ ರೈತರು ಅಲ್ಲಿ ಕಮೀಷನ್ ಕೊಟ್ಟೇ ಸೊರಗುತ್ತ ಬದುಕಿಯೂ ಸಾಯುತ್ತಿದ್ದಾರೆ.. ಈ ಭಾಗದ ಯಾವ ಜನಪ್ರತಿನಿಧಿಗೂ ಈ ಬಗ್ಗೆ ಗಂಭೀರ ಕಾಳಜಿಯಿಲ್ಲ…

ಸದ್ಯದ ಚುನಾವಣೆಗೆ ಬರುವುದಾದರೆ, ಅನುಕಂಪವಷ್ಟೇ ಅಲ್ಲ, ಅವರ ಉದಾರ ತಾಯಿ ಹೃದಯವೂ ಕುಸುಮಾ ಶಿವಳ್ಳಿಯವರ ಕೈ ಹಿಡಿಯಲಿವೆ ಎನ್ನುತ್ತಾರೆ ಜನ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...