ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಭಾನುವಾರ ನಡೆದ ರೈತರ ಹತ್ಯಾಕಾಂಡದಲ್ಲಿ ಹತ್ಯೆಗೀಡಾದ 19 ವರ್ಷದ ಯುವ ರೈತ ಲವ್ಪ್ರೀತ್ ಸಿಂಗ್ ಅವರ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡುವವರೆಗೂ ಅವರ ಶವ ಸಂಸ್ಕಾರ ಮಾಡಲು ಕುಟುಂಬ ನಿರಾಕರಿಸಿದೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಭೇಟಿ ವಿರೋಧಿಸಿ ಭಾನುವಾರ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ, ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಿದವರಲ್ಲಿ 19 ವರ್ಷದ ಯುವ ರೈತ ಲವ್ಪ್ರೀತ್ ಸಿಂಗ್ ಕೂಡ ಸೇರಿದ್ದಾರೆ. ವೇಗವಾಗಿ ನುಗ್ಗಿದ ಕಾರಿಗೆ ಸಿಲುಕಿ, ಗಂಭೀರವಾಗಿ ಗಾಯಗೊಂಡಿದ್ದವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಈ ವೇಳೆ ಆಸ್ಪತ್ರೆಗೆ ಬರುವಂತೆ ತಮ್ಮ ತಂದೆಗೆ ಕರೆ ಮಾಡಿ ತಿಳಿಸಿದ್ದರು. ಆದರೆ, ಮನೆಯವರು ಲಖಿಂಪುರ್ ಆಸ್ಪತ್ರೆಗೆ ತೆರುವ ವೇಳೆಗೆ ಲವ್ಪ್ರೀತ್ ಸಿಂಗ್ ಸಾವನ್ನಪ್ಪಿದ್ದರು. ಸಚಿವರ ಪುತ್ರ ಆಶಿಶ್ ಮಿಶ್ರಾ ಕಾರು ಚಲಾಯಿಸುತ್ತಿದ್ದರು ಎಂದು ರೈತರು ಆರೋಪಿಸಿದ್ದಾರೆ. ಯುಪಿ ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಇತ್ತ ಹತ್ಯೆಗೀಡಾದ ರೈತರಿಗಾಗಿ ಶೋಕಿಸುತ್ತಿರುವ ದೇಶ : ಅತ್ತ ಯುಪಿಯ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗಿ
ಮೃತ ಲವ್ಪ್ರೀತ್ ಸಿಂಗ್ ಅವರ ಪಾರ್ಥಿವ ಶರೀರದ ಪಕ್ಕ ಕುಳಿತು ರೋಧಿಸುತ್ತಿರುವ ಸಂಬಂಧಿಕರು ಮತ್ತು ಕುಟುಂಬ ಸದಸ್ಯರು, ಮರಣೋತ್ತರ ಪರೀಕ್ಷೆ ವರದಿ ಮತ್ತು ಆಶಿಶ್ ಮಿಶ್ರಾ ವಿರುದ್ಧದ ಎಫ್ಐಆರ್ ಪ್ರತಿಯನ್ನು ನೀಡುವವರೆಗೂ ಅವರ ಅಂತ್ಯಕ್ರಿಯೆ ಮಾಡಲು ನಿರಾಕರಿಸಿದೆ.
“ನನ್ನ ಮಗ ಕಾರಿನ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇದಕ್ಕೆ ಕಾರಣನಾದ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆಡಳಿತ ಸರ್ಕಾರವು ಇದನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ” ಎಂದು ಲವ್ಪ್ರೀತ್ ತಂದೆ ಸತ್ನಾಮ್ ಸಿಂಗ್ ಆರೋಪಿಸಿದ್ದಾರೆ.
ಒಂದು ಒಳ್ಳೆಯ ಉದ್ದೇಶಕ್ಕಾಗಿ ನಾನು ಹೊರ ಹೊಗುತ್ತಿದ್ದೇನೆ ಎಂದು ಮನೆಯಿಂದ ಹೊರಟ್ಟಿದ್ದ, ಮನೆಯ ಒಬ್ಬನೆ ಮಗನನ್ನು ಕಳೆದು ಕೊಂಡಿರುವ ಪೋಷಕರು ಮತ್ತು ಲವ್ಪ್ರೀತ್ನ ಇಬ್ಬರು ಸಹೋದರಿಯರು ತಮ್ಮ ಏಕೈಕ ಸಹೋದರನನ್ನು ಕಳೆದುಕೊಂಡು ರೋಧಿಸುತ್ತಿದ್ದಾರೆ. ಲವ್ಪ್ರೀತ್ ಅವರ ಮೃತ ದೇಹವನ್ನು ಭಾನುವಾರದಿಂದ ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಗಿದೆ.
ಮೃತ ಎಂಟು ರೈತರು ಗಂಭೀರ ಗಾಯಗಳು, ಆಘಾತ ಮತ್ತು ಮೆದುಳಿನ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ ಎನ್ನಲಾಗಿದೆ. ಆದರೆ, ಘಟನೆಯ ಬಳಿಕ ಹೊರ ಬಮದಿರುವ ವಿಡಿಯೊಗಳನ್ನು ಆಧರಿಸಿ ಕ್ರಮ ಕೈಗೊಳ್ಳುವಂತೆ ಮೃತರ ಕುಟುಂಬಗಳು ಆಗ್ರಹಿಸಿವೆ.
ಘಟನೆಗೆ ಸಂಬಂಧಿಸಿದೆ ಎನ್ನಲಾಗುತ್ತಿರುವ ಎರಡು ವಿಡಿಯೊಗಳು ಎಲ್ಲೆಡೆ ವೈರಲ್ ಆಗುತ್ತಿವೆ. ೊಂದು ವಿಡಿಯೋದಲ್ಲಿ ಘೋಷಣೆ ಕೂಗುತ್ತಾ ಹೊರಟಿದ್ದ ರೈತರ ಗುಂಪಿನ ಮೇಲೆ ಹಿಂದಿನಿಂದ ಎಸ್ಯುವಿಯೊಂದು ಉದ್ದೇಶಪೂರ್ವಕವಾಗಿ ನುಗ್ಗುತ್ತಿದೆ. ರೈತರು ಚಲ್ಲಾಪಿಲ್ಲಿಯಾಗುತ್ತಾರೆ. ಕೆಲ ರೈತರ ಮೇಲೆ ನೇರವಾಗಿ ಕಾರು ಹರಿದಿದೆ.
ಮತ್ತೊಂದು ವೈರಲ್ ವಿಡಿಯೋದಲ್ಲಿ ರೈತರ ಮೇಲೆ ಹರಿಸಿದ ನಂತರ ಅದೇ ಕಾರಿನಿಂದ ಇಬ್ಬರು ಇಳಿದು ಓಡಿ ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಕಾರಿನ ಚಕ್ರಕ್ಕೆ ರೈತನೊಬ್ಬ ಸಿಕ್ಕಿ ನರಳುತ್ತಿರುವ ಹೃದಯ ವಿದ್ರಾವಕ ದೃಶ್ಯ ಕಂಡುಬಂದಿದೆ. ಕಾರು ಯಾರು ಚಲಾಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ನಾನುಗೌರಿ.ಕಾಂ ಈ ವಿಡಿಯೋವನ್ನು ಪರಿಶೀಲಿಸಲು ಯತ್ನಿಸುತ್ತಿದೆ.
ಇದನ್ನೂ ಓದಿ: ಸಚಿವನ ಪುತ್ರ ಹಾಗೂ ಆತನ ಗೂಂಡಾಗಳಿಂದ ರೈತರ ಹತ್ಯೆ: ಸಂಯುಕ್ತ ಕಿಸಾನ್ ಮೋರ್ಚಾ